ಆರ್ಯನ್ ಖಾನ್ ಪ್ರಕರಣ: ನಿರ್ಮಾಪಕ ಇಮ್ತಿಯಾಜ್ ಖಾತ್ರಿಗೆ ಸಮನ್ಸ್
ಮುಂಬೈ ಕ್ರೂಸ್ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಇಮ್ತಿಯಾಜ್ ಖಾತ್ರಿಗೆ ಎನ್ಸಿಬಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಮುಂಜಾನೆ ಮುಂಬೈನ ಬಾಂದ್ರಾದಲ್ಲಿರುವ ಇಮ್ತಿಯಾಜ್ ಖಾತ್ರಿ ಅವರ ನಿವಾಸ ಹಾಗು ಕಚೇರಿ ಮೇಲೆ ಎನ್ಸಿಬಿ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಬೆಳಿಗ್ಗೆಯಿಂದಲೂ ಮನೆ ಹಾಗೂ ಕಚೇರಿಗಳಲ್ಲಿ ಹುಡುಕಾಟ ನಡೆಸಿ ಕೆಲವು ದಾಖಲೆಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನ್ಯೂಸ್18 ಸುದ್ದಿ ಬಿತ್ತರಿಸಿದೆ.
ಮುಂಬೈ ಕ್ರೂಸ್ ಡ್ರಗ್ಸ್ ಪಾರ್ಟಿ ಕೇಸ್ನಲ್ಲಿ ಬಂಧನವಾಗಿರುವ ಡ್ರಗ್ ಪೆಡ್ಲರ್ ಒಬ್ಬನ ವಿಚಾರಣೆಗೆ ಇಮ್ತಿಯಾಜ್ ಖಾತ್ರಿ ಹೆಸರು ಬಾಯ್ಬಿಟ್ಟಿದ್ದು, ಈ ಹಿನ್ನೆಲೆ ನಿರ್ಮಾಪಕ ಮನೆ ಮೇಲೆ ದಾಳಿ ಮಾಡಲಾಗಿದೆ.
ಸದ್ಯ ಮನೆ ಹಾಗೂ ಕಚೇರಿಯಿಂದ ಎನ್ಸಿಬಿ ಪೊಲೀಸರು ತೆರಳಿದ್ದು, ನಿರ್ಮಾಪಕನಿಗೆ ಎನ್ಸಿಬಿ ಕಚೇರಿಗೆ ಬಂದು ವಿವರಣೆ ಕೊಡುವಂತೆ ಸಮನ್ಸ್ ಜಾರಿ ಮಾಡಲಾಗಿದೆ. ಇಮ್ತಿಯಾಜ್ ಖಾತ್ರಿ ಹೆಸರು ಈ ಹಿಂದೆಯೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದ ವೇಳೆ ಇಮ್ತಿಯಾಜ್ ಹೆಸರು ತಳುಕು ಹಾಕಿಕೊಂಡಿತ್ತು.

ಶಾರೂಖ್ ಪುತ್ರನಿಗೆ ಜಾಮೀನು ನಿರಾಕರಣೆ
ಮತ್ತೊಂದೆಡೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಆಗಿರುವ ಶಾರೂಖ್ ಖಾನ್ ಪುತ್ರನಿಗೆ ಜಾಮೀನು ಸಿಕ್ಕಿಲ್ಲ. ಆರ್ಯನ್ ಹಾಗೂ ಇತರೆ ಹದಿನಾಲ್ಕು ಮಂದಿಯ ಜಾಮೀನು ಅರ್ಜಿ ವಜಾಗೊಂಡಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ವಿಚಾರಣೆ ವೇಳೆ ಆರ್ಯನ್ ಪರ ವಾದ ಮಂಡಿಸಿ ವಕೀಲ ಸತೀಶ್ ಮಾನೆಶಿಂಧೆ ''ನೀವು ಯಾವ ಸೆಕ್ಷನ್ ಬೇಕಾದರೂ ನನ್ನ ಮೇಲೆ ಹೇರಿ. ಆದರೆ, ನನ್ನ ವಿರುದ್ಧ ಇರುವ ಸಾಕ್ಷ್ಯವನ್ನು ತೋರಿಸಿ. ಮೆಟಿರಿಯಲ್ ಸಾಕ್ಷ್ಯವೇ ಇಲ್ಲದೆ ನನ್ನ ಬಂಧನದಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲ. ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರ್ಬಾಜ್ ಸೇಠ್ ಹಾಗೂ ನಾನು ಸ್ನೇಹಿತರಾದರೂ ನಾವಿಬ್ಬರು ಪ್ರತ್ಯೇಕವಾಗಿ ಪಾರ್ಟಿಗೆ ಬಂದಿದ್ದೇವೆ. ಪಾರ್ಟಿ ಆರ್ಗನೈಜ್ ಮಾಡಿರುವ ವ್ಯಕ್ತಿ ಅರ್ಬಾಜ್ ಸೇಠ್ಗೆ ಸ್ನೇಹಿತ ಹಾಗಾಗಿ ಅವನಿಗೂ ಆಹ್ವಾನ ಇತ್ತು'' ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು.
ಇದಕ್ಕೆ ಪ್ರತಿಯಾಗಿ ಎನ್ಸಿಬಿ ಪರ ವಾದ ಮಂಡಿಸಿದ ಅನಿಲ್ ಸಿಂಗ್, ''ಆರ್ಯನ್ ಹಾಗೂ ಅರ್ಬಾಜ್ ಪರಸ್ಪರ ಗೊತ್ತಿದ್ದೆ ಪಾರ್ಟಿಗೆ ಬಂದಿದ್ದಾರೆ. ಮನೆಗಳಿಂದ ಹೊರಡುವ ಮುನ್ನ ಸಹ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಅಲ್ಲದೆ ಅಚಿತ್ ಕುಮಾರ್ ಜೊತೆ ಡ್ರಗ್ಸ್ ಬಗ್ಗೆ ಆರ್ಯನ್ ಖಾನ್ ಹಲವು ಬಾರಿ ಮಾತನಾಡಿದ್ದಾನೆ. ಅಂತರಾಷ್ಟ್ರೀಯ ವಿಷಯಗಳ ಉಲ್ಲೇಖವೂ ಆಗಿದೆ'' ಎಂದು ಹೇಳಿದರು. ಎರಡೂ ಕಡೆ ವಾದ ಆಲಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ.


Click it and Unblock the Notifications











