ನಾವು ಗಂಡಸರೆಲ್ಲ ಎಣ್ಣೆ ಪಾರ್ಟಿ ಮಾಡ್ತಿದೀವಿ, ಒಬ್ಬಳೇ ಬಾ ; ಚಿತ್ರರಂಗಕ್ಕೆ ಗುಡ್ ಬೈ- 'ಮಠ' ನಟಿಯ ಕಣ್ಣೀರ ಕಥೆ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ.
ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾ*ಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾಷೆಯಲ್ಲಿ ಕೂಡ ಕಾ*ಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಮತ್ತೂ ಕೆಲವರು ಷರತ್ತುಗಳನ್ನು ಪೂರೈಸಲು ಆಗದೇ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಉದಾಹರಣೆಗೆ ವೈಷ್ಣವಿ ಮ್ಯಾಕ್ಡೊನಾಲ್ಡ್.
ಹೌದು, ವೈಷ್ಣವಿ ಮ್ಯಾಕ್ಡೊನಾಲ್ಡ್.. ಜಗದ್ವಿಖ್ಯಾತ ಧಾರಾವಾಹಿ ''ಶಕ್ತಿಮಾನ್''ನ ಗೀತಾ ವಿಶ್ವಾಸ್. ''ಶಕ್ತಿಮಾನ್'' ಧಾರಾವಾಹಿಯನ್ನು ನೋಡಿದವರು ಇವರನ್ನು ಮರೆಯಲು ಸಾಧ್ಯ ಇಲ್ಲ. ಆ ಕಾಲದಲ್ಲಿ ಇವರ ಪಾತ್ರ ಅಷ್ಟೊಂದು ಜನಪ್ರಿಯವಾಗಿತ್ತು. ಇವರಿಗೆ ಅಪಾರವಾದ ಹೆಸರನ್ನು ಕೂಡ ನೀಡಿತ್ತು.
''ಶಕ್ತಿಮಾನ್'' ಧಾರಾವಾಹಿ ಮಾಡುವ ಮೊದಲು ಬೆಳ್ಳಿತೆರೆಯಲ್ಲಿ ನಾಯಕಿಯಾಗಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ವೈಷ್ಣವಿ ''ಬಂಬಯಿ ಕಾ ಬಾಬು''.. ''ದಾನ್ವೀರ್''.. ಚಿತ್ರಗಳನ್ನು ಮಾಡಿದ್ದರು. ''ಬರಸಾತ್ ಕೀ ರಾತ್'' ಚಿತ್ರದಲ್ಲಿ ಪ್ರಮುಖ ನಾಯಕಿಯ ಪಾತ್ರವನ್ನು ಕೂಡ ನಿರ್ವಹಿಸಿದ್ದರು.
ಇನ್ನು.. ನವರಸನಾಯಕ ಜಗ್ಗೇಶ್ ಅವರ ವೃತ್ತಿ ಬದುಕಿನಲ್ಲಿ ತುಂಬಾನೇ ಪ್ರಮುಖ ಮತ್ತು ಮಹತ್ತರ ಚಿತ್ರಗಳಲ್ಲಿ ''ಮಠ'' ಚಿತ್ರ ಕೂಡ ಒಂದು. ಗುರುಪ್ರಸಾದ್ ನಿರ್ದೇಶನದಲ್ಲಿ 2006ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ವೈಷ್ಣವಿ ಮ್ಯಾಕ್ಡೋನಾಲ್ಡ್ ಕಾಣಿಸಿಕೊಂಡಿದ್ದರು. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದರು. ಇವರ ''ವಾಟೆಂಡ್'' ಹಾಡನ್ನು ಇವತ್ತು ಕೂಡ ಹಲವರು ಮರೆತಿಲ್ಲ.

''ಬಾಬುಲ್''.. ''ಮಮ್ಮಿ ಪಂಜಾಬಿ''.. ಕೆಲ ಪ್ರಮುಖ ಚಿತ್ರಗಳು. 2014ರಲ್ಲಿ ಬಂದ ಸೂಪರ್ ನಾನಿ ಇವರ ಅಭಿನಯದ ಕೊನೆಯ ಸಿನಿಮಾ. ಆ ನಂತರ ಮತ್ತೆ ಕಿರುತೆರೆಗೆ ಮರಳಿದ ವೈಷ್ಣವಿ ಕೊನೆಯದಾಗಿ ಮುಖಕ್ಕೆ ಬಣ್ಣ ಹಚ್ಚಿದ್ದು 2018ರಲ್ಲಿ. ''ದಿಲ್ ಸೇ ದಿಲ್ ತಕ್'' ಧಾರಾವಾಹಿಯೇ ಕೊನೆ. ವೈಷ್ಣವಿ ಆ ನಂತರ ಯಾವ ಧಾರಾವಾಹಿಯಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಸಿನಿಮಾವನ್ನು ಕೂಡ ಮಾಡಲಿಲ್ಲ.
ಇಂಥಾ ವೈಷ್ಣವಿ ಈಗ ತಾವು ಚಿತ್ರರಂಗದಿಂದ ಮತ್ತು ಕಿರುತೆರೆಯಿಂದ ದೂರ ಸರಿದಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗದ ಬೇಡಿಕೆಯಿಂದ ಬೇಸತ್ತು ದೂರವಾಗಿರುವುದಾಗಿ ಹೇಳಿದ್ದಾರೆ. ಕಹಿ ಅನುಭವ ಕೂಡ ಹಂಚಿಕೊಂಡಿದ್ದಾರೆ.
ಈ ಕುರಿತು ''ಸಿದ್ಧಾರ್ಥ್ ಕಣ್ಣನ್'' ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವೈಷ್ಣವಿ ಮ್ಯಾಕ್ಡೋನಾಲ್ಡ್ ನಾನೊಂದು ಚಿತ್ರಕ್ಕೆ ಆಯ್ಕೆಯಾಗಿದ್ದೆ, ದೊಡ್ಡ ಬಜೆಟ್ನ ಸಿನಿಮಾ ಅದು. ಒಳ್ಳೆಯ ನಿರ್ಮಾಣ ಸಂಸ್ಥೆ ಆ ಚಿತ್ರದ ಹಿಂದೆ ಇತ್ತು ಎಂದು ಹೇಳಿದ್ದಾರೆ. ಆ ಚಿತ್ರದ ಒಪ್ಪಂದಕ್ಕೆ ಸಹಿ ಹಾಕಿ ಆಗಿತ್ತು, ಪ್ರಚಾರದ ಸಿದ್ದತೆಯನ್ನು ಕೂಡ ಮಾಡಿಕೊಳ್ಳಲಾಗಿತ್ತು ಎಂದು ಹೇಳಿರುವ ವೈಷ್ಣವಿ, ಆದರೆ ನಾನು ಅವರ ಪಾತ್ರಕ್ಕಾಗಿ ಪಲ್ಲಂಗದ ಷರತ್ತು ಒಪ್ಪಿಕೊಳ್ಳಲಿಲ್ಲ. ಹಾಸಿಗೆ ಹಂಚಿಕೊಳ್ಳಲಿಲ್ಲ. ಈ ಕಾರಣಕ್ಕೆ ನನ್ನನ್ನೂ ಕೊನೆ ಕ್ಷಣದಲ್ಲಿ ಚಿತ್ರದಿಂದ ಕಿತ್ತೆಸೆಯಲಾಯ್ತು ಎಂದಿದ್ದಾರೆ.
ನನ್ನ ಜೊತೆ ನನ್ನ ತಾಯಿ ಸದಾ ಇರುತ್ತಿದ್ದರು, ನೆರಳಿನಂತೆ ಹಿಂಬಾಲಿಸುತ್ತಿದ್ದರು ಎಂದು ಹೇಳಿರುವ ವೈಷ್ಣವಿ ನನ್ನ ತಾಯಿ ನನ್ನ ಜೊತೆ ಇರುವುದು ಅವರಿಗೆ ಬಹುದೊಡ್ಡ ಸಮಸ್ಯೆಯಾಗಿತ್ತು ಎಂದು ಹೇಳಿದ್ದಾರೆ.
ಹೀಗಾಗಿ ನನ್ನನ್ನೂ ಹೇಗಾದರೂ ಮಾಡಿ ಬಳಸಿಕೊಳ್ಳಬೇಕು ಎನ್ನುವ ತೀರ್ಮಾನಕ್ಕೆ ಕೂಡ ಬಂದಿದ್ದ ಆ ನಿರ್ಮಾಣ ಸಂಸ್ಥೆ ಚಿತ್ರದ ಚಿತ್ರೀಕರಣಕ್ಕೆ ಸ್ವಿಜರ್ಲ್ಯಾಂಡ್ಗೆ ತೆರಳಲು ನನ್ನ ಪಾಸ್ಪೋರ್ಟ್ನ ಮಾಡಿಸಲಿಲ್ಲ, ಬದಲಿಗೆ ನೆಪ ಹೇಳಿ ಸಾಧ್ಯವಾಗಲಿಲ್ಲ ಎಂದು ಹೇಳಿದರು ಎಂದು ನೆನಪು ಮಾಡಿಕೊಂಡಿದ್ದಾರೆ.
ಮುಂದುವರೆದು ಅದೊಂದು ದಿನ ನಾವು ಪುರುಷರೆಲ್ಲರೂ ಇಂದು ರಾತ್ರಿ ಮಾಡುತ್ತಿದ್ದೇವೆ, ನೀನು ಒಬ್ಬಳೇ ಪಾರ್ಟಿಗೆ ಬಾ ಎಂದು ನನ್ನನ್ನೂ ಅವರು ಕರೆದರು ಎಂದು ಹೇಳಿರುವ ವೈಷ್ಣವಿ ಆ ರಾತ್ರಿ ನಾನು ಅಲ್ಲಿ ಹೋಗಲಿಲ್ಲ, ನನ್ನ ತಾಯಿ ನನ್ನನ್ನೂ ಬಿಡಲಿಲ್ಲ ಎಂದು ಹೇಳಿದ್ದಾರೆ. ಆ ನಂತರ ನನ್ನ ತಾಯಿ ಮತ್ತು ನನ್ನನ್ನೂ ಅವರ ಕಛೇರಿಯಲ್ಲಿ ಕೂರಿಸಿಕೊಂಡು ನಿಮ್ಮ ಜೊತೆ ನಾವು ಈ ಚಿತ್ರ ಮುಂದುವರೆಸಲು ಸಾಧ್ಯ ಇಲ್ಲ ಎಂದು ಹೇಳಿ ನನ್ನನ್ನೂ ಆ ಚಿತ್ರದಿಂದ ತೆಗೆದು ಹಾಕಿದರು ಎಂದು ಹೇಳಿದ್ಧಾರೆ.
ಇನ್ನು ಇದೇ ಸಮಯದಲ್ಲಿ ಇದರಲ್ಲಿ ನಿರ್ದೇಶಕರದ್ದು ಯಾವ ತಪ್ಪು ಇರಲಿಲ್ಲ, ಅವರು ನೇರವಾಗಿ ಇದರಲ್ಲಿ ಭಾಗಿಯಾಗಿರಲಿಲ್ಲ ಎಂದು ಹೇಳಿರುವ ವೈಷ್ಣವಿ ಆ ಚಿತ್ರದ ನಾಯಕ ನಟನಿಗೆ ನನ್ನ ಮೇಲೆ ಆಸಕ್ತಿ ಇತ್ತು, ವ್ಯಾಮೋಹ ಇತ್ತು ಎಂದು ಹೇಳಿದ್ದಾರೆ. ನಾನು ಅವರ ಬೇಡಿಕೆಯನ್ನು ನಿರಾಕರಿಸಿದ ನಂತರ ನಿರ್ಮಾಪಕ, ನಿರ್ದೇಶಕ ಮತ್ತು ಆ ನಾಯಕ ನಟ ಮೂವರು ಕುಳಿತು ನಿರ್ಧಾರ ಮಾಡಿ ನನ್ನನ್ನೂ ಕಿತ್ತೆಸೆದರು ಎಂದು ಹೇಳಿದ್ಧಾರೆ.
ಈ ಘಟನೆ ವ್ಯೆಯಕ್ತಿಕವಾಗಿ ನನ್ನ ಮೇಲೆ ಪರಿಣಾಮ ಬೀರಿತು, ಅವಕಾಶ ಕೊರತೆ ಕೂಡ ಏಕಾಏಕಿ ಎದುರಾಯ್ತು ಈ ಹಿನ್ನೆಲೆ ನಾನು ಚಿತ್ರರಂಗದಿಂದ ದೂರ ಸರಿದು ಆ ನಂತರ ಕಿರುತೆರೆಗೆ ಬಂದೆ ಎಂದು ವೈಷ್ಣವಿ ಮ್ಯಾಕ್ಡೋನಾಲ್ಡ್ ನೆನಪು ಮಾಡಿಕೊಂಡಿದ್ದಾರೆ.


Click it and Unblock the Notifications











