ಗಂಡಸು ತನ್ನ ಮಗಳ ವಯಸ್ಸಿನವಳ ಜೊತೆ ಮದುವೆಯಾಗಬಹುದಾ ? ಮಲೈಕಾ ಅರೋರಾ ಕೆಂಡ..ಕೆಂಡ
ಪ್ರೀತಿ ಒಂಥರಾ ಅಮಲು ಇದ್ದಂತೆ. ನೆತ್ತಿಗೇರುವುದು ಗೊತ್ತಾಗಲ್ಲ.ಇಳಿಯುವುದು ಗೊತ್ತಾಗಲ್ಲ. ಅಪ್ಪಿ ತಪ್ಪಿ ಗೊತ್ತಾಗಿ ಕಣ್ ಬಿಟ್ಟಾಗ ಸಮಾಜ ಬೇರೆಯದ್ದೇ ರೀತಿಯ ಮಾತುಗಳನ್ನಾಡಲು ಶುರು ಮಾಡುತ್ತೆ. ಅದರಲ್ಲಿಯೂ ಸೆಲೆಬ್ರೀಟಿಯಾದರೆ ಮುಗೀತು. ಹೆಜ್ಜೆ ಹೆಜ್ಜೆಗೂ ಕೊಂಕು ನುಡಿ. ಇಂತಹ ಕಷ್ಟಕರ ಹಾಗೂ ಕ್ಲಿಷ್ಟಕರ ಸಮಯವನ್ನ ಎದುರಿಸಿ, ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. ಇಂಥಹದ್ದೇ ಒಂದು ಸವಾಲಿನ ಬಗ್ಗೆ ಮಲೈಕಾ ಅರೋರಾ ಮಾತನಾಡಿದ್ದಾರೆ. ಮನದ ಮಾತು ಹಂಚಿಕೊಂಡು ಹಗುರಾಗಿದ್ದಾರೆ.
ಹೌದು ನಿಮಗೆ ಗೊತ್ತಿರಬೇಕು. ಮಲೈಕಾ ಈಗ ಅರ್ಬಾಜ್ ಖಾನ್ ಜೊತೆ ಇಲ್ಲ.ಅದಕ್ಕೆ ಕಾರಣ ಹತ್ತು ಇರಬಹುದು. ನೂರು ಇರಬಹುದು. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರೂ ದೂರವಾಗಿದ್ದಾರೆ. ಬೇರೊಂದು ಮದುವೆ ಮಾಡಿಕೊಂಡು ಅರ್ಬಾಜ್ ಖಾನ್ ಖುಷಿಯಾಗಿದ್ದಾರೆ. ತನಗಿಂತ 23 ವರ್ಷ ಚಿಕ್ಕ ಹುಡುಗಿಯ ಜೊತೆ ಎರಡನೇ ಮದುವೆ ಮಾಡಿಕೊಂಡು 58ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ.

ಇನ್ನೂ ಅರ್ಬಾಜ್ ಖಾನ್ ಮನೆಯಿಂದ ಹೊರ ಬಂದ ನಂತರ ಮಲೈಕಾ ಕೂಡ ತಮ್ಮ ಜೀವನದಲ್ಲಿ ಖುಷಿಯಾಗಿದ್ದಾರೆ.ಅರ್ಜುನ್ ಕಪೂರ್ ಜೊತೆ ಕೆಲ ವರ್ಷ ಇದ್ದ ಮಲೈಕಾ ಸದ್ಯ ವಜ್ರದ ವ್ಯಾಪಾರಿ ಹರ್ಷ್ ಮೆಹ್ತಾ ಜೊತೆ ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರೀತಿಯ ಮಳೆಯಲ್ಲಿ ಮತ್ತೊಮ್ಮೆ ನೆನೆಯಲು ಕಾತುರರಾಗಿದ್ದಾರೆ.
ಆದರೆ ಕೆಲವರಿಗೆ ಇದು ಇಷ್ಟ ಇಲ್ಲ. ಇಷ್ಟ ಇಲ್ಲ ಅನ್ನುವುದಕ್ಕಿಂತ ಅರ್ಬಾಜ್ ಖಾನ್ ಜೊತೆ ಸಂಬಂಧ ಹಳಸಿ ಹೋಗಲು ಮತ್ತು ಜೀವಜ್ಜೀವದಂತೆ ಇದ್ದ ಅರ್ಜುನ್ ಕಪೂರ್ ಸಂಬಂಧ ಕಡಿದುಕೊಂಡು ಹೋಗಲು ಮಲೈಕಾ ಅರೋರಾ ಕಾರಣ ಅನ್ನುವುದು ಅನೇಕರ ಅಭಿಪ್ರಾಯ. ಸಮಾಜದ ದೃಷ್ಟಿಕೋನ ಮೊದಲಿಂದ ಹಾಗೇ ಇದೆ ಬಿಡಿ. ತಪ್ಪೆಲ್ಲವೂ ಮಹಿಳೆಯ ಮೇಲೆಯೇ ಇಲ್ಲಿ ಹೊರಿಸಲಾಗುತ್ತೆ.
ಹೀಗಾಗಿಯೇ ಸದ್ಯ ಸಿಡಿದೆದ್ದಿರುವ ಮಲೈಕಾ ತಮ್ಮ ಮನದ ನೋವನ್ನ ಹೊರ ಹಾಕಿದ್ದಾರೆ. ಸಮಾಜ ತಮ್ಮ ಬಗ್ಗೆ ಆಡುವ ಮಾತುಗಳನ್ನು ನೆನೆದು ಭಾವುಕರಾಗಿದ್ದಾರೆ.
ಹಿರಿಯ ಪತ್ರಕರ್ತೆ ಬರ್ಖಾ ದತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಲೈಕಾ ನಮ್ಮ ಸಮಾಜದಲ್ಲಿ ಪುರುಷರಿಗೊಂದು ನ್ಯಾಯ.. ಮಹಿಳೆಯರಿಗೊಂದು ನ್ಯಾಯ ಇದೆ ಎಂದು ಹೇಳಿದ್ದಾರೆ. ಒಬ್ಬ ಗಂಡಸು ಡಿವೋರ್ಸ್ ಪಡೆದರೆ, ತನಗಿಂತ ಅರ್ಧ ವಯಸ್ಸಿನ ಕಿರಿಯ ಯುವತಿಯ ಜೊತೆ ಮದುವೆಯಾದರೆ, ನಮ್ಮ ಸಮಾಜ ವ್ಹಾ ಎಂಬ ಉದ್ಘಾರ ತೆಗೆಯುತ್ತೆ. ಎಂತಹ ಅದ್ಭುತ ವ್ಯಕ್ತಿ ಎಂದು ಕೊಂಡಾಡುತ್ತೆ.

ಆದರೆ ಅದೇ ಕೆಲಸ ಮಹಿಳೆ ಮಾಡಿದರೆ ಸಮಾಜ ನೋಡುವ ದೃಷ್ಟಿಕೋನವೇ ಬೇರೆ, ಅವಳಿಗೆ ಬುದ್ದಿ ಇಲ್ಲಾ ಎಂದು ಮಾತನಾಡುತ್ತೆ, ಮಹಿಳೆಯ ಚಾರಿತ್ರ್ಯಹರಣ ಮಾಡುತ್ತೆ ಎಂದು ಹೇಳಿರುವ ಮಲೈಕಾ ಈ ದ್ವಿಮುಖ ಧೋರಣೆ ಬದಲಾಗಬೇಕು ಎಂದಿದ್ದಾರೆ. ಈ ಮನಸ್ಥಿತಿಯಿಂದ ಎಲ್ಲರೂ ಹೊರ ಬರಬೇಕು ಎಂದಿದ್ದಾರೆ.
ಮುಂದುವರೆದು ನಾನು ಮದುವೆಯಾದಾಗ ನನಗೆ ಕೇವಲ 25 ವರ್ಷ. ಆಗ ಮದುವೆಯಾಗುವ ನಿರ್ಧಾರವನ್ನು ನಾನು ನನ್ನ ತಾಯಿಯ ಎದುರು ಹೇಳಿದಾಗ ಅವರು ಆಘಾತಕ್ಕೀಡಾಗಿದ್ದರು ಎಂದು ಹೇಳಿರುವ ಮಲೈಕಾ ಆಗ ನನ್ನ ತಾಯಿ ಇಷ್ಟು ಬೇಗ ಮದುವೆ ಯಾಕೆ..? ಹೊರಗಡೆ ಹೋಗು, ಬದುಕಿನ ಕ್ಷಣಗಳನ್ನು ಎಂಜಾಯ್ ಮಾಡು ಎಂಬ ಬುದ್ದಿ ಮಾತು ಹೇಳಿದ್ದರು ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನೀನು ಮೊದಲು ಡೇಟ್ ಮಾಡುವ ಹುಡುಗನನ್ನು ಮದುವೆಯಾಗಬೇಡ ಎಂದು ಹೇಳಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ.
ನನ್ನ ತಾಯಿಯ ಈ ಎಚ್ಚರಿಕೆಯ ಮಾತುಗಳನ್ನೂ ನಾನು ಮೀರಿದೆ, ನಾನು ಮೊದಲು ಡೇಟ್ ಮಾಡಿದ್ದ ವ್ಯಕ್ತಿಯನ್ನೇ ನಾನು ಮದುವೆಯಾದೆ ಎಂದು ಹೇಳಿರುವ ಮಲೈಕಾ ನಾನ್ಯಾಕೆ ಆ ನಿರ್ಧಾರ ಮಾಡಿದೆ ಎನ್ನುವುದು ನನ್ನ ತಾಯಿಗೆ ಅವತ್ತು ಅರ್ಥವಾಗಲೇ ಇಲ್ಲ ಎಂದು ಹೇಳಿದ್ದಾರೆ. ನೀನ್ಯಾಕೇ ಹೀಗೆ ಮಾಡಿದೆ..? ಹೀಗಾದರೆ ಹೊರಗಡೆಯ ಪ್ರಪಂಚದ ಅರಿವು ನಿನಗ್ಯಾವಾಗ ಆಗುತ್ತೆ ..? ಎಂದು ಆಗಲೂ ಕೂಡ ನನ್ನ ತಾಯಿ ನನ್ನನ್ನೂ ಪ್ರಶ್ನೆ ಮಾಡಿದ್ದರು ಎಂದು ಹೇಳಿರುವ ಮಲೈಕಾ ಆಗ ನಾನು ನೀನು ಸುಮ್ಮನೆ ಇರಮ್ಮ ಎಂದು ಹೇಳಿ ಬಾಯಿ ಮುಚ್ಚಿಸಿದ್ದೆ ಎಂದು ಹೇಳಿದ್ದಾರೆ. ನನ್ನಮ್ಮ ಕನಸು ಕಾಣಲು ಸದಾ ಪ್ರೋತ್ಸಾಹ ಕೊಡುತ್ತಿದ್ದರು, ಯಾವತ್ತು.. ಯಾವುದಕ್ಕೂ.. ನಮ್ಮನ್ನು ಅವರು ತಡೆಯಲಿಲ್ಲ ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ನಾನು ಚಿತ್ರರಂಗದಲ್ಲಿ ಇಷ್ಟು ದೂರ ಬರುತ್ತೇನೆ ಎಂದು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ಹೇಳಿರುವ ಮಲೈಕಾ, ಮೂರು ನಾಲ್ಕು ಹಾಡುಗಳಲ್ಲಿ ಕುಣಿದು ಆ ನಂತರ ಮದುವೆಯಾಗಿ, ಮಕ್ಕಳ ಲಾಲನೆ-ಪಾಲನೆ ಮಾಡುತ್ತಾ ನಾನು ಇರುತ್ತೇನೆ ಎಂದುಕೊಂಡಿದ್ದೆ, ಆಗ ನನಗೆ ಮಹತ್ವಕಾಂಕ್ಷಿ ಎನ್ನುವ ವಿಚಾರ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಕೆಲ ವರ್ಷಗಳ ನಂತರ ನನ್ನ ತಪ್ಪಿನ ಅರಿವು ಆಯ್ತು, ನಾನು ಮಹತ್ವಕಾಂಕ್ಷಿ ಎನ್ನುವುದು ನನಗೆ ಮನ ದಟ್ಟಾಯ್ತು ಎಂದು ಕೂಡ ಮಲೈಕಾ ಹೇಳಿದ್ದಾರೆ.


Click it and Unblock the Notifications











