ಎರಡು ಭಾಗಗಳಾಗಿ 'ರಾಮಾಯಣ' ಚಿತ್ರ ಘೋಷಣೆ; ಬಿಡುಗಡೆ ದಿನಾಂಕಗಳು ಬಹಿರಂಗ
ಅಂತೂ ಇಂತೂ ಅಧಿಕೃತವಾಗಿ 'ರಾಮಾಯಣ' ಸಿನಿಮಾ ಘೋಷಣೆ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಸಹ ನಿರ್ಮಾಪಕರಾಗಿದ್ದು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತಾಮಾತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಬಿಡುಗಡೆ ದಿನಾಂಕ ಕೂಡ ನಿಗದಿಯಾಗಿದೆ.
ಬಹಳ ದಿನಗಳಿಂದ 'ರಾಮಾಯಣ' ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಶುರುವಾಗಿದೆ ಎನ್ನಲಾಗಿತ್ತು. ಆದರೆ ಅಧಿಕೃತವಾಗಿ ಮಾಹಿತಿ ಸಿಕ್ಕಿರಲಿಲ್ಲ. ಎಲ್ಲಾ ಅಂತೆ ಕಂತೆ ಸುದ್ದಿ ಆಗಿತ್ತು. ಆದರೆ ಇತ್ತೀಚೆಗೆ ನಟ ಯಶ್ ಮಾತನಾಡಿ ಖಚಿತಪಡಿಸಿದ್ದರು. ಇದೀಗ ನಿಮಿತ್ ಮಲ್ಹೋತ್ರಾ ಚಿತ್ರವನ್ನು ಘೋಷಣೆ ಮಾಡಿದ್ದಾರೆ.

'ದಂಗಲ್' ಸಿನಿಮಾ ಖ್ಯಾತಿ ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಪೌರಾಣಿಕ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ಈ ಸುದ್ದಿ ಕೇಳಿ ಸಿನಿರಸಿಕರು ಫಿದಾ ಆಗಿದ್ದಾರೆ. ಮತ್ತೆ ಶ್ರೀರಾಮನ ಚರಿತ್ರೆಯನ್ನು ತೆರೆಮೇಲೆ ನೋಡಲು ಉತ್ಸುಕರಾಗಿದ್ದಾರೆ. ಶೀಘ್ರದಲ್ಲೇ ಪೋಸ್ಟರ್, ಟೀಸರ್ ರಿಲೀಸ್ ಆಗುವ ನಿರೀಕ್ಷೆಯಿದೆ.
ಈಗಾಗಲೇ ರಾಮಾಯಣ ಕಾವ್ಯವನ್ನು ಕಥೆಯಾಗಿ ಕೇಳಿದ್ದೇವೆ. ನಾಟಕಗಳಲ್ಲಿ, ಧಾರಾವಾಹಿ, ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೂ ಮತ್ತೊಮ್ಮೆ ಆ ಕಥೆಯನ್ನು ತೆರೆಗೆ ತರಲಾಗುತ್ತಿದೆ. ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ಕಣ್ಣಿಗೆ ಕಟ್ಟಿದಂತೆ ಕಥೆ ಹೇಳುವ ಪ್ರಯತ್ನ ನಡೀತಿದೆ. ನಟ ಯಶ್ ನಟನೆಯ ಜೊತೆಗೆ ನಿರ್ಮಾಪಕರಾಗಿಯೂ ಕೈ ಜೋಡಿಸಿದ್ದಾರೆ. ತಮ್ಮದೇ ಮಾನ್ಸ್ಟರ್ ಮೈಂಡ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಇದೀಗ ರಾಮಾಯಣ ಚಿತ್ರ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. ಎರಡು ಭಾಗಗಳಾಗಿ ಚಿತ್ರ ತೆರೆಗೆ ಬರ್ತಿದ್ದು ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ. 2ನೇ ಭಾಗ 2027ರ ದೀಪಾವಳಿಗೆ ಬಿಡುಗಡೆ ಆಗುವ ನಿರೀಕ್ಷೆಯಿದೆ. ರಣ್ಬೀರ್ ಕಪೂರ್ ಮಗಳು ರಾಹಾ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಘೋಷಣೆ ಆಗಿದೆ ಎಂದು ಹೇಳಲಾಗುತ್ತಿದೆ.
ರಾಮಾಯಣ ಕಾವ್ಯವನ್ನೇ ಆಧರಿಸಿ ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ತೆರೆಗೆ ಬಂದಿತ್ತು. ಆದರೆ ಬೇಡದ ವಿಚಾರಕ್ಕೆ ಸಿನಿಮಾ ಸುದ್ದಿ ಆಗಿತ್ತು. ರಾಮಾಯಣ ಕಾವ್ಯವನ್ನು ತಪ್ಪಾಗಿ ಚಿತ್ರಿಸಲಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಚಿತ್ರತಂಡದ ವಿರುದ್ಧ ದೂರುಗಳು ದಾಖಲಾಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ತಕ್ಕಮಟ್ಟಿಗೆ ಸಿನಿಮಾ ಸದ್ದು ಮಾಡಿತ್ತು. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮತ್ತೆ ರಾಮಾಯಣ ಚಿತ್ರವನ್ನು ಮಾಡಬೇಕಿದೆ.
ಯಶ್ ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಸಹಜವಾಗಿಯೇ ಸ್ಯಾಂಡಲ್ವುಡ್ನಲ್ಲಿ ಕೂಡ ಕುತೂಹಲ ಮೂಡಿಸಿದೆ. ಯಶ್ ಈ ಹಿಂದೆ 'ಗಜಕೇಸರಿ' ಚಿತ್ರದಲ್ಲಿ ವೀರ ಯೋಧನ ಪಾತ್ರ ಮಾಡಿದ್ದರು. ಇನ್ನುಳಿದಂತೆ ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ ನಟಿಸಿಲ್ಲ. ಅದರಲ್ಲೂ ನೂರಾರು ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ರಾವಣನಾಗಿ ನಟಿಸುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. ಇನ್ನೆರಡು ವರ್ಷಗಳಲ್ಲಿ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ.
ಚಿತ್ರದಲ್ಲಿ ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸುತ್ತಾರೆ ಎನ್ನಲಾಗ್ತಿದೆ. ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್, ದಶರಥ ಮಹಾರಾಜನಾಗಿ ಅರುಣ್ ಗೋವಿಲ್, ಲಕ್ಷ್ಮಣನಾಗಿ ರವಿ ದುಬೆ, ಮಂಥರೆಯಾಗಿ ಶೀಬಾ ಚಡ್ಡಾ, ಕೌಸಲ್ಯೆ ಆಗಿ ಇಂದ್ರಾ ಕೃಷ್ಣನ್, ಕೈಕೇಯಿ ಆಗಿ ಲಾರಾ ದತ್ತಾ ನಟಿಸುತ್ತಾರೆ ಎನ್ನಲಾಗ್ತಿದೆ. ಘಟಾನುಘಟಿ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಲಿದ್ದಾರೆ.


Click it and Unblock the Notifications











