Mumbai Rains: ಎಷ್ಟು ಶ್ರೀಮಂತರಾಗಿದ್ದರೇನು ಪ್ರಯೋಜನ, ಅಮಿತಾಬ್ ಬಚ್ಚನ್ ಮನೆಗೆ ನುಗ್ಗಿದ ನೀರು -ಜಲಾವೃತಗೊಂಡ ಪ್ರತೀಕ್ಷಾ
ಪ್ರಕೃತಿ ಮುನಿಸಿಕೊಂಡರೆ ಅದು ನಿಜಕ್ಕೂ ಮನುಕುಲದ ನಾಶಕ್ಕೆ ದಾರಿ ಎಂಬ ಮಾತು ಇಂದು ನಿನ್ನೆಯದ್ದಲ್ಲ. ಪ್ರಕೃತಿ ತನ್ನ ಮೇಲೆ ಮನುಷ್ಯರು ಎಸಗುತ್ತಿರುವ ನಿರಂತರ ದೌರ್ಜನ್ಯದ ಸೇಡನ್ನು ತೀರಿಸಿಕೊಳ್ಳುತ್ತಲೇ ಬಂದಿದೆ. ಹಲವು ಪ್ರಕೃತಿ ವಿಕೋಪಗಳು ಇಲ್ಲಿಯವರೆಗೆ ಆಗಿವೆ. ಇದೆಲ್ಲವೂ ಮನುಷ್ಯನ ಅತಿಯಾದ ಆಸೆ ಮತ್ತು ಅರಣ್ಯ ಸಂಪತ್ತಿನ ನಾಶದ ಭಾಗವೆಂದು ಮತ್ತೆ ಪ್ರತೈಕವಾಗಿ ಹೇಳಬೇಕಿಲ್ಲ.
ಕಳೆದ ಒಂದು ಶತಮಾನದಿಂದಲೂ ಕಂಡು ಕೇಳರಿಯದ ಜಲಪ್ರಳಕ್ಕೆ ಕರುನಾಡು ಸೇರಿದಂತೆ ಅಕ್ಕ ಪಕ್ಕದ ರಾಜ್ಯಗಳು ಸಾಕ್ಷಿಯಾಗಿವೆ. ನರಳಿವೆ. ಪ್ರವಾಹ ಭೀತಿಯಿಂದ ತತ್ತರಿಸಿವೆ. ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ.

ಪ್ರತಿ ವರ್ಷದಂತೆ ಈ ವರ್ಷ ಕೂಡ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನೆಲೆ ಸಂಪೂರ್ಣ ಮುಂಬೈ ಜಲಾವೃತವಾಗಿದ್ದು ಸರ್ಕಾರಿ ಕಚೇರಿಗಳ ಬಾಗಿಲಿಗೆ ಬೀಗ ಹಾಕಲಾಗಿದೆ. ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಕೂಡ ಹೇಳಲಾಗಿದೆ.
ಇನ್ನು ಪ್ರಕೃತಿಯ ಮುಂದೆ ಯಾರು ನಿಲ್ಲಲಾರರು. ಪ್ರಕೃತಿಗೆ ಶ್ರೀಮಂತ ಮತ್ತು ಬಡವ ಎಂಬ ಭೇದ ಭಾವ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಭಾರತದ ಮಹಾನಾಯಕ ''ಅಮಿತಾಬ್ ಬಚ್ಚನ್'' ಅವರ ಮನೆ ''ಪ್ರತೀಕ್ಷಾ'' ಜಲಾವೃತಗೊಂಡಿದೆ.
ಹೌದು, ''ಸಾಗರ್ ಠಾಕೂರ್'' ಎಂಬ ವ್ಲಾಗರ್ ಮಳೆಯಲ್ಲಿಯೇ ಮುಂಬೈ ಪ್ರದಕ್ಷಣೆಯನ್ನು ಮಾಡಿದ್ದು ''ಜುಹು''ದಲ್ಲಿರುವ ''ಅಮಿತಾಬ್ ಬಚ್ಚನ್'' ಅವರ ಮನೆ ''ಪ್ರತೀಕ್ಷಾ'' ಎದುರು ನಿಂತು ವಿಡಿಯೋ ಮಾಡಿದ್ದಾರೆ.
ಕೆಸರು ತುಂಬಿರುವ ನೀರು ತೋರಿಸುತ್ತಾ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗುವ ಪ್ರಯತ್ನವನ್ನು ಮಾಡಿದ್ದಾರೆ. ಆಗ ಸೆಕ್ಯೂರಿಟಿ ಗಾರ್ಡ್ ಅವರನ್ನು ನಯವಾಗಿಯೇ ಅಲ್ಲಿಂದ ಹೋಗುವಂತೆ ಹೇಳಿದ್ದು, ನೀವು ನೋಡಬಹುದು ಇಲ್ಲಿ ಎಷ್ಟು ನೀರು ತುಂಬಿದೆ ಅಮಿತಾಬ್ ಬಚ್ಚನ್ ಖುದ್ದು ವೈಪರ್ ಹಿಡಿದು ನೀರನ್ನು ಹೊರ ಹಾಕುತ್ತಿದ್ದರು ಎಂದು ಹೇಳಿದ್ದಾರೆ. ಎಷ್ಟು ಹಣ ಇದ್ದರೇನು ಪ್ರಯೋಜನ 1000 ಕೋಟಿ ಇದ್ದರೂ ಕೂಡ ಮುಂಬೈ ಮಳೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಅದು ''ಅಮಿತಾಬ್ ಬಚ್ಚನ್'' ಆದರೂ ಅಷ್ಟೇ ''ಅಂಬಾನಿ''ಯಾದರು ಅಷ್ಟೇ ಎಲ್ಲರೂ ಅನುಭವಿಸಲೇಬೇಕು ಎಂದು ಹೇಳಿದ್ದಾರೆ.
ಕೇವಲ ''ಅಮಿತಾಬ್ ಬಚ್ಚನ್'' ಮನೆ ಮಾತ್ರವಲ್ಲ ''ಅಜಯ್ ದೇವಗನ್-ಕಾಜೋಲ್'' ಮನೆ ''ಆದಿತ್ಯ ಚೋಪ್ರಾ-ರಾಣಿ ಮುಖರ್ಜಿ'' ಮನೆ ''ಅಭಿಷೇಕ್ ಬಚ್ಚನ್-ಐಶ್ವರ್ಯರೈ'' ಮನೆ ಮತ್ತು ''ಡಿಯೋಲ್'' ಕುಟುಂಬಗಳ ಮನೆಗಳನ್ನು ಕೂಡ ''ಸಾಗರ್ ಠಾಕೂರ್'' ತಮ್ಮ ವ್ಲಾಗ್ನಲ್ಲಿ ತೋರಿಸಿದ್ದಾರೆ. ಎಲ್ಲರ ಮನೆ ಕಥೆ ಕೂಡ ಒಂದೇ. ಎಲ್ಲರ ಮನೆಗಳೂ ಕೂಡ ಜಲಾವೃತಗೊಂಡಿವೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನಾನಾ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಯಾಕೆ ಕೇವಲ ಸೆಲೆಬ್ರಿಟಿಗಳ ಮನೆ ಮಾತ್ರ ನೋಡುತ್ತಿದ್ದೀರಾ, ಮುಂಬೈನ ಜನಸಾಮಾನ್ಯರ ಮನೆಗಳನ್ನು ಕೂಡ ನೋಡಿ ಅವರು ಅನುಭವಿಸುತ್ತಿರುವ ನರಕಯಾತನೆಯನ್ನು ಕೂಡ ತೋರಿಸಿ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಅಮಿತಾಬ್ ಬಚ್ಚನ್ ನಿಮ್ಮ ಸ್ನೇಹಿತನಾ ? ಅವರ ಮನೆಗೆ ನೀರು ನುಗ್ಗುವುದಿಲ್ಲ ಎಂದುಕೊಂಡಿದ್ದೀರಾ ? ಅವರು ಕೂಡ ಇರುವುದು ಮುಂಬೈನಲ್ಲಿಯೇ ಎಂದು ಹೇಳಿದ್ದಾರೆ.
ಅಂದ್ಹಾಗೇ ಅಮಿತಾಬ್ ಬಚ್ಚನ್ ''ಜುಹು''ನಲ್ಲಿರುವ ಈ ಭವ್ಯ ಬಂಗಲೆಯನ್ನು 1976ರಲ್ಲಿ ಖರೀದಿಸಿದ್ದರು. ಅಮಿತಾಬ್ ಬಚ್ಚನ್ ಅವರ ತಂದೆ ಹರಿವಂಶ್ ರಾಯ್ ಮನೆಗೆ ಪ್ರೀತಿಕ್ಷಾ ಎಂದು ಹೆಸರಿಟ್ಟಿದ್ದರು. ಅಮಿತಾಬ್ ಅವರ ಮಕ್ಕಳಾದ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಆಡಿ ಬೆಳೆದಿದ್ದು ಕೂಡ ಇದೇ ಮನೆಯಲ್ಲಿ.
ಆ ನಂತರ 1982ರಲ್ಲಿ ಅಮಿತಾಬ್ ಬಚ್ಚನ್ ''ಸತ್ತೇ ಪೇ ಸತ್ತಾ'' ಚಿತ್ರ ಮಾಡಿದಾಗ ನಿರ್ಮಾಪಕ ಮತ್ತು ನಿರ್ದೇಶಕ ರಮೇಶ್ ಸಿಪ್ಪಿ ಸಂಭಾವನೆಯ ರೂಪದಲ್ಲಿ ಬಂಗಲೆಯೊಂದನ್ನು ಉಡುಗೊರೆಯಾಗಿ ನೀಡಿದರು. ಈ ಬಂಗಲೆಗೆ ಅಮಿತಾಬ್ ''ಜಲ್ಸಾ'' ಎಂದು ಹೆಸರಿಟ್ಟರು. ಸದ್ಯ ಅಮಿತಾಬ್ ಈ ''ಜಲ್ಸಾ''ದಲ್ಲಿ ತಮ್ಮ ಪತ್ನಿಯ ಜೊತೆ ಇದ್ದು ''ಜುಹು''ನಲ್ಲಿರುವ ''ಪ್ರತೀಕ್ಷಾ'' ಅವರ ಮಗಳು ಶ್ವೇತಾಗೆ ಉಡುಗೊರೆಯಾಗಿ ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ''ಜುಹು''ನಲ್ಲಿಯೇ ಪ್ರತ್ಯೇಕ ಮನೆಯಲ್ಲಿ ವಾಸವಾಗಿದ್ದಾರೆ.


Click it and Unblock the Notifications











