ಆರ್ಯನ್ ಪ್ರಕರಣ: ಶಾರುಖ್ ಮ್ಯಾನೇಜರ್ಗೆ ಮುಂಬೈ ಪೊಲೀಸರಿಂದ ನೋಟಿಸ್
ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಆರ್ಯನ್ ಖಾನ್ ಇದೀಗ ನಿರಾಳರಾಗಿದ್ದಾರೆ, ಆದರೆ ಅವರನ್ನು ಬಂಧಿಸಿದ್ದ ಎನ್ಸಿಬಿಗೆ ಆತಂಕ ಪ್ರಾರಂಭವಾಗಿದೆ.
ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಕರ್ತವ್ಯ ಲೋಪ ಎಸಗಿದ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ. ಇದರ ಜೊತೆಗೆ ಎನ್ಸಿಬಿ ಅಧಿಕಾರಿ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮಾತು ಸಹ ಕೇಳಿ ಬರುತ್ತಿದೆ.
ಆರ್ಯನ್ ಖಾನ್ ಪ್ರಕರಣದಲ್ಲಿ ಎನ್ಸಿಬಿಯಿಂದ ಸ್ವತಂತ್ರ್ಯ ಸಾಕ್ಷಿ ಎಂದು ಗುರುತಿಸಲಾಗಿರುವ ಪ್ರಭಾಕರ್ ಸಾಯಿಲ್ ಎಂಬಾತ ಅಫಿಡವಿಟ್ ಸಲ್ಲಿಸಿದ್ದು ಅದರಲ್ಲಿ, ಎನ್ಸಿಬಿ ಮೇಲೆ ಅನುಮಾನ ಏಳುವ ಹಲವು ಅಂಶಗಳು ಅಡಕವಾಗಿವೆ. ಹೀಗಾಗಲೇ ಎನ್ಸಿಬಿ ಕೇಂದ್ರ ಕಚೇರಿ ವಿಶೇಷ ತನಿಖಾ ತಂಡವೊಂದನ್ನು ರಚಿಸಿ ಎನ್ಸಿಬಿ ಅಧಿಕಾರಿಗಳು ಹಾಗೂ ಆರ್ಯನ್ ಖಾನ್ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ವಿಚಾರಣೆ ನಡೆಸುತ್ತಿದೆ. ಈ ನಡುವೆ ಮುಂಬೈ ಪೊಲೀಸರು ಸಹ ತನಿಖೆ ಆರಂಭಿಸಿದ್ದಾರೆ.

ಪೂಜಾ ದದ್ಲಾನಿಗೆ ಮುಂಬೈ ಪೊಲೀಸ್ ನೋಟಿಸಿ
ಮುಂಬೈ ಪೊಲೀಸರ ವಿಶೇಷ ತನಿಖಾ ತಂಡವು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿಗೆ ನೊಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಆರ್ಯನ್ ಖಾನ್ ಅನ್ನು ಎನ್ಸಿಬಿ ವಶಕ್ಕೆ ಪಡೆದುಕೊಂಡಾಗ ಕೆಪಿ ಗೋಸಾವಿ ಹಾಗೂ ಸ್ಯಾಮ್ ಡಿಸೋಜಾ ಅವರನ್ನು ಭೇಟಿಯಾಗಿ ಪೂಜಾ ದದ್ಲಾನಿ 50 ಲಕ್ಷ ರೂಪಾಯಿ ಹಣ ನೀಡಿದ್ದರು ಎಂದು ಪ್ರಭಾಕರ್ ಸಾಯಿಲ್ ಹೇಳಿದ್ದಾರೆ ಹಾಗಾಗಿ ಈಗ ಮುಂಬೈ ಪೊಲೀಸರು ಪೂಜಾ ದದ್ಲಾನಿಗೆ ನೋಟಿಸ್ ವಿತರಿಸಿದ್ದಾರೆ.

ಹಣ ಕೊಟ್ಟಿರುವುದು ಒಪ್ಪಿಕೊಂಡಿರುವ ಸ್ಯಾಮ್ ಡಿಸೋಜಾ
ಪೂಜಾ ದದ್ಲಾನಿ ಹಣ ನೀಡಿದ್ದ ವಿಚಾರವನ್ನು ಪ್ರಕರಣದ ಮತ್ತೊಬ್ಬ ಆರೋಪಿ ಸ್ಯಾಮ್ ಡಿ ಸೋಜಾ ಈಗಾಗಲೇ ಒಪ್ಪಿಕೊಂಡಿದ್ದಾರೆ. ಗೋಸಾವಿ ಮನವಿ ಮೇರೆಗೆ ಪೂಜಾ ದದ್ಲಾನಿಯಿಂದ ಹಣ ಪಡೆದುಕೊಂಡೆವು. ಆದರೆ, ಆ ನಂತರ 36 ಲಕ್ಷ ರೂಪಾಯಿ ಹಣವನ್ನು ವಾಪಸ್ ಮಾಡಿದ್ದೇವೆ. ಗೋಸಾವಿ ಉಳಿದ ಹಣವನ್ನು ಇಟ್ಟುಕೊಂಡಿದ್ದಾನೆ, ಎಷ್ಟು ಕೇಳಿದರೂ ಬಾಕಿ ಹಣವನ್ನು ಆತ ವಾಪಸ್ ಮಾಡಿಲ್ಲ ಎಂದು ಸ್ಯಾಮ್ ಡಿ ಸೋಜಾ ಹೇಳಿದ್ದಾನೆ.

25 ಕೋಟಿ ಹಣಕ್ಕೆ ಬೇಡಿಕೆ ಇಡುವಂತೆ ಹೇಳಿದ್ದ ಗೋಸಾವಿ
ಇನ್ನು ಪ್ರಕರಣದ ಸ್ವತಂತ್ರ್ಯ ಸಾಕ್ಷ್ಯವಾಗಿರುವ ಪ್ರಭಾಕರ್ ಸಾಯಿಲ್ ಸಲ್ಲಿಸಿರುವ ಅಫಿಡವಿಟ್ನಲ್ಲಿ, ತಾನು ಕೆಪಿ ಗೋಸಾವಿಯ ಡ್ರೈವರ್ ಆಗಿದ್ದು, ಅಕ್ಟೋಬರ್ 03 ರಂದು ಗೋಸಾವಿಯು, ಸ್ಯಾಮ್ ಡಿಸೋಜಾ ಅನ್ನು ಭೇಟಿಯಾದ ಆ ಬಳಿಕ ಇಬ್ಬರೂ ಪರಸ್ಪರರ ಕಾರುಗಳಲ್ಲಿ ಹೊರಟರು ನಾನು ಗೋಸಾವಿ ಇದ್ದ ಕಾರು ಚಲಾಯಿಸುತ್ತಿದ್ದೆ ಆಗ ಗೋಸಾವಿಯು ಫೋನಿನಲ್ಲಿ ಅವರಿಂದ 25 ಕೋಟಿಗೆ ಬೇಟಿಕೆ ಇಡು ಎಂದು ಹೇಳುತ್ತಿದ್ದ, ಅದರಲ್ಲಿ 8 ಕೋಟಿ ಹಣವನ್ನು ಎನ್ಸಿಬಿಗೆ ನೀಡಬೇಕು ಎಂದು ಸಹ ಹೇಳಿದ. ಆ ನಂತರ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ, ಸ್ಯಾಮ್ ಡಿಸೋಜಾ ಹಾಗೂ ಗೋಸಾವಿ ಕಾರಿನಲ್ಲಿ ಕುಳಿತು ಮಾತನಾಡಿಕೊಂಡರು'' ಎಂದಿದ್ದಾರೆ.

ತನಿಖೆ ಆರಂಭಿಸಿರುವ ವಿಚಕ್ಷಣಾ ದಳ
ಈ ಪ್ರಕರಣದ ವಿಚಾರಣೆಗೆ ನೇಮಿಸಲಾಗಿರುವ ಎನ್ಸಿಬಿಯ ವಿಚಕ್ಷಣಾ ದಳವು ಮುಂಬೈಗೆ ಆಗಮಿಸಿ ತನ್ನ ಕಾರ್ಯ ಆರಂಭಿಸಿದ್ದು, ವಿವಾದಿತ ಕ್ರೂಸ್ ಶಿಫ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಪಿ ಗೋಸಾವಿ ಹಾಗೂ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಭೇಟಿ ನೀಡಿದ್ದ ಲೋವೆರ್ ಪರೇಲ್ ಇಂಡಿಯಾನಾ ಹೋಟೆಲ್ಗೆ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎನ್ಸಿಬಿಯ ವಿಶೇಷ ತಂಡವು, ಪ್ರಕರಣದ ಮುಖ್ಯ ಆರೋಪಿಗಳಾದ ಎನ್ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ, ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ, ಸಾಕ್ಷ್ಯಗಳಾದ ಕೆಪಿ ಗೋಸಾವಿ, ಅಫಿಡವಿಟ್ ಸಲ್ಲಿಸಿರುವ ಪ್ರಭಾಕರ್ ಸಾಯಿಲ್ ಹಾಗೂ ಸ್ಯಾಮ್ ಡಿಸೋಜಾ ಅವರುಗಳನ್ನು ವಿಚಾರಣೆ ನಡೆಸಲಿದೆ.


Click it and Unblock the Notifications











