ತೆರೆಮೇಲೆ ಬರ್ತಿದೆ ಸತ್ತು ಮತ್ತೆ ಬದುಕಿದ ವ್ಯಕ್ತಿಯ ಇಂಟರೆಸ್ಟಿಂಗ್ ಜೀವನ ಕಥೆ
ಬಾಲಿವುಡ್ ನಲ್ಲಿ ಸಾಕಷ್ಟು ಬಯೋಪಿಕ್ ಗಳು ರಿಲೀಸ್ ಆಗಿವೆ. ಈಗಲೂ ಸಿದ್ಧವಾಗುತ್ತಿವೆ. ಕ್ರೀಡೆ, ಸಿನಿಮಾ, ಶಿಕ್ಷಣ ಸೇರಿದಂತೆ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರ ಜೀವನ ಚರಿತ್ರೆ ಸಿನಿಮಾವಾಗಿ ತರೆಮೇಲೆ ಬಂದಿದೆ. ಇದೀಗ ಬಾಲಿವುಡ್ ನಲ್ಲಿ ಮತ್ತೊಂದು ಇಂಟರೆಸ್ಟಿಂಗ್ ಜೀವನ ಕಥೆ ತೆರೆಮೇಲೆ ಬರಲು ಸಜ್ಜಾಗಿದೆ.
ಹೌದು, ಸತ್ತು ಮತ್ತೆ ಬದುಕಿದ ವ್ಯಕ್ತಿಯ ಜೀವನ ಕಥೆ ಸಿನಿಮಾ ಆಗುತ್ತಿದೆ. 'ಕಾಗಜ್' ಹೆಸರಿನಲ್ಲಿ ಸಿನಿಮಾ ಮೂಡಿಬಂದಿದ್ದು, ಚಿತ್ರಕ್ಕೆ ಸತೀಶ್ ಕೌಶಿಕ್ ನಿರ್ದೇಶ ಮಾಡುತ್ತಿದ್ದಾರೆ. ಸತ್ತು ಬದುಕಿದ ಆ ವ್ಯಕ್ತಿ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆಯಾ. ಕಾಗಜ್ ಸಿನಿಮಾದಲ್ಲಿ ಈ ಕತೂಹಲಕ್ಕೆ ಉತ್ತರ ಸಿಗಲಿದೆ.
ಸತ್ತು ಮತ್ತೆ ಬದುಕಿದ ವ್ಯಕ್ತಿ ಎಂದು ಕೇಳಲು ಅಚ್ಚರಿ ಎನಿಸಿದರೂ ನಿಜ. ಇದು ಲಾಲ್ ಬಿಹಾರಿ ಎನ್ನುವ ಉತ್ತರ ಪ್ರದೇಶದ ರೈತನ ಕಥೆ. ಸರ್ಕಾರಿ ದಾಖಲೆಗಳಲ್ಲಿ ಲಾಲ್ ಬಿಹಾರಿ ಸತ್ತು ಹೋಗಿ ವರ್ಷಗಳೇ ಆಗಿತ್ತು. 1975ರಿಂದ 1994ರ ವರೆಗೆ ಅವರು ಬದುಕಿರುವಾಗಲೇ ಸತ್ತು ಹೋಗಿದ್ದಾರೆ ಎಂದು ಸರ್ಕಾರಿ ದಾಖಲೆಗಳು ತೋರಿಸಿದವು. ಆದರೆ ತಾನು ಬದುಕಿದ್ದೀನಿ ಎಂದು ಸಾಬೀತು ಪಡಿಸಲು ಲಾಲ್ ಬಿಹಾರಿ ಅನುಭವಿಸಿದ ಕಷ್ಟ ಒಂದೆರಡಲ್ಲ. ಅದನ್ನು ಸಾಬೀತು ಪಡಿಸಲು ಅವರಿಗೆ 19 ವರ್ಷಗಳೇ ಬೇಕಾಯಿತು.

ಈ ಘಟನೆಗೆ ಸಿನಿಮಾ ರೂಪ ನೀಡಿ ತೆರೆಮೇಲೆ ತರುತ್ತಿದ್ದಾರೆ ಸತೀಶ್ ಕೌಶಿಕ್. ಲಾಲ್ ಬಿಹಾರಿ ಪಾತ್ರದಲ್ಲಿ ಬಾಲಿವುಡ್ ನ ಖ್ಯಾತ ನಟ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ನಟ ಪಂಕಜ್ ತ್ರಿಪಾಠಿ, ಇದೀಗ ವಿಭಿನ್ನವಾದ ಪಾತ್ರದ ಮೂಲಕ ಚಿತ್ರಪ್ರೇಕ್ಷಕರ ಮುಂದೆ ಬರ್ತಿದ್ದಾರೆ.
ಅಂದಹಾಗೆ ಕಾಗಜ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಮುಂದಿನ ವರ್ಷ ಜನವರಿ 7ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಕಾಗಜ್ ಸಿನಿಮಾ ನಿರ್ಮಾಣದಲ್ಲಿ ನಟ ಸಲ್ಮಾನ್ ಖಾನ್ ಸಹ ಪಾಲುದಾರರಾಗಿದ್ದಾರೆ.


Click it and Unblock the Notifications











