ಈ ಪಾತ್ರ ಮಾಡಲು ನನಗೆ ಅವಕಾಶ ಕೊಡಿ, ನನ್ನ ಕೈ ಕಾಲು ಹಿಡಿದು ರಣ್ವೀರ್ ಸಿಂಗ್ ಭಿಕ್ಷೆ ಬೇಡಿದ್ದ ಎಂದ ಸೂಪರ್ ಹೀರೋ...!
ಕೆಲ ಚಿತ್ರಗಳು, ಪಾತ್ರಗಳು ಮತ್ತು ಧಾರಾವಾಹಿ ಆಯಾ ಕಾಲಕ್ಕೆ ಅನುಗುಣವಾಗಿ ಜನರ ಮನಸಿನ ಮೇಲೆ ಪರಿಣಾಮ ಬೀರಿರುತ್ತವೆ. ಅವುಗಳ ಜೊತೆ ನೆನಪುಗಳಿರುತ್ತವೆ. ಇಂತಹ ಚಿತ್ರಗಳನ್ನಾಗಲಿ .. ಪಾತ್ರಗಳನ್ನಾಗಲಿ .. ಅಥವಾ ಧಾರಾವಾಹಿಗಳನ್ನಾಗಲಿ .. ಎಷ್ಟೇ ವರ್ಷವಾದರೂ ಮತ್ತೊಮ್ಮೆ ಮಾಡುವ ಪ್ರಯತ್ನವನ್ನು ಯಾರು ಮಾಡಬಾರದು. ಯಾಕೆಂದರೆ .. ಮೂಲ ನಿರ್ದೇಶಕರಿಂದ ಅಥವಾ ಆ ಕಲಾವಿದರಿಂದನೇ ನಿರೀಕ್ಷೆಯ ಮಟ್ಟವನ್ನು ತಲುಪಲು ಸಾಧ್ಯವಾಗುವುದಿಲ್ಲ. ಇದಕ್ಕೆ ರಾಮ್ ಗೋಪಾಲ್ ವರ್ಮಾ ಅವರ 'ಆಗ್' ಮತ್ತು ಪ್ರಶಾಂತ್ ನೀಲ್ ಅವರ 'ಸಲಾರ್' ಅತ್ಯುತ್ತಮ ಉದಾಹರಣೆ.
ಆದರೂ ಕೂಡ ಕೆಲವರು ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ ಚಿತ್ರ ಮತ್ತು ಪಾತ್ರಗಳ ಜೊತೆ ಕುಚೇಷ್ಟೆ ಮಾಡಲು ಮುಂದಾಗುತ್ತಾರೆ. ತಮ್ಮದೇ ಚೆಂದದ ಕೃತಿಯನ್ನು ತಮ್ಮ ಕೈಯಾರೆ ಹಾಳುಗೆಡಹುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಶಕ್ತಿಮಾನ್ ಲೇಟೆಸ್ಟ್ ಎಕ್ಸಾಂಪಲ್. ಹೌದು, 90ರ ದಶಕದ ಭಾರತದ ನೆಚ್ಚಿನ ಸೂಪರ್ ಹೀರೋ ಶಕ್ತಿಮಾನ್ನ ಮತ್ತೊಮ್ಮೆ ತರುವ ಪ್ರಯತ್ನವನ್ನು ಆ ಕಾಲದ ಶಕ್ತಿಮಾನ್ ಅಲಿಯಾಸ್ ಮುಖೇಶ್ ಖನ್ನಾ ಅನೇಕ ದಿನಗಳಿಂದ ಮಾಡುತ್ತಿದ್ದಾರೆ. ಚಿತ್ರರೂಪಕವನ್ನಾಗಿಸುವ ಯೋಚನೆಯನ್ನು ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಶಕ್ತಿಮಾನ್ ಪಾತ್ರಕ್ಕೆ ಅವರಿವರ ಕೈ ಕಾಲ ಹಿಡಿಯುವ ಬದಲು ನಾನ್ಯಾಕೇ ಇನ್ನೊಮ್ಮೆ ಶಕ್ತಿಮಾನ್ ಆಗಬಾರದೆಂದು ಆಲೋಚಿಸಿದ ಮುಖೇಶ್ ಖನ್ನಾ ಮೊನ್ನೆಯಷ್ಟೇ ಶಕ್ತಿಮಾನ್ ಧಾರಾವಾಹಿಯನ್ನು ಘೋಷಿಸಿದ್ದಾರೆ. ತಮ್ಮ 66ನೇ ವಯಸಿನಲ್ಲಿ ಭಾರತದ ಸೂಪರ್ ಹೀರೋ ಆಗುತ್ತೇನೆ ಎಂದು ಸಿದ್ಧರಾಗಿದ್ದಾರೆ. ಮುಖೇಶ್ ಖನ್ನಾ ಅವರ ಈ ನಿರ್ಧಾರದ ಕುರಿತು ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಶಕ್ತಿಮಾನ್ ಆಲೋಚನೆಯನ್ನು ಕೈ ಬಿಡುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಆದರೂ ಮುಖೇಶ್ ಖನ್ನಾ ಒಪ್ಪಲು ತಯಾರಿಲ್ಲ. ಶಕ್ತಿಮಾನ್ನ ಮತ್ತೊಮ್ಮೆ ಭಾರತಕ್ಕೆ ಕರೆತರುವ ಶಪಥವನ್ನು ಮುಖೇಶ್ ಖನ್ನಾ ಮಾಡಿದ್ದಾರೆ. ಇದರ ನಡುವೆ ರಣ್ವೀರ್ ಸಿಂಗ್ ಮೇಲೆ ಮತ್ತೊಮ್ಮೆ ಮುಖೇಶ್ ಖನ್ನಾ ಹರಿಹಾಯ್ದಿದ್ದಾರೆ.

ಹೌದು, ಅಸಲಿಗೆ ಈ ಹಿಂದೆ ಶಕ್ತಿಮಾನ್ ಧಾರಾವಾಹಿಯನ್ನು ಚಿತ್ರ ಮಾಡಲು ಮುಖೇಶ್ ಖನ್ನಾ ಮುಂದಾದಾಗ ಶಕ್ತಿಮಾನ್ ಪಾತ್ರವನ್ನು ರಣ್ವೀರ್ ಸಿಂಗ್ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಮುಖೇಶ್ ಖನ್ನಾ ಖುದ್ದು ರಣ್ವೀರ್ ಸಿಂಗ್ ಗೆ ನವಯುಗದ ಶಕ್ತಿಮಾನ್ ನ ಅವತಾರವೆತ್ತಲು ಸಮ್ಮತಿಯನ್ನ ನೀಡಿದ್ದಾರೆ ಎಂದು ಭಾವಿಸಿದ್ದರು. ಆದರೆ.. ಆ ನಂತರ ಅದೇನಾಯ್ತೋ ಮುಖೇಶ್ ಖನ್ನಾ ಇದ್ದಕ್ಕಿದ್ದ ಹಾಗೇ ರಣ್ವೀರ್ ಸಿಂಗ್ ವಿರುದ್ಧ ತಿರುಗಿ ಬಿದ್ದರು. ಶಕ್ತಿಮಾನ್ ಆಗುವ ಅರ್ಹತೆ-ಯೋಗ್ಯತೆ ಎರಡು ರಣ್ವೀರ್ ಸಿಂಗ್ ಗೆ ಇಲ್ಲ ಎಂದು ಹೇಳಿದ್ದರು. ರಣ್ವೀರ್ ಸಿಂಗ್ ಎಷ್ಟೇ ದೊಡ್ಡ ಸ್ಟಾರ್ ಆಗಿರಬಹುದು. ಆದರೆ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುವ ಸ್ಟಾರ್ ಯಾವತ್ತೂ ಶಕ್ತಿಮಾನ್ ಆಗಲಾರ ಎಂದು ಹೇಳಿದ್ದ ಮುಖೇಶ್ ಖನ್ನಾ ಬೆತ್ತಲೆಯಾಗಿ ನಟಿಸುವುದು ಭಾರತದ ಸಂಸ್ಕೃತಿ ಅಲ್ಲ ಹಾಗೊಂದು ವೇಳೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದು ಅವರಿಗೆ ಸರಿ ಎನಿಸಿದರೆ ಫಿನ್ ಲ್ಯಾಂಡ್ ಅಥವಾ ಸ್ಪೇನ್ ಗೆ ಹೋಗಲಿ ಎಂದು ಕೆಂಡ ಕಾರಿದ್ದರು.
ಇಂಥಾ ಮುಖೇಶ್ ಖನ್ನಾ ಈಗ ರಣ್ವೀರ್ ಸಿಂಗ್ ಅವರನ್ನು ಗೇಲಿ ಮಾಡಿದ್ದಾರೆ. ನನ್ನ ಕೈ ಕಾಲು ಹಿಡಿದು ಶಕ್ತಿಮಾನ್ ಪಾತ್ರ ನನಗೆ ಮಾಡಲು ಅವಕಾಶ ಮಾಡಿಕೊಡಿ ಎಂದು ಭಿಕ್ಷೆ ಬೇಡಿದ್ದ ಎಂದು ಹೇಳಿದ್ದಾರೆ. ಎರಡೂವರೆ ಘಂಟೆ ನನ್ನ ಕಚೇರಿಯಲ್ಲಿ ಕಾಯುತ್ತಾ ಕುಳಿತುಕೊಂಡಿದ್ದ ಎಂದು ಹೇಳಿದ್ದಾರೆ. ಹೌದು, ಮೊನ್ನೆ ಶಕ್ತಿಮಾನ್ ಧಾರಾವಾಹಿಯನ್ನು 2027ರಿಂದ ನೀವು ಮತ್ತೆ ನೋಡಬಹುದು ಎಂದು ಘೋಷಿಸಿದ ಮುಖೇಶ್ ಖನ್ನಾ ರಣ್ವೀರ್ ಸಿಂಗ್ ನನ್ನ ಆಫೀಸ್ಗೆ ಬಂದಿದ್ದರು ಮಾತನಾಡಿದರು ಎಂದು ಹೇಳಿದ್ದಾರೆ.

ಮುಂದುವರೆದು ನಿಜಾ.. ರಣ್ವೀರ್ ಅತ್ಯದ್ಭುತ ಕಲಾವಿದ ಅದರಲ್ಲಿ ಯಾವ ಅನುಮಾನ ಇಲ್ಲ ಎಂದಿರುವ ಮುಖೇಶ್ ಖನ್ನಾ ಶಕ್ತಿಮಾನ್ ಪಾತ್ರ ಮಾಡಲು ದೊಡ್ಡ ಸ್ಟಾರ್ ಚಿಕ್ಕ ಸ್ಟಾರ್ ಎನ್ನುವುದು ಯಾವತ್ತು ಮಾನದಂಡವಾಗಿರಲಿಲ್ಲ ಎಂದಿದ್ದಾರೆ. ಅವರನ್ನು ನೋಡಿದರೆ ಶಕ್ತಿಮಾನ್ ಪಾತ್ರ ಮಾಡಲು ಇವರು ಸೂಕ್ತ ಎನ್ನುವ ಭಾವನೆ ಬರಬೇಕು ಎಂದಿದ್ಧಾರೆ. ಇನ್ನೂ ಶಕ್ತಿಮಾನ್ ಯಾರಾಗಬೇಕೆಂದು ನಿರ್ಧಾರ ನಾನು ಮಾಡಬೇಕೆ ಹೊರತು ನನ್ನ ಆಫೀಸ್ಗೆ ಬಂದು ನಾನು ಶಕ್ತಿಮಾನ್ ಆಗ್ತೀನಿ ಎಂದರೆ ಅದು ಸಹಿಸಲು ಅಸಾಧ್ಯ ಎಂದಿರುವ ಮುಖೇಶ್ ಖನ್ನಾ, ಅಕ್ಷಯ್ ಕುಮಾರ್ ಪೃಥ್ವಿರಾಜ್ ಚೌಹಾಣ್ ಅವರಂತೆ ಯಾಕೆ ಕಾಣಿಸಲಿಲ್ಲ ಎನ್ನುವ ಪ್ರಶ್ನೆ ಮಾಡಿದ್ದಾರೆ. ಪಾತ್ರ ಮಾಡಲು ಬದ್ಧತೆ ಇರಬೇಕು ಎಂದು ಹೇಳಿದ್ದಾರೆ. ಸದ್ಯಕ್ಕೆ ಮುಖೇಶ್ ಖನ್ನಾ ಅವರ ಈ ಮಾತು ಅನೇಕರನ್ನು ಕೆರಳಿಸಿದೆ. ಮುಖೇಶ್ ಖನ್ನಾ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ.


Click it and Unblock the Notifications











