ಸೆಟ್ಟೇರುವ ಮುನ್ನ ರಿಷಬ್ ನಟನೆಯ ಶಿವಾಜಿ ಬಯೋಪಿಕ್ ನಿಂತು ಹೋಗುತ್ತಾ?
ಕಳೆದೆರಡು ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ಶಿವಾಜಿ ಬಯೋಪಿಕ್ ಸಿನಿಮಾ ಸದ್ದು ಮಾಡ್ತಿದೆ. ಬಾಲಿವುಡ್ ನಿರ್ದೇಶಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ. ಆದರೆ ಕನ್ನಡ ನಟ ರಿಷಬ್ ಶೆಟ್ಟಿ ಚಿತ್ರದಲ್ಲಿ ಶಿವಾಜಿ ಮಹಾರಾಜರರ ಪಾತ್ರ ಮಾಡುತ್ತಿರುವುದು ಚರ್ಚೆ ಹುಟ್ಟಾಕ್ಕಿದೆ.
ರಿಷಬ್ ಶೆಟ್ಟಿ ಆಯ್ಕೆ ಸರಿಯಿಲ್ಲ, ಈ ಚಿತ್ರ ಮಾಡುವುದು ಬೇಕಿರಲಿಲ್ಲ, ಶಿವಾಜಿ ಕನ್ನಡ ನಾಡಿಗೆ ಕೊಟ್ಟ ಕೊಡುಗೆ ಏನು? ಇದಕ್ಕಿಂತ ಕನ್ನಡದ ಮಹಾನ್ ನಾಯಕರ ಸಿನಿಮಾ ಮಾಡಬಹುದು, ಗೆದ್ದಮೇಲೆ ಕನ್ನಡವನ್ನು ಮರೆಯುವುದು ಸರಿಯಲ್ಲ, ಹೀಗೆ ನಾನಾ ರೀತಿಯ ಕಾಮೆಂಟ್ಸ್ ಬರುತ್ತಿದೆ. ಸಾಕಷ್ಟು ಜನ ಬೇಸರ ಹೊರಹಾಕಿ ಪೋಸ್ಟ್ ಮಾಡುತ್ತಿದ್ದಾರೆ. ಬಾಯ್ಕಾಟ್ ಮಾಡುವುದಾಗಿಯೂ ಎಚ್ಚರಿಕೆ ನೀಡುತ್ತಿದ್ದಾರೆ.

ಈಗಾಗಳೇ ಹತ್ತಾರು ಬಾರಿ ಶಿವಾಜಿ ಮಹಾರಾಜರ ಕುರಿತು ಸಿನಿಮಾ, ಧಾರಾವಾಹಿಗಳು ಜನರ ಮುಂದೆ ಬಂದಿದೆ. ಇದೀಗ ಮತ್ತೆ ಬಯೋಪಿಕ್ ಮಾಡುವ ಅವಶ್ಯಕತೆ ಇರಲಿಲ್ಲ ಎನ್ನುವುದು ಕೆಲವರ ವಾದ. ಮಹಾನ್ ನಾಯಕನ ಚರಿತ್ರೆಯನ್ನು ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ರೋಚಕವಾಗಿ ಕಟ್ಟಿಕೊಡಲಾಗುತ್ತಿದೆ ಎನ್ನುವುದು ಮತ್ತೆ ಕೆಲವರ ಅಭಿಪ್ರಾಯ. ಇನ್ನು ರಿಷಬ್ ಶೆಟ್ಟಿ ಪರ ಕೂಡ ಸಾಕಷ್ಟು ಜನ ನಿಂತಿದ್ದಾರೆ.
ಶಿವಾಜಿ ಕರ್ನಾಟಕದವರು ಅಲ್ಲದೇ ಇದ್ದರೂ ಭಾರತದವರು. ಅವರ ಬಯೋಪಿಕ್ ಮಾಡಿದರೆ ಏನು ತಪ್ಪು? ರಿಷಬ್ ಶೆಟ್ಟಿಗೆ ಈ ಪಾತ್ರ ಸೂಕ್ತವಾಗಿರುತ್ತದೆ. ಶಿವಾಜಿಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಷಬ್ ಶೆಟ್ಟಿ ಮತ್ತೆ ಶೈನ್ ಆಗಲಿ ಎಂದು ಬೆಂಬಲ ಸೂಚಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗೆ ಘೋಷಣೆ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರ ಬಹಳ ಸುದ್ದಿ ಮಾಡುತ್ತಿದೆ.

'ದಿ ಪ್ರೈಡ್ ಆಫ್ ಭಾರತ್; ಛತ್ರಪತಿ ಶಿವಾಜಿ ಮಹಾರಾಜ್' ಹೆಸರಿನಲ್ಲಿ ಸಿನಿಮಾ ಘೋಷಣೆ ಆಗಿದೆ. ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಸಂದೀಪ್ ಸಿಂಗ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ. ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಹೇಗೆ ಕಾಣುತ್ತಾರೆ? ಎನ್ನುವ ಸಣ್ಣ ಪೋಸ್ಟರ್ ಸಹ ರಿಲೀಸ್ ಆಗಿ ವೈರಲ್ ಆಗುತ್ತಿದೆ.
8 ತಿಂಗಳ ಹಿಂದೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಸಿನಿಮಾ ಪೋಸ್ಟರ್ ರಿಲೀಸ್ ಮಾಡಿದ್ದರು. ಆದರೆ ಆಗ ಹೀರೊ ಯಾರು ಎನ್ನುವುದು ಖಚಿತವಾಗಿರಲಿಲ್ಲ. ಇನ್ನು ಸಂದೀಪ್ ಸಿಂಗ್ ಈ ಸಿನಿಮಾ ನಿಜಕ್ಕೂ ತೆರೆಗೆ ತರುತ್ತಾರಾ? ಎಂದು ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ಸಂದೀಪ್ ಮಾಡಿರುವ ಹಿಂದಿನ ಸಿನಿಮಾಗಳು.
ಸಹ ನಿರ್ಮಾಪಕರಾಗಿ ಒಂದಷ್ಟು ಸಿನಿಮಾಗಳನ್ನು ಸಂದೀಪ್ ಸಿಂಗ್ ನಿರ್ಮಿಸಿದ್ದಾರೆ. ಅದರಲ್ಲಿ ಬಯೋಪಿಕ್ ಚಿತ್ರಗಳು ಇವೆ. 5 ವರ್ಷಗಳ ಹಿಂದೆ ಪಿಎಂ ನರೇಂದ್ರ ಮೋದಿ ಬಯೋಪಿಕ್ ಸಿನಿಮಾ ಮಾಡಿದ್ದರು. ಅದು ಅಷ್ಟಾಗಿ ಸದ್ದು ಮಾಡಲಿಲ್ಲ. ಬಳಿಕ ಮಾಜಿ ಪ್ರಧಾನಿ ದಿವಂಗತ ವಾಜಪೇಯಿ ಕಥೆಯನ್ನು ತೆರೆಗೆ ತಂದರು. ಅದು ಗೆಲ್ಲಲಿಲ್ಲ.
'ಸ್ವಾತಂತ್ರ್ಯ ವೀರ ಸಾವರ್ಕರ್' ಬಯೋಪಿಕ್ ಸಿನಿಮಾ ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಟಿಪ್ಪು ಸುಲ್ತಾನ್ ಕಥೆಯನ್ನು ತೆರೆಗೆ ತರುವುದಾಗಿ ಸಂದೀಪ್ ಸಿಂಗ್ ಘೋಷಿಸಿದ್ದರು. ಬಳಿಕ ಬೆದರಿಕೆ ಕರೆಗಳು ಬರುತ್ತಿದೆ, ಹಾಗಾಗಿ ನಾನು ಈ 'ಟಿಪ್ಪು' ಸಿನಿಮಾ ನಿರ್ಮಾಣ ಮಾಡಲ್ಲ ಎಂದು ಹಿಂದೆ ಸರಿದಿದ್ದರು.
ಸದ್ಯ ಶಿವಾಜಿ ಬಯೋಪಿಕ್ ಕೂಡ ಸೆಟ್ಟೇರುವ ಮುನ್ನವೇ ಭಾರೀ ಚರ್ಚೆ ಹುಟ್ಟಾಕ್ಕಿದೆ. ಹಾಗಾಗಿ ನಿಜಕ್ಕೂ ಸಿನಿಮಾ ಸುಸೂತ್ರವಾಗಿ ನಿರ್ಮಾಣವಾಗಿ ತೆರೆಗೆ ಬರುತ್ತಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ನಿರ್ಮಾಪಕರಾಗಿರುವ ಸಂದೀಪ್ ಏಕಾಏಕಿ ಇಷ್ಟು ದೊಡ್ಡ ಸಿನಿಮಾ ನಿರ್ದೇಶನ ಮಾಡಿ ಗೆಲ್ತಾರಾ? ಎನ್ನುವುದು ಕೆಲವರ ಅನುಮಾನ. ರಿಷಬ್ ಶೆಟ್ಟಿ ಈ ಸಿನಿಮಾ ಮಾಡುವುದು ಬೇಡ ಎಂದು ಒಂದಷ್ಟು ಜನ ಹೇಳುತ್ತಿದ್ದಾರೆ. ಈ ಬಗ್ಗೆ ರಿಷಬ್ ಏನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.


Click it and Unblock the Notifications











