'ಉಗ್ರಂ'ನಲ್ಲಿ ಕೆಲಸ ಮಾಡಿದ್ದ ಕನ್ನಡದ ಹುಡುಗ ಈಗ ಅಕ್ಷಯ್ ಕುಮಾರ್ ಚಿತ್ರಕ್ಕೆ ಡೈರೆಕ್ಟರ್
ಇತ್ತೀಚಿಗಷ್ಟೆ ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 'ಮಿಷನ್ ಮಂಗಲ್' ಟ್ರೇಲರ್ ಬಿಡುಗಡೆಯಾಯ್ತು. ಅಕ್ಷಯ್ ಕುಮಾರ್ ಅಭಿಮಾನಿಗಳು ಸೇರಿದಂತೆ ಎಲ್ಲರೂ ಟ್ರೇಲರ್ ನೋಡಿ ಮೆಚ್ಚಿಕೊಂಡರು. ವಿಶೇಷ ಅಂದರೆ, ಈ ಸಿನಿಮಾದ ನಿರ್ದೇಶನ ಮಾಡಿರುವುದು ಕನ್ನಡದ ಹುಡುಗ.
ಐದು ವರ್ಷಗಳ ಹಿಂದೆ ಶ್ರೀ ಮುರಳಿ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಇವರು, ಈಗ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಅವರೇ, ನಿರ್ದೇಶಕ ಜಗನ್ ಶಕ್ತಿ.
ಬೆಂಗಳೂರಿನಲ್ಲಿ ಬಸವನಗುಡಿ... ಬನಶಂಕರಿ.. ಅಂತ ಸುತ್ತುತ್ತಿದ್ದ ಈ ಹುಡುಗ ತಮ್ಮ ಪ್ರತಿಭೆಯ ಮೂಲಕ ಬಾಲಿವುಡ್ ಎಂಬ ಮಹಾ ಚಿತ್ರನಗರಿಯನ್ನು ತಲುಪಿದಿದ್ದಾರೆ. ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಪಡೆಯುವ ಸೂಚನೆ ನೀಡಿದ್ದಾರೆ...

ಬೆಂಗಳೂರಿನ ಹುಡುಗ ಜಗನ್
'ಮಿಷನ್ ಮಂಗಲ್' ಸಿನಿಮಾದ ನಿರ್ದೇಶಕ ಜಗನ್ ಶಕ್ತಿ ಮೂಲತಃ ಬೆಂಗಳೂರಿನವರು. ಇಲ್ಲಿಯೇ ಇಂಜಿನಿಯರಿಂಗ್ ಓದಿ, ಮುಂದೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿರು. ಮೊದಲು ಕನ್ನಡದ 'ಉಗ್ರಂ' ಸಿನಿಮಾದ ಕಲಾ ವಿಭಾಗದಲ್ಲಿ ಕೆಲಸ ಮಾಡಿದರು. ಬಳಿಕ ಮುಂಬೈ ವಿಮಾನ ಏರಿದರು. ಹಿಂದಿಯ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡಿದರು.

ಜಗನ್ ಕೆಲಸ ಮೆಚ್ಚಿದ ಅಕ್ಷಯ್ ಕುಮಾರ್
ಬಾಲಿವುಡ್ ನ ದೊಡ್ಡ ದೊಡ್ಡ ನಿರ್ದೇಶಕರ ಜೊತೆಗೆ ಜಗನ್ ಕೆಲಸ ಮಾಡುವ ಅವಕಾಶ ಪಡೆದರು. ನಿರ್ದೇಶಕ ಬಾಲ್ಕಿಗೆ ಆಪ್ತರಾದರು. ಅವರ 'ಪಾ', 'ಪ್ಯಾಡ್ ಮ್ಯಾನ್', ಇಂಗ್ಲೀಷ್ ವಿಂಗ್ಲಿಷ್' ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾದರು. 'ಪ್ಯಾಡ್ ಮ್ಯಾನ್' ಸಿನಿಮಾದಲ್ಲಿ ಜಗನ್ ಕೆಲಸವನ್ನು ನೋಡಿ ಅಕ್ಷಯ್ ಮೆಚ್ಚಿಕೊಂಡಿದ್ದರು. ಹಾಗಾಗಿ ಅವರ ಜೊತೆಗೆಯೇ 'ಮಿಷನ್ ಮಂಗಲ್' ಸಿನಿಮಾ ಶುರು ಆಯ್ತು.

ಚಿತ್ರದಲ್ಲಿ ಇದ್ದಾರೆ.. ದಕ್ಷಿಣ ಭಾರತದ ಕಲಾವಿದರು
'ಮಿಷನ್ ಮಂಗಲ್' ಸಿನಿಮಾ ಗಮನಿಸಿದರೆ ಅಲ್ಲಿ ದಕ್ಷಿಣ ಭಾರತದ ಕಲಾವಿದರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನ ಜಗನ್ ಸೌತ್ ಸ್ಟಾರ್ ಗಳಿಗೆ ಹೆಚ್ಚು ಅವಕಾಶ ನೀಡಿದ್ದಾರೆ. ತಾಪ್ಸಿ ಪನ್ನು, ನಿತ್ಯಾ ಮೆನನ್, ಕನ್ನಡದ ದತ್ತಣ್ಣ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಂಕರ್ ನಾಗ್ ಅಂದರೆ ಬಹಳ ಇಷ್ಟ
ಬಾಲಿವುಡ್ ನಲ್ಲಿ ಇದ್ದರೂ ಕನ್ನಡದ ಅಭಿಮಾನ ಜಗನ್ ರಿಂದ ದೂರ ಆಗಿಲ್ಲ. ಹಾಸನ ಇಸೋ ಕೇಂದ್ರವನ್ನು 'ಮಿಷನ್ ಮಂಗಲ್ ಚಿತ್ರದಲ್ಲಿ ಮರುಸೃಷ್ಟಿ ಮಾಡಲಾಗಿದೆ. ಚಿತ್ರದ ಕಥೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದ್ದು, ಬೆಂಗಳೂರಿನಲ್ಲೂ ಶೂಟ್ ಮಾಡಲಾಗಿದೆ. ಇನ್ನು ಕರಾಟೆ ಕಿಂಗ್ ಶಂಕರ್ ನಾಗ್ ಜಗನ್ ಅವರ ಮೆಚ್ಚಿನ ನಟ ಅಂತೆ.

ಸ್ವಾತಂತ್ರ್ಯ ದಿನಕ್ಕೆ ಸಿನಿಮಾ ಬಿಡುಗಡೆ
ಆಗಸ್ಟ್ 15, ರಂದು ಸ್ವಾತಂತ್ರ್ಯ ದಿನ ವಿಶೇಷವಾಗಿ 'ಮಿಷನ್ ಮಂಗಲ್' ಸಿನಿಮಾ ಬಿಡುಗಡೆಯಾಗುತ್ತಿದೆ. ಭಾರತ ಮಂಗಳ ಗ್ರಹಕ್ಕೆ ರಾಕೆಟ್ ಉಡಾವಣೆ ಮಾಡಿದ ಸಾಧನೆಯ ಕಥೆ ಸಿನಿಮಾ ರೂಪ ಪಡೆದಿದೆ. ರಾಕೆಟ್ ಉಡಾವಣೆ ಹಿಂದಿನ ಶ್ರಮ ಹಾಗೂ ಅದರ ಪ್ರತಿ ಕ್ಷಣವನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಅಮಿತ್ ತ್ರಿವೇದಿ ಸಿನಿಮಾಗೆ ಸಂಗೀತ ನೀಡಿದ್ದಾರೆ.


Click it and Unblock the Notifications











