ಮೋದಿ ವಾಹನಕ್ಕೆ ತಡೆ: ಪಂಜಾಬ್ ಭಯೋತ್ಪಾದಕರ ತಾಣವಾಗುತ್ತಿದೆ ಎಂದ ಕಂಗನಾ
ಬಿಜೆಪಿಯ ಅನಧಿಕೃತ ವಕ್ತಾರೆ, ನಟಿ ಕಂಗನಾ ರನೌತ್ ಮತ್ತೆ ಪಂಜಾಬಿಗರ ಮೇಲೆ ಸಿಡಿದೆದ್ದಿದ್ದಾರೆ. ನಿನ್ನೆ ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನಕ್ಕೆ ಅಡ್ಡಿ ಪಡಿಸಿದ ಘಟನೆ ಕುರಿತಂತೆ ಆಕ್ರೋಶ ಹೊರಹಾಕಿರುವ ಕಂಗನಾ ''ಈ ಘಟನೆಯು ಪ್ರಜಾಪ್ರಭುತ್ವದ ಮೇಲಿನ ದಾಳಿ'' ಎಂದಿದ್ದಾರೆ.
ಪಂಜಾಬ್ನ ಫಿರೋಜ್ಪುರ ಜಿಲ್ಲೆಯಲ್ಲಿ ಆಯೋಜಿತವಾಗಿದ್ದ ಚುನಾವಣೆ ಪ್ರಚಾರಕ್ಕೆ ಮೋದಿ ಆಗಮಿಸುವಾಗ ಹುಸೇನಿವಾಲದ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಒಂದರ ಮೇಲೆ ಮೋದಿ ಅವರಿದ್ದ ಕಾರು ಹಾಗೂ ಅವರ ಬೆಂಗಾವಲು ಪಡೆಯ ಕಾರುಗಳನ್ನು ಪ್ರತಿಭಟನಾಕಾರರು ತಡೆದರು. ಇದು ದೊಡ್ಡ ಭದ್ರತಾ ಲೋಪ ಎಂದು ಪ್ರಧಾನಿ ಕಾರ್ಯಾಲಯವು ಆರೋಪ ಮಾಡಿದೆ. ಬಿಜೆಪಿ ಕಾರ್ಯಕರ್ತರು, ಮುಖಂಡರುಗಳು ಪಂಜಾಬ್ ರಾಜ್ಯ ಸರ್ಕಾರದ ಮೇಲೆ ಹರಿಹಾಯ್ದಿದೆ.
ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ ಕಂಗನಾ ರನೌತ್, ''ಪಂಜಾಬ್ನಲ್ಲಿ ನಡೆದ ಘಟನೆ ತಲೆತಗ್ಗಿಸುವಂಥಹದ್ದು. ಪ್ರಧಾನಿ ಮೋದಿಯವರು ಸಾಂವಿಧಾನಿಕವಾಗಿ ಆಯ್ಕೆ ಆಗಿರುವ ಗೌರವಾನ್ವಿತ ವ್ಯಕ್ತಿ. 120 ಕೋಟಿ ಭಾರತೀಯರ ಪ್ರತಿನಿಧಿ. ಅವರ ಮೇಲೆ ಆಗಿರುವ ಈ ದಾಳಿ, ಪ್ರತಿ ಭಾರತೀಯನ ಮೇಲೆ ಆಗಿರುವ ದಾಳಿ. ಇದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಆಗಿರುವ ದಾಳಿ'' ಎಂದಿದ್ದಾರೆ.

''ಪಂಜಾಬ್ ರಾಜ್ಯವು ಭಯೋತ್ಪಾದಕ ಚಟುವಟಿಕೆಯ ತಾಣವಾಗುತ್ತಿದೆ. ನಾವು ಈಗಲೇ ಅವರನ್ನು ತಡೆಯದಿದ್ದರೆ ದೇಶವು ದೊಡ್ಡ ಬೆಲೆಯನ್ನು ಮುಂದಿನ ದಿನಗಳಲ್ಲಿ ತೆರಬೇಕಾಗುತ್ತದೆ'' ಎಂದಿದ್ದಾರೆ ಕಂಗನಾ ರನೌತ್. ಜೊತೆಗೆ 'ಭಾರತವು ಮೋದಿ ಅವರ ಜೊತೆಗಿದೆ' ಎಂಬ ಹ್ಯಾಷ್ಟ್ಯಾಗ್ ಅನ್ನು ಬಳಸಿದ್ದಾರೆ.
ನಟಿ ಕಂಗನಾ ರನೌತ್, ಪಂಜಾಬ್ ಮೇಲೆ ಪಂಜಾಬ್ ಜನರ ಮೇಲೆ ಸಿಟ್ಟು ಹೊರಹಾಕುತ್ತಿರುವುದು ಇದು ಹೊಸದೇನಲ್ಲ. ಕೃಷಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ರೈತರು ನಡೆಸಿದ ಐತಿಹಾಸಿಕ ಪ್ರತಿಭಟನೆಯನ್ನು ಪಂಜಾಬ್ ರೈತರೇ ಮುಂಚೂಣಿಯಲ್ಲಿದ್ದರು. ಮೊದಲಿನಿಂದಲೂ ಕೇಂದ್ರ ಸರ್ಕಾರ, ಬಿಜೆಪಿ ಪರ ವಕಾಲತ್ತು ವಹಿಸುತ್ತಲೇ ಬಂದಿರುವ ಕಂಗನಾ, ರೈತರ ಪ್ರತಿಭಟನೆಯನ್ನು ಭಯೋತ್ಪಾದ ಕೃತ್ಯ ಎಂದಿದ್ದರು. ಪಂಜಾಬ್ನ ರೈತ ಮಹಿಳೆಯೊಬ್ಬರನ್ನು ಕೀಳಾಗಿ ಲೇವಡಿ ಮಾಡಿದ್ದರು.
ಪ್ರತಿಭಟನೆಗೆ ಮಣಿದು ಪ್ರಧಾನಿ ಮೋದಿ ಅವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ದಿನ ಇನ್ಸ್ಟಾಗ್ರಾಂ ಪೋಸ್ಟ್ ಮಾಡಿದ್ದ ಕಂಗನಾ, ''ಇಂದು ಖಲಿಸ್ಥಾನಿ ಉಗ್ರರು ಸರ್ಕಾರದ ಕೈ ತಿರುವಿದ್ದಾರೆ (ಬಲವಂತವಾಗಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ ಎಂಬರ್ಥದಲ್ಲಿ). ಆದರೆ ಒಂದನ್ನು ಮರೆಯದಿರೋಣ ಒಬ್ಬ ಮಹಿಳೆ, ಭಾರತದ ಏಕೈಕ ಮಹಿಳಾ ಪ್ರಧಾನಿ ಇದೇ ಖಲಿಸ್ಥಾನಿ ಉಗ್ರರನ್ನು ತನ್ನ ಶೂ ಕಾಲಿನಿಂದ ಹೊಸಕಿ ಹಾಕಿದ್ದಳು. ಆಕೆ ದೇಶಕ್ಕೆ ಸಾಕಷ್ಟು ತೊಂದರೆ ಕೊಟ್ಟಿರಬಹುದು ಆದರೆ ದೇಶವನ್ನು ಇಬ್ಭಾಗವಾಗಲು ಬಿಡಲಿಲ್ಲ. ಆಕೆಯ ಪ್ರಾಣವನ್ನೇ ಒತ್ತೆಯಿಟ್ಟು ಖಲಿಸ್ಥಾನಿ ಉಗ್ರರನ್ನು ಸೊಳ್ಳೆಗಳಂತೆ ಹೊಸಕಿಹಾಕಿದ್ದಳು'' ಎಂದಿದ್ದರು ಕಂಗನಾ. ಪಂಜಾಬ್ ಜನರನ್ನು ಖಲಿಸ್ಥಾನಿ ಉಗ್ರರಿಗೆ ಹೋಲಿಸಿದ ಕಂಗನಾರ ಈ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಂಗಾನರ ವಿರುದ್ಧ ದೇಶದ ಹಲವೆಡೆ ಸಿಖ್ಖರು ದೂರುಗಳನ್ನು ದಾಖಲಿಸಿದರು.
ಡಿಸೆಂಬರ್ 03ರಂದು ಕಂಗನಾ ಪಂಜಾಬ್ಗೆ ಹೋಗಿದ್ದಾಗ ಆಕೆಯ ಕಾರನ್ನು ರೈತರು ತಡೆದು ಪ್ರತಿಭಟನೆ ನಡೆಸಿದ್ದರು. ಅಂದೂ ಸಹ ಕಂಗನಾ, ಇದು ಭಯೋತ್ಪಾದಕ ಕೃತ್ಯ ಎಂದು ಬಣ್ಣಿಸಿದ್ದರು. ತಮ್ಮನ್ನು ಕೊಲ್ಲಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದರು. ಬಳಿಕ ಪೊಲೀಸರು ಹಾಗೂ ಕಂಗನಾರ ಖಾಸಗಿ ಭದ್ರತೆಯವರ ಸಹಾಯದಿಂದ ಕಂಗನಾ ಪಾರಾಗಿ ಬಂದರು.
ಭದ್ರತಾ ವೈಫಲ್ಯ ಪ್ರಕರಣವನ್ನು ಪ್ರಧಾನಿ ಹಾಗೂ ಗೃಹ ಸಚಿವ ಕಾರ್ಯಾಲಯ ಗಂಭೀರವಾಗಿ ಪರಿಗಣಿಸಿದ್ದು ತನಿಖಾ ತಂಡವೊಂದನ್ನು ರಚಿಸಿದೆ. ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಪಂಜಾಬ್ ಸರ್ಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ವಿಚಾರಣೆ ಸುಪ್ರೀಂ ಒಪ್ಪಿದೆ.


Click it and Unblock the Notifications











