'ಸೆರಗು' ಸರಿಸಿದ ತಪ್ಪಿಗೆ ಕ್ಷಮೆ ಕೋರಿದ ನೋರಾ ; ಮಹತ್ತರ ಜವಾಬ್ದಾರಿ ಹೊತ್ತ ನಟಿ
ಅಶ್ಲೀಲತೆ ಮತ್ತು ಗ್ಲ್ಯಾಮರ್ ನಡುವೆ ತುಂಬಾನೇ ತೆಳುವಾದ ಗೆರೆ ಇದೆ. ಅಭಿವ್ಯಕ್ತಿ ಹೆಸರಿನಲ್ಲಿ ಈ ಗೆರೆ ಕ್ರಾಸ್ ಮಾಡಿದಾಗ ವಿವಾದ ಭುಗಿಲೇಳುತ್ತೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತೆ. ಇದಕ್ಕೆ ಇತ್ತೀಚೆನ ಉದಾಹರಣೆಯೇ ''ಕೆಡಿ'' ಚಿತ್ರದ ''ಸರ್ಸೆ ನಿನ್ನ ಸೆರಗ'' ಹಾಡು. ಈ ಹಾಡಿನ ಸಾಹಿತ್ಯ ಕೇಳಿ ಕೇವಲ ಕರುನಾಡು ಮಾತ್ರವಲ್ಲ ಇಡೀ ದೇಶವೇ ನಿಗಿ ನಿಗಿ ಕೆಂಡ ಕಾರಿತ್ತು.
''ಕೆಡಿ'' ಪ್ಯಾನ್ ಇಂಡಿಯಾ ಬಿಡುಗಡೆ ಆಗದಿದ್ದರೂ ಕನ್ನಡ ಚಿತ್ರರಂಗ ಭಾರತದೆಲ್ಲೆಡೆ ಮಿರ ಮಿರ ಮಿಂಚಿತ್ತು. ಆಕ್ರೋಶದ ಅಲೆಗೆ ಹಾಡನ್ನ ಯೂಟ್ಯೂಬ್ದಿಂದಲೇ ಕಿತ್ತೆಸೆಯಲಾಗಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ಹಾಡಿನ ಸಾಹಿತ್ಯಕ್ಕೆ ಕೆರಳಿತ್ತು. ರಾಷ್ಟ್ರೀಯ ಮಹಿಳಾ ಆಯೋಗ ಕೂಡ ದೂರು ದಾಖಲಿಸಿಕೊಂಡಿತ್ತು.

ಈ ವಿವಾದದ ತೀವೃತೆ ಎಷ್ಟಿತ್ತು ಅಂದರೆ ನೋರಾ ಫತೇಹಿ ಮತ್ತು ಹಾಡನ್ನು ಹಿಂದಿಯಲ್ಲಿ ಬರೆದಿದ್ದ ರಕೀಬ್ ಆಲಂ ಅವಕಾಶ ನೀಡಿದ ಪ್ರೇಮ್ ವಿರುದ್ಧವೇ ತಿರುಗಿ ಬಿದ್ದಿದ್ದರು. ನೋರಾ ಫತೇಹಿ ಅವರಂತೂ ನನಗೆ ಕನ್ನಡ ಗೊತ್ತಿರದ ಕಾರಣ, ಅವರು ನನಗೆ ಹೇಳಿದ್ದನ್ನೇ ನಾನು ಸಂಪೂರ್ಣವಾಗಿ ನಂಬಿದ್ದೆ ಎಂದಿದ್ದರು. ಹಿಂದಿ ಹಾಡು ಹೊರ ಬರುವವರೆಗೆ ನನಗೆ ಆಕ್ಷೇಪಾರ್ಹ ಸಾಹಿತ್ಯದ ಬಗ್ಗೆ ಅರಿವೇ ಇರಲಿಲ್ಲ ಎಂದಿದ್ದರು.
ಹೀಗೆ ವಿವಾದದಿಂದ ಸದ್ದು ಸುದ್ದಿ ಮಾಡಿದ ನಂತರ ಪ್ರೇಮ್ ಅವರನ್ನೊಳಗೊಂಡಂತೆ ಒಬ್ಬೊಬ್ಬರಾಗಿಯೇ ಬಂದು ಕ್ಷಮೆ ಕೇಳಿ ಈ ವಿವಾದದಿಂದ ಕೈ ತೊಳೆದುಕೊಂಡರು. ಈಗ ನೋರಾ ಫತೇಹಿ ಸರದಿ.
ಹೌದು, ಕೆಡಿಯಲ್ಲಿ ಕುಣಿದ ತಪ್ಪಿಗೆ ಇಂದು (ಮೇ 7 ) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ನೋರಾ ಫತೇಹಿ ಕ್ಷಮೆ ಕೇಳಿದ್ದಾರೆ. ಯಾರ ಮನಸನ್ನು ಕೂಡ ನೋಯಿಸುವ ಉದ್ದೇಶ ನನಗೆ ಇರಲಿಲ್ಲ ಎಂದು ಹೇಳಿರುವ ನೋರಾ ನಾನು ಪರಿಸ್ಥಿತಿಯ ಕೈಗೊಂಬೆಯಾದೆ ಎಂದು ಹೇಳಿದ್ದಾರೆ. ಅನಿವಾರ್ಯವಾಗಿ ಅಂತಹ ಸಂದರ್ಭ ಎದುರಾಯ್ತು ಎಂದಿದ್ದಾರೆ.
ಕಲಾವಿದೆಯಾಗಿ ನಾನು ಜವಾಬ್ದಾರಿಯುತವಾಗಿ ಇರಬೇಕು ಎಂದು ಹೇಳಿರುವ ನೋರಾ ಲಿಖಿತ ರೂಪದಲ್ಲಿ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದ್ಧಾರೆ. ಇದೇ ಸಮಯದಲ್ಲಿ ನೋರಾ ಪ್ರಾಯಶ್ಚಿತವಾಗಿ ತಾವೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿರುವುದಾಗಿ ಕೂಡ ಹೇಳಿದ್ದಾರೆ.

ಈ ಕುರಿತು ಮಾಧ್ಯಮದವರ ಎದುರು ಮಾತನಾಡಿರುವ ನೋರಾ ಫತೇಹಿ ಸಮಾಜಕ್ಕೆ ನಾವು ಏನನ್ನಾದರೂ ಮರಳಿ ನೀಡಬೇಕು, ಅದು ಮುಖ್ಯ. ಹೀಗಾಗಿ ನಾನು ಕೆಲವು ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಅಂದ್ಹಾಗೇ ಈ ಹಿಂದೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ತಮ್ಮ ಕಾನೂನು ತಂಡದೊಂದಿಗೆ ಹಾಜರಾಗಿದ್ದ ಸಂಜಯ್ ದತ್ ಕೂಡ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಬುಡಕಟ್ಟು ಸಮುದಾಯಗಳ 50 ವಿದ್ಯಾರ್ಥಿನಿಯರ ವಿದ್ಯಾಭ್ಯಾಸದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಹೇಳಿದ್ದರು. ಸ್ವಯಂ ಪ್ರೇರಣೆಯಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು. ಈಗ ನೋರಾ ಫತೇಹಿ ಕೂಡ ಸಂಜಯ್ ದತ್ ಅವರನ್ನು ಅನುಸರಿಸಿದ್ದಾರೆ. ಅನಾಥ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದಾಗಿ ಹೇಳಿದ್ದಾರೆ.
ಇನ್ನುಳಿದಂತೆ ''ಸರ್ಸೆ ನಿನ್ನ ಸೆರಗ'' ಹಾಡಿಗಾಗಿಯೇ ಪ್ರೇಮ್, ನಾಲ್ಕು ಕೋಟಿ ಖರ್ಚು ಮಾಡಿಸಿದ್ದರು ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಹೊಸದಾಗಿ ಸಾಹಿತ್ಯ ಬರೆದು ಹಾಡು ಬಿಡುಗಡೆ ಮಾಡುವುದಾಗಿ ಪ್ರೇಮ್ ಹೇಳಿದ್ದರಾದರೂ ಆ ಯೋಜನೆ ಕೈಗೂಡಲಿಲ್ಲ. ಚಿತ್ರದಲ್ಲಿಯೂ ಕೂಡ ''ಸರ್ಸೆ'' ಹಾಡು ಇಲ್ಲ. ಸದ್ಯ ''ಕೆಡಿ'' ಕರ್ನಾಟಕದ ಬಾಕ್ಸಾಫೀಸ್ನಲ್ಲಿ ಒಂದು ವಾರ ಯಶಸ್ವಿಯಾಗಿ ಪೂರೈಸಿದೆ. ಎರಡನೇ ವಾರಕ್ಕೆ ಕಾಲಿಟ್ಟಿದೆ.


Click it and Unblock the Notifications