ಆರ್ಯನ್ ಖಾನ್ ಪ್ರಕರಣ: ಮತ್ತೊಬ್ಬ ವ್ಯಕ್ತಿ ಬಗ್ಗೆ ಅನುಮಾನ
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ಈಗಾಗ ಬಾಹ್ಯ ವ್ಯಕ್ತಿಗಳ ಕೈವಾಡವಿದೆ ಎಂದು ಈಗಾಗಲೇ ಚರ್ಚೆ ನಡೆಯುತ್ತಿದೆ. ಎನ್ಸಿಬಿಗೆ ಸೇರದ ಇಬ್ಬರು ವ್ಯಕ್ತಿಗಳು ಆರ್ಯನ್ ಖಾನ್ ಬಂಧನ ಪ್ರಕರಣದ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ನಡುವೆ ಈಗ ಮತ್ತೊಬ್ಬ ವ್ಯಕ್ತಿಯ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ.
ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ಫ್ಲೆಟ್ಚರ್ ಪಟೇಲ್ ಹೆಸರಿನ ವ್ಯಕ್ತಿಯೊಬ್ಬನನ್ನು ಸ್ವತಂತ್ರ್ಯ ಸಾಕ್ಷ್ಯವಾಗಿ ಗುರುತಿಸಲಾಗಿದೆ. ಆದರೆ ಈ ವ್ಯಕ್ತಿ ಸ್ವತಂತ್ರ್ಯ ಸಾಕ್ಷಿಯಲ್ಲ ಬದಲಿಗೆ ಎನ್ಸಿಬಿ ವಲಯ ಅಧಿಕಾರಿ ಸಮೀರ್ ವಾಂಖೆಡೆಯ ಆಪ್ತ ಗೆಳೆಯ ಎಂದು ಆರೋಪಿಸಲಾಗಿದೆ.
ಎನ್ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ)ಯ ಮುಖಂಡ ನವಾಬ್ ಮಲ್ಲಿಕ್ ನಿನ್ನೆ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಆರ್ಯನ್ ಪ್ರಕರಣದಲ್ಲಿ ಸಾಕ್ಷಿ ಎಂದು ಪರಿಗಣಿತವಾಗಿರುವ ಫ್ಲೆಟ್ಚರ್ ಪಟೇಲ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಎನ್ಸಿಬಿ, ಫ್ಲೆಟ್ಚರ್ ಪಟೇಲ್ ಅನ್ನು ಸಾಕ್ಷಿಯಾಗಿ ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಬಳಸಿಕೊಂಡಿದೆ. ನವೆಂಬರ್ ತಿಂಗಳಲ್ಲಿ ಎನ್ಸಿಬಿ ನಡೆಸಿದ ಡ್ರಗ್ಸ್ಗೆ ಸಂಬಂಧಿಸಿದ ದಾಳಿಯಲ್ಲಿಯೂ ಫ್ಲೆಟ್ಚರ್ ಪಟೇಲ್ ಸಾಕ್ಷಿಯಾಗಿದ್ದರು. ಆರ್ಯನ್ ಖಾನ್ ಪ್ರಕರಣದಲ್ಲಿಯೂ ಫ್ಲೆಟ್ಚರ್ ಪಟೇಲ್ ಸಾಕ್ಷಿಯಾಗಿದ್ದಾರೆ.
ಫ್ಲೆಟ್ಚರ್ ಪಟೇಲ್ ಮಹಿಳೆಯೊಬ್ಬರೊಟ್ಟಿಗೆ ನಿಂತಿರುವ ಚಿತ್ರದ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಎನ್ಸಿಪಿಯ ಮುಖಂಡ ನವಾಬ್ ಮಲ್ಲಿಕ್, ''ಈ ಚಿತ್ರದ ಬಗ್ಗೆಯೂ ಸ್ಪಷ್ಟನೆ ಸಿಗಬೇಕು, ಇಲ್ಲಿ ಫ್ಲೆಟ್ಚರ್ ಮಲ್ಲಿಕ್ ಮಹಿಳೆಗೆ ಲೇಡಿ ಡಾನ್ ಎಂದು ಹೇಳುತ್ತಿದ್ದಾನೆ. ಯಾರು ಈ ಲೇಡಿ ಡಾನ್?'' ಎಂದು ಪ್ರಶ್ನೆ ಮಾಡಿದ್ದಾರೆ.

ಫ್ಲೆಟ್ಚರ್ ಪಟೇಲ್ ಯಾರು?
ಫ್ಲೆಟ್ಚರ್ ಪಟೇಲ್ ಹಂಚಿಕೊಂಡಿರುವ ಚಿತ್ರದಲ್ಲಿರುವ ಮಹಿಳೆ ಯಾಸ್ಮೀನ್ ವಾಂಖೆಡೆ. ಇವರು ಎನ್ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆಯ ಸಹೋದರಿ. ವಾಂಖೆಡೆ ಕುಟುಂಬದೊಂದಿಗೆ ಫ್ಲೆಟ್ಚರ್ ಪಟೇಲ್ ಬಹು ಆತ್ಮೀಯ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆರ್ಯನ್ ಖಾನ್ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಫ್ಲೆಟ್ಚರ್ ಪಟೇಲ್ ಮಾಜಿ ಸೈನಿಕ ಆಗಿದ್ದಾರೆ. ಮುಂಬೈ ಎನ್ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಕುಟುಂಬಕ್ಕೆ ಬಹಳ ಆಪ್ತರೂ ಆಗಿದ್ದಾರೆ. ಪ್ರಸ್ತುತ ಮುಂಬೈ ಸೈನಿಕ್ ಫೆಡರೇಶನ್ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಫುಟ್ಬಾಲ್ ಆಟಗಾರನೂ ಆಗಿದ್ದಾರೆ.

ಆರೋಪಗಳಿಗೆ ಫ್ಲೆಟ್ಚರ್ ಪಟೇಲ್ ಪ್ರತಿಕ್ರಿಯೆ
ನವಾಬ್ ಮಲ್ಲಿಕ್ ಆರೋಪಗಳ ಬಗ್ಗೆ ಮಾತನಾಡಿರುವ ಫ್ಲೆಟ್ಚರ್ ಪಟೇಲ್, ''ಪಂಚನಾಮೆಗಳು ಗೌಪ್ಯತೆ ಹೊಂದಿರುತ್ತವೆ. ಆದರೂ ಈ ಅಂಶಗಳನ್ನು ನವಾಬ್ ಮಲ್ಲಿಕ್ಗೆ ಸೋರಿಕೆ ಮಾಡುತ್ತಿರುವುದು ಯಾರು? ಹೌದು ನಾನು ಸಮೀರ್ ವಾಂಖೆಡೆ ಕುಟುಂಬಕ್ಕೆ ಆಪ್ತ. ಡ್ರಗ್ಸ್ ನಿರ್ಮೂಲನೆಯಲ್ಲಿ ನಾನು ಸಮೀರ್ಗೆ ಜೊತೆಯಾಗಿ ನಿಂತಿದ್ದೇನೆ. ಈಗಲೂ ಸಮೀರ್ ಕರೆ ಮಾಡಿದರೆ ಕೂಡಲೇ ಅವನ ಸಹಾಯಕ್ಕೆ ಹೋಗುವೆ'' ಎಂದಿದ್ದಾರೆ.

ಪ್ರತಿಕ್ರಿಯೆ ನೀಡಿರುವ ಸಮೀರ್ ಸಹೋದರಿ ಯಾಸ್ಮಿನ್ ವಾಂಖೆಡೆ
ಸಮೀರ್ ಸಹೋದರಿ ಯಾಸ್ಮಿನ್ ಸಹ ನವಾಬ್ ಮಲ್ಲಿಕ್ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ''ವೃತ್ತಿಯಲ್ಲಿ ನಾನು ವಕೀಲೆ ಆಗಿದ್ದು, ಮಹರಾಷ್ಟ್ರ ನವನಿರ್ಮಾಣ ಸೇನಾದ ಚಿತ್ರಪಥ ಸೇನಾಕ್ಕೆ ಕಾನೂನು ಸಲಹೆಗಾರ್ತಿ ಆಗಿದ್ದೇನೆ. ನನಗೆ ನವಾಬ್ ಮಲ್ಲಿಕ್ ಯಾರೆಂಬುದು ಗೊತ್ತಿಲ್ಲ. ಫ್ಲೆಟ್ಚರ್ ಪಟೇಲ್ ನನ್ನ ರಾಖಿ ಸಹೋದರ. ಆತ ನನ್ನನ್ನು ಲೇಡಿ ಡಾನ್ ಎಂದು ಕರೆದಿರುವುದು ನನಗೆ ಹೆಮ್ಮೆ'' ಎಂದಿದ್ದಾರೆ.

ಸೆಲ್ಫಿ ತೆಗೆದುಕೊಂಡಿದ್ದ ಕಿರಣ್ ಗೋಸಾಯಿ
ಈ ಹಿಂದೆ ಆರ್ಯನ್ ಖಾನ್ ಬಂಧನದ ಪ್ರಕರಣದಲ್ಲಿ ಹೊರಗಿನವರ ಕೈವಾಡದ ಬಗ್ಗೆ ಪ್ರಶ್ನೆ ಎದ್ದಿತ್ತು. ಕಿರಣ್ ಗೋಸಾಯಿ ಎಂಬ ವ್ಯಕ್ತಿ ಎನ್ಸಿಬಿ ಕಚೇರಿ ಒಳಗೆ ಆರ್ಯನ್ ಖಾನ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದ. ಆತ ದಾಳಿಯ ಸಾಕ್ಷ್ಯವೆಂದು ಎನ್ಸಿಬಿ ಹೇಳಿತ್ತು. ಕಿರಣ್ ಗೋಸಾಯಿ ಬಗ್ಗೆ ತನಿಖೆ ಮಾಡಲಾಗಿ ಆತನ ವಿರುದ್ಧ ಹಲವು ವಂಚನೆ ಪ್ರಕರಣಗಳು ಇರುವುದು ಪತ್ತೆಯಾಗಿದೆ. ಆತನನ್ನು ಎನ್ಸಿಬಿ ಏಕೆ ತಮ್ಮ ಕಾರ್ಯಾಚರಣೆ ಒಳಗೆ ಸೇರಿಸಿಕೊಂಡಿತು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದರು.

ಬಿಜೆಪಿ ಮುಖಂಡ ಮನೀಶ್ ಭಾನುಶಾಲಿ ಯಾರು?
ಅದೇ ದಾಳಿಯಲ್ಲಿ ಮನೀಶ್ ಭಾನುಶಾಲಿ ಹೆಸರಿನ ಬಿಜೆಪಿ ಮುಖಂಡನೊಬ್ಬ ಭಾಗಿಯಾಗಿದ್ದ. ಮನೀಶ್ ಭಾನುಶಾಲಿ ಡ್ರಗ್ಸ್ ಪ್ರಕರಣದ ಆರೋಪಿಗಳನ್ನು ಕೈಹಿಡಿದು ಎನ್ಸಿಬಿ ಕಚೇರಿ ಒಳಕ್ಕೆ ಕರೆತರುತ್ತಿರುವುದು ವಿಡಿಯೋಗಳಲ್ಲಿ ಸೆರೆಯಾಗಿತ್ತು. ಬಿಜೆಪಿ ಮುಖಂಡನೊಬ್ಬ ಎನ್ಸಿಬಿ ರೇಡ್ನಲ್ಲಿ ಭಾಗಿಯಾಗಿದ್ದು ಏಕೆ ಎಂದು ಹಲವರು ಪ್ರಶ್ನೆ ಮಾಡಿದ್ದರು. ಆರೋಪಗಳಿಗೆ ಉತ್ತರಿಸಿದ್ದ ಭಾನುಶಾಲಿ, ''ಶಿಪ್ನಲ್ಲಿ ನಡೆಯುತ್ತಿರುವ ಪಾರ್ಟಿಯಲ್ಲಿ ಡ್ರಗ್ಸ್ ಇರಲಿದೆ ಎಂಬ ವಿಷಯ ನನ್ನ ಗೆಳೆಯನಿಂದ ನನಗೆ ಗೊತ್ತಾಯಿತು. ಹಾಗಾಗಿ ನಾನು ಅಲ್ಲಿಗೆ ಹೋಗಿದ್ದೆ. ನಾನು ಬಿಜೆಪಿ ಮುಖಂಡನಲ್ಲ, ನನಗೆ ಬಿಜೆಪಿಯಲ್ಲಿ ಯಾವ ಹುದ್ದೆಯೂ ಇಲ್ಲ, ಆದರೆ ನಾನು ಕಳೆದ ಹತ್ತು ವರ್ಷದಿಂದ ಬಿಜೆಪಿಯ ಕಾರ್ಯಕರ್ತ. ಯುವಕರು ಡ್ರಗ್ಸ್ನಂಥಹಾ ಮಾರಕ ವಸ್ತುಗಳಿಂದ ಹಾಳಾಗಬಾರದು ಎಂಬ ಸದುದ್ದೇಶದಿಂದ ನಾನು ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡೆ. ನಾನೇ ಮಾಹಿತಿಯನ್ನು ಎನ್ಸಿಬಿಗೆ ಹೇಳಿದ್ದೆ. ಕಾರ್ಯಾಚರಣೆಗೆ ಹೋದಾಗ ಅಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಇರುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಆ ಪಾರ್ಟಿಗೆ ಹೊರಗಿನ ನಗರಗಳಿಂದ ಬರುವ ಬಹುತೇಕರ ಹೆಸರು ನನಗೆ ನನ್ನ ಗೆಳೆಯನಿಂದ ಗೊತ್ತಾಗಿತ್ತು. ಆದರೆ ಮುಂಬೈನಿಂದ ಯಾರ್ಯಾರು ಬರುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಶಾರುಖ್ ಖಾನ್ ಪುತ್ರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗಲೇ ನನಗೆ ಮಾಹಿತಿ ಗೊತ್ತಾಗಿದ್ದು'' ಎಂದಿದ್ದಾರೆ.


Click it and Unblock the Notifications











