ಪೊಲೀಸ್ ಮೂಲಗಳ ಆಧರಿಸಿದ ಸುದ್ದಿ ಮಾನಹಾನಿಕರವಲ್ಲ: ಬಾಂಬೆ ಹೈ ಕೋರ್ಟ್
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ಶಿಲ್ಪಾ ಶೆಟ್ಟಿ ಮಾಧ್ಯಮಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿ ಬಾಂಬೆ ಹೈ ಕೋರ್ಟ್ ಮೊರೆ ಹೋಗಿದ್ದರು. ಶುಕ್ರವಾರ (ಜುಲೈ 30) ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ, ''ಪೊಲೀಸ್ ಮೂಲಗಳ ಆಧರಿಸಿದ ವರದಿಗಳನ್ನು ಮಾನಹಾನಿಕರ ಎಂದು ಹೇಳಲಾಗುವುದಿಲ್ಲ'' ಎಂದು ಅಭಿಪ್ರಾಯ ಪಟ್ಟಿದೆ.
''ಸುದ್ದಿ ಸಂಸ್ಥೆಗಳು ವರದಿ ಮಾಡುವ ಪ್ರತಿಯೊಂದು ಸ್ಟೋರಿಯ ಮೂಲಗಳ ಬಗ್ಗೆ ಪರಿಶೀಲನೆ ಮಾಡಬೇಕೆ?'' ಎಂದು ಶಿಲ್ಪಾ ಶೆಟ್ಟಿ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿದೆ.
''ಕೆಲವು ವಿಷಯಗಳು ದುರುದ್ದೇಶಪೂರಿತವಾಗಿದೆ ಎಂದು ನೀವು ಉದಾಹರಣೆಗಳನ್ನು ಕೊಟ್ಟಿದ್ದೀರಿ. ನಾವು ಅದನ್ನು ಪರಿಶೀಲಿಸುತ್ತೇವೆ. ಆದರೆ, ಪೊಲೀಸ್ ಮೂಲಗಳ ಆಧರಿಸಿದ ವರದಿಗಳನ್ನು ದುರುದ್ದೇಶಪೂರಿತ ಮತ್ತು ಮಾನಹಾನಿಕರ ಎಂದು ಹೇಳಲಾಗುವುದಿಲ್ಲ. ನಾವು ಏನು ಮಾಡಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರಿ ಎನ್ನುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಬಹಳ ಗಂಭೀರ ಪರಿಣಾಮಗಳನ್ನು ಬೀರುತ್ತದೆ" ಎಂದು ಶಿಲ್ಪಾ ಶೆಟ್ಟಿ ಪರ ವಕೀಲರಿಗೆ ಕೋರ್ಟ್ ತಿಳಿಸಿದೆ.

"ಶಿಲ್ಪಾ ಶೆಟ್ಟಿಯ ಬಗ್ಗೆ ಯಾರಾದರೂ ಏನಾದರೂ ಹೇಳಿದರೆ ಅದು ದೊಡ್ಡ ವಿಷಯ ಏಕೆ ಆಗುತ್ತದೆ? ಅದರಲ್ಲಿ ದೊಡ್ಡದಾಗುವಂತಹದ್ದು ಏನಿದೆ? ಇದನ್ನು ಮಾನಹಾನಿಕರ ಎಂದು ನಿರ್ಧರಿಸಲು ಸಾಧ್ಯವಿಲ್ಲ" ಎಂದಿದೆ. ''ನೀವು ಸಾರ್ವಜನಿಕ ಜೀವನದಲ್ಲಿದ್ದೀರಾ ಅಂದ್ಮೇಲೆ ಇಂತಹ ಘಟನೆಗಳು ಸಹಜ. ಜನರು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಆಕೆ ಅತ್ತಳು, ಗಂಡನ ಜೊತೆ ಜಗಳವಾಡಿದಳು ಎಂದು ಯಾರಾದರೂ ಬರೆದರೆ ಅದು ಹೇಗೆ ಮಾನಹಾನಿಕರ ಎಂದು ಪರಿಗಣಿಸಲಾಗುತ್ತದೆ'' ಎಂದು ನ್ಯಾಯಾಲಯ ಕೇಳಿದೆ.
ಈ ಕೇಸ್ ಸಂಬಂಧ ವಿಚಾರಣೆಯನ್ನು ಮುಂದೂಡಿದ ನ್ಯಾಯಾಲಯ, ಮಾನಹಾನಿ ಪ್ರಕರಣವನ್ನು ವಾದಿಸಲು ಬಯಸುವುದಾದರೆ ನಿಖರವಾದ ವಿವರಗಳೊಂದಿಗೆ ಬರಲು ವಕೀಲರಿಗೆ ಸೂಚಿಸಿದೆ.
ಶಿಲ್ಪಾ ಶೆಟ್ಟಿ ಸಲ್ಲಿಸಿದ್ದ ಅರ್ಜಿಯಲ್ಲಿ ಏನಿದೆ?
ರಾಜ್ ಕುಂದ್ರಾ ಬಂಧನದ ವಿಚಾರದಲ್ಲಿ ಸುದ್ದಿ ಸಂಸ್ಥೆಗಳು, ವೆಬ್ಸೈಟ್ಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ರಾಜ್ ಕುಂದ್ರಾ ಮತ್ತು ತನ್ನ ವಿರುದ್ಧ ಪ್ರಕಟಿಸಿರುವ ವಿಷಯಗಳು ಮಾನಹಾನಿಕರವಾಗಿದೆ, ಹಾಗಾಗಿ, ಸೂಕ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ವೈಯಕ್ತಿಕವಾಗಿ ನನ್ನ ಬಗ್ಗೆ ಮತ್ತು ನನ್ನ ಪತಿ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿರುವುದು ಹಾಗೂ ತೇಜೋವಧೆ ಆಗುವಂತಹ ವರದಿಗಳನ್ನು ಪ್ರಕಟಿಸಲಾಗುತ್ತಿದೆ ಎಂದು ನಟಿ ದೂರಿದ್ದರು.

ಜುಲೈ 19 ರಂದು ರಾಜ್ ಕುಂದ್ರಾ ಬಂಧನ
ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್ನಲ್ಲಿ ಉದ್ಯಮಿ, ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾರನ್ನು ಮುಂಬೈ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದರು. ನಂತರ ಜುಲೈ 27ರವರೆಗೂ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಾಗಿತ್ತು. ನಂತರ ರಾಜ್ ಕುಂದ್ರಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಶೆರ್ಲಿನ್ ಚೋಪ್ರಾಗೆ ಬಂಧನದ ಭೀತಿ
ರಾಜ್ ಕುಂದ್ರಾ ಕೇಸ್ನಲ್ಲಿ ನಟಿ ಶೆರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಹೆಸರು ತಳುಕು ಹಾಕಿಕೊಂಡಿದೆ. ಈಗಾಗಲೇ ಮುಂಬೈ ಪೊಲೀಸರು ಶೆರ್ಲಿನ್ ಚೋಪ್ರಾಗೆ ಹೇಳಿಕೆ ನೀಡುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಸಮನ್ಸ್ ಬರುತ್ತಿದ್ದಂತೆ ನಿರೀಕ್ಷಣಾ ಜಾಮೀನು ಕೋರಿ ಶೆರ್ಲಿನ್ ಅರ್ಜಿ ಸಲ್ಲಿಸಿದ್ದರು. ಆದರೆ, ಮುಂಬೈ ಸೆಷನ್ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ.

ಬಲವಂತವಾಗಿ ಕಿಸ್ ಮಾಡಲು ಯತ್ನಿಸಿದ್ದರು
ಮಾರ್ಚ್ ತಿಂಗಳಲ್ಲಿ ನಟಿ ಶೆರ್ಲಿನ್ ಚೋಪ್ರಾ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ನೀಡಿದ್ದಾರೆ. ಈ ದೂರಿನಲ್ಲಿ 'ಬಲವಂತವಾಗಿ ನನ್ನನ್ನು ಕಿಸ್ ಮಾಡಲು ಯತ್ನಿಸಿದರು' ಎಂದು ಉಲ್ಲೇಖಿಸಲಾಗಿದೆ. ಮೀಟಿಂಗ್ಗೆ ಕರೆದು ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು ರಾಜ್ ಕುಂದ್ರಾ ಎಂದು ನಟಿ ದೂರು ನೀಡಿದ್ದರು.


Click it and Unblock the Notifications











