4 ರಾಜ್ಯಗಳಲ್ಲಿ 'ಪದ್ಮಾವತ್' ನಿಷೇಧ: ಸುಪ್ರೀಂ ಮೊರೆಹೋದ ನಿರ್ಮಾಪಕ
ಬಾಲಿವುಡ್ ನ ವಿವಾದಾತ್ಮಕ ಸಿನಿಮಾ 'ಪದ್ಮಾವತ್' ಚಿತ್ರತಂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ದೇಶದ ಪ್ರಮುಖ ನಾಲ್ಕು ರಾಜ್ಯಗಳಲ್ಲಿ ಚಿತ್ರವನ್ನ ನಿಷೇಧ ಮಾಡಿರುವುದನ್ನ ಪ್ರಶ್ನಿಸಿ 'ಪದ್ಮಾವತ್' ಚಿತ್ರದ ನಿರ್ಮಾಪಕ ಸರ್ವೋಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಜನವರಿ 25ರಂದು ಜಗತ್ತಿನಾದ್ಯಂತ 'ಪದ್ಮಾವತ್' ಸಿನಿಮಾ ಬಿಡುಗಡೆಯಾಗುತ್ತಿದ್ದು, ಗುಜರಾತ್, ಮಧ್ಯಪ್ರದೇಶ, ಹರಿಯಾಣ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಬನ್ಸಾಲಿ ನಿರ್ದೇಶನದ ಚಿತ್ರಕ್ಕೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದು ಗಮನಿಸಬೇಕಾದ ವಿಚಾರ.
ನಾಲ್ಕು ರಾಜ್ಯಗಳ ಈ ನಡೆಯನ್ನ ಪ್ರಶ್ನಿಸಿ ಪದ್ಮಾವತ್ ಚಿತ್ರದ ನಿರ್ಮಾಪಕ ಅಜಿತ್ ಅಂಧರೇ ಅವರು ನ್ಯಾಯಾಲಯದಲ್ಲಿ ಇಂದು ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ನಾಳೆ ಈ ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಈಗಾಗಲೇ ಸೆನ್ಸಾರ್ ಬೋರ್ಡ್ ಸೂಚನೆಯ ಪ್ರಕಾರ, ಚಿತ್ರದ ಟೈಟಲ್ ಬದಲಾವಣೆ ಮಾಡಲಾಗಿದೆ. ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಹೀಗಾಗಿ, ಸೆನ್ಸಾರ್ ಬೋರ್ಡ್ ಯು/ಎ ಸರ್ಟಿಫಿಕೇಟ್ ನೀಡಲು ನಿರ್ಧರಿಸಿ, ಬಿಡುಗಡೆಗೆ ಅನುಮತಿ ನೀಡಿದೆ. ಹೀಗಿದ್ದರೂ, ಸರ್ಕಾರ ನಿಷೇಧ ಮಾಡುತ್ತಿರುವುದು ಸರಿಯಲ್ಲ. ಯಾವುದಾದರೂ ಸಮುದಾಯಗಳ ವಿರೋಧವಿದ್ದಲ್ಲಿ, ಆ ಪ್ರಾಂತ್ಯಗಳಲ್ಲಿ ಮಾತ್ರ ನಿಷೇಧ ಹೇರಬೇಕೆ ಹೊರತು, ಸಂಪೂರ್ಣವಾಗಿ ರಾಜ್ಯದಲ್ಲಿ ರದ್ದು ಮಾಡುವಂತಿಲ್ಲ ಎಂಬ ಪ್ರಮುಖ ಅಂಶಗಳನ್ನ ಚಿತ್ರದ ನಿರ್ಮಾಪಕರ ಅಜಿತ್ ಅಂಧರೆ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ.
ಈ ರಾಜ್ಯಗಳಲ್ಲಿ ಹರತುಪಡಿಸಿದ್ರೆ, ಮತ್ತೆಲ್ಲಾ ಕಡೆ 'ಪದ್ಮಾವತ್' ತೆರೆಕಾಣುತ್ತಿದೆ. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಅಭಿನಯಿಸಿದ್ದಾರೆ.


Click it and Unblock the Notifications











