ಓಹ್ ನಾನು ಸಲಿಂಗಿ ಅಲ್ಲ ; ದಿಶಾ ಪಟಾನಿ ಜೊತೆ ಸಂಬಂಧ, ಕೆಜಿಎಫ್ ಚೆಲುವೆ ಮೌನಿ ರಾಯ್ ಪ್ರತಿಕ್ರಿಯೆ
ನಿಜ ... ಸಿನಿಮಾ ಕಲಾವಿದರೆಂದಮೇಲೆ ಅವರ ಸುತ್ತ ಬಣ್ಣ ಬಣ್ಣದ ಸುದ್ದಿಗಳು ರೆಕ್ಕೆ ಪುಕ್ಕಗಳ ಸಮೇತ ಸುಳಿದಾಡುವುದು ಸಹಜ. ಹಾಗಂತ ಅದರ ಬಗ್ಗೆ ಮಾತಾಡುತ್ತಾ ಕೂತರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವೇ ಆಗುವುದಿಲ್ಲ. ಇದನ್ನ ಮನಗಂಡೇ ತಮ್ಮ ಸುತ್ತ-ಮುತ್ತ ತಮ್ಮ ಬಗ್ಗೆ ಹಲವಾರು ಸುದ್ದಿ ಕೇಳಿ ಬಂದರೂ, ಕೆಲವರು ಆ ಎಲ್ಲ ವಿಚಾರಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಹೋಗುವುದಿಲ್ಲ.
ಯಾಕೆಂದರೆ ಹೀಗೆ ಹರಿದಾಡುವ ಸುದ್ದಿಗಳಲ್ಲಿ ಅರ್ಧಕ್ಕೆ ಅರ್ಧ ಸುಳ್ಳಾಗಿರುತ್ತಾವೆ. ಇನ್ನೂ ಕೆಲ ಒಮ್ಮೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಉದ್ದೇಶದಿಂದಲೇ ಕೆಲವರು ''ಫೇಕ್ ನ್ಯೂಸ್''ಗಳನ್ನು ತೇಲಿ ಬಿಡುತ್ತಾರೆ. ಈ ಮೂಲಕ ತಮ್ಮ ವಿಕೃತ ಮನಸ್ಥಿತಿಯ ಪ್ರದರ್ಶನ ಮಾಡುತ್ತಾರೆ. ಉದಾಹರಣೆಗೆ ಮೌನಿ ರಾಯ್ ವಿಚಾರವನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ಮೌನಿ ರಾಯ್ ಮತ್ತು ಬೆಂಗಳೂರು ಮೂಲದ ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮುನ್ಸೂಚನೆ ಹಲವರಿಗೆ ಇನ್ಸ್ಟಾಗ್ರಾಮ್ನಲ್ಲಿ ಸಿಕ್ಕಿತ್ತು. ಇವರ ದಾಂಪತ್ಯ ಜೀವನ ಚರ್ಚೆಗೆ ಕೂಡ ಗ್ರಾಸವಾಯ್ತು.
ಸೈಬರ್ ದಾಳಿ-ವೈಯಕ್ತಿಕ ನಿಂದನೆಗೆ ಹೆದರಿ ಸೂರಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೇ ಡಿ-ಆಕ್ಟಿವೇಟ್ ಮಾಡಿದರು. ಮೌನಿ ರಾಯ್ ತಮ್ಮ ಮದುವೆಯ ಸುಂದರ ನೆನಪುಗಳನ್ನೆಲ್ಲಾ ಹೈಡ್ ಮಾಡಿದರು.
ಇದೆಲ್ಲದರ ನಡುವೆ ಮೌನಿ ರಾಯ್ ಅವರ ಗಳಸ್ಯ ಕಂಠಸ್ಯ ಸ್ನೇಹಿತೆ ದಿಶಾ ಪಟಾನಿ ಕೂಡ ಸೂರಜ್ ನಂಬಿಯಾರ್ ಅವರನ್ನು ಅನ್ ಫಾಲೋ ಮಾಡಿದರು. ಇದೆಲ್ಲದರಿಂದ ಉರಿಯುವ ಬೆಂಕಿಗೆ ಇನ್ನೂ ತುಪ್ಪ ಸುರಿದಂತಾಗಿತ್ತು.
ಹಾಗಂತೆ-ಹೀಗಂತೆ ಎಂಬ ಮಾತು ಕೂಡ ಮುಂಬೈನೆಲ್ಲೆಡೆ ಕೇಳಿ ಬರುತ್ತಿತ್ತು. ಆ ಪೈಕಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಸಂಬಂಧ ಮುರಿದು ಬೀಳಲು ದಿಶಾ ಪಟಾನಿಯೇ ಪ್ರಮುಖ ಕಾರಣವೆನ್ನುವ ಸುದ್ದಿ ಕೂಡ ಒಂದು. ದಿಶಾ ಪಟಾನಿ ಮತ್ತು ಮೌನಿ ರಾಯ್ ನಡುವಿನ ಆಪ್ತತೆ, ಆತ್ಮೀಯತೆಯನ್ನೇ ತಪ್ಪಾಗಿ ಅರ್ಥೈಸಿಕೊಂಡ ಲೈಕ್, ಸಬ್ಸ್ಕ್ರೈಬ್ & ಶೇರ್ ನ ಹುಚ್ಚಿಗೆ ಬಿದ್ದ ಹಲವರು ತರಹೇವಾರಿ ಸುದ್ದಿಗಳನ್ನು ಬರೆದರು.

ಇಬ್ಬರ ನಡುವಿನ ಶುದ್ಧ ಮತ್ತು ನಿಷ್ಕಲ್ಮಶ ಸ್ನೇಹವನ್ನು ಕೇವಲ ಸ್ನೇಹ ಎಂದು ಒಪ್ಪಿಕೊಳ್ಳದೇ, ಇಬ್ಬರ ನಡುವೆ ರಹಸ್ಯ ಪ್ರೇಮಕಥೆ ಇದೆ ಎಂಬಂತೆ ಬಿಂಬಿಸಿದರು. ಕ್ಲಿಕ್ಬೈಟ್ ಹೆಡ್ಲೈನ್ಗಳಿಗಾಗಿ ಹೊಸದೊಂದು ರೋಚಕ ಕಥೆಯನ್ನೇ ಹೆಣೆದು ಇಬ್ಬರು ಸಲಿಂಗಿಗಳು ಎಂದು ಪುಕಾರು ಹಬ್ಬಿಸಿದರು. ಸದ್ಯ ವಿಲಕ್ಷಣ ಮತ್ತು ಅತಿರೇಕದ ಸುದ್ದಿಗೆ ಸಂಬಂಧಿಸಿದಂತೆ ಮೌನಿ ರಾಯ್ ಪ್ರತಿಕ್ರಿಯೆ ನೀಡಿದ್ಧಾರೆ.
ಈ ಕುರಿತು ''ಮೋನಿಕಾ ಶರ್ಮಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೌನಿ ರಾಯ್, ಬಾಲಿವುಡ್ನಲ್ಲಿ ನಿಮ್ಮ ಬಗ್ಗೆ ಕೇಳಿಬಂದ ಅತ್ಯಂತ ದೊಡ್ಡ ವದಂತಿ ಯಾವುದು ಎಂಬ ಪ್ರಶ್ನೆಗೆ ಉತ್ತರಿಸುತ್ತಾ ''ಓಹ್.. ನಾನು ಗೇ (ಸಲಿಂಗಕಾಮಿ) ಎಂಬ ವದಂತಿ!'' ಎಂದು ನಕ್ಕಿದ್ದಾರೆ.
ಮುಂದುವರೆದು ನನ್ನ ಕಷ್ಟದ ದಿನಗಳಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ಬಂಡೆಯಂತೆ ನನ್ನ ಪರವಾಗಿ ನಿಂತಿದ್ದಾರೆ. ಈ ವಿಷಯದಲ್ಲಿ ನಾನು ನಿಜಕ್ಕೂ ಅದೃಷ್ಟವಂತೆ ಎಂದು ಹೇಳಿರುವ ಮೌನಿ ರಾಯ್, ಅದರಲ್ಲೂ ನನ್ನ ಸ್ನೇಹಿತೆಯರು ನನ್ನ ಜೀವನದ ಏಳು-ಬೀಳುಗಳು, ಒಳ್ಳೆಯ ಹಾಗೂ ಕೆಟ್ಟ ದಿನಗಳಲ್ಲಿ ನನಗೆ ಗಟ್ಟಿ ಬೆಂಬಲ ನೀಡಿದ್ದಾರೆ ಎಂದಿದ್ದಾರೆ.
40ರ ಆಸು ಪಾಸು ಬಂದಾಗ ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಪರಸ್ಪರ ಪ್ರೋತ್ಸಾಹಿಸುವ ಮತ್ತು ಧೈರ್ಯ ತುಂಬುವ ಇಂತಹ ಉತ್ತಮ ಗೆಳತಿಯರು ಇರುವುದು ತುಂಬಾ ಮುಖ್ಯ ಎಂದಿರುವ ಮೌನಿ ರಾಯ್, ಪ್ರತಿಯೊಬ್ಬ ಯುವತಿಯೂ ಜೀವನದಲ್ಲಿ ಎದುರಾಗುವ ಏರುಪೇರುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕಾದರೆ, ಅವರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವುದು ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ. ಈ ಮೂಲಕ ಯುವತಿಯರಿಗೆ ಸಂದೇಶ ನೀಡಿದ್ಧಾರೆ.


Click it and Unblock the Notifications