Shah Rukh Khan: ಪಠಾಣ್, ಜವಾನ್ ಸಿನಿಮಾ ಬಳಿಕ ಶಾರುಖ್ ಖಾನ್ಗೆ ಜೀವ ಬೆದರಿಕೆ, ಭದ್ರತೆ ಹೆಚ್ಚಿಸಿದ ಮಹಾರಾಷ್ಟ್ರ ಸರ್ಕಾರ
ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಪತ್ರಗಳು ಬಂದಿದ್ದವು. ಅವರಿಗೆ ಭದ್ರತೆ ಮತ್ತು ಗನ್ ಕೂಡ ನೀಡಲಾಗಿತ್ತು. ಇದರ ಬೆನ್ನಲ್ಲೇ ನಟ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿದೆ. ಅವರ ದೂರಿದ ಹಿನ್ನೆಲೆಯಲ್ಲಿ ನಟನಿಗೆ ನೀಡಲಾಗಿದ್ದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಮಹಾರಾಷ್ಟ್ರ ಸರ್ಕಾರವು ಶಾರುಖ್ ಖಾನ್ ಅವರ ಭದ್ರತೆಯನ್ನು Y+ ವರ್ಗಕ್ಕೆ ಹೆಚ್ಚಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಶಾರುಖ್ ಶಾನ್ ಅವರು ಜೀವ ಬೆದರಿಕೆ ಬಂದಿರುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಲಿಖಿತ ದೂರು ನೀಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.

ಈ ವರ್ಷದ ಅತೀ ದೊಡ್ಡ ಹಿಟ್ ಸಿನಿಮಾಗಳಾದ 'ಪಠಾಣ್' ಮತ್ತು 'ಜವಾನ್' ಚಿತ್ರಗಳು ಬಿಡುಗಡೆಯಾದ ನಂತರ ತನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ನಟ ಶಾರುಖ್ ಖಾನ್ ದೂರಿನಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 5 ರಿಂದ ಶಾರುಖ್ ಖಾನ್ ಅವರಿಗೆ ಭದ್ರತೆ ಹೆಚ್ಚಳ
ಮಹಾರಾಷ್ಟ್ರ ರಾಜ್ಯ ಗುಪ್ತಚರ ಇಲಾಖೆ (ಎಸ್ಐಡಿ) ರಾಜ್ಯದ ಎಲ್ಲಾ ಪೊಲೀಸ್ ಕಮಿಷನರೇಟ್ಗಳು, ಜಿಲ್ಲಾ ಪೊಲೀಸ್ ಮತ್ತು ವಿಶೇಷ ರಕ್ಷಣಾ ಘಟಕಗಳಿಗೆ (ಎಸ್ಪಿಯು) ತಕ್ಷಣದಿಂದಲೇ ಜಾರಿಗೆ ಬರುವಂತೆ 'ವೈ+' ಭದ್ರತೆಯ ವರ್ಗದ ಬೆಂಗಾವಲು ಒದಗಿಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ತನ್ನ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈ ಭದ್ರತೆಯನ್ನು ಅಧಿಕೃತವಾಗಿ ಅಕ್ಟೋಬರ್ 5 ರಿಂದ ನೀಡಲಾಗಿದೆ ಎಂದು ವರದಿಯಾಗಿದೆ. Y+ ಭದ್ರತೆ ವಿಭಾಗದಲ್ಲಿ ಶಾರುಖ್ ಖಾನ್ ಅವರಿಗೆ ಕಮಾಂಡೋಗಳು, ನಾಲ್ವರು ಪೊಲೀಸ್ ಸಿಬ್ಬಂದಿ ಮತ್ತು ಟ್ರಾಫಿಕ್ ಕ್ಲಿಯರೆನ್ಸ್ ವಾಹನ ಸೇರಿದಂತೆ 11 ಭದ್ರತಾ ಸಿಬ್ಬಂದಿಯನ್ನು ನೀಡಲಾಗುತ್ತದೆ. ಜೊತೆಗೆ ಈ ವರ್ಷದ ಆಗಸ್ಟ್ ಆರಂಭದಿಂದಲೂ ಮುಂಬೈನ ಅವರ ಸುಂದರ ಮನೆ ಮನ್ನತ್ನಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ.

ಆಗಸ್ಟ್ ಆರಂಭದಿಂದಲೂ ಬೆದರಿಕೆ!?
ಆಗಸ್ಟ್ನಲ್ಲಿ ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ಗಳ ಪ್ರಕರಣದಲ್ಲಿ ನಟ ಶಾರುಖ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಈ ಘಟನೆಯ ನಂತರ 'ಮನ್ನತ್' ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ಗಳ ಪರ ಪ್ರಚಾರ ಮಾಡುವ ಸಿನಿಮಾ ಸೆಲೆಬ್ರಿಟಿಗಳ ವಿರುದ್ಧ ಸಾಲು ಸಾಲು ಪ್ರತಿಭಟನೆಗಳು ನಡೆದವು. ಈ ವರ್ಷದ ಮಾರ್ಚ್ನಲ್ಲಿ ಇಬ್ಬರು ವ್ಯಕ್ತಿಗಳು ಶಾರುಖ್ ಖಾನ್ ಅವರ ಮನೆಗೆ ಗೋಡೆ ಮೇಲೆ ಹತ್ತಿ ಪ್ರವೇಶಿಸಿದ್ದರು. ಆಗ ಭದ್ರತಾ ಸಿಬ್ಬಂದಿ ಇಬ್ಬರನ್ನು ಬಂಧಿಸಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ದಾಖಲೆ ಮೇಲೆ ದಾಖಲೆ ಬರೆದ ಶಾರುಖ್ ಖಾನ್ ಅವರ ಜವಾನ್!
ಶಾರುಖ್ ಖಾನ್ ಅವರ ಜವಾನ್ ಸಿನಿಮಾ ಈಗಾಗಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ 1103.27 ಕೋಟಿ ರೂಪಾಯಿ ಗಳಿಸಿದೆ. ಅಟ್ಲಿ ನಿರ್ದೇಶನದ ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಜೊತೆಗೆ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಶಾರುಖ್ ಖಾನ್ ರಾಜ್ಕುಮಾರ್ ಹಿರಾನಿ ನಿರ್ದೇಶನದ 'ಡುಂಕಿ'ಯಲ್ಲಿ ನಟಿ ತಾಪ್ಸಿ ಪನ್ನು ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











