ಅಮಿತ್ ಶಾ ಫೊಟೊ ಹಂಚಿಕೊಂಡಿದ್ದ ಸಿನಿಮಾ ನಿರ್ದೇಶಕನ ಬಂಧನ
ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಐಎಎಸ್ ಅಧಿಕಾರಿಯೊಟ್ಟಿಗೆ ಇರುವ ಚಿತ್ರ ಹಂಚಿಕೊಂಡಿದ್ದ ಸಿನಿಮಾ ನಿರ್ದೇಶಕ ಅವಿನಾಶ್ ದಾಸ್ ಅನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
'ಅನಾರ್ಕಲಿ ಆಫ್ ಆರಾ', 'ರಾತ್ ಬಾಕಿ ಹೈ' ಸಿನಿಮಾಗಳನ್ನು ನಿರ್ದೇಶಿಸಿರುವ ಅವಿನಾಶ್ ದಾಸ್, ಜೂನ್ ತಿಂಗಳಲ್ಲಿ ಗೃಹ ಮಂತ್ರಿ ಅಮಿತ್ ಶಾ ಅವರ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ದಾಸ್ ಹಂಚಿಕೊಂಡಿದ್ದ ಚಿತ್ರದಲ್ಲಿ ಅಮಿತ್ ಶಾ ಜೊತೆ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಇದ್ದು, ಪೂಜಾ ಸಿಂಘಾಲ್, ಅಮಿತ್ ಶಾರ ಕಿವಿಯಲ್ಲಿ ಏನೋ ಹೇಳುತ್ತಿರಬೇಕಾದರೆ ಯಾರೊ ಚಿತ್ರ ಕ್ಲಿಕ್ಕಿಸಿದ್ದಾರೆ ಆ ಚಿತ್ರವನ್ನು ಅವಿನಾಶ್ ದಾಸ್ ಹಂಚಿಕೊಂಡಿದ್ದರು.
ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅನ್ನು ಕೆಲ ದಿನಗಳ ಹಿಂದೆ ಜಾರಿ ನಿರ್ದೇಶನಾಲಯವು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪೂಜಾರ ವಿಚಾರಣೆ ನಡೆಸಿದ್ದ ಇಡಿ ಪೂಜಾ ಅನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದೆ. ಆದರೆ ಅವಿನಾಶ್ ಈಗ ಈ ಚಿತ್ರ ಹಂಚಿಕೊಂಡಿದ್ದರಿಂದ ಗೃಹ ಮಂತ್ರಿಗಳ ಗೌರವಕ್ಕೆ ಧಕ್ಕೆ ತರುವ ಯತ್ನದ ಆರೋಪದಲ್ಲಿ ಅವಿನಾಶ್ ಬಂಧನವಾಗಿದೆ.

ಅಮಿತ್ ಶಾ ಹಾಗೂ ಸಿಂಘಾಲ್ ಫೊಟೊ ಹಂಚಿಕೊಂಡಿದ್ದ ದಾಸ್, ಈ ಚಿತ್ರವನ್ನು ಸಿಂಘಾಲ್ರ ಬಂಧನಕ್ಕೆ ಕೆಲವು ದಿನಗಳ ಮುಂಚೆ ತೆಗೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಆದರೆ ಅಸಲಿಗೆ ಆ ಚಿತ್ರವನ್ನು 2017 ರಲ್ಲಿ ತೆಗೆಯಲಾಗಿದೆ.
''ನಾವು ನಿನ್ನೆ (ಜುಲೈ 18) ರಂದು ಮುಂಬೈನಲ್ಲಿ ಅವಿನಾಶ್ ದಾಸ್ ಅನ್ನು ಬಂಧಿಸಿದ್ದು, ಇಂದು ಅಹಮದಾಬಾದ್ಗೆ ಕರೆದುಕೊಂಡು ಬಂದಿದ್ದೇವೆ. ಮುಂದಿನ ಕಾನೂನು ಪ್ರಕ್ರಿಯೆಗಳು ಇಲ್ಲಿ ನಡೆಯುತ್ತಿವೆ'' ಎಂದಿದ್ದಾರೆ ಎಸಿಪಿ ಚುಡಾಸಮ್.
ಅವಿನಾಶ್ ವಿರುದ್ಧ ಭಾರತದ ಘನೆತೆಗೆ ಧಕ್ಕೆ ತರುವ ಯತ್ನ ಆರೋಪವನ್ನು ಹೊರಿಸಲಾಗಿದೆ. ಅಮಿತ್ ಶಾ ಚಿತ್ರವನ್ನು ಹಂಚಿಕೊಂಡಿರುವ ಅವಿನಾಶ್ ದಾಸ್, ಕೆಲವು ದಿನಗಳ ಮುಂಚೆ ಮಹಿಳೆಯೊಬ್ಬಾಕೆ ಭಾರತದ ಧ್ವಜವನ್ನು ಸುತ್ತಿಕೊಂಡಿರುವ ಚಿತ್ರವನ್ನೂ ಹಂಚಿಕೊಂಡಿದ್ದರು. ಈ ಚಿತ್ರ ಸಹ ಆಕ್ಷೇಪಣಕಾರಿಯಾಗಿದೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ.
ಅಮಿತ್ ಶಾ ಅವರ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಿಬಿಟ್ಟಿದ್ದಾರೆ ಹಾಗೂ ಭಾರತ ತ್ರಿವರ್ಣ ಧ್ವಜಕ್ಕೆ ಅಪಮಾನ ಎಸಗುವಂತಹಾ ಫೋಟೊವನ್ನು ಹಂಚಿಕೊಂಡಿದ್ದಾರಾದ್ದರಿಂದ ಬಂಧಿಸಿ ಕಾನೂನು ಕ್ರಮ ಜರುಗಲಿಸಲು ಮುಂದಾಗಲಾಗಿದೆ ಎಂದು ಅವಿನಾಶ್ ಅನ್ನು ಬಂಧಿಸಿರುವ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ.
ಅಮಿತ್ ಶಾ ಚಿತ್ರ ಹಂಚಿಕೊಂಡಿದ್ದ ಅವಿನಾಶ್ ದಾಸ್ ವಿರುದ್ಧ ಜೂನ್ನಲ್ಲಿಯೇ ದೂರು ಸಲ್ಲಿಸಲಾಗಿತ್ತು. ಸೆಷನ್ಸ್ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ದಾಸ್ ಅರ್ಜಿ ಸಲ್ಲಿಸಿದ್ದರು. ಆದರೆ ದಾಸ್, ಉದ್ದೇಶಪೂರ್ವಕವಾಗಿ ಗೃಹ ಮಂತ್ರಿಗಳ ವಿರುದ್ಧ ಸುಳ್ಳು ಸುದ್ದಿ ಹರಡಿಸಲು ಯತ್ನಿಸಿದ್ದಾರೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು, ಅಲ್ಲದೆ, ತ್ರಿವರ್ಣ ಧ್ವಜ ಸುತ್ತಿಕೊಂಡ ಮಹಿಳೆಯ ಫೋಟೊ ಹಂಚಿಕೊಂಡಿರುವುದು ದಾಸ್ ಅವರ ಮಾನಸಿಕ ಅಸ್ವಸ್ಥತೆ ತೋರುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದರು.
ಗುಜರಾತ್ ಹೈಕೋರ್ಟ್ ಸಹ ದಾಸ್ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ್ದು, ದಾಸ್ ಈ ಹಿಂದೆಯೂ ರಾಷ್ಟ್ರೀಯ ಗೌರವಕ್ಕೆ ಧಕ್ಕೆ ತರುವ ಕೃತ್ಯ ಮಾಡಿದ್ದಾರೆ ಎಂದು ಹೇಳಿದೆ. ಬಾಂಬೆ ಹೈಕೋರ್ಟ್ ಸಹ ಇದೇ ಕಾರಣಕ್ಕೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.


Click it and Unblock the Notifications











