'ಆದಿಪುರುಷ್' ಸಿನಿಮಾ ಟೀಸರ್ ಬಗ್ಗೆ ಮಾಳವಿಕಾ ಅವಿನಾಶ್ ಕಿಡಿ
ಪ್ರಭಾಸ್ ನಟಿಸಿರುವ 'ಆದಿಪುರುಷ್' ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾದ ಟೀಸರ್ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಟೀಸರ್ನಲ್ಲಿ ಕಂಡಿರುವ ಕಳಪೆ ಗ್ರಾಫಿಕ್ಸ್ ಬಗ್ಗೆ ಈಗಾಗಲೇ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೀಗ ರಾಮಾಯಣ ಕತೆಯನ್ನು ತಮಗೆ ತೋಚಿದಂತೆ ತಿರುಚಿರುವ ಬಗ್ಗೆ ಬಿಜೆಪಿಯ ಕೆಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಕ್ತಾರೆ ಹಾಗೂ ನಟಿ ಮಾಳವಿಕಾ ಅವಿನಾಶ್, ಫೇಸ್ಬುಕ್ನಲ್ಲಿ 'ಆದಿಪುರುಷ್' ಸಿನಿಮಾದ ಟೀಸರ್ ಬಗ್ಗೆ ಬರೆದುಕೊಂಡಿದ್ದು, ''ವಾಲ್ಮೀಕಿಯ ರಾವಣ, ಇತಿಹಾಸದ ರಾವಣ ಲಂಕಾಧಿಪತಿ...64ಕಲೆಗಳಲ್ಲಿ ಪರಿಣಿತಿ ಇದ್ದ ಮಹಾ ಶಿವ ಭಕ್ತ. ವೈಕುಂಠವನ್ನು ಕಾದ ಜಯನ(ವಿಜಯಾ) ಅವತಾರ! 9 ಗ್ರಹಗಳನ್ನು ತನ್ನ ಸಿಂಹಾಸನಕ್ಕೆ ಮೆಟ್ಟಲಾಗಿಸಿಕೊಂಡವನು. ಥೈಲ್ಯಾಂಡಿನವರು ಅದೆಷ್ಟು ಸುಂದರವಾಗಿ ರಾಮಾಯಣದ ನಾಟ್ಯಮಾಡುತ್ತಾರೆ.
ಮೂರ್ಖರು, ಗೊತ್ತಿಲ್ಲವದವರು, ನಂಬಿಕೆ ಇಲ್ಲದವರು ಕಾರ್ಟೂನನ್ನು ಪ್ರದರ್ಶಿಸುವ ಅಗತ್ಯವೇನಿದೆ?'' ಎಂದು ಸಿಟ್ಟಿನಿಂದಲೇ ಮಾಳವಿಕಾ ಪ್ರಶ್ನೆ ಮಾಡಿದ್ದಾರೆ.

ಜೊತೆಗೆ ಸೈಫ್ ಅಲಿ ಖಾನ್ರ ರಾವಣನ ಪಾತ್ರವನ್ನು ಕಠು ಪದಗಳಲ್ಲಿ ಟೀಕಿಸಿರುವ ಮಾಳವಿಕಾ, ''ಇವನು ನಮಗೆ ಗೊತ್ತಿಲ್ಲದ ತುರ್ಕಿ ದೊರೆ ತೈಮೂರಿನ ಅಪ್ಪನಿರಬೇಕು'' ಎಂದಿದ್ದಾರೆ. ಆ ಮೂಲಕ ಸೈಫ್ ಅಲಿ ಖಾನ್ ಮುಸ್ಲಿಂ ಆಗಿರುವುದನ್ನೂ ಟೀಕಿಸಿದಂತಿದೆ ಮಾಳವಿಕ.
ಬಾಲಿವುಡ್ ನವರಿಗೆ ಅದೆಷ್ಟು ಅಸಡ್ಡೆ! ಮಿನಿಮಮ್ ರಿಸರ್ಚ್ ಮಾಡಲ್ವಾ? ಎಂದು ಪ್ರಶ್ನೆ ಮಾಡಿರುವ ಮಾಳವಿಕಾ ಅವಿನಾಶ್, ಬಾಲಿವುಡ್ಡಿನವರು, ಹಿರಣ್ಯಕಶ್ಯಪು ಪಾತ್ರ ಮಾಡಿದ ಡಾ ರಾಜ್ಕುಮಾರ್ ಅವರನ್ನು, ರಾಮ-ರಾವಣ ಪಾತ್ರಗಳಿಗೆ ಸೀನಿಯರ್ ಎನ್ಟಿಆರ್ ಅವರನ್ನು, ರಾವಣ ಹಾಗೂ ಘಟೋದ್ಗಜ ಪಾತ್ರಕ್ಕಾಗಿ ಎಸ್ವಿ ರಂಗಾರಾವ್ ಅವರನ್ನು ನೋಡಬೇಕು, ನೋಡಿ ಕಲಿಯಬೇಕು ಎಂದಿದ್ದಾರೆ.


Click it and Unblock the Notifications











