ಅಕ್ಷಯ್ ಕುಮಾರ್ ಹೊಸ ಜಾಹೀರಾತಿಗೆ ವಿರೋಧ: ಜಾಹೀರಾತಿನಲ್ಲಿ ಅಂಥಹದ್ದೇನಿದೆ?
ಬಾಲಿವುಡ್ನ ಸಿನಿಮಾಗಳಿಗೆ ಬಾಯ್ಕಾಟ್ ಕಾಟ ಚಾಲ್ತಿಯಲ್ಲಿರುವಾಗಲೇ ಬಾಲಿವುಡ್ನ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಿರುವ ಜಾಹೀರಾತೊಂದರ ಬಗ್ಗೆಯೂ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಷಯ್ ಕುಮಾರ್ ಹಲವು ಬ್ರ್ಯಾಂಡ್ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸರ್ಕಾರದ ಕೆಲವು ಜಾಹೀರಾತುಗಳಲ್ಲಿಯೂ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಅದರಲ್ಲಿಯೂ ಅಕ್ಷಯ್ ನಟಿಸಿದ್ದ ಕೇಂದ್ರ ಸರ್ಕಾರದ ರಸ್ತೆ ಸುರಕ್ಷತೆಯ ಜಾಹೀರಾತು ಜನಪ್ರಿಯವಾಗಿತ್ತು. ಆದರೆ ಈಗ ಅದೇ ಸರಣಿಯ ಹೊಸ ಜಾಹೀರಾತು ಆಕ್ಷೇಪಣೆಗೆ ಗುರಿಯಾಗಿದೆ.
ಅಕ್ಷಯ್ ನಟಿಸಿರುವ ಹೊಸ ರಸ್ತೆ ಸುರಕ್ಷತೆ ಜಾಹೀರಾತು ವರದಕ್ಷಿಣೆ ನೀಡುವ ಕೆಟ್ಟ ಪದ್ಧತಿಗೆ ಪ್ರಚಾರ ನೀಡುತ್ತಿದೆ ಎಂದು ಹಲವು ನೆಟ್ಟಿಗರು ಆರೋಪಿಸಿದ್ದಾರೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು ಇಂತಿದೆ, ಹೊಸದಾಗಿ ಮದುವೆಯಾದ ವಧು-ವರರು ಹೊಸ ಕಾರೊಂದರಲ್ಲಿ ಕುಳಿತಿರುತ್ತಾರೆ. ಮಗಳನ್ನು ಗಂಡನ ಮನೆಗೆ ಕಳಿಸಿಕೊಡುವ ದುಃಖದಲ್ಲಿ ವಧುವಿನ ತಂದೆ ಅಳುತ್ತಿರುತ್ತಾರೆ. ಆಗ ಪೊಲೀಸ್ ಪಾತ್ರಧಾರಿ ಅಕ್ಷಯ್ ಕುಮಾರ್ ಇಂಥಹಾ ಗಾಡಿಯಲ್ಲಿ ಮಗಳನ್ನು ಕಳಿಸಿದರೆ ಅಳು ಬಂದೇ ಬರುತ್ತದೆ ಎನ್ನುತ್ತಾರೆ. ಅದಕ್ಕೆ ವಧುವಿನ ತಂದೆ ಈ ಗಾಡಿಯಲ್ಲಿ ಏನು ಕಡಿಮೆ ಇದೆ, ಆಟೋಮ್ಯಾಟಿಕ್ ತಂತ್ರಜ್ಞಾನ ಇದೆ, ಸನ್ರೂಫ್ ಇದೆ, ಎರಡಲ್ಲ ಬದಲಿಗೆ ಆರು ಸ್ಪೀಕರ್ ಇದೆ ಎನ್ನುತ್ತಾರೆ. ಅದಕ್ಕೆ ಅಕ್ಷಯ್ ಕುಮಾರ್, ಆದರೆ ಏರ್ಬ್ಯಾಗ್ ಎರಡೇ ಇದೆಯಲ್ಲ'' ಎನ್ನುತ್ತಾರೆ.
ಮುಂದುವರೆದು, ಗಾಡಿ ಅಪಘಾತವಾದರೆ ಮುಂದಿನ ಇಬ್ಬರು ಬಚಾವಾಗುತ್ತಾರೆ ಆದರೆ ನಿನ್ನ ಮಗಳು-ಅಳಿಯ ನಿಧನ ಹೊಂದುತ್ತಾರೆ ಎನ್ನುತ್ತಾರೆ. ಕೂಡಲೇ ವಧು-ವರರು ಆ ಹೊಸಕಾರಿನಿಂದ ಇಳಿಯುತ್ತಾರೆ. ಬಳಿಕ ಹೊಸ ಆರು ಬ್ಯಾಗ್ ಹೊಂದಿರುವ ಕಾರು ಬರುತ್ತದೆ. ಆ ಕಾರಿನಲ್ಲಿ ವಧು-ವರರು ಹತ್ತುತ್ತಾರೆ. ಆಗ ಮತ್ತೆ ಅಕ್ಷಯ್ ಕುಮಾರ್, ವಧುವಿನ ತಂದೆ, ಈಗ ಏಕೆ ಅಳುತ್ತಿದ್ದೀಯ? ಈಗ ನಗು, ಇಬ್ಬರೂ ಈಗ ಸುರಕ್ಷಿತವಾಗಿರುತ್ತಾರೆ ಎನ್ನುತ್ತಾರೆ.
ಜಾಹೀರಾತಿನಲ್ಲಿ ಎರಡು ಬ್ಯಾಗ್ಗಿಂತಲೂ ಆರು ಏರ್ಬ್ಯಾಗ್ ಹೊಂದಿರುವ ಕಾರು ಖರೀದಿಸಿ ಹೆಚ್ಚು ಸುರಕ್ಷಿತವಾಗಿರಿ ಎಂಬ ಸಂದೇಶವೇನೋ ಇದೆ. ಆದರೆ ಅದರ ಜೊತೆಗೆ ಮಾವ ಅಳಿಯನಿಗೆ ಕಾರು ನೀಡುವ ವರದಕ್ಷಿಣೆ ಪದ್ಧತಿಯ ಪರೋಕ್ಷ ಪ್ರಚಾರ ಅಥವಾ ವರದಕ್ಷಿಣೆ ಬಗ್ಗೆ ಒಪ್ಪಿಗೆಯ ಭಾವವೂ ಇದೆ ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಷಯ್ ಕುಮಾರ್ ಅಭಿನಯಿಸಿರುವ ಈ ಜಾಹೀರಾತನ್ನು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು, ''ಭಾರತೀಯರ ತೆರಿಗೆ ಹಣ ವರದಕ್ಷಿಣೆಯಂಥಹಾ ಸಾಮಾಜಿಕ ಪಿಡುಗಿನ ಪ್ರಚಾರಕ್ಕೆ ಬಳಸಲಾಗುತ್ತಿದೆ'' ಎಂದಿದ್ದಾರೆ. ಮತ್ತೊಬ್ಬರು, ''ಇದೇನು ರಸ್ತೆ ಸುರಕ್ಷತೆ ಜಾಹೀರಾತೊ ಅಥವಾ ವರದಕ್ಷಿಣೆ ಪ್ರಚಾರದ ಜಾಹೀರಾತೋ?'' ಎಂದು ಹರಿಹಾಯ್ದಿದ್ದಾರೆ.
ಕೆಲ ತಿಂಗಳ ಹಿಂದೆ ಇದೇ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ತೀವ್ರ ವಿರೋಧ ಎದುರಿಸಿದ್ದರು. ಆರೋಗ್ಯದ ಬಗ್ಗೆ ಕಾಳಜಿವಹಿಸುವ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಅಕ್ಷಯ್ ಕುಮಾರ್ ತಾವು ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಕ್ಷಮೆ ಕೇಳಿದರು. ಜಾಹೀರಾತಿನಿಂದ ಪಡೆದ ಸಂಭಾವನೆಯನ್ನು ಒಳ್ಳೆಯ ಕೆಲಸಕ್ಕೆ ಬಳಸುವುದಾಗಿ ಹೇಳಿದರು.


Click it and Unblock the Notifications











