ಸಂಗೀತ ನಿರ್ದೇಶಕನ ಜೊತೆ ಮದುವೆ ; ತಾಳಿ ಕಟ್ಟೋಕೆ ಮುಂಚೆ ಸ್ಮೃತಿ ಮಂಧಾನಗೆ ಆಘಾತ-ಸಂಭ್ರಮದ ಮನೆಯಲ್ಲಿ ದುಃಖ ದುಗುಡ
ಬದುಕೇ ಹಾಗೇ ಯಾವಾಗ ಏನಾಗುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಜೀವನದಲ್ಲಿ ಯಾವುದು ಶಾಶ್ವತ ಅಲ್ಲ. ಒಂದು ಕ್ಷಣ ಇದ್ದ ಖುಷಿ ಇನ್ನೊಂದು ಕ್ಷಣ ಇರಲ್ಲ. ಒಂದರ್ಥದಲ್ಲಿ ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಸ್ಮ್ರತಿ ಮಂಧಾನ ಮದುವೆಯ ಸಂಭ್ರಮದಲ್ಲಿ ಆವರಿಸಿಕೊಂಡಿರುವ ದುಖ.. ದುಗುಡ .. ಆತಂಕ.
ಹೌದು, ಎಲ್ಲವೂ ಅಂದುಕೊಂಡತೆ ಆಗಿದ್ದರೆ ಇಂದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಮೂಲ್ಯ ರತ್ನ ಸ್ಮ್ರತಿ ಮಂಧಾನ ಗ್ರಹಸ್ಥಾಶ್ರಮಕ್ಕೆ ಕಾಲಿಡಬೇಕಿತ್ತು. ಬಾಲಿವುಡ್ನ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆ ಸಪ್ತಪದಿ ತುಳಿಯಬೇಕಿತ್ತು. ಸಂಭ್ರಮದ ಈ ದಿನಕ್ಕೆ ಸಾಂಗ್ಲಿ ಜಿಲ್ಲೆಯ ಸಮ್ದೋಲ್ನಲ್ಲಿರುವ ಸ್ಮೃತಿ ಮಂಧಾನ ಅವರ ಫಾರ್ಮ್ ಹೌಸ್ ಕೂಡ ಸಾಕ್ಷಿಯಾಗಲು ಸಿದ್ಧವಾಗಿತ್ತು.

ಕಳೆದ ಕೆಲ ದಿನಗಳಿಂದ ಅರಿಶಿಣ ಶಾಸ್ತ್ರ... ಮೆಹಂದಿ ಶಾಸ್ತ್ರ.. ಸಂಗೀತ್ ಕಾರ್ಯಕ್ರಮ... ಹೀಗೆ ಕಳೆದ ಕೆಲ ದಿನಗಳಿಂದ ಸ್ಮೃತಿ ಮಂದಾನ ಮನೆಯಲ್ಲಿ ಸಂಭ್ರಮದ ವಾತಾವರಣ ಕೂಡ ನಿರ್ಮಾಣವಾಗಿತ್ತು. ಆದರೆ.. ಮದುವೆಯ ಈ ಸಂಭ್ರಮಕ್ಕೆ ಈಗ ಬ್ರೇಕ್ ಬಿದ್ದಿದೆ. ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಸ್ಮೃತಿ ಮಂಧಾನ ಅವರ ತಂದೆಗೆ ಹೃದಯಾಘಾತವಾಗಿದೆ.
ಸ್ಮೃತಿ ಮಂಧಾನಾ ಅವರ ಮ್ಯಾನೇಜರ್ ತುಹಿನ್ ಮಿಶ್ರಾ ಈ ವಿಷಯವನ್ನು ಖಚಿತಪಡಿಸಿದ್ದು, ಮದುವೆ ಸಿದ್ಧತೆಗಳು ನಡೆಯುತ್ತಿದ್ದ ಸಾಂಗ್ಲಿ ಜಿಲ್ಲೆಯ ಸಮ್ದೋಲ್ನಲ್ಲಿರುವ ಮಂಧಾನಾ ಫಾರ್ಮ್ ಹೌಸ್ನಲ್ಲಿ ಸ್ಮೃತಿ ಮಂಧಾನಾ ಅವರ ತಂದೆ ಶ್ರೀನಿವಾಸ್ ಮಂಧಾನಾ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿದ್ದಾರೆ.
ಮುಂದುವರೆದು ಸ್ಮೃತಿ ಮಂಧಾನ ಅವರ ತಂದೆ ಶ್ರೀನಿವಾಸ್ ಮಂಧಾನ ಬೆಳಗ್ಗೆಯವರೆಗೆ ಚೆನ್ನಾಗಿದ್ದರು ಎಂದು ಹೇಳಿರುವ ತುಹಿನ್ ಮಿಶ್ರಾ, ಬೆಳಗ್ಗೆ ಉಪಹಾರ ಸೇವಿಸುವಾಗ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂತು, ಆದರೂ ಕೂಡ ನಾವು ಅವರು ಚೇತರಿಸಿಕೊಳ್ಳಬಹುದು ಎಂದು ಕಾದೆವು ಎಂದು ಹೇಳಿದ್ದಾರೆ. ಆರೋಗ್ಯ ಸುಧಾರಿಸದೇ ಇದ್ದಾಗ, ತೀವ್ರ ಏರು ಪೇರು ಆಗಿದ್ದರಿಂದ ಆತಂಕಗೊಂಡು ಅವರನ್ನು ಆಂಬುಲೆನ್ಸ್ ಮೂಲಕ ಸಾಂಗ್ಲಿಯ ಆಸ್ಪತ್ರೆಗೆ ದಾಖಲಿಸಿದೆವು ಹೇಳಿದ್ದಾರೆ.
ಇನ್ನು ಸ್ಮೃತಿ ಮಂಧಾನಗೆ ತಂದೆಯ ಮೇಲೆ ತುಂಬಾನೇ ಪ್ರೀತಿ ಮತ್ತು ಕಾಳಜಿ. ಈ ಹಿನ್ನೆಲೆ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಹೇಳಿರುವ ಮ್ಯಾನೇಜರ್ ತುಹಿನ್ ಮಿಶ್ರಾ, ವೈದ್ಯರು ಕುಟುಂಬಸ್ಥರಿಗೆ ಆಸ್ಪತ್ರೆಯಲ್ಲೇ ಇರುವಂತೆ ಹೇಳಿದ್ದಾರೆ. ಈ ಹಿನ್ನೆಲೆ ಸ್ಮೃತಿ ಮಂಧಾನಾ ಮತ್ತು ಅವರ ಕುಟುಂಬದವರು ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ನಮಗೆಲ್ಲ ಆಘಾತವಾಗಿದೆ ಅವರ ಆರೋಗ್ಯಕ್ಕೆ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಸದ್ಯ ಸ್ಮೃತಿ ಮಂಧಾನ ಅವರ ಫಾರ್ಮ್ಹೌಸ್ನಲ್ಲಿ ಮದುವೆಗೆ ಹಾಕಲಾಗಿದ್ದ ಶಾಮಿಯಾನ ತೆಗೆಯಲಾಗಿದೆ. ಅಲಂಕಾರ ವಸ್ತುಗಳೆಲ್ಲವನ್ನೂ ತೆರೆವುಗೊಳಿಸಲಾಗಿದೆ. ಶ್ರೀನಿವಾಸ್ ಮಂಧಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಆರೋಗ್ಯದ ಕುರಿತು ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ. ಇನ್ನುಳಿದಂತೆ ಟೀಮ್ ಇಂಡಿಯಾದ ಶಫಾಲಿ ವರ್ಮಾ, ರಿಚಾ ಘೋಷ್, ಶ್ರೇಯಾಂಕ ಪಾಟೀಲ್, ರೇಣುಕಾ ಸಿಂಗ್, ಶಿವಾಲಿ ಶಿಂಧೆ, ರಾಧಾ ಯಾದವ್ ಮತ್ತು ಜೆಮಿಮಾ ಕೆಲ ದಿನಗಳಿಂದ ಸ್ಮೃತಿ ಮಂಧಾನ ಅವರ ಈ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದರು. ಗೆಳತಿಗೆ ಶುಭ ಕೋರಿ ಅರಿಶಿಣ ಶಾಸ್ತ್ರ ಮತ್ತು ನಿನ್ನೆಯ ಸಂಗೀತ ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದ್ದರು.
ಇನ್ನು ಸ್ಮೃತಿ ಅವರ ಜೊತೆ ಇಂದು ಮದುವೆಯಾಗಬೇಕಿದ್ದ ಪಲಾಶ್ ಮುಚ್ಚಲ್.. ಖ್ಯಾತ ಗಾಯಕಿ ಪಲಕ್ ಮುಚ್ಚಲ್ ಅವರ ಸಹೋದರ. ಬಾಲಿವುಡ್ನಲ್ಲಿ ಈಗಾಗಲೇ ಸಂಗೀತ ನಿರ್ದೇಶಕರಾಗಿ ಕೂಡ ಗುರುತಿಸಿಕೊಂಡಿರುವ ಪಲಾಶ್ ''ಡಿಶ್ಕ್ಯಾಂವ್''.. ''ಅರ್ಧ''.. ''ಭೂತನಾಥ್ ರಿಟರ್ನ್ಸ್''.. ''ಅಮಿತ್ ಸಹಾನಿ ಕಿ ಲಿಸ್ಟ್''.. ''ಮಿಸ್ ತನಕಪುರ ಹಾಜಿರ್ ಹೋ''.. ಅಂತಹ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಬಾಲಿವುಡ್ನ ಅತೀ ಕಿರಿಯ ಸಂಗೀತ ನಿರ್ದೇಶಕ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿರುವ ಪಲಾಶ್ ''ಆರ್ಧ'' ಮತ್ತು ''ಕಾಮ್ ಚಾಲೂ ಹೈ'' ಚಿತ್ರಗಳ ನಿರ್ದೇಶಕ ಕೂಡ ಹೌದು. ಸದ್ಯ ''ರಾಜು ಬಾಜೇವಾಲಾ'' ಎಂಬ ಚಿತ್ರವನ್ನು ಪಲಾಶ್ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











