ಸನ್ನಿ, ಬಾಬಿ, ಇಶಾ, ಅಹನಾ ; ಇವರು ಯಾರು ಅಲ್ಲ - ಬೇರೆಯವರ ಪಾಲಾಯ್ತು ಕೋಟ್ಯಂತರ ರೂಪಾಯಿಯ ಧರ್ಮೇಂದ್ರ ಪೂರ್ವಜರ ಆಸ್ತಿ
ಹಲವರ ಪಾಲಿಗೆ ಪರಂಪರೆಯಿಂದ ಬಂದ ಪೂರ್ವಜರ ಆಸ್ತಿ ಕೇವಲ ಆಸ್ತಿಯಾಗಿರುವುದಿಲ್ಲ. ಬದಲಿಗೆ ಆ ಆಸ್ತಿಯ ಜೊತೆ ಭಾವನಾತ್ಮಕವಾದ ಸಂಬಂಧ ಬೆಸೆದಿರುತ್ತೆ. ಪೂರ್ವಜರು ಬಿತ್ತಿದ ಮೌಲ್ಯಗಳ ಬೀಜ .. ನೆನಪುಗಳ ಹೆಜ್ಜೆ ಗುರುತು .. ಇರುತ್ತೆ. ಹೀಗಾಗಿ ಹಲವರು ತಮ್ಮ ಪೂರ್ವಜರ ಆಸ್ತಿಯನ್ನು ಕೇವಲ ಇಟ್ಟಿಗೆ.. ಮಣ್ಣಿನ ದೃಷ್ಟಿಯಲ್ಲಿ ಮಾತ್ರ ನೋಡುವುದಿಲ್ಲ. ಹಣದಾಸೆಗೆ ಕೂಡ ಒಳಗಾಗಲ್ಲ. ತಮ್ಮ ಪೂರ್ವಿಕರ ಆಸ್ತಿ ಮಾರಲ್ಲ.
ಬಾಲಿವುಡ್ನ ದಂತಕತೆ ಧರ್ಮೇಂದ್ರ ಅವರಿಗೆ ತಮ್ಮ ಪೂರ್ವಜರ ಆಸ್ತಿಯ ಕುರಿತು ಇಂತಹದ್ದೇ ಒಂದು ಭಾವನೆ ಇತ್ತು. ಅದು ಅವರ ಪಾಲಿಗೆ ಕೇವಲ ಆರ್ಥಿಕ ಸಂಪನ್ಮೂಲ ಆಗಿರಲಿಲ್ಲ. ಬದಲಿಗೆ ಅಸ್ಮಿತೆಯ ಬೇರಾಗಿತ್ತು. ಧಮೇಂದ್ರ ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು.

ಹೀಗಾಗಿ ಧರ್ಮೇಂದ್ರ ಅಗಲಿಕೆಯ ನಂತರ ಧರ್ಮೇಂದ್ರ ಅವರ ಈ ಪೂರ್ವಜರ ಆಸ್ತಿ ಅವರ ಮಕ್ಕಳಾದ ಸನ್ನಿ ಡಿಯೋಲ್ .. ಬಾಬಿ ಡಿಯೋಲ್ .. ಪಾಲಾಗುತ್ತೆ ಎಂದು ಅನೇಕರು ಎಂದುಕೊಂಡಿದ್ದರು. ಹೆಚ್ಚೆಂದರೆ ಹೇಮಾ ಮಾಲಿನಿ ಮಕ್ಕಳಾದ ಇಶಾ ಡಿಯೋಲ್ ಅಥವಾ ಅಹನಾ ಡಿಯೋಲ್ ಅವರ ಹೆಸರಿಗೆ ಧರ್ಮೇಂದ್ರ ತಮ್ಮ ಆಸ್ತಿಯನ್ನು ಬರೆದಿರುತ್ತಾರೆ ಎಂದುಕೊಂಡಿದ್ದರು. ಆದರೆ.. ಅಚ್ಚರಿ ಅಂದರೆ ಧರ್ಮೇಂದ್ರ ತಮ್ಮ ಪೂರ್ವಜರ ಆಸ್ತಿಯನ್ನು ತಮ್ಮ ಮಕ್ಕಳ ಹೆಸರಿಗೆ ಬರೆದಿಲ್ಲ. ಬದಲಿಗೆ ಬೇರೆಯವರ ಹೆಸರಿಗೆ ಬರೆದಿದ್ದಾರೆ.
ಹೌದು, ಲುಧಿಯಾನಾದ ಡಾಂಗೋದಲ್ಲಿ ಧರ್ಮೇಂದ್ರ ಅವರ ಪೂರ್ವಜರ ಮನೆ ಇದೆ. 2.5 ಎಕರೆ ಭೂಮಿ ಇದೆ. 5 ಕೋಟಿಗೂ ಅಧಿಕ ಬೆಲೆ ಬಾಳುವ ಆಸ್ತಿ ಇದು. ಧರ್ಮೇಂದ್ರ ತಮ್ಮ ಬಾಲ್ಯದ ಮೂರು ವರ್ಷಗಳನ್ನು ಕಳೆದಿದ್ದು ಇಲ್ಲಿಯೇ. ಈ ಮನೆಯ ಜೊತೆ ಭಾವನ್ಮಾತಕವಾದ ಸಂಬಂಧ ಧರ್ಮೇಂದ್ರ ಅವರಿಗೆ ಇತ್ತು.
ಆದರೆ..1950ರ ನಂತರ ಬಾಲಿವುಡ್ನಲ್ಲಿ ಸ್ಟಾರ್ ಆಗಬೇಕೆಂಬ ಇರಾದೆಯಿಂದ ಧರ್ಮೇಂದ್ರ ಮುಂಬೈಗೆ ತೆರಳಿದರು. ಅಲ್ಲಿಂದ ಇಲ್ಲಿಯವರೆಗೆ ಈ ಮನೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದು ಧರ್ಮೇಂದ್ರ ಅವರ ಚಿಕ್ಕಪ್ಪ ಮತ್ತು ಅವರ ಮಕ್ಕಳು.
ಈ ಹಿನ್ನೆಲೆ ಬೇರುಗಳನ್ನು ಬಿಡದೆ, ಗ್ರಾಮದಲ್ಲಿಯೇ ಉಳಿದು, ಮನೆಯ ಸೇವೆಯನ್ನು ಮಾಡಿದ ತಮ್ಮ ಕರ್ತವ್ಯ ನಿರ್ವಹಿಸಿದ ತಮ್ಮ ಸೋದರಳಿಯ ಭೂತಾ ಸಿಂಗ್ ಡಿಯೋಲ್ ಹೆಸರಿಗೆ ಧರ್ಮೇಂದ್ರ ತಮ್ಮ ಈ ಆಸ್ತಿಯನ್ನು ವರ್ಗಾಯಿಸಿದ್ದರು. ಭೂತಾ ಸಿಂಗ್ ಡಿಯೋಲ್ ಇವತ್ತು ಕೂಡ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು 08 ವರ್ಷಗಳ ಹಿಂದೆಯೇ ಧರ್ಮೇಂದ್ರ ತಮ್ಮ ವಿಲ್ನಲ್ಲಿ ಈ ವಿಚಾರ ನಮೂದಿಸಿದ್ದರು. ಧರ್ಮೇಂದ್ರ ಅವರ ಅಗಲಿಕೆಯ ನಂತರ ಅವರ ಈ ವಿಲ್ ಕುರಿತು ಈಗ ಚರ್ಚೆ ನಡೆಯುತ್ತಿದೆ.

ಪೂರ್ವಜರ ಆಸ್ತಿಯನ್ನು ಭೂತಾ ಸಿಂಗ್ ಅವರಿಗೆ ಧರ್ಮೇಂದ್ರ ನೀಡಿದ್ದು, ಬೇರೆ ಯಾರದ್ದೋ ಪ್ರಭಾವಕ್ಕೊಳಗಾಗಿಯಲ್ಲ ಅಥವಾ ಬೇರೆ ಯಾವ ಉದ್ದೇಶದಿಂದ ಅಲ್ಲ. ಬದಲಿಗೆ ತಮ್ಮ ಸೋದರಳಿಯನ ಕರ್ತವ್ಯ ಪ್ರಜ್ಞೆ ಮತ್ತು ಆ ಮನೆ ಹಾಗೂ ಭೂಮಿಯ ಮೇಲಿನ ಅವರ ಪ್ರೀತಿಯಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಮಾಧ್ಯಮಗಳಲ್ಲಿ ಸದ್ಯ ವರದಿಯಾಗಿದೆ. ತಮ್ಮ ಮಕ್ಕಳಿಗೆ ತಮ್ಮ ಈ ಪಿತ್ರಾರ್ಜಿತ ಆಸ್ತಿ ನೋಡಿಕೊಳ್ಳುವುದು ಕಷ್ಟವಾಗುತ್ತಿದ್ದ ಹಿನ್ನೆಲೆ ಅಳೆದು ತೂಗಿ ಧರ್ಮೇಂದ್ರ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಧರ್ಮೇಂದ್ರ ಅವರು ಬರೆದಿದ್ದ ಈ ಉಯಿಲಿನ ಕುರಿತು ''ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭೂತಾ ಸಿಂಗ್ ಡಿಯೋಲ್, ಧರ್ಮೇಂದ್ರ ಅಂಕಲ್ ನನ್ನ ತಂದೆ ಮನ್ಜಿತ್ ಸಿಂಗ್ ಅವರ ಸೋದರ ಸಂಬಂಧಿಯಾಗಿದ್ದರು. ಅವರು ಕೊನೆಯದಾಗಿ 2019ರಲ್ಲಿ ನಮ್ಮ ಗ್ರಾಮಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.
2019ರಲ್ಲಿ ಧರ್ಮೇಂದ್ರ ಅಂಕಲ್ ಇಲ್ಲಿಗೆ ಬಂದಾಗ ಅವರ ಮಗ ಸನ್ನಿ ಡಿಯೋಲ್ ಗುರುದಾಸ್ಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು ಎಂದು ಹೇಳಿರುವ ಭೂತಾ ಸಿಂಗ್ ಆಗ ನಾನು ಕೂಡ ಅವರಿಗೆ ಪ್ರಚಾರದ ಕೆಲಸದಲ್ಲಿ ಭಾಗವಹಿಸಿದ್ದೆ, ಗುರುದಾಸ್ಪುರಕ್ಕೆ ಹೋಗಿದ್ದೆ ಎಂದು ಹೇಳಿದ್ದಾರೆ.
2019ರ ಮುನ್ನ 2015 ಅಥವಾ 16ರ ಆಸು ಪಾಸು ಧರ್ಮೇಂದ್ರ ಅಂಕಲ್ ನಮ್ಮ ಗ್ರಾಮಕ್ಕೆ ಬಂದಿದ್ದರು ಎಂದು ಹೇಳಿರುವ ಭೂತಾ ಸಿಂಗ್ ಆಗ ಮೂರು ಮಾರ್ಲಾ ಜಮೀನನ್ನು ನನ್ನ ತಂದೆ ಮನ್ಜಿತ್ ಸಿಂಗ್ ಮತ್ತು ನನ್ನ ಚಿಕ್ಕಪ್ಪ ಶೃಂಗಾರ ಸಿಂಗ ಅವರಿಗೆ ನೀಡಿದ್ದರು ಎಂದು ಹೇಳಿದ್ದಾರೆ. ಅವರು ಮುಂಬೈಗೆ ಹೋದ ನಂತರ ಅನೇಕ ದಶಕಗಳಿಂದ ನಮ್ಮ ಕುಟುಂಬ ಅವರ ಭೂಮಿಯನ್ನು ನೋಡಿಕೊಳ್ಳುತ್ತಾ, ಉಳುಮೆ ಮಾಡುತ್ತಿತ್ತು. ಅವರು ಎಂದಿಗೂ ತಮ್ಮ ಈ ಬೇರುಗಳನ್ನು ಮತ್ತು ನಮ್ಮನ್ನು ಮರೆಯಲಿಲ್ಲ ಎಂದು ಕೂಡ ಭೂತಾ ಸಿಂಗ್ ಇದೇ ಸಮಯದಲ್ಲಿ ಹೇಳಿದ್ದಾರೆ.


Click it and Unblock the Notifications











