'ಧುರಂಧರ್' ಚಿತ್ರದ ಲಾಭದಲ್ಲಿ ಪಾಲು ಕೇಳಿದ ಪಾಕಿಸ್ತಾನದ ಪ್ರಜೆಗಳು, ವಿಡಿಯೋ ವೈರಲ್
ಆದಿತ್ಯಾಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಸ್ಪೈ ಥ್ರಿಲ್ಲರ್ ಸಿನಿಮಾ ಪಾತ್ರವಾಗುವ ಸುಳಿವು ಸಿಕ್ಕಿದೆ. 'ಕಾಂತಾರ- 1' ದಾಖಲೆ ಕೂಡ ಅಳಿಸಿ ಹಾಕುವ ಸಾಧ್ಯತೆಯಿದೆ. ಇದೆಲ್ಲದರ ನಡುವೆ 'ಧುರಂಧರ್' ಚಿತ್ರದ ಲಾಭದಲ್ಲಿ ಪಾಕಿಸ್ತಾನದ ಪ್ರಜೆಗಳು ಪಾಲು ಕೇಳುತ್ತಿದ್ದಾರೆ.
ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ನಟನೆಯ 'ಧುರಂಧರ್' ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬಂದಿತ್ತು. ಚಿತ್ರದಲ್ಲಿ 1999ರಿಂದ 2009ರವರೆಗಿನ ಪಾಕಿಸ್ತಾನದ ಕರಾಚಿಯ ಲ್ಯಾರಿ ಪಟ್ಟಣ ಚಿತ್ರಣ ಕಟ್ಟಿಕೊಡಲಾಗಿದೆ. ಅಲ್ಲಿನ ಗ್ಯಾಂಗ್ ಹಿಂಸಾಚಾರ, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರಗಳ ವಿಲೇವಾರಿ ರೀತಿಯ ವಿಷಯಗಳನ್ನು ತೋರಿಸಿಲಾಗಿದೆ. ನಮ್ಮ ಊರನ್ನು 'ಧುರಂಧರ್' ಚಿತ್ರದಲ್ಲಿ ತೋರಿಸಿದ್ದಾರೆ. ಹಾಗಾಗಿ ನಮಗೂ ಪಾಲು ಕೊಡಬೇಕು ಎಂದು ಲ್ಯಾರಿ ಪಟ್ಟಣ ನಿವಾಸಿಗಳು ಮಾತನಾಡಿರುವ ವೀಡಿಯೋ ವೈರಲ್ ಆಗ್ತಿದೆ.

ಯೂಟ್ಯೂಬರ್ ಒಬ್ಬರು ಲ್ಯಾರಿ ಪಟ್ಟಣದಲ್ಲಿ 'ಧುರಂಧರ್' ಸಿನಿಮಾ ಸಕ್ಸಸ್ ಬಗ್ಗೆ ಅಲ್ಲಿನ ನಿವಾಸಿಗಳು ಅಭಿಪ್ರಾಯ ಕೇಳಿದ್ದಾರೆ. ಈ ವೇಳೆ ಕೆಲವರು ಮಾತನಾಡಿ ನಮಗೂ ಪಾಲು ಕೊಡಬೇಕು ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗುತ್ತಿದೆ. "ಭಾರತೀಯ ಚಿತ್ರದಲ್ಲಿ ನಮ್ಮ ಪಟ್ಟಣ ತೋರಿಸಿದ್ದಾರೆ, ಹಾಗಾಗಿ ಆರ್ಥಿಕ ಲಾಭ ನಾವು ಯಾಕೆ ಪಡೆಯಬಾರದು" ಎಂದು ವ್ಯಕ್ತಿಯೊಬ್ಬ ಪ್ರಶ್ನಿಸಿರುವುದನ್ನು ನೋಡಬಹುದು.
ಮತ್ತೊಬ್ಬ ಏಕಾಏಕಿ 80% ಲಾಭ ಸಿಗಬೇಕು ಎಂದು ಕೇಳಿದ್ದಾನೆ. "ಅವ್ರು ಹೇಗೋ ಸಿನಿಮಾಗಳನ್ನು ಮಾಡುತ್ತಲೇ ಇರ್ತಾರೆ. ಹಾಗಾಗಿ ಈ ಚಿತ್ರದ ಲಾಭದಲ್ಲಿ 80% ಲಾಭ ನಮಗೆ ಯಾಕೆ ಕೊಡಬಾರದು. ಇದೇನು ದೊಡ್ಡ ತ್ಯಾಗ ಅಲ್ಲ. ಒಂದು ಚಿತ್ರದಿಂದ ಬಂದ ಲಾಭದಲ್ಲಿ ಇಷ್ಟು ಕೇಳಿದರೆ ತಪ್ಪಾಗಬಹುದು" ಎಂದು ಆತ ಹೇಳಿರುವುದನ್ನು ನೋಡಬಹುದು.
ಬರೀ ಲಾಭ ಮಾತ್ರ ಕೇಳಿಲ್ಲ. ಮತ್ತೊಬ್ಬ ಪಾಕ್ ಪ್ರಜೆ ಹಣ ಇಲ್ಲಿ ಹೂಡಿಕೆ ಮಾಡಬಹುದಲ್ಲ ಎಂದು ಐಡಿಯಾ ಕೊಟ್ಟಿದ್ದಾನೆ. "ಲಾಭದಲ್ಲಿ ಹಂಚಿಕೆ ಮಾಡಲು ಸಾಧ್ಯವಾಗದಿದ್ದರೆ ನಿರ್ದೇಶಕ ಆದಿತ್ಯಾಧರ್ ಈ ಪಟ್ಟಣದಲ್ಲಿ ಹೂಡಿಕೆ ಮಾಡಬಹುದು. ಕೊನೆ ಪಕ್ಷ ಲ್ಯಾರಿಯ ಈಗಲ್ ರೌಂಡ್ಅಬೌಟ್ ಆದ ಚೀಲ್ ಚೌಕ್ ಅನ್ನು ದುರಸ್ತಿ ಮಾಡಿಸಬಹುದು ಎಂದಿದ್ದಾರೆ. ಮತ್ತೊಬ್ಬ ವ್ಯಕ್ತಿ 'ಧುರಂಧರ್' ಚಿತ್ರದಲ್ಲಿ ತಮ್ಮ ಪಟ್ಟಣವನ್ನು ಚಿತ್ರಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವುದನ್ನು ನೋಡಬಹುದು.
ಅಂದಹಾಗೆ ಈ ವಿಡಿಯೋದಲ್ಲಿ ಎಲ್ಲರೂ ವ್ಯಂಗ್ಯವಾಗಿ ಮಾತನಾಡಿರುವುದು ಗೊತ್ತಾಗುತ್ತದೆ. "ಧುರಂಧರ್' ಚಿತ್ರದ ಲಾಭದಲ್ಲಿ ಲ್ಯಾರಿ ಪ್ರಜೆಗಳಿಗೆ ನಯಾಪೈಸೆ ಸಿಗಲ್ಲ" ಎಂದು ಮತ್ತೊಬ್ಬ ಹೇಳಿರುವುದನ್ನು ಕೂಡ ಇದೇ ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ ಲ್ಯಾರಿ ಪಟ್ಟಣದ ದೃಶ್ಯಗಳನ್ನು ಬ್ಯಾಂಕಾಕ್ನಲ್ಲಿ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ಮೊದಲಿಗೆ ಮುಂಬೈನಲ್ಲೇ ಸೆಟ್ ಹಾಕಲು ತೀರ್ಮಾನಿಸಿದ್ದರು. ಆದರೆ ಆ ಸಮಯದಲ್ಲಿ ಮಳೆ ಬಂದಿದ್ದರಿಂದ ನಿರ್ಣಯ ಬದಲಿಸಿತ್ತು ಚಿತ್ರತಂಡ. ಬ್ಯಾಂಕಾಕ್ ಹೊರ ವಲಯದಲ್ಲಿ 6 ಎಕರೆ ಜಾಗದಲ್ಲಿ ಸೈನಿ ಎಸ್. ಜೋಹ್ರಿ ನೇತೃತ್ವದಲ್ಲಿ ಲ್ಯಾರಿ ಪಟ್ಟಣದ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿತ್ತು.
ಅಂದಹಾಗೆ ಪಾಕಿಸ್ತಾನದಲ್ಲಿ 'ಧುರಂಧರ್' ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಆದರೂ ಸಾಕಷ್ಟು ಜನ ಪೈರಸಿ ಕಾಪಿ ನೋಡಿ ನೋಡಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಜನ ಪೈರಸಿ ಕಾಪಿ ಡೌನ್ಲೋಡ್ ಮಾಡಿ ನೋಡಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಪಾಕಿಸ್ತಾನದಲ್ಲಿ 'ಧುರಂಧರ್' ಸಿನಿಮಾ ವಿಚಿತ್ರ ದಾಖಲೆ ಬರೆದಿದೆ.


Click it and Unblock the Notifications











