'ಪದ್ಮಾವತ್' ಬಿಡುಗಡೆಗೆ ಸೆನ್ಸಾರ್ ಒಪ್ಪಿದ್ರು, ಸರ್ಕಾರ ಒಪ್ಪುತ್ತಿಲ್ಲ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತ್' ಸಿನಿಮಾದ ವಿವಾದ ಬಗೆಹರಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಸಂಕಟ ಎದುರಾಗಿದೆ. 'ಪದ್ಮಾವತಿ' ಚಿತ್ರದ ಟೈಟಲ್ ಬದಲಾಯಿಸಿ, 26 ದೃಶ್ಯಗಳಿಗೆ ಕತ್ತರಿ ಹಾಕಿದ್ರೆ, 'ಯು/ಎ' ಸರ್ಟಿಫಿಕೇಟ್ ನೀಡುವುದಾಗಿ ಷರತ್ತು ವಿಧಿಸಿದ್ದ ಸೆನ್ಸಾರ್ ಬೋರ್ಡ್ ಸಿನಿಮಾ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿತ್ತು. ಆದ್ರೀಗ, ರಾಜಾಸ್ತಾನ ಸರ್ಕಾರ ಚಿತ್ರಕ್ಕೆ ವಿಲನ್ ಆಗಿದೆ.
ಹೌದು, 'ಪದ್ಮಾವತಿ'ಯಿಂದ 'ಪದ್ಮಾವತ್' ಆಗಿರುವ ಬನ್ಸಾಲಿ ಸಿನಿಮಾವನ್ನ ರಾಜಾಸ್ತಾನದಲ್ಲಿ ಬಿಡುಗಡೆ ಮಾಡದಿರಲು ರಾಜಾಸ್ತಾನದಲ್ಲಿರುವ ಬಿಜೆಪಿ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ರಾಣಿಪದ್ಮಾವತಿ ಬಗ್ಗೆ ಅಪಮಾನ ಮಾಡಲಾಗಿದೆ. ಇದರಿಂದ ಜನರ ಭಾವನೆಗೆ ಧಕ್ಕೆ ತರಲಿದೆ ಎಂಬ ಕಾರಣ ನೀಡಿ ಚಿತ್ರವನ್ನ ನಿಷೇಧಿಸಲು ಚಿಂತಿಸಿದೆ.
ಮೂಲಗಳ ಪ್ರಕಾರ ಜನವರಿ 25 ರಂದು 'ಪದ್ಮಾವತ್' ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ಶಾಹೀದ್ ಕಪೂರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಪದ್ಮಾವತ್' ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ತಾನದ ಕೆಲ ಸಂಘಟನೆಗಳು ಆರೋಪಿಸಿದ ಕಾರಣ ವಿವಾದ ಸೃಷ್ಟಿಯಾಗಿತ್ತು. ಚಿತ್ರದ ಕತೆಯು ರಜಪೂತ ರಾಣಿ ಪದ್ಮಾವತಿ ಹಾಗೂ ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಸುತ್ತ ಸುತ್ತುತ್ತದೆ. ಈ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ಒತ್ತಾಯಿಸಿ ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ತಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು.


Click it and Unblock the Notifications











