Oscars 2026: ಆಸ್ಕರ್ ಪ್ರಶಸ್ತಿ ರೇಸ್ನಿಂದ ಹೊರಬಿದ್ದ ಭಾರತದ 'ಹೋಮ್ಬೌಂಡ್'
ಮತ್ತೆ ಆಸ್ಕರ್ ಪ್ರಶಸ್ತಿ ವೇದಿಕೆಯಲ್ಲಿ ಭಾರತಕ್ಕೆ ನಿರಾಸೆಯಾಗಿದೆ. 'ಬೆಸ್ಟ್ ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್' ವಿಭಾಗದ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಭಾರತದ 'ಹೋಮ್ಬೌಂಡ್' ಸಿನಿಮಾ ರೇಸ್ನಿಂದ ಹೊರಬಿದ್ದಿದೆ. 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಅಂತಿಮ ನಾಮನಿರ್ದೇಶನಗಳನ್ನು ಗುರುವಾರ(ಜನವರಿ) 22 ರಂದು ಘೋಷಿಸಲಾಯಿತು. ಆದರೆ 'ಹೋಮ್ಬೌಂಡ್' ಅಂತಿಮ ನಾಮನಿರ್ದೇಶನ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.
ನೀರಜ್ ಘಯ್ವಾನ್ ನಿರ್ದೇಶನದ 'ಹೋಮ್ಬೌಂಡ್' ಸಿನಿಮಾ ಕಳೆದ ವರ್ಷ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಕಂಡಿತ್ತು. ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕರಣ್ ಜೋಹರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. 'ಹೋಮ್ಬೌಂಡ್' 98ನೇ ಆಸ್ಕರ್ ಪ್ರಶಸ್ತಿಗಳಿಗೆ ಭಾರತದ ಅಧಿಕೃತ ಆಯ್ಕೆಯಾಗಿ ಆಯ್ಕೆಯಾಗಿತ್ತು.

ಬೆಸ್ಟ್ ಇಂಟರ್ನ್ಯಾಷನಲ್ ಫೀಚರ್ ಸಿನಿಮಾ ವಿಭಾಗದ ಶಾರ್ಟ್ಲಿಸ್ಟ್ (Top 15) ತಲುಪಿದ್ದರೂ, ಅಂತಿಮ ಐದರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಆಸ್ಕರ್ ರೇಸ್ನಿಂದ 'ಹೋಮ್ಬೌಂಡ್' ಚಿತ್ರ ಹೊರ ಬಿದ್ದಂತೆ ಆಗಿದೆ. ಇದು ಸಿನರಸಿಕರಿಗೆ ನಿರಾಸೆ ತಂದಿದೆ. ಜಾನ್ವಿ ಕಪೂರ್, ಇಶಾನ್ ಖಟ್ಟರ್, ವಿಶಾಲ್ ಜೇಥ್ವಾ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಕಳೆದ ವರ್ಷ ಮೇ 21ರಂದು ಕಾನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನವಾಗಿದ್ದ ಸಿನಿಮಾ ಸೆಪ್ಟೆಂಬರ್ 26ರಂದು ತೆರೆಗೆ ಬಂದಿತ್ತು.
ಭಾರತದಿಂದ ಆಸ್ಕರ್ ಸ್ಪರ್ಧೆಗೆ 'ಹೋಮ್ಬೌಂಡ್' ಚಿತ್ರವನ್ನು ಆಯ್ಕೆ ಮಾಡಿ ಅಧಿಕೃತವಾಗಿ ಕಳುಹಿಸಲಾಗಿತ್ತು. ಸೆಪ್ಟೆಂಬರ್ 19ರಂದು 'ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ' ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿತ್ತು. ಈ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಸಂತಸ ವ್ಯಕ್ತಪಡಿಸಿದ್ದರು. ಆಸ್ಕರ್ ಎನ್ನುವುದು ಭಾರತೀಯ ಫಿಲ್ಮ್ ಮೇಕರ್ಸ್ ಪಾಲಿಗೆ ಇನ್ನು ಮರೀಚಿಕೆಯಾಗಿಯೇ ಉಳಿದಿದೆ.
ಈ ಹಿಂದೆ ಕೂಡ ಕೆಲ ಸಿನಿಮಾಗಳನ್ನು ಭಾರತದಿಂದ ಆಸ್ಕರ್ ಸ್ಪರ್ಧೆಗೆ ಕಳುಹಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. 'RRR' ಚಿತ್ರದ 'ನಾಟು ನಾಟು' ಗೀತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಸಿಕ್ಕಿದ್ದೇ ಈವರೆಗೆ ಅಕಾಡೆಮಿ ಪ್ರಶಸ್ತಿ ವೇದಿಕೆಯಲ್ಲಿ ಭಾರತದ ಅತ್ಯುತ್ತಮ ಸಾಧನೆ ಎನ್ನಬಹುದು.
ಭಾರತದ ಹಳ್ಳಿಯೊಂದರಲ್ಲಿ ಇಬ್ಬರು ಬಡ ಬಾಲ್ಯದ ಗೆಳೆಯರಾದ ಶೋಯೆಬ್ ಮತ್ತು ಚಂದನ್ ಜೀವನದ ಕಥೆ ಹೋಮ್ಬೌಂಡ್' ಚಿತ್ರದಲ್ಲಿದೆ. ಇವರಿಬ್ಬರು ಬಡತನ ಮತ್ತು ಜಾತಿ ತಾರತಮ್ಯದಿಂದ ಪಾರಾಗಲು ಪೊಲೀಸ್ ಇಲಾಖೆಗೆ ಸೇರುವ ಕನಸು ಕಾಣುತ್ತಾರೆ. ಆದರೆ, ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಅವರು ಸಂಕಷ್ಟಕ್ಕೆ ಸಿಲುಕವಂತಾಗುತ್ತದೆ. ಮುಂದೇನು ಎನ್ನುವುದು 'ಹೋಮ್ಬೌಂಡ್' ಸಿನಿಮಾ ಕಥೆ. 2020ರಲ್ಲಿ ಬಶರತ್ ಪೀರ್ ಬರೆದ ನ್ಯೂಯಾರ್ಕ್ ಟೈಮ್ಸ್ ಲೇಖನದಿಂದ ಪ್ರೇರಣೆಗೊಂಡು ಚಿತ್ರದ ಕಥೆ ಸಿದ್ಧಪಡಿಸಲಾಗಿತ್ತು.
ಅಂದಹಾಗೆ ಬೆಸ್ಟ್ ಇಂಟರ್ನ್ಯಾಷನಲ್ ಫೀಚರ್ ಸಿನಿಮಾ ವಿಭಾಗದಲ್ಲಿ 'ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್' (ಫ್ರಾನ್ಸ್), 'ದಿ ಸೀಕ್ರೆಟ್ ಏಜೆಂಟ್' (ಬ್ರೆಜಿಲ್), 'ಸಿರಾತ್' (ಸ್ಪೇನ್), 'ಸೆಂಟಿಮೆಂಟಲ್ ವ್ಯಾಲ್ಯೂ' (ನಾರ್ವೆ) ಹಾಗೂ ದಿ ವಾಯ್ಸ್ ಆಫ್ ಹಿಂದ್ ರಜಬ್ (ಟುನೀಶಿಯಾ) ಸಿನಿಮಾಗಳು ನಾಮಿನೇಟ್ ಆಗಿ ಪ್ರಶಸ್ತಿಗಾಗಿ ಸೆಣೆಸಲಿವೆ.
ಅಂದಹಾಗೆ ಕಳೆದ ವರ್ಷ ಕಳೆದ ವರ್ಷ ಆಮಿರ್ ಖಾನ್ ನಿರ್ಮಾಣದ 'ಲಾಪತಾ ಲೇಡೀಸ್' ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿ ಹೋಗಿತ್ತು. ಕಿರಣ್ ರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೇ ರೀತಿ ಅಂತಿಮ ಸುತ್ತಿಗೆ ಆ ಸಿನಿಮಾ ಆಯ್ಕೆ ಆಗಿರಲಿಲ್ಲ.
ಈ ಬಾರಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕನ್ನಡದ 'ಕಾಂತಾರ: ಅಧ್ಯಾಯ 1' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳು ಆಸ್ಕರ್ ಪ್ರಶಸ್ತಿಗಳ 'ಅತ್ಯುತ್ತಮ ಚಿತ್ರ' (Best Picture) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಲು ಜನರಲ್ ಎಂಟ್ರಿ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದವು.


Click it and Unblock the Notifications











