ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
ಬಾಲಿವುಡ್ನಲ್ಲಿ 'ರಾಮಾಯಣ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದಲ್ಲಿ ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಪಕರಾಗಿಯೂ ಕೈ ಜೋಡಿಸಿದ್ದಾರೆ. ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಆದರೆ ತೆರೆಮರೆಯಲ್ಲಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಕೂಡ ಶುರುವಾಗಿದೆ.
ಸದ್ಯ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಬಗ್ಗೆ ಬಾಲಿವುಡ್ ನಟ ಆದಿತ್ಯಾ ದೇಶ್ಮುಖ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಚಿತ್ರದಲ್ಲಿ ಆದಿತ್ಯಾ ಕೂಡ ನಟಿಸಬೇಕಿತ್ತು. ಆದರೆ ಡೇಟ್ಸ್ ಇಲ್ಲದ ಕಾರಣ ಚಿತ್ರದಲ್ಲಿ ನಟಿಸೋಕೆ ಸಾಧ್ಯವಾಗಿಲ್ಲ. ಈ ಬಗ್ಗೆ Times now ಸಂದರ್ಶನದಲ್ಲಿ ಆದಿತ್ಯಾ ಮಾತನಾಡಿದ್ದಾರೆ.

ರಾಮಾಯಣ ಚಿತ್ರದಲ್ಲಿ ಯವ್ವನದ ದಶರಥ ರಾಜನ ಪಾತ್ರದಲ್ಲಿ ಆದಿತ್ಯಾ ದೇಶ್ಮುಖ್ ನಟಿಸಬೇಕಿತ್ತು. ಆಡಿಷನ್ ಕೂಡ ಕೊಟ್ಟು ಆಯ್ಕೆ ಆಗಿದ್ದರು. ಆದರೆ 'ಸುಹಾಗನ್' ಹಿಂದಿ ಕಿರುತೆರೆ ಧಾರಾವಾಹಿಯಲ್ಲಿ ಬ್ಯುಸಿ ಇದ್ದ ಕಾರಣ 'ರಾಮಾಯಣ' ಚಿತ್ರದಲ್ಲಿ ನಟಿಸೋಕೆ ಡೇಟ್ಸ್ ಇಲ್ಲ ಎಂದು ಹೇಳಿದ್ದಾರೆ ವಿವರಿಸಿದ್ದಾರೆ. ಸದ್ಯ ಆ ಧಾರಾವಾಹಿಯಿಂದಲೂ ಆದಿತ್ಯಾ ಹೊರ ಬಂದಿದ್ದಾರೆ.
ಮುಕೇಶ್ ಛಬ್ರಾ ಮತ್ತವರ ತಂಡ ಚಿತ್ರದ ಪಾತ್ರಗಳಿಗಾಗಿ ಆಡಿಷನ್ ಮಾಡುತ್ತಿದೆ. ನನ್ನ ನಟನೆ ನೋಡಿ ದರರಥ ಮಹಾರಾಜನ ಯಂಗರ್ ವರ್ಷನ್ಗೆ ಆಯ್ಕೆ ಮಾಡಿದ್ದರು. ನಾನು ಆಗ ಸಾಧ್ಯವಿಲ್ಲ ಎಂದಿದ್ದೆ. 'ಸುಹಾಗನ್' ಧಾರಾವಾಹಿಯಿಂದ ಹೊರ ಬಂದ ಬಳಿಕ ನಾನು ಕರೆ ಮಾಡಿ ಕೇಳಿದಾಗ ಅವರು ನಕ್ಕರು. ಮುಂದೆ ಯಾವುದಾದರೂ ಸಿನಿಮಾದಲ್ಲಿ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾಗಿ ಆದಿತ್ಯಾ ತಿಳಿಸಿದ್ದಾರೆ.

ಮಾತು ಮುಂದುವರೆಸಿರುವ ಆದಿತ್ಯಾ ದೇಶ್ಮುಖ್ 'ರಾಮಾಯಣ' ಚಿತ್ರವನ್ನು ರಾವಣನ ದೃಷ್ಟಿಕೋನದಲ್ಲಿ ಕಟ್ಟಿಕೊಡಲಾಗುತ್ತಿದೆ ಎನ್ನುವ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ರಣ್ಬೀರ್ ಕಪೂರ್ ಕೂಡ ನನ್ನ ಆಡಿಷನ್ ನೋಡಿ ಮೆಚ್ಚಿಕೊಂಡರು. ಯಶ್ ಚಿತ್ರದಲ್ಲಿ ರಾವಣ ಪಾತ್ರ ಮಾಡುತ್ತಿದ್ದಾರೆ. ಅರುಣ್ ಗೋವಿಲ್ ಸರ್ ದಶರಥ ಮಹಾರಾಜನ ಪಾತ್ರ ಮಾಡುತ್ತಿದ್ದಾರೆ. ನಾನು ನಟಿಸಲ್ಲ ಎಂದು ಹೇಳಿದ್ದರ ಬಗ್ಗೆ ನನಗೆ ಬೇಸರವಿದೆ ಎಂದಿದ್ದಾರೆ.
ರಾವಣನ ದೃಷ್ಟಿಕೋನದಲ್ಲಿ 'ರಾಮಯಣ' ಎಂದರೆ ಒಂದರ್ಥದಲ್ಲಿ ರಾವಣನೇ ಕಥೆಯ ಹೀರೊ. ರಾವಣನ ದೃಷ್ಟಿಕೋನದಲ್ಲಿ ಕೆಲ 'ರಾಮಾಯಣ' ಬಗ್ಗೆ ಕೆಲ ಜನಪದ ಕಥೆಗಳು ಇದೆ. ರಾವಣನನ್ನೇ ವೈಭವಿಕರಿಸಿ ಒಂದಷ್ಟು ಕೃತಿಗಳು, ನಾಟಕಗಳು ರಚನೆ ಆಗಿದೆ. ಇದೇ ರೀತಿ ನಿತೇಶ್ ತಿವಾರಿ ಈಗ 'ರಾಮಾಯಣ' ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಹೊಸ ಚರ್ಚೆ ಶುರುವಾಗಿದೆ. ಅಂದರೆ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಬಹಳ ಮಹತ್ವವಿದೆ ಎನ್ನುವಂತಾಯಿತು.
3 ಭಾಗಗಳಾಗಿ 'ರಾಮಾಯಣ' ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ಹೇಳಲಾಗುತ್ತಿದೆ. ಮೊದಲ ಭಾಗದಲ್ಲಿ ಸೀತಾ ಅಪಹರಣದವರೆಗೆ ಕಥೆ ಹೇಳುವ ಸಾಧ್ಯತೆಯಿದೆ. ರಾಮ, ಲಕ್ಷ್ಮಣರ ಬಾಲ್ಯದ ಗುರುಕುಲದ ಸನ್ನಿವೇಶಗಳ ಚಿತ್ರೀಕರಣ ಆರಂಭವಾಗಿದೆ. 2ನೇ ಭಾಗದಲ್ಲಿ ರಾವಣನ ಬಗ್ಗೆ ಹೆಚ್ಚಿನ ವಿಚಾರಗಳನ್ನು ಹೇಳುವ ಸಾಧ್ಯತೆಯಿದೆ. ರಣ್ಬೀರ್ ಕಪೂರ್ ಈಗಾಗಲೇ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ.
ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ತಮ್ಮ ಮಾನ್ಸ್ಟರ್ ಮೈಂಡ್ಸ್ ಬ್ಯಾನರ್ನಲ್ಲಿ 'ರಾಮಾಯಣ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಯಶ್ ರಾವಣನಾಗಿ ನಟಿಸೋದು ನಿಜವೇ ಎನ್ನುವ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಸದ್ದಿಲ್ಲದೇ ಯಶ್ ಸೇರಿ ಹಲವರ ಲುಕ್ ಟೆಸ್ಟ್ ಕೂಡ ನಡೆದಿದೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ.


Click it and Unblock the Notifications











