'ರಾಮಾಯಣ' ಚಿತ್ರಕ್ಕೆ ಸಿಕ್ಕಬಿಟ್ಟ ಕುಂಭಕರ್ಣ; ರಾವಣ ಯಶ್ ಸಹೋದರನಾಗಿ ನಟಿಸೋದು ಇವ್ರೇ
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸರಣಿ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಮಾಯಣ ಕಾವ್ಯದಲ್ಲಿ ಪ್ರತಿ ಪಾತ್ರಕ್ಕೂ ಬಹಳ ಮಹತ್ವ ಇದೆ. ಪ್ರಧಾನ ಪಾತ್ರಗಳೆಲ್ಲಾ ಜನರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಅದರಲ್ಲೂ ರಾವಣನ ಸಹೋದರ ಕುಂಭಕರ್ಣನ ಬಗ್ಗೆ ಸಾಕಷ್ಟು ಕುತೂಹಲವಿದೆ. ಈ ಪಾತ್ರವನ್ನು ಚಿತ್ರದಲ್ಲಿ ಯಾರು ನಿಭಾಯಿಸುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ಕುಂಭಕರ್ಣ ವರ್ಷದಲ್ಲಿ 6 ತಿಂಗಳುಗಳ ಕಾಲ ನಿದ್ರಿಸುವ ವರ ಪಡೆದಿದ್ದ. ಅಣ್ಣ ರಾವಣನಂತೆ ವಿದ್ವಾಂಸನು, ಜ್ಞಾನಿಯೂ ಆಗಿದ್ದ ರಾಕ್ಷಸ ಕುಂಭಕರ್ಣ ಗಾತ್ರದಲ್ಲಿ ಮಾಂಸ ಪರ್ವತವೇ ಸರಿ. ದೈತ್ಯಾಕಾರ, ಸೇವಿಸುತ್ತಿದ್ದ ಊಟ ಹಾಗೂ 6 ತಿಂಗಳು ನಿದ್ದೆ ಮಾಡುತ್ತಿದ್ದ ಎನ್ನುವ ಕಾರಣ ಕುಂಭಕರ್ಣ ಬಹಳ ಪ್ರಸಿದ್ಧನಾಗಿದ್ದಾನೆ. ರಾಮಾಯಣ ಚಿತ್ರವನ್ನು ಎರಡು ಭಾಗಗಳಾಗಿ ತೆರೆಗೆ ತರಲಾಗುತ್ತಿದೆ. ಇತ್ತೀಚೆಗೆ ಕುಂಭಕರ್ಣ ಪಾತ್ರ ಪರಿಚಯದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ಎಂದು ವರದಿಯಾಗಿದೆ.

'ರಾಮಾಯಣ' ಚಿತ್ರದಲ್ಲಿ ಚಿತ್ರದಲ್ಲಿ ಕುಂಭಕರ್ಣನಾಗಿ ಫೈಸಲ್ ಮಲಿಕ್ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಬಾಬಿ ಡಿಯೋಲ್ ಈ ಪಾತ್ರ ಮಾಡ್ತಾರೆ ಎಂದು ಹಿಂದೆ ಗುಲ್ಲಾಗಿತ್ತು. ಆದರೆ ಫೈಸಲ್ ಮಲಿಕ್ ಚಿತ್ರದ ಚಿತ್ರೀಕರಣದಲ್ಲಿ ಕೂಡ ಭಾಗಿ ಆಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಮುಂಬೈ ಪ್ರೈಂ ಫೋಕಸ್ ಸ್ಟುಡಿಯೋದಲ್ಲಿ ಯಶ್ ಜೊತೆಗೆ ಫೈಸಲ್ ಮಲಿಕ್ ನಟಿಸಿರುವ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ಎಂದು ವರದಿಯಾಗಿದೆ. ಮೊದಲ ಭಾಗದಲ್ಲಿ ರಾವಣ ಹಾಗೂ ಲಂಕೆಯ ಬಗ್ಗೆ ಹೆಚ್ಚು ಚಿತ್ರಣ ಇರುವುದಿಲ್ಲ. ಹಾಗಾಗಿ ಬರೀ ಪಾತ್ರಗಳ ಪರಿಚಯ ಮಾತ್ರ ಇರುತ್ತದೆ ಎನ್ನುವ ಊಹಾಪೋಹ ಶುರುವಾಗಿದೆ.
ಸಾಕಷ್ಟು ಗ್ರಾಫಿಕ್ಸ್ ಬಳಸಿ ಕುಂಭಕರ್ಣನ ಪಾತ್ರವನ್ನು ತೆರೆಮೇಲೆ ತರಲಾಗುತ್ತಿದೆ. ಅಂದಹಾಗೆ ನಟ ಫೈಸಲ್ ಮಲಿಕ್ ಎತ್ತರ, ದೇಹಾಕೃತಿ ಕುಂಭಕರ್ಣನ ಸೂಕ್ತವಾಗಿರುತ್ತದೆ ಎಂದು ಚಿತ್ರತಂಡ ಗಮನಿಸಿದಂತಿದೆ. ಈಗಾಗಲೇ ರಣ್ಬೀರ್ ಕಪೂರ್ 'ರಾಮಾಯಣ' ಭಾಗ 2ರ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ ಎನ್ನಲಾಗ್ತಿದೆ. ಇಡೀ ಸಿನಿಮಾ ಒಟ್ಟಿಗೆ ಚಿತ್ರೀಕರಣ ಮಾಡಿ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನಗಳು ನಡೀತಿದೆ.

ಮೊದಲ ಭಾಗದಲ್ಲಿ ಸೀತಾಪಹರಣದವರೆಗೆ ಮಾತ್ರ ಕಥೆ ಹೇಳುವ ಸಾಧ್ಯತೆಯಿದೆ. ಹಾಗಾಗಿ ರಾವಣನ ಪಾತ್ರ ಪರಿಚಯ, ಲಂಕೆಯ ಹಿನ್ನೆಲೆ, ಅಲ್ಲಿನ ಪ್ರಮುಖ ಪಾತ್ರಗಳನ್ನು ಮಾತ್ರ ಮೊದಲ ಭಾಗದಲ್ಲಿ ತೋರಿಸಲಾಗುತ್ತಿದೆ. 2ನೇ ಭಾಗದಲ್ಲಿ ಲಂಕೆಗೆ ಸೇತುವೆ ಕಟ್ಟುವುದು, ರಾವಣ ಸಂಹಾರ ಸೇರಿದಂತೆ ಇನ್ನುಳಿದ ಕಥೆ ಕಟ್ಟಿಕೊಡಲಾಗುತ್ತಿದೆ.
ಉತ್ತರಪ್ರದೇಶದ ಅಲಹಾಬಾದ್ ಮೂಲದ ನಟ ಫೈಸಲ್ ಮಲಿಕ್ ಕೆಲ ಬಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ನಲ್ಲಿ ನಟಿಸಿದ್ದಾರೆ. ಒಂದು ಮಲಯಾಳಂ ಚಿತ್ರದಲ್ಲೂ ಬಣ್ಣ ಹಚ್ಚಿದ್ದರು. ರಾಮಾಯಣದಲ್ಲಿ ಪ್ರತಿ ಪಾತ್ರವೂ ಬಹಳ ವಿಶೇಷ. ಹಾಗಾಗಿ ಅಳೆದು ತೂಗಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 'ದಂಗಲ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ನಿತೇಶ್ ತಿವಾರಿ ತಮ್ಮದೇ ಕಲ್ಪನೆಯಲ್ಲಿ ಚಿತ್ರವನ್ನು ಸೆರೆಹಿಡಿಯುತ್ತಿದ್ದಾರೆ.
ಅಂದಾಜು 4000 ಕೋಟಿ ರೂ. ಬಜೆಟ್ನಲ್ಲಿ ರಾಮಾಯಣ ಸರಣಿ ಸಿನಿಮಾಗಳನ್ನು ತೆರೆಗೆ ತರುತ್ತಿರುವುದಾಗಿ ನಿಮಿತ್ ಮಲ್ಹೋತ್ರಾ ಹೇಳಿದ್ದಾರೆ. ಯಶ್ ಕೂಡ ನಿರ್ಮಾಪಕನಾಗಿ ಕೈ ಜೋಡಿಸಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಲಕ್ಷ್ಮಣನಾಗಿ ರವಿ ದುಬೆ, ಮಂಡೋದರಿಯಾಗಿ ಕಾಜಲ್ ಅಗರ್ವಾಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಹಾಗೂ ಕೈಕೇಯಿ ಪಾತ್ರದಲ್ಲಿ ಲಾರಾ ದತ್ತಾ ನಟಿಸಿದ್ದಾರೆ.
ಹಾಲಿವುಡ್ ತಂತ್ರಜ್ಞರು ಕೂಡ ಈ ಪೌರಾಣಿಕ ಕಥಾಹಂದರದ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಐಮ್ಯಾಕ್ಸ್ ಸ್ಕ್ರೀನ್ಗಳಿಗಾಗಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಈ ವರ್ಷ ದೀಪಾವಳಿ ಸಂಭ್ರಮದಲ್ಲೇ ಮೊದಲ ಭಾಗ ಸಿನಿಮಾ ತೆರೆಗೆ ಬರಬೇಕಿದೆ. ಮುಂದಿನ ವರ್ಷ ದೀಪಾವಳಿಗೆ 2ನೇ ಭಾಗ ಬಿಡುಗಡೆ ಆಗಲಿದೆ.


Click it and Unblock the Notifications











