ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಬಹುದೊಡ್ಡ ಟ್ವಿಸ್ಟ್, ಫೆ19ರಂದು ಬಾಂಬೆ ಹೈಕೋರ್ಟ್ನಲ್ಲಿ ಮತ್ತೆ ವಿಚಾರಣೆ..!
ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮೆಹತ್ಯೆಯಾ ? ಕೊಲೆಯಾ ? ಎನ್ನುವ ಅನುಮಾನ ಇವತ್ತು ಕೂಡ ಅನೇಕರಲ್ಲಿದೆ. ಬಾರದ ಲೋಕಕ್ಕೆ ಸುಶಾಂತ್ ತೆರಳಿ ಐದು ವರ್ಷವಾದರೂ ಕೂಡ ಇವತ್ತು ಅನೇಕರಲ್ಲಿರುವ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಅದು ಸಹಜ ಕೂಡ. ಯಾಕೆಂದರೆ ಸುಶಾಂತ್ ಸಾಧಾರಣ ವ್ಯಕ್ತಿಯಾಗಿರಲಿಲ್ಲ. ಭೌತಶಾಸ್ತ್ರದಲ್ಲಿ ನ್ಯಾಷನಲ್ ಒಲಿಂಪಿಯಾಡ್ ಗೆದ್ದಿದ್ದವರು ಸುಶಾಂತ್ . ಒಟ್ಟು ಹನ್ನೊಂದು ಕಡೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದು ಎಲ್ಲದರಲ್ಲಿಯೂ ಉತ್ತೀರ್ಣರಾಗಿದ್ದರು. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ಕಾಲರ್ ಶಿಪ್ ಪಡೆದಿದ್ದರು.
ಇನ್ನು ಬಾಲಿವುಡ್ನ ಬೆರಗುಗಣ್ಣಿಂದ ಅನೇಕರು ನೋಡುತ್ತಿದ್ದ ಸಮಯದಲ್ಲಿ.. ಬಿಹಾರದಿಂದ ಬಂದು, ಹಿಂದಿ ಉದ್ಯಮದ ಚಕ್ರವ್ಯೂಹ ಭೇದಿಸಿ ಸ್ಟಾರ್ ಆಗಿದ್ದರು ಸುಶಾಂತ್ ಸಿಂಗ್ ರಜಪೂತ್. ಇಂತಹ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರೆ ನಂಬುವುದಾದರೂ ಹೇಗೆ ? ಹೀಗಾಗಿಯೇ ಅನೇಕರು ಅವತ್ತು ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತ ಮುತ್ತ ಸಮಗ್ರವಾಗದ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ನಿಜವಾದ ಕಾರಣ ಗೊತ್ತಾಗಲೇಬೇಕು ಎಂದು ಧರಣಿಯನ್ನು ಮಾಡಿದ್ದರು.

ಇದರ ನಡುವೆ ಅವತ್ತು ಅಗಲಿದ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನ ಅನೇಕರು ಹೇಳಿದ್ದರು. ಸುಶಾಂತ್ ಸಾವಿನ ಸುತ್ತ ಮಾದಕ ಮಾಯಾಜಾಲವನ್ನು ಹೆಣೆದಿದ್ದರು. ಇಡೀ ಪ್ರಕರಣದಲ್ಲಿ ರಿಹಾ ಚಕ್ರವರ್ತಿಯನ್ನ ಕಂಬಿ ಹಿಂದೆ ಕಳಿಸಿ ಸಂಭ್ರಮವನ್ನೂ ಪಟ್ಟಿದ್ದರು. ಶವ ಮುಂದೆ ಇಟ್ಟುಕೊಂಡು ರಾಜಕೀಯವನ್ನು ಕೂಡ ಅನೇಕರು ಮಾಡಿದ್ದರು. ಇನ್ನೂ ಅವತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ, ಟ್ರೆಂಡ್ ಆದ ಹ್ಯಾಶ್ ಟ್ಯಾಗ್ ಸಂಖ್ಯೆ ಲೆಕ್ಕಕ್ಕೆ ಇಲ್ಲ.
ಇವತ್ತು ಕೂಡ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಹಿಂದಿನ ಅಸಲಿ ಕಾರಣ ನಿಗೂಢವಾಗಿಯೇ ಉಳಿದಿದೆ. ಹೀಗಿರುವಾಗ ಐದು ವರ್ಷದ ನಂತರ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಬಾಂಬೆ ಹೈಕೋರ್ಟ್ ಮರು ಜೀವ ನೀಡಿದೆ. ಫೆಬ್ರವರಿ 19ರಂದು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ವಿಚಾರಣೆಯನ್ನು ಮತ್ತೆ ಶುರುಮಾಡಲಿದೆ.
ಹೌದು, ಅಸಲಿಗೆ ಸುಶಾಂತ್ ಸಿಂಗ್ ರಜಪೂತ್ ಮತ್ತು ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಸಾವಿನ ಪ್ರಕರಣದ ಬಗ್ಗೆ ಆಳವಾಗಿ ತನಿಖೆ ನಡೆಸಬೇಕು ಎಂದು ರಶೀದ್ ಖಾನ್ ಪಠಾಣ್ ಎಂಬ ವ್ಯಕ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಗೆ ಈಗ ಮುಂಬೈ ಹೈ ಕೋರ್ಟ್ ಫೆಬ್ರವರಿ 19ರಂದು ಸಮಯವನ್ನು ನಿಗದಿ ಮಾಡಿದೆ.
ಇನ್ನು ದಿಶಾ ಸಾಲಿಯಾನ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಶಿವಸೇನಾ ಎಂಎಲ್ಎ ಆದಿತ್ಯ ಠಾಕ್ರೆ ಅವರನ್ನು ಬಂಧಿಸಬೇಕು ಮತ್ತು ತನಿಖೆಗೆ ಒಳಪಡಿಸಬೇಕು ಎಂದು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ರಶೀದ್ ಖಾನ್ ಪಠಾಣ್ ಉಲ್ಲೇಖಿಸಿದ್ದು ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಸಿಬಿಐ ಮಾಡಿದ ತನಿಖೆಯ ಸಮಗ್ರ ವರದಿಯನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದು ಕೂಡ ಅರ್ಜಿಯಲ್ಲಿ ನಮೂದಿಸಿದ್ದಾರೆ.

ಇನ್ನು ರಶೀದ್ ಖಾನ್ ಪಠಾಣ್ ಅವರ ಈ ಅರ್ಜಿಯಿಂದ ಪತರುಗುಟ್ಟಿರುವ ಆದಿತ್ಯ ಠಾಕ್ರೆ ಕೂಡ ಮುಂಬೈ ಹೈಕೋರ್ಟ್ಗೆ ತಮ್ಮ ಮನವಿಯನ್ನು ಸಲ್ಲಿಸಿದ್ದಾರೆ. ಯಾವುದೇ ಆದೇಶ ಹೊರಡಿಸುವುದಕ್ಕೂ ಮುನ್ನ ತಮ್ಮ ವಾದವನ್ನು ಕೇಳಬೇಕು ಎಂದು ಮನವಿಯನ್ನು ಮಾಡಿದ್ದಾರೆ. ಸುಶಾಂತ್ ಸೀಂಗ್ ರಜಪೂತ್ ನಿಧನಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆಗಿದ್ದು ಮತ್ತೆ ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿರುವುದು ಸೂಕ್ತವಲ್ಲ ಎಂದು ಕೂಡ ಆದಿತ್ಯ ಠಾಕ್ರೆ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ. ಆದಿತ್ಯ ಠಾಕ್ರೆ ಅವರ ಈ ಅರ್ಜಿ ಸದ್ಯ ಹಲವರಲ್ಲಿ ಅನೇಕ ಅನುಮಾಗಳಿಗೆ ಎಡೆ ಮಾಡಿ ಕೊಟ್ಟಿದೆ. ತಪ್ಪು ಮಾಡದಿದ್ದರೆ ಯಾಕೆ ಪುನಃ ವಿಚಾರಣೆಗೆ ಆದಿತ್ಯ ಠಾಕ್ರೆ ಹೆದರುತ್ತಿದ್ದಾರೆ ಎಂಬ ಪ್ರಶ್ನೆ ಕೂಡ ಈಗ ಉದ್ಭವಿಸಿದೆ. ಈ ಹಿನ್ನೆಲೆ ಫೆಬ್ರವರಿ 19ರಂದು ನಡೆಯಲಿರುವ ವಿಚಾರಣೆ ತೀವೃ ಕುತೂಹಲ ಕೆರಳಿಸಿದೆ.


Click it and Unblock the Notifications











