Nikhil kumaraswamy: ಬಾಲಿವುಡ್ನಲ್ಲಿ ದಾಖಲೆ ಬರೆದ 'ರೈಡರ್' ನಿಖಿಲ್
ರಾಜಕೀಯರಂಗದಲ್ಲಿ ಹಿನ್ನಡೆ ಅನುಭವಿಸಿದ ನಟ ನಿಖಿಲ್ ಕುಮಾರಸ್ವಾಮಿ ಸದ್ಯ ಸಂಪೂರ್ಣವಾಗಿ ಚಿತ್ರರಂಗದತ್ತ ಗಮನ ಹರಿಸಿದ್ದಾರೆ. ಲೈಕಾ ಸಂಸ್ಥೆಯ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸ್ಯಾಂಡಲ್ವುಡ್ ಯುವರಾಜ ಸಿದ್ಧರಾಗಿದ್ದಾರೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಸಮಾರಂಭ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದಿತ್ತು.
ನಿಖಿಲ್ ಕುಮಾರಸ್ವಾಮಿ ಈವರೆಗೆ 4 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಭರ್ಜರಿ ತರಬೇತಿ ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಖಿಲ್ ಸಿನಿರಸಿಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿದ್ದರು. 'ಜಾಗ್ವಾರ್' ಆಗಿ ಚಿತ್ರರಂಗಕ್ಕೆ ಜಿಗಿದ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಮಗ ನಿಖಿಲ್ ಹೀರೊ ಆಗಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಜಾಗ್ವಾರ್ ಬಳಿಕ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟಿಸಿದರು. ಬಳಿಕ 'ಕುರುಕ್ಷೇತ್ರ' ಚಿತ್ರದಲ್ಲಿ ಅಭಿಮನ್ಯು ಆಗಿ ಅಬ್ಬರಿಸಿದರು.

ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ನಟನೆಯ 4ನೇ ಸಿನಿಮಾ 'ರೈಡರ್'. ವಿಜಯ್ ಕುಮಾರ್ ಕೊಂಡ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮೆಡಿ ಎಂಟರ್ಟೈನರ್ ಸಿನಿಮಾ ಕನ್ನಡ ಮತ್ತು ತೆಲುಗಿನಲ್ಲಿ ಪ್ರೇಕ್ಷಕರ ಮುಂದೆ ಬಂದಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ನಿಖಿಲ್ ಆಕ್ಷನ್ ಎಪಿಸೋಡ್ನಲ್ಲೂ ದರ್ಬಾರ್ ನಡೆಸಿದ್ದರು. ಸೂರ್ಯ ಆಗಿ ನಿಖಿಲ್ ಪಾತ್ರ ಸಿನಿರಸಿಕರಿಗೆ ಇಷ್ಟವಾಗಿತ್ತು.
ಸದ್ಯ 'ರೈಡರ್' ಸಿನಿಮಾ ಬಾಲಿವುಡ್ನಲ್ಲಿ ದಾಖಲೆ ಬರೆದಿದೆ. ಸಿನಿಮಾ ಹಿಂದಿಗೆ ಡಬ್ ಆಗಿ ಯೂಟ್ಯೂಬ್ಗೆ ಅಪ್ಲೋಡ್ ಆಗಿತ್ತು. ದಕ್ಷಿಣದ ಸಿನಿಮಾ ಆಕ್ಷನ್ ಸಿನಿಮಾಗಳು ಹಿಂದಿ ವೀಕ್ಷಕರ ಗಮನ ಸೆಳೆಯುತ್ತಲೇ ಇವೆ. ಹಿಂದಿ ಕಿರುತೆರೆ ವಾಹಿನಿಗಳು ಹಾಗೂ ಯೂಟ್ಯೂಬ್ನಲ್ಲಿ ರಿಲೀಸ್ ಆಗಿ ಸದ್ದು ಮಾಡ್ತಿವೆ. ಕೆಲ ದಿನಗಳ ಹಿಂದೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ 100 ಮಿಲಿಯನ್ ವೀವ್ಸ್ ಸಾಧಿಸಿ ಸದ್ದು ಮಾಡಿತ್ತು. ಇದೀಗ 'ರೈಡರ್' ಸಿನಿಮಾ ಕೂಡ 100 ಮಿಲಿಯನ್ಸ್ ವೀವ್ಸ್ ಗಡಿ ದಾಟಿದೆ.

'ರೈಡರ್' ಚಿತ್ರದ ನಾಯಕ- ಖಳನಾಯಕನ ನಡುವಿನ ಜಿದ್ದಿನ ಕಥೆಯಿಲ್ಲ. ಇಲ್ಲಿ ಸನ್ನಿವೇಶಗಳೇ ವಿಲನ್ ಆಗಿ ಎದುರಾಗುತ್ತವೆ. ಚಿಕ್ಕಂದಿನಲ್ಲಿ ಅನಾಥಾಶ್ರಮದಲ್ಲಿ ಆಪ್ತ ಸ್ನೇಹಿತರಾಗುವ ಕಿಟ್ಟಿ(ಸೂರ್ಯ) ಮತ್ತು ಚಿನ್ನು ದೂರಾಗುತ್ತಾರೆ. ಅವರು ಒಂದಾಗುತ್ತಾರಾ? ಇಲ್ವಾ? ಅನ್ನೋದೇ ಸಿನಿಮಾ ಕತೆ. ಕೊಂಚ ಲ್ಯಾಗ್ ಎನಿಸಿದರೂ ಒಂದು ಹಂತಕ್ಕೆ 'ರೈಡರ್' ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಇದೇ ಸಿನಿಮಾ ಈಗ ಹಿಂದಿ ಸಿನಿರಸಿಕರ ಮನಗೆದ್ದಿದೆ.
ಇನ್ನು ಇತ್ತೀಚೆಗೆ ನಿಖಿಲ್ ರಾಜಕೀಯರಂಗವನ್ನು ಸಂಪೂರ್ಣವಾಗಿ ತೊರೆದು ಚಿತ್ರರಂಗದಲ್ಲೇ ಉಳಿಯುತ್ತಾರೆ ಎನ್ನುವ ಚರ್ಚೆ ನಡೆದಿತ್ತು. ಆದರೆ ಅದಕ್ಕೆ ಸ್ವತಃ ನಿಖಿಲ್ ಸೋಶಿಯಲ್ ಮೀಡಿಯಾದಲ್ಲಿ ಬ್ರೇಕ್ ಹಾಕಿದ್ದರು. ತಂದೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆ ಇಂತಾದೊಂದು ಚರ್ಚೆಗೆ ಕಾರಣವಾಗಿತ್ತು.
ಮುಂದೆ 5 ವರ್ಷಗಳ ಕಾಲ ನಿಖಿಲ್ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ನಿನಗೆ ರಾಜಕೀಯ ಸಹವಾಸ ಬೇಡ. ಭಗವಂತ ಕೊಟ್ಟಿರುವ ಕಲೆಯಿದೆ, ಸಿನಿಮಾ ಮಾಡು ಎಂದು ಸಲಹೆ ಕೊಟ್ಟಿರುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಅದರ ಬೆನ್ನಲ್ಲೇ ನಿಖಿಲ್ ರಾಜಕೀಯ ನಡೆ ಬಗ್ಗೆ ಚರ್ಚೆ ಶುರುವಾಗಿತ್ತು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅದಕ್ಕೆ ನಿಖಿಲ್ ಸ್ಪಷ್ಟನೆ ನೀಡಿದ್ದರು.
"ಆರೂವರೆ ಕೋಟಿ ಕನ್ನಡಿಗರು, ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ."
"ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ." ಎಂದಿದ್ದರು.


Click it and Unblock the Notifications











