ಥಿಯೇಟರ್ಗಳಲ್ಲಿ ಹನುಮಂತನಿಗಾಗಿ ಖಾಲಿ ಬಿಟ್ಟ ಸೀಟ್ ಅಕ್ಕಪಕ್ಕದ ಸೀಟ್ ಟಿಕೆಟ್ ಬೆಲೆ ಎಷ್ಟು?
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಬಿಡುಗಡೆಗೆ ಇನ್ನು 4 ದಿನ ಮಾತ್ರ ಬಾಕಿಯಿದೆ. ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ. ಈಗಾಗಲೇ ಬೆಂಗಳೂರು ಸೇರಿದಂತೆ ಕೆಲವೆಡೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಇದೆಲ್ಲದರ ನಡುವೆ ಹನುಮಂತನಿಗಾಗಿ ಮೀಸಲಿಟ್ಟ ಸೀಟ್ ಅಕ್ಕಪಕ್ಕದ ಸೀಟ್ ಟಿಕೆಟ್ ದರ ಹೆಚ್ಚಾಗಿದೆ ಎನ್ನುವ ಗುಸುಗುಸು ಶುರುವಾಗಿದೆ.
'ಆದಿಪುರುಷ್' ಸಿನಿಮಾ ಬಿಡುಗಡೆಯಾಗುವ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದೊಂದು ಸೀಟ್ ಹನುಮಂತನಿಗಾಗಿ ಖಾಲಿ ಬಿಡಲು ಚಿತ್ರತಂಡ ಮುಂದಾಗಿದೆ. ರಾಮಾಯಣ ಪಾರಾಯಣ ಮಾಡುವ ಜಾಗಕ್ಕೆ ಹನುಮ ಬರ್ತಾನೆ ಎನ್ನುವುದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸುತ್ತಾ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಪ್ರದರ್ಶನವಾಗುವ ಎಲ್ಲಾ ಥಿಯೇಟರ್ಗಳಲ್ಲಿ ಒಂದು ಸೀಟ್ ಹನುಮಂತನಿಗಾಗಿ ಖಾಲಿ ಬಿಡಲು ನಿರ್ಧರಿಸಿದ್ದೇವೆ ಎಂದು ಚಿತ್ರತಂಡ ಹೇಳಿದೆ. ಪ್ರೀ ರಿಲೀಸ್ ಈವೆಂಟ್ನಲ್ಲೂ ನಿರ್ದೇಶಕ ಓಂ ರಾವುತ್ ಈ ಬಗ್ಗೆ ಹೇಳಿದ್ದರು.

ಸದ್ಯ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು ಕೆಲವೆಡೆ ಟಿಕೆಟ್ ದರ ಹೆಚ್ಚಿಸಿರೋದು ಗೊತ್ತಾಗ್ತಿದೆ. ದೊಡ್ಡ ಸಿನಿಮಾಗಳು ರಿಲೀಸ್ ಆದಾಗ ಈ ರೀತಿ ಟಿಕೆಟ್ ದರ ಹೆಚ್ಚಿಸುವ ಪರಿಪಾಠ ನಡೆದುಕೊಂಡು ಬರುತ್ತದೆ. ಇದು ತಪ್ಪು ಎಂದು ಹೇಳಿದರೂ ಯಾರು ಕೇಳುವವರು ಇಲ್ಲ. ಇದೆಲ್ಲದರ ನಡುವೆ ಈಗ ಚಿತ್ರತಂಡ ಥಿಯೇಟರ್ಗಳಲ್ಲಿ ಹನುಮಂತನಿಗಾಗಿ ಮೀಸಲಿಡುವ ಸೀಟ್ ಅಕ್ಕಪಕ್ಕದ ಸೀಟ್ ಟಿಕೆಟ್ ದರ್ ಹೆಚ್ಚು ಎನ್ನುವ ಮಾತುಗಳು ಕೇಳಿಬರ್ತಿದೆ.
ಟೀ ಸೀರಿಸ್ ಸ್ಪಷ್ಟನೆ
'ಆದಿಪುರುಷ್' ಚಿತ್ರವನ್ನು ಟೀ ಸಿರೀಸ್ ಹಾಗೂ ರೆಟ್ರೊಪ್ಲಿಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಅಂದಾಜು 500 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ಸಿದ್ಧವಾಗಿದೆ. ಸದ್ಯ ಹರಿದಾಡುತ್ತಿರುವ ವದಂತಿ ಬಗ್ಗೆ ಟಿ ಸೀರಿಸ್ ಸಂಸ್ಥೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. "ಆದಿಪುರುಷ್ ಚಿತ್ರದ ಟಿಕೆಟ್ ದರ ನಿಗದಿಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ತಪ್ಪು ವರದಿಗಳು ಹರಿದಾಡುತ್ತಿವೆ. ಹನುಮಂತನಿಗಾಗಿ ಕಾಯ್ದಿರಿಸಿದ ಸೀಟುಗಳ ಅಕ್ಕಪಕ್ಕದ ಸೀಟುಗಳ ದರಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಸುಳ್ಳು ಮಾಹಿತಿ ನಂಬಬೇಡಿ" ಎಂದು ಟ್ವೀಟ್ ಮಾಡಿದೆ.
ಬಾಬು ಗೊಗಿನೇನಿ ಚಕಾರ
ಥಿಯೇಟರ್ಗಳಲ್ಲಿ ಹನುಮಂತನಿಗಾಗಿ ಒಂದು ಸೀಟ್ ಕಾಯ್ದಿರಿಸುವ ಚಿತ್ರತಂಡದ ನಿರ್ಧಾರಕ್ಕೆ ಮಾನವ ಹಕ್ಕುಗಳ ಕಾರ್ಯಕರ್ತ ಬಾಬು ಗೊಗಿನೇನಿ ವ್ಯಂಗ್ಯವಾಡಿದ್ದರು. "ಥಿಯೇಟರ್ಗಳನ್ನು ದೇವಸ್ಥಾನವಾಗಿ ಬದಲಿಸಲು ಅನುಮತಿ ಇದ್ಯಾ? ಅಲ್ಲಿ ಭಕ್ತರು ತೆಂಗಿನ ಕಾಯಿ ಒಡೆಯಲು ಅವಕಾಶ ಮಾಡಿಕೊಟ್ಟಿದ್ದೀರಾ?" ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು. ಈ ಬಗ್ಗೆ ಪರ ವಿರೋಧ ಚರ್ಚೆ ಕೂಡ ನಡೆದಿತ್ತು.

ಬಹುನಿರೀಕ್ಷಿತ ಸಿನಿಮಾ
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮನಾಗಿ ಪ್ರಭಾಸ್ ನಟಿಸಿದ್ದಾರೆ. ಸೀತೆಯಾಗಿ ಕೃತಿ ಸನೂನ್, ರಾವಣನಾಗಿ ಸೈಫ್ ಅಲಿಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ಕಾಣಿಸಿಕೊಂಡಿದ್ದಾರೆ. ತ್ರಿಡಿ ಮತ್ತು ಟುಡಿ ವರ್ಷನ್ಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿರೋದು ವಿಶೇಷ. ಕೆಆರ್ಜಿ ಸಂಸ್ಥೆ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದೆ.
ಹೇಗಿದೆ ಅಡ್ವಾನ್ಸ್ ಬುಕ್ಕಿಂಗ್?
ರಾಮಾಯಣ ಕಾವ್ಯ ಆಧರಿಸಿ ಪ್ರಭಾಸ್ ಸಿನಿಮಾ ಮಾಡ್ತಾರೆ ಅಂದಾಗಲೇ ನಿರೀಕ್ಷೆ ಮೂಡಿತ್ತು. ಕಾರಣಾಂತರಗಳಿಂದ ಸಿನಿಮಾ ತೆರೆಗೆ ಬರೋದು ತಡವಾಯಿತು. ತಡವಾದಷ್ಟು ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಟೀಸರ್ ನಿರಾಸೆ ಮೂಡಿಸಿತ್ತು. ಭಾರೀ ಟೀಕೆಗೂ ಗುರಿಯಾಗಿತ್ತು. ಅಲ್ಲಿಂದ ಮುಂದೆ ಸಿನಿಮಾ ಮೇಲಿನ ನಿರೀಕ್ಷೆ ಕೊಂಚ ಕಮ್ಮಿ ಆಗಿತ್ತು. ಆದರೆ ಟ್ರೈಲರ್, ಸಾಂಗ್ಸ್ ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. ಅದರೂ ಸದ್ಯಕ್ಕೆ ಅಡ್ವಾನ್ಸ್ ಬುಕ್ಕಿಂಗ್ ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ ಅನ್ನೋದು ಗೊತ್ತಾಗ್ತಿದೆ.


Click it and Unblock the Notifications











