ನಾನು ಆ ಸಿನಿಮಾ ಮಾಡಿದ್ದು 'ರಜಿನಿಕಾಂತ್' ಮುಖ ನೋಡಿಯಲ್ಲ, ಮಾಡಿದ್ದು ಕೇವಲ 'ಹಣ'ಕ್ಕಾಗಿ ಮಾತ್ರ..!
ಸದಾ ಸವಾಲಿನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವವರು ನವಾಜುದ್ದೀನ್ ಸಿದ್ದಿಕಿ. ದೇಸೀ ಲುಕ್ಕಿನ ನವಾಜುದ್ದೀನ್ ಇದುವರೆಗೂ ಮಾಡಿರುವ ಚಿತ್ರಗಳು ಮತ್ತು ನಿರ್ವಹಿಸಿರುವ ಪಾತ್ರಗಳು ಇವರನ್ನು ವಿಶಿಷ್ಟ ಸ್ಥಾನದಲ್ಲಿ ಕರೆದೊಯ್ದು ನಿಲ್ಲಿಸಿವೆ.
ಈವತ್ತಿಗೆ ಬಾಲಿವುಡ್ನ ಈ ಅದ್ಭುತ ಆಕ್ಟರ್ನ ಕೈ ತುಂಬಾ ಅವಕಾಶಗಳಿವೆ. ಕೇವಲ ಅವಕಾಶ ಮಾತ್ರ ಅಲ್ಲ, ಅವಕಾಶಗಳ ಜೊತೆ ಜೊತೆಯಲ್ಲಿ ನವಾಜುದ್ದೀನ್ ಗೆ 'ಕುಬೇರ ವರ' ಕೂಡ ಪ್ರಾಪ್ತಿಯಾಗಿದೆ. ಮನಸು ಮಾಡಿದರೆ ಮುಂಬೈ, ದೆಹಲಿಯಂಥಾ ಮಹಾ ನಗರಗಳಲ್ಲಿ ಹೈಫೈ ಜಂಗುಳಿಯಲ್ಲಿ ಕಾಲುಗಳನ್ನು ಮಣ್ಣಿಗೆ ಸೋಕಿಸದಂತೆ ಕಳೆದು ಬಿಡಬಹುದು. ಆದರೂ ಕೂಡ ನವಾಜುದ್ದೀನ್ ಸಿದ್ದಿಕಿ ಹಣದ ದಾಹ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ನಾನು ರಜಿನಿಕಾಂತ್ ಜೊತೆ ನಟಿಸಿದ್ದು ದುಡ್ಡಿನ ಮುಖ ನೋಡಿಯೇ ಹೊರತು ರಜಿನಿ ಮುಖ ನೋಡಿಯಲ್ಲ ಎಂದು ಹೇಳಿದ್ದಾರೆ.

ಹೌದು, ಕೇಳೋಕೆ ಅಚ್ಚರಿ ಅನಿಸಿದರೂ ಇದು ನಿಜಾ. ರಜಿನಿಕಾಂತ್ ಅವರ ಜೊತೆ ತೆರೆ ಹಂಚಿಕೊಳ್ಳುವುದೇ ಸೌಭಾಗ್ಯ ಎಂದು ಅಂದುಕೊಳ್ಳುವ ಅನೇಕರ ನಡುವೆ, ನವಾಜುದ್ದೀನ್ ಸಿದ್ದಿಕಿ ಕೇವಲ ಹಣಕ್ಕೆ ಆ ಚಿತ್ರವನ್ನು ಒಪ್ಪಿಕೊಂಡೇ ಎಂದು ಫಿಲ್ಮ್ ಫೇರ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಇಲ್ಲಿ ಕೊಡುವ ಹಣಕ್ಕಿಂತ ಹೆಚ್ಚಿನ ಹಣ ಅವರು ಕೊಡಲು ಮುಂದಾದಾಗ ಒಲ್ಲೆ ಎನ್ನಲು ಮನಸಾಗಲಿಲ್ಲ ಎಂದಿರುವ ನವಾಜುದ್ದೀನ್ ಸಿದ್ದಿಕಿ ಭಾಷೆ ಗೊತ್ತಿಲ್ಲದೇ ಆಕ್ಟ್ ಮಾಡುವುದು ಕಷ್ಟ ಎಂದು ಗೊತ್ತಿದ್ದರೂ ಕೂಡ ಆ ಚಿತ್ರ ಮಾಡಿದೆ ಎಂದಿದ್ದಾರೆ. ಭಾಷೆ ಗೊತ್ತಿರದ ಕಾರಣ ಆ ಚಿತ್ರ ಮಾಡುವಾಗ ನನ್ನಲ್ಲಿ ಯಾವ ಭಾವನೆಯೂ ಹುಟ್ಟಲಿಲ್ಲ ಎಂದಿದ್ದಾರೆ.
ಮುಂದುವರೆದು ಮಾತನಾಡಿರುವ ನವಾಜುದ್ದೀನ್ ಸಿದ್ದಿಕಿ, ಕೈ ತುಂಬಾ ಹಣ ಪಡೆದರೂ ನನಗೆ ಅಲ್ಲೇನಾಗ್ತಿದೆ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಇದರಿಂದ ನನಗೆ ಪಾಪ ಪ್ರಜ್ಞೆ ಕಾಡಲು ಶುರುವಾಗಿತ್ತು ಎಂದು ಹೇಳಿದ್ದಾರೆ. ವೆಂಕಟೇಶ್ ಅಭಿನಯದ ಸೈಂಧವ ಚಿತ್ರವನ್ನು ಒಪ್ಪಿಕೊಂಡಿದ್ದು ಕೂಡ ಹಣಕ್ಕಾಗಿಯೇ, ಆಗಲೂ ನನಗೆ ಪಾಪ ಪ್ರಜ್ಞೆ ಕಾಡಿತ್ತು ಎಂದಿದ್ದಾರೆ. ಎರಡು ಸಿನಿಮಾ ಮಾಡಿದ್ದಕ್ಕೆ ಪಶ್ಚಾತಾಪ ಕೂಡ ಇದೆ ಎಂದು ಹೇಳಿದ್ದಾರೆ ನವಾಜುದ್ದೀನ್ ಸಿದ್ದಿಕಿ.

ಅಂದ್ಹಾಗೇ ನವಾಜುದ್ದೀನ್ ಸಿದ್ದಿಕಿ ಒಂದು ಚಿತ್ರಕ್ಕೆ ಹತ್ತು ಕೋಟಿ ಸಂಭಾವನೆ ಪಡೆಯುತ್ತಾರೆ ಅನ್ನುವ ಮಾತು, ಮಾಯಾನಗರಿ ಮುಂಬೈನಲ್ಲಿ ಕೇಳಿ ಬರುತ್ತೆ. ಹೀಗಾಗಿ ಪೆಟ್ಟಾ ಮತ್ತು ಸೈಂಧವ ಈ ಎರಡು ದಕ್ಷಿಣ ಭಾರತೀಯ ಚಿತ್ರಗಳನ್ನು ಕೇವಲ ಹಣಕ್ಕಾಗಿ ಮಾಡಿರುವ ನವಾಜುದ್ದೀನ್ಗೆ ಈ ಎರಡು ಚಿತ್ರ ನಿರ್ಮಾಣ ಸಂಸ್ಥೆ ಎಷ್ಟು ಕೋಟಿ ಹಣ ಕೊಟ್ಟಿರಬಹುದು ಅನ್ನುವ ಪ್ರಶ್ನೆ ಈಗ ಅನೇಕ ಸಿನಿಮಾ ಪ್ರಿಯರನ್ನೂ ಕಾಡುತ್ತಿದೆ. ಬಾಲಿವುಡ್ನಲ್ಲಿ ಕೂಡ ನವಾಜುದ್ದೀನ್ ಅವರ ಈ ಹೇಳಿಕೆ ಚರ್ಚೆಯನ್ನು ಹುಟ್ಟು ಹಾಕಿದೆ.
ಇನ್ನೂ.. ಕಾಲಿವುಡ್, ಟಾಲಿವುಡ್ನಲ್ಲಿ ಭಾಷೆ ಗೊತ್ತಿಲ್ಲದ ಪರಭಾಷಿಕರಿಗೆ ಮಣೆ ಹಾಕಿದರೆ ಹೀಗೆ ಆಗುವುದು ಎಂಬ ಮಾತು ಕೇಳಿ ಬರುತ್ತಿದೆ. ಇನ್ನಾದರೂ ಲೋಕಲ್ ಟ್ಯಾಲೆಂಟ್ಗಳಿಗೆ ಬೆಲೆ ಕೊಡುವುದನ್ನು ಕಲಿಯಿರಿ ಎಂಬ ಬುದ್ದಿ ಮಾತನ್ನು ಕೂಡ ತಮಿಳು ಮತ್ತು ತೆಲುಗು ಚಿತ್ರಪ್ರೇಮಿಗಳು ಅವರ ಅವರ ಚಿತ್ರರಂಗಕ್ಕೆ ಹೇಳುತ್ತಿದ್ದಾರೆ.


Click it and Unblock the Notifications











