ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ನನ್ನ ಬದುಕು ಅನೇಕ ಬಾರಿ ಬದಲಾಗಿದೆ ; ಆದರೆ...!
ಅದೃಷ್ಟ, ಬಣ್ಣದ ಲೋಕದ ಬಾಗಿಲಿನವರೆಗೆ ಕರೆದೊಯ್ಯಬಹುದು. ಆದರೆ.. ಅಲ್ಲಿಂದಾಚೆ.. ಮುಂದೆ ನಡೆಯುವುದು, ಉಳಿಯುವುದು, ಬೆಳೆಯುವುದು, ನಿರ್ಧಾರ ಮಾಡುವುದು ಪ್ರತಿಭೆ ಮಾತ್ರ.
ಹೀಗಾಗಿಯೇ ಕೇವಲ ಗ್ಲ್ಯಾಮರ್ ಇದ್ದರಷ್ಟೇ ಅಲ್ಲ, ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಎಂಬ ಮಾತನ್ನ, ಚಿತ್ರರಂಗದ ಆಳ-ಅಗಲವನ್ನ ಬಲ್ಲ ದೊಡ್ಡವರು, ಕಾಲ..ಕಾಲಕ್ಕೆ.. ಹೇಳ್ತಾನೇ ಬಂದಿದ್ದಾರೆ. ಕೆಲವರು ಹಿರಿಯರ ಈ ಮಾತುಗಳನ್ನ ಗಂಭೀರವಾಗಿ ಪರಿಗಣಿಸಿ, ಅಭಿನಯದಲ್ಲಿ ಪರಿಣಿತಿ ಪಡೆದು ನೆಲೆಯೂರ್ತಾರೆ. ಇನ್ನೂ ಕೆಲವರು ಮಾತುಗಳಿಗೆ ಬೆಲೆ ಕೊಡದೇ ಕಣ್ಮರೆಯಾಗ್ತಾರೆ. ಬಾಲಿವುಡ್ನ ಬೆಡಗಿ ಮಾನುಷಿ ಚಿಲ್ಲರ್ ಈ ಎರಡರ ಪೈಕಿ ಯಾವ ಸಾಲಿಗೆ ಸೇರ್ತಾರೆ ಅನ್ನುವುದು ಮುಂದಿನ ದಿನದಲ್ಲಿ ಗೊತ್ತಾಗಲಿದೆಯಾದರೂ, ಸದ್ಯಕ್ಕೆ ಮಾನುಷಿ ಚಿಲ್ಲರ್ ಸತತ ಸೋಲುಗಳಿಂದ ಹೈರಾಣಾಗಿರುವುದು ಮಾತ್ರ ಸತ್ಯ

ಹೌದು, ವಿಶ್ವ ಸುಂದರಿಯ ಕಿರೀಟವನ್ನ ಮುಡಿಗೇರಿಸಿಕೊಂಡ ಮಾನುಷಿ ಚಿಲ್ಲರ್ ಗೆ, ಈ ರಂಗು ರಂಗಾದ ಪ್ರಪಂಚದಲ್ಲಿ ಹೇಳಿಕೊಳ್ಳುವಂತ ಗೆಲುವು ಸಿಕ್ಕಿಲ್ಲ. ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಜೊತೆ ಎರಡೆರಡು ಬಾರಿ ತೆರೆ ಹಂಚಿಕೊಂಡರು ಸಿನರಸಿಕರು ಮಾನುಷಿಯ ಮನಮೋಹಕ ನಗುವಿಗೆ ಮನ ಸೋಲಲಿಲ್ಲ. ಹೃದಯದಲ್ಲಿ ಇಟ್ಟು ಇಲ್ಲಿಯವರೆಗೆ ಪೂಜೆಯನ್ನ ಮಾಡಲಿಲ್ಲ. ಈ ಕಾರಣಕ್ಕೆ ಉತ್ತರ ಭಾರತದಲ್ಲಿ ಸಿಗದ ಪ್ರೀತಿ, ದಕ್ಷಿಣದಲ್ಲಾದರೂ ಸಿಗಬಹುದು ಎಂಬ ಭರವಸೆಯೊಂದಿಗೆ ಮಾನುಷಿ ಚಿಲ್ಲರ್, 'ಆಪರೇಷನ್ ವ್ಯಾಲೆಂಟೈನ್' ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ವರುಣ್ ತೇಜ ಜೊತೆ ತೆರೆ ಹಂಚಿಕೊಂಡಿದ್ದರು.
ಆದರೆ.. ಮಾನುಷಿಗೆ ಇಲ್ಲಿಯೂ ಸಿಕ್ಕಿದ್ದು ನಿರಾಸೆ. 08 ಕೋಟಿಯ ಮೇಲೆ ಆಪರೇಷನ್ ವ್ಯಾಲೆಂಟೈನ್ ಒಂದು ರೂಪಾಯಿಯ ಕಮಾಯಿಯನ್ನೂ ಮಾಡಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲವೆನ್ನುವಂತೆ ಮಾನುಷಿ ಮತ್ತೆ ಮನೆಗೆ ಮರಳಿದರು. ಬಾಲಿವುಡ್ ನಲ್ಲಿ ಬಡೇ ಮಿಯಾ ಚೋಟೆ ಮಿಯಾ ಚಿತ್ರಕ್ಕೆ ಬಣ್ಣ ಹಚ್ಚಿದ್ದರು.

ಬಡೇ ಮಿಯಾ ಚೋಟೆ ಮಿಯಾದಲ್ಲಿ ಅಕ್ಷಯ್ ಕುಮಾರ್- ಟೈಗರ್ ಶ್ರಾಫ್ ಜುಗಲಬಂದಿ, ಮಾನುಷಿಯ ಬದುಕಿನ ಪಥ ಬದಲಿಸುತ್ತೆ ಅನ್ನುವ ವಿಶ್ವಾಸ ಇತ್ತು. ಖುದ್ದು ಮಾನುಷಿ ಅವರಲ್ಲಿಯೂ ಇದೇ ನಂಬಿಕೆ ಇತ್ತು. ಈ ಕಾರಣಕ್ಕೆ ಪ್ರಚಾರದಲ್ಲಿ ಅತ್ಯುತ್ಸಾಹದಿಂದ ಭಾಗಿಯಾಗಿದ್ದರು.
ಆದರೆ.. ಮಾನುಷಿಗೆ ಸಿಕ್ಕಿದ್ದು ಮತ್ತದೇ ಸೋಲು.. ಮತ್ತದೇ ನಿರಾಸೆ. ಹೀಗಾಗಿಯೇ ಮಾನಸಿಕವಾಗಿ ಕುಗ್ಗಿ ಹೋದಂತೆ ಕಾಣ್ತಿರುವ ಮಾನುಷಿ, ನನ್ನ ಜೀವನದಲ್ಲಿ ಇಲ್ಲಿಯವರೆಗೆ ರಾತ್ರಿ ಕಳೆದು ಹಗಲು ಆಗುವಷ್ಟರಲ್ಲಿ ಅನೇಕ ಪವಾಡಗಳಾಗಿವೆ, ಹಾಗಂಥ ನಾನು ಬೆವರು ಸುರಿಸಿಯೇ ಇಲ್ಲ, ಕಷ್ಟವನ್ನ ಪಟ್ಟಿಯೇ ಇಲ್ಲ ಎಂದಲ್ಲ ತನು-ಮನವನ್ನ ಸಮರ್ಪಿಸಿ ಕೆಲಸವನ್ನ ಮಾಡಿದ್ದೇನೆ, ಆದರೆ ಕೆಲವೊಮ್ಮೆ ಸಿಗಬೇಕಾದ ಪ್ರತಿಫಲ ಸಿಗಲ್ಲ ಎಂದಿದ್ದಾರೆ. ಇನ್ನಷ್ಟು ಹೆಚ್ಚಿನ ಶ್ರಮವನ್ನ ಹಾಕಿದರೆ, ಹೊಸತನಕ್ಕೆ ಒಗ್ಗಿಕೊಂಡರೆ ಇಲ್ಲಿ ಬದುಕಲು ಸಾಧ್ಯವಾಗಬಹುದು ಎಂದ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ ಮಾನುಷಿ ಚಿಲ್ಲರ್.

ಸದ್ಯಕ್ಕೆ ಮಾನುಷಿ ಚಿಲ್ಲರ್ ಅವರ ಈ ಮಾತುಗಳ ಬಗ್ಗೆ ಬಾಲಿವುಡ್ ನಲ್ಲಿ ಚರ್ಚೆ ನಡೆಯುತ್ತಿದೆ. ಮಾನುಷಿ ಮಾಡಿರುವ ನಾಲ್ಕು ಸಿನಿಮಾ ಹೀನಾಯ ಸೋಲು ಕಂಡ ಹಿನ್ನೆಲೆ ಮಾನುಷಿಯ ಅಭಿನಯ ಸಾಮರ್ಥ್ಯ.. ಅದೃಷ್ಟ.. ದುರಾದೃಷ್ಟದ ಬಗ್ಗೆಯೂ ನಾನಾ ಮಾತು ಕೇಳಿ ಬರುತ್ತಿವೆ.


Click it and Unblock the Notifications











