ಅವಳ ಜೊತೆ ನಾನಿನ್ನೂ ಬಾಳಲಾರೆ, ಪ್ಲೀಸ್ ಡಿವೋರ್ಸ್ ಕೊಡಿ ; ನ್ಯಾಯಾಲಯದಲ್ಲಿ ಪಟ್ಟು ಹಿಡಿದ ಖ್ಯಾತ ಸ್ಟಾರ್
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಗಂಡ ಹೆಂಡ್ತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತು ಅಕ್ಷರಶಃ ಪಾಲನೆಯಾಗುತ್ತಿತ್ತು. ಎಷ್ಟೇ ಸಮಸ್ಯೆ ಇದ್ದರೂ.. ಭಿನ್ನಾಭಿಪ್ರಾಯ ಇದ್ದರೂ ಕೂಡ ದಾಂಪತ್ಯದಲ್ಲಿ ಮನವೊಲಿಸಿ.. ಕಾಳಜಿ ತೋರಿಸಿ.. ಕ್ಷಮೆಯನ್ನು ಕೇಳಿ... ದಾಂಪತ್ಯದ ಬಂಡಿಯನ್ನು ಎಳೆಯುತ್ತಿದ್ದರು.
ಆದರೆ.. ಈಗ ಕಾಲ ಬದಲಾಗಿದೆ.ಬದಲಾದ ಈ ಕಾಲದಲ್ಲಿ.. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತು ಗಾದೆ ಮಾತಿಗೆ ಮಾತ್ರ ಸೀಮಿತವಾಗಿದೆ. ಉಂಡು ಮಲಗಿದ ನಂತರ ಕೂಡ ಮೂಡಿದ ಬಿರುಕು ಇನ್ನೂ ಹೆಚ್ಚಾಗುತ್ತಿದೆ ಹೊರತು ಕಡಿಮೆಯಾಗುತ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ 7 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿಯೇ 1 ಲಕ್ಷ 95 ಸಾವಿರಕ್ಕೂ ಅಧಿಕ ಜನ ವಿಚ್ಛೇದನದ ಪ್ರಕರಣಗಳು ವರದಿಯಾಗಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಇನ್ನೂ.. ಬಣ್ಣದ ಲೋಕದಲ್ಲಿ ಕೂಡ ಡಿವೋರ್ಸ್ ಈಗೀಗ ತುಂಬಾನೇ ಮಾಮೂಲಿ ಎನ್ನುವಂತಾಗಿದೆ. ಹಲವಾರು ತಾರೆಯರು ತಮ್ಮ ಸಂಬಂಧ ಕಡಿದುಕೊಳ್ಳುತ್ತಿದ್ದಾರೆ. ಆ ಪೈಕಿ ಕೆಲವರು ಗೌರವಯುತವಾಗಿ ದೂರವಾದರೆ ಮತ್ತೂ ಕೆಲವರು ರಂಪ ರಾಮಾಯಣ ಮಾಡಿಕೊಳ್ಳುತ್ತಾರೆ. ನಾಲ್ಕು ಗೋಡೆಗಳ ನಡುವೆ ಬಗೆಹರಿಯಬೇಕಾದ ವಿಚಾರವನ್ನು ಬೀದಿಗೆ ತರುತ್ತಾರೆ. ತಮ್ಮ ಈ ನಡತೆಯಿಂದ ನೋಡುಗರಿಗೆ ಆಹಾರವೂ ಆಗುತ್ತಾರೆ. ಉದಾಹರಣೆಗೆ ಪವನ್ ಸಿಂಗ್ ಅವರ ದಾಂಪತ್ಯ ಜೀವನವನ್ನೇ ತೆಗೆದುಕೊಳ್ಳಿ.
ಹೌದು. ಪವನ್ ಸಿಂಗ್ ಭೋಜ್ಪುರಿಯ ಪವರ್ ಸ್ಟಾರ್. ''ಪ್ರತಿಗ್ಯಾ''.. ''ಸತ್ಯ''.. ''ಗದ್ದಾರ್''.. ''ವಾಟೆಂಡ್''.. ''ಭೋಜ್ಪುರಿಯಾ ರಾಜಾ''.. ಹೀಗೆ ಹಲವು ಚಿತ್ರಗಳ ಮೂಲಕ ಉತ್ತರ ಪ್ರದೇಶ ಮತ್ತು ಬಿಹಾರದ ಸುತ್ತ ಮುತ್ತ ಜನರ ಹೃದಯ ಗೆದ್ದ ಪವನ್ ಸಿಂಗ್ ರಾಜಕಾರಣಿ ಕೂಡ ಹೌದು.
ಇಂಥಾ ಪವನ್ ಸಿಂಗ್ 2018ರಲ್ಲಿ ಜ್ಯೋತಿ ಸಿಂಗ್ ಅವರನ್ನು ಮದುವೆಯಾಗಿದ್ದರು. ಆದರೆ ಈ ಸಂಬಂಧ ಕೇವಲ ನಾಲ್ಕೇ ವರ್ಷಕ್ಕೆ ಹಳಸಿತ್ತು. 2022ರಿಂದ ಶುರುವಾದ ಇವರ ದಾಂಪತ್ಯದ ಕಲಹ ಇವತ್ತಿನವರೆಗೆ ಮುಂದುವರೆದಿದೆ.
ಎರಡು ಬಾರಿ ಬಲವಂತದಿಂದ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪದಿಂದ ಹಿಡಿದು ಪವನ್ ಸಿಂಗ್ ಅವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಪ್ರಯತ್ನ ಮಾಡಿರುವದಾಗಿನವರೆಗೆ ಹಲವು ಆರೋಪಗಳನ್ನು ಜ್ಯೋತಿ ಸಿಂಗ್ ತಮ್ಮ ಪತಿ ಪವನ್ ಸಿಂಗ್ ಅವರ ಮೇಲೆ ಮಾಡಿದ್ದಾರೆ.

ಸದ್ಯ ಇವರ ವಿಚ್ಚೇದನದ ಪ್ರಕರಣದ ಅರ್ಜಿಯ ವಿಚಾರಣೆ ನಿನ್ನೆ (ಮಾರ್ಚ್ 25) ಬಿಹಾರದ ಆರಾ ನ್ಯಾಯಾಲಯದಲ್ಲಿ ನಡೆದಿದ್ದು ಪವನ್ ಸಿಂಗ್ ಸಂಧಾನ ಮಾಡಿಕೊಳ್ಳಲಾರೆ ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ ನ್ಯಾಯಾಧೀಶರು ಆರಂಭದಲ್ಲಿ ಸಂಧಾನದ ಆಯ್ಕೆಯನ್ನು ನೀಡಿದ್ದರಾದರೂ ತಮ್ಮ ನಿರ್ಧಾರಕ್ಕೆ ಬದ್ದರಾಗಿದ್ದ ಪವನ್ ಸಿಂಗ್ ಮಾತ್ರ ಇನ್ನೂ ಜೊತೆಯಾಗಿ ಬಾಳಲು ಸಾಧ್ಯ ಇಲ್ಲ ದಯಮಾಡಿ ಈ ವಿವಾಹ ಬಂಧನದಿಂದ ನನ್ನನ್ನೂ ಮುಕ್ತಿಗೊಳಿಸಿ ಎಂದು ಕೇಳಿಕೊಂಡಿದ್ದಾರೆ. ವಿಚ್ಛೇದನಕ್ಕಾಗಿ ಪಟ್ಟು ಹಿಡಿದಿದ್ದಾರೆ.
ಇನ್ನು ಕೊನೆಯ ಬಾರಿ ಅಂದರೆ ಈ ವರ್ಷ ಫೆಬ್ರವರಿ ಹನ್ನೊಂದರಂದು ನಡೆದ ವಿಚಾರಣೆಗೆ ಪವನ್ ಸಿಂಗ್ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಬದಲಿಗೆ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಯ ಹಾಸಿಗೆಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಈ ಬಾರಿ ಪವನ್ ಸಿಂಗ್ ವಿರುದ್ದ ಸೇಡು ತೀರಿಸಿಕೊಳ್ಳಬೇಕೆಂದುಕೊಂಡೇ ಏನೋ ಜ್ಯೋತಿ ಸಿಂಗ್ ನ್ಯಾಯಾಲಯಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದು ಅಂದು ಇಬ್ಬರೂ ಖುದ್ದಾಗಿ ಹಾಜರಿರಬೇಕು ಎಂದು ಆದೇಶಿಸಿದ್ದಾರೆ.
ಇನ್ನು ಈ ವಿಚ್ಚೇದನದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜ್ಯೋತಿ ಸಿಂಗ್ ಅವರ ವಕೀಲ ವಿಷ್ಣುಧರ್ ಪಾಂಡೆ, ಜ್ಯೋತಿ ಸಿಂಗ್ ಅವರಿಗೆ ಪವನ್ ಸಿಂಗ್ ವಿಚ್ಛೇದನ ನೀಡಲು ಬಯಸಿದರೆ ಹತ್ತು ಕೋಟಿ ಜೀವನಾಂಶದ ಜೊತೆಗೆ ನೋಯ್ಡಾದಲ್ಲಿ ಒಂದು ಐಷಾರಾಮಿ ಫ್ಲಾಟ್ ನ್ನೂ ನೀಡಬೇಕು ಎಂದು ಹೇಳಿದ್ಧಾರೆ. ಇಷ್ಟೇ ಅಲ್ಲ ಕಾನೂನು ಪ್ರಕ್ರಿಯೆ ಮುಗಿಯುವವರೆಗೆ ನಿರ್ವಹಣಾ ವೆಚ್ಚವನ್ನು ಭರಿಸಬೇಕು ಎಂದು ಹೇಳಿದ್ದಾರೆ.
ಪವನ್ ಸಿಂಗ್ ಪರ ವಕೀಲ ಸುಮನ್ ಕುಮಾರ್, ಜ್ಯೋತಿ ಸಿಂಗ್ ಗೈರುಹಾಜರಿಯ ಕಾರಣ ತಿಳಿದುಬಂದಿಲ್ಲ. ನ್ಯಾಯಾಲಯವು ಅವರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕ ಸಾಧಿಸಲು ಪ್ರಯತ್ನಿಸಿತಾದರೂ ಅದು ಫಲ ನೀಡಲಿಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಪವನ್ ಸಿಂಗ್ಗೆ ಇದು ಎರಡು ಮದುವೆ. 2014ರಲ್ಲಿ ನೀಲಂ ಸಿಂಗ್ ಅವರನ್ನು ಪವನ್ ಸಿಂಗ್ ಮದುವೆಯಾಗಿದ್ದರು. ಆದರೆ ಮದುವೆಯಾದ ಮೂರೇ ತಿಂಗಳಿಗೆ ನೀಲಂ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ನೀಲಂ ನಿಧನದ ನಂತರ 2018ರಲ್ಲಿ ಜ್ಯೋತಿ ಸಿಂಗ್ ಅವರನ್ನು ಪವನ್ ಸಿಂಗ್ ಮದುವೆಯಾಗಿದ್ದರು. ಈಗ ಈ ಮದುವೆ ವಿಚ್ಚೇದನದ ಹಂತಕ್ಕೆ ತಲುಪಿದೆ. ಮುಂದೇನಾಗುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











