06 ವರ್ಷದ ನಂತರ ತನ್ನ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಉತ್ತರ ನೀಡಿದ ನಾನಾ ಪಾಟೇಕರ್...!
ಹೆಣ್ಣುಮಕ್ಕಳನ್ನು ಕಾಮದ ಸರಕಿನಂತೆ ನಡೆಸಿಕೊಳ್ಳೋ ದುಷ್ಟರ ವಿರುದ್ಧ ಆರಂಭ ಮಾಡಲಾಗಿದ್ದ ಅಭಿಯಾನ ಮೀಟೂ. ಆರೇಳು ವರ್ಷಗಳ ಹಿಂದೆ ಆರಂಭವಾಗಿದ್ದ ಈ ಮೀಟೂ ಅಭಿಯಾನದಡಿ ಹಳ್ಳ ಹಿಡಿದಿದ್ದ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅನೇಕ ನಟಿಯರು ತಮ್ಮ ಸಹ ನಟರು, ನಿರ್ಮಾಪಕರ ಹಾಗೂ ನಿರ್ದೇಶಕರ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿದ್ದರು.
ಆ ನಿರ್ಮಾಪಕ ನೈಟ್ ಔಟಿಗೆ ಕರೆದರೂ, ಈ ನಾಯಕ ಡೇಟಿಂಗ್ ಕರೆದ, ಚಿತ್ರೀಕರಣದ ಸಮಯದಲ್ಲಿ ಬೇಕಂತಲೇ ಬಿಗಿಯಾಗಿ ಅಪ್ಪಿದ, ಪಾತ್ರಕ್ಕಾಗಿ ಪಲ್ಲಂಗ ಏರುವಂತೆ ಹೇಳಿದ, ಹೀಗೆ ಇತ್ಯಾದಿ ಇತ್ಯಾದಿ ಆರೋಪಗಳೆಲ್ಲವೂ ಬಣ್ಣದ ಲೋಕದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದವು. ಆದರೆ ಕೆಲ ಪ್ರಕರಣದಲ್ಲಿ ಮೀಟೂ ಅಭಿಯಾನವನ್ನೇ ಬಂಡವಾಳ ಮಾಡಿಕೊಂಡು, ಕೆಲವರು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಅನುಮಾನ ಬಹುತೇಕರನ್ನೂ ಕಾಡುತ್ತಿತ್ತು. ಆ ಪೈಕಿ ತನುಶ್ರೀ ದತ್ತಾ ಪ್ರಕರಣವೂ ಒಂದು.

ಹೌದು. ನಿಮಗೆ ನೆನಪಿದ್ದರೆ, 'ಆಶಿಕ್ ಬನಾಯಾ ಆಪ್ನೇ' ಚಿತ್ರದ ಮೂಲಕ ಬಣ್ಣದ ಬದುಕು ಆರಂಭ ಮಾಡಿದ್ದ ತನುಶ್ರೀ 2018ರ ಆಚೀಚೆ ಮೀಟೂ ಆರೋಪ ಮಾಡಿದ್ದರು. ಹಾಡೊಂದರ ಚಿತ್ರೀಕರಣ ಸಮಯದಲ್ಲಿ ಬಾಲಿವುಡ್ನ ಹಿರಿಯ ನಟ 'ನಾನಾ ಪಾಟೇಕರ್' ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದರು.
2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಸಿನಿಮಾ ಚಿತ್ರೀಕರಣದ ವೇಳೆ ನಟ ನಾನಾ ಪಾಟೇಕರ್ ಸೆಟ್ ನಲ್ಲಿ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು. ಯುವತಿಯರು ಹಾಗೂ ನಟಿಯರ ಜೊತೆ ಅವರು ಯಾವ ರೀತಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬುದು ಬಾಲಿವುಡ್ ಗೆ ಚೆನ್ನಾಗಿ ಗೊತ್ತು. ಆದರೆ ಈವರೆಗೂ ಯಾರು ಹೇಳಿಲ್ಲ. ಅದಕ್ಕೆ ಗುಂಡಿಗೆ ಬೇಕು ಎಂದು ತನುಶ್ರೀ ಆರೋಪ ಮಾಡಿದ್ದರು. ಇಷ್ಟೇ ಅಲ್ಲ ಕೆಲ ನಟಿಯರ ಮೇಲೆ ನಾನಾ ಪಾಟೇಕರ್ ಕೈ ಮಾಡಿದ್ದಾರೆ... ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಯಾರೂ ಕೂಡ ವರದಿ ಮಾಡಿಲ್ಲ ಎಂದು ಬೇಸರವನ್ನೂ ವ್ಯಕ್ತಪಡಿಸಿದ್ದರು ತನುಶ್ರೀ ದತ್ತಾ.

ತನುಶ್ರೀ ದತ್ತಾ ಮಾಡಿದ್ದ ಈ ಆರೋಪದಿಂದ ನಾನಾ ಪಾಟೇಕರ್ ಅವರನ್ನ ಅನೇಕ ಚಿತ್ರಗಳಿಂದ ಕೈ ಬಿಡಲಾಯಿತು ಕೂಡ. ಇಷ್ಟೆಲ್ಲ ಆದರೂ ತನುಶ್ರೀ ದತ್ತಾ ಮಾಡಿದ್ದ ಆರೋಪಗಳಿಗೆ ನಾನಾ ಪಾಟೇಕರ್ ಉತ್ತರವನ್ನ ನೀಡಿರಲಿಲ್ಲ. ಆದಾಗ್ಯೂ, ತನುಶ್ರೀ ಅವರ ಹೇಳಿಕೆಯನ್ನು ಬೆಂಬಲಿಸಲು ಸಾಕಷ್ಟು ಸಾಕ್ಷ್ಯಗಳು ಇಲ್ಲದ ಕಾರಣ ಪ್ರಕರಣವನ್ನು ಒಂದು ವರ್ಷದೊಳಗೆ ಮುಚ್ಚಲಾಯಿತು.
ಇದೀಗ ಈ ಪ್ರಕರಣದ ಬಗ್ಗೆ ನಾನಾ ಪಾಟೇಕರ್ ಮೌನ ಮುರಿದು ಮಾತನಾಡಿದ್ದಾರೆ. ನಾನು ನನ್ನ ವಿರುದ್ಧ ಆರೋಪ ಮಾಡಲಾದ ಆ ಆರೋಪ ಮತ್ತು ಆ ಘಟನೆಯನ್ನ ಮನಸಿನಲ್ಲಿ ಇಟ್ಟುಕೊಂಡಿಲ್ಲ. ಯಾಕೆಂದರೆ ಅದೊಂದು ದೊಡ್ಡ ಸುಳ್ಳು. ಸುಳ್ಳು ಎಂದು ನನಗೆ ಅರಿವಿರುವಾಗ ನಾನೇಕೆ ಆ ಬಗ್ಗೆ ಕೋಪ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಯನ್ನ ಮಾಡಿದ್ದಾರೆ ನಾನಾ ಪಾಟೇಕರ್.

ಮುಂದುವರೆದು ಮಾತನಾಡಿರುವ ನಾನಾ ಪಾಟೇಕರ್ ನಾನು ಬೇರೆ ಅವರ ಬಾಯಿಯನ್ನು ಯಾಕೆ ಮುಚ್ಚಲಿ ? ಯಾರಾದರೂ ತಪ್ಪು ಮಾಡಿದರೆ ನಾನು ಅವರನ್ನು ನ್ಯಾಯಾಲಯಕ್ಕೆ ಕರೆ ತರುತ್ತೇನೆ. ಆದರೆ ಅದಕ್ಕೂ ನನಗೆ ಸಮಯವಿಲ್ಲ. ನಾವು ಎಷ್ಟು ಸರಿ ಅಥವಾ ತಪ್ಪು ಎಂದು ನಮಗೆ ತಿಳಿದಿರಬೇಕು. ಅದು ಮಾತ್ರ ಪ್ರಮುಖ ವಿಷಯ ಅಂದಿದ್ದಾರೆ. ಇದಕ್ಕೆ ತನುಶ್ರೀ ದತ್ತಾ ಏನ್ ಹೇಳ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











