'ಕಲ್ಕಿ' ಚಿತ್ರದಲ್ಲಿ ಮಹಾಭಾರತವನ್ನು ತಿರುಚಲಾಗಿದೆ"; ಬಾಲಿವುಡ್ ಖ್ಯಾತ ನಟ ಆಕ್ರೋಶ
ನಾಗ್ ಅಶ್ವಿನ್ ನಿರ್ದೇಶನ್ 'ಕಲ್ಕಿ 2898 AD' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮೊದಲ ವಾರವೇ ಸಿನಿಮಾ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಒಂದಷ್ಟು ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮಹಾಭಾರತ ಹಾಗೂ ಕಲಿಯುಗದ ಭವಿಷ್ಯಕ್ಕೆ ಲಿಂಕ್ ಮಾಡಿ ಕಥೆ ಹೇಳಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿದ್ದಾರೆ. ಇನ್ನು ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಅರ್ಜುನನಿಗಿಂತ ಕರ್ಣ ಬಲಶಾಲಿ ಎಂದು ಚಿತ್ರದ ಒಂದು ದೃಶ್ಯದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದು ಸುಳ್ಳು ಎಂದು ಕೆಲವರ ವಾದ.

ಇದೀಗ ಬಾಲಿವುಡ್ ನಟ ಮುಖೇಶ್ ಖನ್ನಾ 'ಕಲ್ಕಿ 2898 AD' ಚಿತ್ರದ ಕೆಲ ದೃಶ್ಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರಿಯಾಗಿ ವ್ಯಾಸ ಭಾರತವನ್ನು ಓದಿದ್ದೀರಾ? ತಪ್ಪು ತಪ್ಪಾಗಿ ಯಾಕೆ ಚಿತ್ರದಲ್ಲಿ ತೋರಿಸಿದ್ದೀರಾ? ಪುರಾಣ ಇತಿಹಾಸವನ್ನು ತಿರುಚಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಸಂದರ್ಶನದಲ್ಲಿ ಮುಖೇಶ್ ಖನ್ನಾ ಮಾತನಾಡಿದ್ದಾರೆ.
'ಕಲ್ಕಿ 2898 AD' ಸಿನಿಮಾ ನೋಡಿ ಮೇಕಿಂಗ್, ವಿಷ್ಯುವಲ್ಸ್, ಕಲಾವಿದರ ನಟನೆ ಬಗ್ಗೆ ಮುಖೇಶ್ ಖನ್ನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಚಿತ್ರತಂಡ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. "ನನಗೆ ನೋವುಂಟು ಮಾಡಿರುವ ಒಂದು ವಿಷಯ ಏನಂದ್ರೆ, 'ಕಲ್ಕಿ' ಮೇಕರ್ಸ್ ಈ ಚಿತ್ರದಲ್ಲಿ ಮಹಾಭಾರತವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಆರಂಭದಲ್ಲಿ ಅಶ್ವತ್ಥಾಮನ ಬಳಿ ಶ್ರೀಕೃಷ್ಣ ಬೇಡಿಕೊಳ್ಳುವಂತ ತೋರಿಸಿದ್ದಾರೆ. ಅಶ್ವತ್ಥಾಮನ ಹಣೆಯಲ್ಲಿದ್ದ ಮಣಿಯನ್ನು ಕೃಷ್ಣ ತೆಗೆಯುವುದು, ಭವಿಷ್ಯದಲ್ಲಿ ನೀನೇ ನನ್ನ ರಕ್ಷಕ ಎಂದು ಬೇಡಿಕೊಳ್ಳುವಂತೆ ದೃಶ್ಯಗಳಿವೆ"
"ಮಹಾಭಾರತದಲ್ಲಿ ಶ್ರೀಕೃಷ್ಣ ಯಾವತ್ತೂ ಆ ರೀತಿ ಬೇಡಲಿಲ್ಲ. ಈ ವಿಚಾರದಲ್ಲಿ ಚಿತ್ರದ ನಿರ್ಮಾಪಕರನ್ನು ಒಂದು ವಿಚಾರ ಕೇಳುತ್ತೇನೆ. ವ್ಯಾಸಮುನಿಗಿಂತ ನಿಮಗೆ ಹೆಚ್ಚು ಗೊತ್ತು ಎಂದು ಹೇಳಿ ಊಹಿಸಿಕೊಂಡ್ರಿ. ನಾನು ನನ್ನ ಚಿಕ್ಕಂದಿನಿಂದ ಮಹಾಭಾರತ ಓದುತ್ತಿದ್ದೇನೆ. ಅಶ್ವತ್ಥಾಮನ ಮಣಿಯನ್ನು ತೆಗೆದುಕೊಂಡಿದ್ದು ಶ್ರೀಕೃಷ್ಣ ಅಲ್ಲ. ಈ ವಿಚಾರದಲ್ಲಿ ನಿಮ್ಮನ್ನು ಕ್ಷಮಿಸೋಕೆ ಸಾಧ್ಯವಿಲ್ಲ" ಎಂದು ಮಖೇಶ್ ಖನ್ನಾ ಹೇಳಿದ್ದಾರೆ.

"ನಾನು ಈ ಕಥೆಯನ್ನು ಇಷ್ಟು ವಿವರವಾಗಿ ಹೇಳಲು ಕಾರಣವಿದೆ. ಕೃಷ್ಣ ಭವಿಷ್ಯದಲ್ಲಿ ನನ್ನನ್ನು ರಕ್ಷಿಸು ಎಂದು ಅಶ್ವತ್ಥಾಮನ ಬಳಿ ಯಾಕೆ ಕೇಳುತ್ತಾನೆ ಎನ್ನುವುದು ನನಗೆ ಅರ್ಥವಾಗಲಿಲ್ಲ. ಅಷ್ಟು ಶಕ್ತಿವಂತನಾದ ಕೃಷ್ಣ ತನ್ನನ್ನು ರಕ್ಷಿಸು ಎಂದು ಅಶ್ವತ್ಥಾಮನ ಬಳಿ ಕೇಳುತ್ತಾನಾ? ದಕ್ಷಿಣ ಫಿಲ್ಮ್ ಮೇಕರ್ಸ್ಗೆ ನಮ್ಮ ಸಂಪ್ರದಾಯಗಳ ಬಗ್ಗೆ ಹೆಚ್ಚು ಗೌರವ ಇದೆ ಎಂದುಕೊಂಡಿದ್ದೇವೆ. ಆದರೆ ರಾಮಾಯಣ, ಮಹಾಭಾರತ, ಪುರಾಣಗಳ ಕುರಿತ ಚಿತ್ರಗಳನ್ನು ಪರಿಶೀಲಿಸಬೇಕು"
"ಇಂತಹ ಸಿನಿಮಾ ಸ್ಕ್ರಿಪ್ಟ್ ಪರಿಶೀಲನೆಗೆ ಒಂದು ಕಮಿಟಿಯನ್ನು ನಿಯೋಜಿಸಬೇಕು ಎಂದು ಸರ್ಕಾರದ ಬಳಿ ಮನವಿ ಮಾಡುತ್ತೇನೆ" ಎಂದು ಮುಖೇಶ್ ಖನ್ನಾ ಹೇಳಿದ್ದಾರೆ. ಒಟ್ಟಾರೆ ಬಾಲಿವುಡ್ ನಟನ ಹೇಳಿಕೆ ವೈರಲ್ ಆಗುತ್ತಿದೆ. ಮುಂದೆ ಇದು ಯಾವ ಸ್ವರೂಪ ಪಡೆಯುತ್ತದೆ ಎಂದು ಕಾದು ನೋಡಬೇಕಿದೆ. ವೈಜಯಂತಿ ಮೂವೀಸ್ ಬ್ಯಾನರ್ನಲ್ಲಿ 500 ಕೋಟಿ ರೂ. ಬಜೆಟ್ನಲ್ಲಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗಿದೆ.


Click it and Unblock the Notifications











