''ಇದು ಡ್ರಗ್ಸ್ ಪ್ರಕರಣವಲ್ಲ, ಅಪಹರಣ ಪ್ರಕರಣ'': ಆರ್ಯನ್ ಖಾನ್ ಕೇಸು ಮತ್ತಷ್ಟು ಜಟಿಲ
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಧಾರ್ಮಿಕ ಮತ್ತು ರಾಜಕೀಯ ಆಯಾಮವನ್ನು ಪಡೆದು ಬಹಳ ಸಮಯವಾಯಿತು. ಆರಂಭದ ಸಮಯದಲ್ಲಿ ಆರ್ಯನ್ ಖಾನ್ ತಪ್ಪು ಮಾಡಿರಬಹುದು ಎಂದೇ ನಂಬಲಾಗಿತ್ತು, ಆದರೆ ಯಾವಾಗ ಎನ್ಸಿಬಿ ಆಪ್ತ, 'ಖಾಸಗಿ ಡಿಟೆಕ್ಟಿವ್' ಕೆಪಿ ಗೋಸಾವಿ ವಿಷಯ ಹೊರಗೆ ಬಂದಿತೊ ಪ್ರಕರಣದ ಬಗ್ಗೆ ಅನುಮಾಗಳು ಏಳಲು ಆರಂಭವಾಯ್ತು.
ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖಂಡ, ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲ್ಲಿಕ್ ಆರಂಭದಿಂದಲೂ ಆರ್ಯನ್ ಪ್ರಕರಣದ ಬಗ್ಗೆ ಮಾತನಾಡುತ್ತಲೇ ಇದ್ದು, ಪ್ರಕರಣದಲ್ಲಿ ಎನ್ಸಿಬಿಯೇ ಆರೋಪಿ ಎಂದಿದ್ದರು. ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ಕೆಪಿ ಗೋಸಾವಿ, ಸ್ಯಾಮ್ ಡಿಸೋಜಾ ಹಾಗೂ ಬಿಜೆಪಿ ಮುಖಂಡ ಮನೀಶ್ ಬಾನುಶಾಲಿ ಅವರ ಕೈವಾಡದ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದಿದ್ದು ನವಾಬ್ ಮಲ್ಲಿಕ್.
ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ಸಿಬಿಯ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಲೇ ಬಂದಿರುವ ನವಾಬ್ ಮಲ್ಲಿಕ್ ಇದೀಗ ಪ್ರಕರಣದ ಬಗ್ಗೆ ಬಹು ದೊಡ್ಡ ಆರೋಪವನ್ನು ಮಾಡಿದ್ದಾರೆ. ''ಆರ್ಯನ್ ಖಾನ್ ಪ್ರಕರಣ ಡ್ರಗ್ಸ್ ಪ್ರಕರಣ ಅಲ್ಲ ಬದಲಿಗೆ ಅಪಹರಣ ಮತ್ತು ಹಣ ವಸೂಲಿ ಪ್ರಕರಣ'' ಎಂದಿದ್ದಾರೆ. ಜೊತೆಗೆ ಇದರ ಹಿಂದಿರುವ ವ್ಯಕ್ತಿಯ ಹೆಸರನ್ನೂ ಸಹ ಬಹಿರಂಗಪಡಿಸಿದ್ದಾರೆ.

''ಆರ್ಯನ್ ಖಾನ್ ಪ್ರಕರಣ ಅಪಹರಣ ಮತ್ತು ಹಣ ವಸೂಲಿ ಪ್ರಕರಣ ಆಗಿದ್ದು ಈ ಪ್ರಕರಣದ ಹಿಂದಿರುವ ಮಾಸ್ಟರ್ ಮೈಂಡ್ ಬಿಜೆಪಿ ಮುಖಂಡ ಮೋಹಿತ್ ಕಾಂಬೋಜ್'' ಎಂದಿದ್ದಾರೆ ನವಾಬ್ ಮಲ್ಲಿಕ್.
''ಆರ್ಯನ್ ಖಾನ್ ಕ್ರೂಸ್ ಶಿಫ್ಗೆ ಹೋಗಿರಲಿಲ್ಲ. ಕ್ರೂಸ್ ಶಿಫ್ನಲ್ಲಿ ಪ್ರಯಾಣ ಮಾಡಲು ಟಿಕೆಟ್ ಸಹ ಖರೀದಿಸಿರಲಿಲ್ಲ. ಪ್ರತೀಕ್ ಗಾಬಾ ಮತ್ತು ಅಮೀರ್ ಫರ್ನೀಚರ್ವಾಲಾ ಅವರುಗಳು ಆರ್ಯನ್ ಅನ್ನು ಅಲ್ಲಿಗೆ ಕರೆದುಕೊಂಡು ಹೋದರು. ಶಿಫ್ಗೆ ಹತ್ತುವ ಮೊದಲು ಆರ್ಯನ್ ಅನ್ನು ಬಂಧಿಸಲಾಯ್ತು'' ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.
''ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ದಿನದಿಂದಲೂ ಶಾರುಖ್ ಖಾನ್ಗೆ ಬೆದರಿಕೆ ಹಾಕಲಾಗುತ್ತಿದೆ. ಇದೀಗ ಪ್ರಕರಣದಲ್ಲಿ ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಹೆಸರು ಸಹ ಕೇಳಿ ಬಂದಿರುವ ಕಾರಣ ಪ್ರಕರಣದ ಬಗ್ಗೆ ಏನೂ ಮಾತನಾಡದಂತೆ ಕೆಲವರು ಒತ್ತಡ ಹೇರಿದ್ದಾರೆ. ಶಾರುಖ್ ಖಾನ್ ಹೊರಗೆ ಬಂದು ಸತ್ಯ ಹೇಳಬೇಕು, ಅಪಹರಣಕಾರರಿಗೆ ಹಣ ಕೊಡುವುದು ಅಪರಾಧ ಎಂದು ಪರಿಗಣಿತವಾಗುವುದಿಲ್ಲ'' ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.
''ಆರ್ಯನ್ ಖಾನ್ ಅನ್ನು ವಶಕ್ಕೆ ಪಡೆದ ದಿನ ಆತನನ್ನು ಪಾರ್ಟಿಗೆಂದು ಕರೆದುಕೊಂಡು ಬಂದಿದ್ದ ರಿಷಬ್ ಸಚ್ದೇವ್, ಪ್ರತೀಕ್ ಗಬಾ, ಅಮೀರ್ ಫರ್ನೀಚರ್ವಾಲಾ ಅವರನ್ನು ಸಹ ವಶಕ್ಕೆ ಪಡೆಯಲಾಗಿತ್ತು. ಆದರೆ ಅವರನ್ನು ಅದೇ ದಿನ ರಾತ್ರಿ ಬಿಟ್ಟು ಕಳಿಸಲಾಯ್ತು. ಆರ್ಯನ್ ಖಾನ್ ಅನ್ನು ಬಂಧಿಸಲಾಯ್ತು'' ಎಂದಿದ್ದಾರೆ.
''ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ನ ಈ ಪ್ರಕರಣದ ಮುಖ್ಯ ಸೂತ್ರಧಾರಿ'' ಎಂದಿರುವ ನವಾಬ್ ಮಲ್ಲಿಕ್, ''ಶಾರುಖ್ ಪುತ್ರ ಆರ್ಯನ್ ಅನ್ನು ವಶಕ್ಕೆ ಪಡೆದ ದಿನವೇ ಮೋಹಿತ್ನ ಸಹೋದರ ಸಂಬಂಧಿ ರಿಷಬ್ ಸಚ್ದೇವ್ ಅನ್ನು ವಶಕ್ಕೆ ಪಡೆಯಲಾಗಿತ್ತು, ಆದರೆ ಆತನನ್ನು ಬಿಟ್ಟು ಕಳಿಸಲಾಯ್ತು. ರಿಷಬ್ ಸಚ್ದೇವ್, ಪ್ರತೀಕ್ ಗಬಾ, ಅಮೀರ್ ಫರ್ನೀಚರ್ವಾಲಾ ಅವರುಗಳನ್ನು ಬಂಧಿಸದೆ ವಾಪಸ್ ಕಳಿಸಿದ್ದು ಈ ಪ್ರಕರಣದ ಪ್ರಮುಖ ಅಂಶ'' ಎಂದು ನವಾಬ್ ಮಲ್ಲಿಕ್ ಹೇಳಿದ್ದಾರೆ.
'ಆರ್ಯನ್ ಖಾನ್ ಹಾಜರಾಗಿದ್ದ ಕ್ರೂಸ್ ಪಾರ್ಟಿಯಲ್ಲಿ ಫ್ಯಾಷನ್ ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಖಾಶಿಫ್ ಖಾನ್ ಸಹ ಭಾಗವಹಿಸಿದ್ದರು ಅವರನ್ನೇಕೆ ಬಂಧಿಸಿಲ್ಲ. ಅದೆ ಪಾರ್ಟಿಯಲ್ಲಿ ಅವರದ್ದೇ ಬ್ರ್ಯಾಂಡಿನ ಪೇಪರ್ ರೋಲ್ ಸಿಕ್ಕಿದೆಯಂತೆ, ಆ ರೋಲ್ನ ಮೂಲಕವೇ ಮಾದಕ ವಸ್ತು ಸೇವಿಸುತ್ತಾರಂತೆ, ಹೀಗಿದ್ದ ಮೇಲೆ ಖಾಶಿಫ್ ಖಾನ್ ಬಂಧನ ಏಕೆ ಆಗಿಲ್ಲ'' ಎಂದು ನವಾಬ್ ಮಲ್ಲಿಕ್ ಪ್ರಶ್ನೆ ಮಾಡಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ್ದ ಮೋಹಿತ್ ಕಂಬೋಜ್ ಆರ್ಯನ್ ಪ್ರಕರಣದಲ್ಲಿ ಎನ್ಸಿಪಿ ಪಕ್ಷದ ಸುನಿಲ್ ಪಾಟೀಲ್ ಕೈವಾಡ ಇದೆಯೆಂದು ನವಾಬ್ ಮಲ್ಲಿಕ್ ಹಾಗೂ ಸುನಿಲ್ ಪಾಟೀಲ್ ಒಂದಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ. ಈ ಬಗ್ಗೆ ಪ್ರತಿಕ್ರಿಯಿಸಿದ ನವಾಬ್ ಮಲ್ಲಿಕ್, 'ನಾನು ಮೊದಲ ಸುದ್ದಿಗೋಷ್ಠಿ ಮಾಡಿದಾಗ ಸುನಿಲ್ ಪಾಟೀಲ್ ನನಗೆ ಕರೆ ಮಾಡಿ ಮಾಹಿತಿ ನೀಡುವುದಾಗಿ ಹೇಳಿದ. ಗೊತ್ತಿರುವ ಮಾಹಿತಿಯನ್ನು ಪೊಲೀಸರಿಗೆ ನೀಡುವಂತೆ ನಾನು ಹೇಳಿದೆ'' ಎಂದಿದ್ದಾರೆ.


Click it and Unblock the Notifications











