ಕೇವಲ ಮಾತುಗಳಿಂದಲ್ಲ ; ಬಾಲಿವುಡ್ನವರು ನನ್ನನ್ನು ಭಯಾನಕವಾಗಿ ನಡೆಸಿಕೊಂಡರು-ಸೂರ್ಯಕಾಂತಿ ರೆಜಿನಾ ಹೇಳಿದ ಕಹಿ ಸತ್ಯ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಚಿತ್ರರಂಗ ಅಂದರೆ ಕೇವಲ ಬಾಲಿವುಡ್ ಮಾತ್ರ ಎಂಬಂತೆ ಬಿಂಬಿಸಲಾಗುತ್ತಿತ್ತು. ಅಹಂಕಾರ ಅಕ್ಷರಶಃ ಬಾಲಿವುಡ್ನವರ ನೆತ್ತಿಗೇರಿದ್ದ ಕಾಲ ಅದು. ಆ ಕಾಲದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗವನ್ನು ಅಸಡ್ಡೆಯಿಂದ ನೋಡುತ್ತಿದ್ದ ಹಿಂದಿ ಉದ್ಯಮ ಇಲ್ಲಿಂದ ಯಾರಾದರೂ ಅಲ್ಲಿಗೆ ಹೋದರೆ ಅವರಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡುತ್ತಿರಲಿಲ್ಲ. ಅಡಿಗಡಿಗೂ ಅವಮಾನ ಮಾಡುತ್ತಿತ್ತು. ಹಂಗಿಸುತ್ತಿತ್ತು.
ಕಮಲ್ ಹಾಸನ್ ಅವರಂತಹ ಕಲಾವಿದರನ್ನೇ ಬಾಲಿವುಡ್ ಆ ಕಾಲದಲ್ಲಿ ತುಳಿಯುವ ಪ್ರಯತ್ನ ಮಾಡಿತ್ತು. 'ಏಕ್ ದೂಜೆ ಕೆ ಲಿಯೆ' (1981) ಚಿತ್ರದ ಮೂಲಕ ಕಮಲ್ ಹಿಂದಿ ಚಿತ್ರರಂಗಕ್ಕೆ ಹೋದಾಗ ಸಕಲಕಲಾವಲ್ಲಭನ ಪ್ರತಿಭೆ ಕಂಡು ಬೆರಗಾಗಿದ್ದ ಹಿಂದಿ ಉದ್ಯಮ ಹಿಂದಿ ಉಚ್ಚಾರಣೆ ಸರಿ ಇಲ್ಲ ಎನ್ನುವ ಕೊಂಕು ಮಾತುಗಳನ್ನಾಡಲು ಶುರು ಮಾಡಿತ್ತು.

ಹಿಂದಿ ಪ್ರೇಕ್ಷಕರು ಕಮಲ್ ಹಾಸನ್ ಅವರನ್ನು ಒಪ್ಪಿಕೊಂಡರೆ ತಮಗೆ ತಿನ್ನೋಕೆ ಉಪ್ಪಿನ ಕಾಯಿ ಕೂಡ ಸಿಗಲ್ಲ ಎಂದುಕೊಂಡು ಸಿಗಬೇಕಾದ ದೊಡ್ಡ ಅವಕಾಶಗಳನ್ನು ತಡೆಯುವ ಪ್ರಯತ್ನವನ್ನು ಕೂಡ ಮಾಡಿತ್ತು. ಬಾಲಿವುಡ್ನವರ ಈ ರಾಜಕೀಯ ಮತ್ತು ಕುತಂತ್ರದಿಂದ ಹಲವರು ಹಿಂದಿ ಚಿತ್ರರಂಗಕ್ಕೆ ದೀರ್ಘ ದಂಡ ನಮಸ್ಕಾರ ಹಾಕಿ ಮರಳಿ ಬಂದಿದ್ದು ಇದೆ. ಸದ್ಯ ರೆಜಿನಾ ಕ್ಯಾಸಂಡ್ರ ತಮಗಾದ ಇಂತಹದ್ದೇ ಒಂದು ಅನುಭವ ಹಂಚಿಕೊಂಡಿದ್ದಾರೆ.
ಹೌದು, ರೆಜಿನಾ ಕ್ಯಾಸಂಡ್ರಾ.. ''ಸೂರ್ಯಕಾಂತಿ''ಯ ಸುಂದರಿ. ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ರೆಜಿನಾ ಕನ್ನಡಿಗರ ಹೃದಯವನ್ನು ಗೆದ್ದರು. ಇವರ 'ಮೌನಿ ನಾನು' ಹಾಡು ಇವತ್ತು ಕೂಡ ಫೇಮಸ್.
''ಸೂರ್ಯಕಾಂತಿ'' ಚಿತ್ರದ ನಂತರ ಚಿತ್ರರಂಗದಲ್ಲಿ ರೆಜಿನಾ ಒಂದೊಂದೇ ಮೆಟ್ಟಿಲನ್ನೇರಿದರು. ತೆಲುಗು, ತಮಿಳಿನಲ್ಲಿ ಒಂದಾದ ಮೇಲೊಂದರಂತೆ ಅವಕಾಶಗಳನ್ನು ಪಡೆದರು. ಹಿಂದಿಯಲ್ಲಿ ಕೂಡ ಮಿಂಚಿದರು. ಇದರ ನಡುವೆ ಆಗಾಗ ತಮ್ಮ ಮಾತುಗಳಿಂದ ಸುದ್ದಿಯಾದರು. ಇವರ "ಹುಡುಗರು, ಮ್ಯಾಗಿ ಎರಡೂ ಒಂದೇ.. 2 ನಿಮಿಷದಲ್ಲಿ ಮುಗಿದು ಹೋಗುತ್ತೆ" ಎಂಬ ಹೇಳಿಕೆಯನ್ನು ಇನ್ನು ಅನೇಕರು ಮರೆತಿಲ್ಲ.
ಇಂಥಾ ರೆಜಿನಾ ಸದ್ಯ ತಮ್ಮ ಬಾಲಿವುಡ್ನಲ್ಲಿನ ಪ್ರಯಾಣ ಮತ್ತು ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತು ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೆಜಿನಾ, ಬಾಲಿವುಡ್ನಲ್ಲಿ ನೆಲೆ ಕಂಡುಕೊಳ್ಳಲು ತುಂಬಾ ಸಮಯ ಹಿಡಿಯಿತು ಎಂದು ಹೇಳಿದ್ದಾರೆ. ನಾನು ದಕ್ಷಿಣ ಭಾರತದಿಂದ ಬಂದವಳಾದ ಕಾರಣ, ನನಗೆ ಆರಂಭದಲ್ಲಿ ಇಲ್ಲಿ ಕಷ್ಟಗಳು ಎದುರಾದವು ಎಂದು ಹೇಳಿರುವ ರೆಜಿನಾ,
ತುಂಬಾ ಜನ ನನ್ನನ್ನೂ ಅವಮಾನ ಮಾಡಿದ್ದಾರೆ. ಕೀಳಾಗಿ ನಡೆಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೇವಲ ಮಾತುಗಳಲ್ಲಿ ಮಾತ್ರ ಅಲ್ಲ, ಅವರ ಕೃತಿಯಲ್ಲಿ ಕೂಡ ತಿರಸ್ಕಾರದ ಮನೋಭಾವ ಇತ್ತು ಎಂದು ಹೇಳಿರುವ ರೆಜಿನಾ ಯಾರಾದರೂ ಬಂದು ನನಗೆ ಇಲ್ಲಿ ಕೀಳಾಗಿ ನೋಡಲಾಗುತ್ತಿದೆ ಎಂದು ನನಗೆ ಹೇಳಿದರೆ, ನಾನು ಕೂಡ ಅದನ್ನು ಅನುಭವಿಸಿಯೇ ಬಂದಿದ್ದೇನೆ ಎಂದು ನಾನು ಹೇಳುತ್ತೇನೆ ಎಂದಿದ್ದಾರೆ.
ಮುಮದುವರೆದು ನನ್ನ ಹಿನ್ನೆಲೆ ದಕ್ಷಿಣ ಭಾರತವಾಗಿರಬಹುದು, ಆದರೆ ನನಗೆ ಹಿಂದಿ ಚೆನ್ನಾಗಿ ಓದಲು, ಬರೆಯಲು, ಮಾತನಾಡಲು ಬರುತ್ತೆ ಎಂದು ಹೇಳಿರುವ ರೆಜಿನಾ ಕ್ಯಾಸಂದ್ರ ಇಲ್ಲಿಯವರೆಗೆ ನಾನು ಮಾಡಿದ ನನ್ನ ಎಲ್ಲ ಹಿಂದಿ ಚಿತ್ರಗಳಿಗೆ ನನ್ನ ಪಾತ್ರಕ್ಕೆ ನಾನೇ ಧ್ವನಿ ನೀಡಿದ್ದೇನೆ ಎಂದಿದ್ದಾರೆ. ಆದರೂ ಕೂಡ ಕೆಲವರು ನಮ್ಮನ್ನು ಒಪ್ಪಿಕೊಳ್ಳಲ್ಲ.. ಅಪ್ಪಿಕೊಳ್ಳಲ್ಲ.. ಎಂದು ಬೇಸರ ಹೊರ ಹಾಕಿರುವ ರೆಜಿನಾ ದಕ್ಷಿಣದವರು ಎಂಬ ಕಾರಣಕ್ಕೆ ಇಲ್ಲಿ ಹಲವರು ನಮ್ಮನ್ನು ಹೊರಗಿನವರಂತೆ ಕಾಣುತ್ತಾರೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ಇಲ್ಲಿ ನಾನು ಬಂದಾಗ ನನ್ನಲ್ಲಿ ಅಳುಕಿತ್ತು ಎಂದು ಹೇಳಿರುವ ರೆಜಿನಾ ಈಗ ಅಭ್ಯಾಸ ಆಗಿದೆ, ನಾನು ಎಲ್ಲಿಯೇ ಇದ್ದರೂ ಅದನ್ನು ನಾನು ನನ್ನ ಮನೆಯ ವಾತಾವರಣದಂತೆ ನೋಡುತ್ತೇನೆ, ಸಮಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲವಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ 2010ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ರೆಜಿನಾ 2019ರಲ್ಲಿ ಹಿಂದಿ ಚಿತ್ರರಂಗವನ್ನು ಪ್ರವೇಶಿಸಿದರು. ಅನಿಲ್ ಕಪೂರ್ ಅಭಿನಯದ ಬಹುತಾರಾಗಣದ '' ಏಕ್ ಲಡ್ಕೀ ಕೋ ದೇಖಾ ಥೋ ಐಸಾ ಲಗಾ'' ಇವರ ಮೊದಲ ಹಿಂದಿ ಚಿತ್ರ. ಇದಾದ ನಂತರ 5 ವರ್ಷ ಹಿಂದಿ ಚಿತ್ರರಂಗ ಇವರನ್ನು ಮತ್ತೆ ನೆನಪು ಮಾಡಿಕೊಳ್ಳಲೇ ಇಲ್ಲ. 2025ರಲ್ಲಿ ಅಕ್ಷಯ್ ಕುಮಾರ್ ಅಭಿನಯದ ''ಕೇಸರಿ-ಚಾಪ್ಟರ್ 2'' ಚಿತ್ರದ ಮೂಲಕ ಹಿಂದಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ರೆಜಿನಾ ಇದರ ನಡುವೆ ''ರಾಕೆಟ್ ಬಾಯ್ಸ್''.. ''ಫರ್ಜಿ''.. ವೆಬ್ ಸರಣಿಗಳನ್ನು ಮಾಡಿದ್ದರು. ಸದ್ಯ ಮಧುರ್ ಭಂಡಾರ್ಕರ್ ನಿರ್ದೇಶನದ ''ದಿ ವೈವ್ಸ್'' ಚಿತ್ರದಲ್ಲಿ ರೆಜಿನಾ ಅಭಿನಯಿಸಿದ್ದು ಬಾಲಿವುಡ್ ಕುರಿತು ರೆಜಿನಾ ಆಡಿರುವ ಮಾತುಗಳು ಸದ್ಯ ಚರ್ಚೆಗೀಡಾಗಿವೆ.


Click it and Unblock the Notifications











