ಜಾನಕಿ ಬೈತಲೆಗೆ ಕುಂಕುಮ.. ಕೈಯಲ್ಲಿ ಬಳೆ: ಅಬ್ಬಾ.. ತಪ್ಪಿಲ್ಲದೇ 'ಆದಿಪುರುಷ್' ಪೋಸ್ಟರ್ ರಿಲೀಸ್ ಮಾಡಿದ ತಂಡ
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಒಳ್ಳೆ ಕಾರಣಕ್ಕೆ ಈ ಸಿನಿಮಾ ಸುದ್ದಿ ಆಗಿದ್ದಕ್ಕಿಂತ ಚಿತ್ರತಂಡದ ಎಡವಟ್ಟುಗಳಿಂದ ಟೀಕೆಗೆ ಗುರಿಯಾಗಿದ್ದೇ ಹೆಚ್ಚು. ಅದ್ಯಾವಮಟ್ಟಿಗೆ ಅಂದ್ರೆ ಕೋರ್ಟ್ನಲ್ಲಿ ದೂರು ದಾಖಲಾಗುವ ಮಟ್ಟಿಗೆ ಈ ಚಿತ್ರದ ಟೀಸರ್, ಪೋಸ್ಟರ್ಗಳು ಕೆಲವರು ಕಂಗಣ್ಣಿಗೆ ಗುರಿಯಾಗಿತ್ತು. ಸೀತಾ ನವಮಿ ವಿಶೇಷವಾಗಿ ಹೊಸ ಮೋಷನ್ ಪೋಸ್ಟರ್ ಬಂದಿದೆ.
ಓಂ ರಾವುತ್ ನಿರ್ದೇಶನದ ತ್ರೀಡಿ ಪೌರಾಣಿಕ ಸಿನಿಮಾ 'ಆದಿಪುರುಷ್' ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ ಸೀತಾಮಾತೆಯಾಗಿ ಕೃತಿ ಸನೂನ್ ಮಿಂಚಿದ್ದಾರೆ. ಲಕ್ಷ್ಮಣನಾಗಿ ಸನ್ನಿ ಸಿಂಗ್, ರಾವಣನಾಗಿ ಸೈಫ್ ಅಲಿಖಾನ್, ಹನುಮಂತನಾಗಿ ದೇವದತ್ತ ಬಣ್ಣ ಹಚ್ಚಿದ್ದಾರೆ. ಅಂದಾಜು 400 ಕೋಟಿ ರೂ.ಗೂ ಅಧಿಕ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಜೂನ್ 16ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹಲವು ಭಾಷೆಗಳಲ್ಲಿ 'ಆದಿಪುರುಷ್' ದರ್ಶನವಾಗಲಿದೆ.

ಈ ಹಿಂದೆ ಬಿಡುಗಡೆಯಾಗಿದ್ದ 'ಆದಿಪುರುಷ್' ಚಿತ್ರದ ಟೀಸರ್ ಹಾಗೂ ಪೋಸ್ಟರ್ಗಳು ಭಾರೀ ಟೀಕೆಗೆ ಒಳಗಾಗಿತ್ತು. ಟೀಸರ್ನಲ್ಲಿ ಹನುಮಂತ ಹಾಗೂ ರಾವಣ್ಣ ಲುಕ್, ವೇಷಭೂಷಣ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತಿದೆ ಎನ್ನುವ ಆರೋಪ ಕೇಳಿಬಂದಿತ್ತು. ಇನ್ನು ಗ್ರಾಫಿಕ್ಸ್ ಬಗ್ಗೆಯೂ ಕೆಲವರು ಚಕಾರ ಎತ್ತಿದ್ದರು. ಇಷ್ಟು ಕೋಟಿ ಸಿನಿಮಾ ಅಂತೀರಾ? ಗ್ರಾಫಿಕ್ಸ್ ನೋಡಿದ್ರೆ ಕಾರ್ಟೂನ್ ಸಿನಿಮಾದಂತಿದೆ ಎಂದಿದ್ದರು. ಇದೇ ಕಾರಣಕ್ಕೆ ಟೀಸರ್ ಸಿಕ್ಕಾಪಟ್ಟೆ ಟ್ರೋಲ್ಗೆ ಗುರಿಯಾಗಿತ್ತು.
ಇತ್ತೀಚೆಗೆ ರಾಮನವಮಿ ವಿಶೇಷವಾಗಿ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಸೀತಾ, ಲಕ್ಷ್ಮಣ, ಹನುಮಂತನ ಸಮೇತರಾಗಿ ಶ್ರೀರಾಮನ ಲುಕ್ ಇರುವ ಪೋಸ್ಟರ್ ಅದು. ಆದರೆ ಆ ಪೋಸ್ಟರ್ನಲ್ಲಿ ಸೀತಾ ದೇವಿಯ ಬೈತಲೆಯಲ್ಲಿ ಸಿಂಧೂರ ಇಲ್ಲ, ಕೈಯಲ್ಲಿ ಬಳೆಗಳಿಲ್ಲ. ಪೌರಾಣಿಕ ಸಿನಿಮಾ ಮಾಡುವಾಗ ಇದನ್ನೆಲ್ಲಾ ನೋಡದಿದ್ದರೆ ಹೇಗೆ ಎಂದು ಕೆಲವರು ಟೀಕಿಸಿದ್ದರು. ಇದೀಗ ಸೀತಾ ನವಮಿ ವಿಶೇಷವಾಗಿ ಮತ್ತೊಂದು ಪೋಸ್ಟರ್ ಬಂದಿದೆ. ಅದಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಸೀತಾ ರಾಮ್ ಎನ್ನುವ ಹಾಡಿನ ಹಿನ್ನೆಲೆಯಲ್ಲಿ ಮೋಷನ್ ಪೋಸ್ಟರ್ ಡಿಸೈನ್ ಮಾಡಿದ್ದಾರೆ.

ಮೊದಲಿಗೆ ಶ್ರೀರಾಮನಾಗಿ ಪ್ರಭಾಸ್ ಬಿಲ್ಲು ಬಾಣ ಹಿಡಿದು ನಿಂತಿರು ಚಿತ್ರ ಕಾಣುತ್ತದೆ. ನಂತರ ನಿಧಾನವಾಗಿ ಸೀತಾಮಾತೆಯ ದರ್ಶನವಾಗುತ್ತದೆ. ಲಂಕೆಯಲ್ಲಿರುವ ಆಕೆ ಶ್ರೀರಾಮನ ಆಗಮನಕ್ಕಾಗಿ ಕಾಯುತ್ತಿರುವಂತಿದೆ. ರಾಮ, ವಾರನ ಸೇನೆಯೊಂದಿಗೆ ಲಂಕೆಗೆ ಈ ಹಾಡಿನ ಹಿನ್ನೆಲೆಯ ಪಯಣ ಬೆಳೆಸಿದಂತೆ ತೋರಿಸಲಾಗಿದೆ. 2 ಪೋಸ್ಟರ್ಗಳನ್ನು ತಂಡ ಹಂಚಿಕೊಂಡಿದೆ. ಅಜಯ್- ಅತುಲ್ ಸಂಗೀತ ಇಂಪಾಗಿದ್ದು ಮ್ಯೂಸಿಕಲಿ ಕೂಡ 'ಆದಿಪುರುಷ್' ಸಿನಿಮಾ ಸದ್ದು ಮಾಡುವ ಸುಳಿವು ಸಿಗುತ್ತಿದೆ.
ಭೂಷಣ್ ಕುಮಾರ್, ಕಿಶನ್ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್, ರಾಜೇಶ್ ನಾಯರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಸಂಕ್ರಾಂತಿಗೆ ಸಿನಿಮಾ ಬರಬೇಕಿತ್ತು. ಆದರೆ ಟೀಸರ್ ಬಗ್ಗೆ ಟೀಕೆ ಎದುರಾದ ಬೆನ್ನಲ್ಲೇ ಸಮಯವಕಾಶ ಕೇಳಿ ಚಿತ್ರತಂಡ ರೀವರ್ಕ್ ಮಾಡ್ತಿದೆ. ತಪ್ಪುಗಳನ್ನು ಸರಿಪಡಿಸಿಕೊಂಡು ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದಂತೆ ಚಿತ್ರವನ್ನು ತಿದ್ದಿ ತೀಡುವ ಕೆಲಸ ನಡೀತಿದೆ.

ಜೂನ್ 16ಕ್ಕೆ 'ಆದಿಪುರುಷ್' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಆದರೆ ಅದಕ್ಕಿಂತ 4 ದಿನ ಮೊದ್ಲೆ ಟ್ರಿಬೈಕಾ ಫಿಲ್ಮ್ ಫೆಸ್ಟಿವಲ್ನಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. ಭಾರತದ ಚಿತ್ರವೊಂದಕ್ಕೆ ಈ ಗೌರವ ಸಿಗುತ್ತಿರುವುದು ವಿಶೇಷ. ಇನ್ನು ಪ್ರಭಾಸ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಬಹಳ ಕಾತರರಾಗಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ತ್ರೀಡಿಯಲ್ಲಿ ರಾಮಾಯಣ ಕಾವ್ಯ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಲಿದೆ.


Click it and Unblock the Notifications











