ಅಬ್ಬಾ ! ಎಂಥಾ ಸಂಸ್ಕಾರ, ಏನ್ ಕಥೆ ; ಪ್ರಧಾನಿ ಮೋದಿ ಪಾದಕ್ಕೆರಗಿದ ಐಶ್ವರ್ಯ ರೈ
ವಿಶ್ವದಾದ್ಯಂತ ಮನ್ನಣೆ ಪಡೆದು, ಭಾರತದಲ್ಲಿ ಹಲವರ ನೆಚ್ಚಿನ ನಾಯಕರಾಗಿ ಹೊರ ಹೊಮ್ಮಿದವರು ನರೇಂದ್ರ ಮೋದಿ. ಸೋಲಿಲ್ಲದ ಸರದಾರ ಎಂದೇ ಕರೆಯಲ್ಪಡುವ ಸದ್ಯ ಮೂರನೇ ಬಾರಿ ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದಾರೆ. ಬಿಹಾರ್ನಲ್ಲಿ ತಮ್ಮ ನೇತೃತ್ವದಲ್ಲಿ ಎನ್ಡಿಎಯನ್ನು ಗೆಲ್ಲಿಸಿದ್ದಾರೆ. ಐತಿಹಾಸಿಕ ಜನಾದೇಶ ಸಿಕ್ಕ ಹಿನ್ನೆಲೆ ಮೊನ್ನೆ ಮೊನ್ನೆಯಷ್ಟೇ ಭಾಷಣವನ್ನು ಕೂಡ ಮಾಡಿದ್ದಾರೆ. ಇಂಥಾ ಪ್ರಧಾನ ಮಂತ್ರಿ ನರೇಂದ್ರ ಮೋದಿ..
ಅವರ ಪಾದಕ್ಕೇರಗಿ ಐಶ್ವರ್ಯ ರೈ ಸದ್ಯ ಆಶೀರ್ವಾದ ಪಡೆದಿದ್ದಾರೆ. ಹೌದು, ಅಸಲಿಗೆ ಸತ್ಯ ಸಾಯಿಬಾಬಾ ಜಯಂತಿ ಹಿನ್ನೆಲೆ ಆಂಧ್ರಪ್ರದೇಶದ ಪುಟ್ಟಪರ್ಥಿಯಲ್ಲಿ ಅದ್ಧೂರಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಮತ್ತು ಐಶ್ವರ್ಯ ರೈ ಬಚ್ಚನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿನ್ ರಾಮ್ ಮೋಹನ್ ನಾಯ್ಡು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹೀಗೆ ರಾಜಕೀಯದ ಧುರೀಣರು ಕೂಡ ಇದ್ದರು. ಇದೇ ಸಮಯದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ವೇದಿಕೆ ಹಂಚಿಕೊಂಡ ಐಶ್ವರ್ಯ ರೈ ಬಚ್ಚನ್, ಮೋದಿಯವರ ಪಾದಕ್ಕೆರಗಿದ್ದಾರೆ. ನಮಸ್ಕರಿಸಿದ್ದಾರೆ. ಮೋದಿ ಅವರು ಕೂಡ ಐಶ್ವರ್ಯಾ ರೈ ತಲೆಮೇಲೆ ಕೈ ಇರಿಸಿ ಆಶೀರ್ವಾದ ಮಾಡಿದ್ದಾರೆ.
ಇದೇ ಸಮಯದಲ್ಲಿ ಮಾತನಾಡಿದ ಐಶ್ವರ್ಯ ರೈ, ಮೋದಿ ಅವರ ಜೊತೆ ವೇದಿಕೆ ಹಂಚಿಕೊಳ್ಲುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಆ ನಂತರ ಮಾತನಾಡಿರುವ ಐಶ್ವರ್ಯ ರೈ ನಿಜವಾದ ಜಾತಿ ಅಂದರೆ ಅದು ಮಾನವೀಯತೆ ಎಂದು ಹೇಳಿದ್ದಾರೆ. ಒಂದೇ ಧರ್ಮ, ಅದು ಪ್ರೀತಿಯ ಧರ್ಮ. ಒಂದೇ ಭಾಷೆ, ಅದು ಹೃದಯದ ಭಾಷೆ. ಮತ್ತು ದೇವರು ಒಬ್ಬನೇ, ಆತ ಸರ್ವವ್ಯಾಪಿ, ಎಂದು ಐಶ್ವರ್ಯಾ ರೈ ಬಚ್ಚನ್ ಹೇಳಿದ್ದಾರೆ.
ಮುಂದುವರೆದು ಮೋದಿ ಅವರ ಗುಣಗಾನವನ್ನು ಕೂಡ ಮಾಡಿದ ಐಶ್ವರ್ಯ ರೈ ಬಚ್ಚನ್, ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಮ್ಮ ಜೊತೆ ಇಂದು ಇರುವುದಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ನಿಮ್ಮ ಸ್ಫೂರ್ತಿದಾಯಕ ಮಾತುಗಳನ್ನು ಕೇಳಲು ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ.
ನಿಮ್ಮ ಇಲ್ಲಿನ ಉಪಸ್ಥಿತಿಯು ಈ ಶತಮಾನೋತ್ಸವ ಆಚರಣೆಗೆ ಸ್ಫೂರ್ತಿಯನ್ನು ನೀಡುತ್ತದೆ ಎಂದು ಕೂಡ ಹೇಳಿದ ಐಶ್ವರ್ಯ ರೈ, ನಿಜವಾದ ನಾಯಕತ್ವವೇ ಸೇವೆ. ಮನುಷ್ಯನಿಗೆ ಸೇವೆ ಮಾಡುವುದು ದೇವರಿಗೆ ಸೇವೆ ಮಾಡಿದಂತೆ ಎಂಬ ಸಾಯಿಬಾಬಾ ಅವರ ಮಾತನ್ನು ನೆನಪಿಸುತ್ತದೆ ಎಂದು ಸ್ಮರಿಸಿದ್ದಾರೆ ಐಶ್ವರ್ಯ ರೈ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಲವರು ಐಶ್ವರ್ಯ ರೈ ಅವರ ಸರಳತೆ, ನಯ, ವಿನಯ, ಸಂಸ್ಕಾರವನ್ನು ಕೊಂಡಾಡಿದ್ದಾರೆ. ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಎಂಬ ಸತ್ಯಸಾಯಿ ಬಾಬಾ ಅವರ ಸಂದೇಶವನ್ನು ಐಶ್ವರ್ಯಾ ರೈ ಪುನರುಚ್ಚಿಸಿರುವುದು, ಈ ಯುಗದ ಅತ್ಯಂತ ಪ್ರಭಾವಶಾಲಿ ಭಾಷಣಗಳಲ್ಲಿ ಒಂದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಶ್ವರ್ಯಾ ರೈ ಅಂದರೆ ಸಂಸ್ಕಾರದ ಪ್ರತಿರೂಪ ಎಂದೆಲ್ಲಾ ಹೊಗಳುತ್ತಿದ್ದಾರೆ. ಅದ್ಭುತವಾದ ಸನ್ನಿವೇಶ ,ಭಾವನಾತ್ಮಕವಾದ ಕ್ಷಣ, ಅಬ್ಬಾ ಎಂಥಾ ಸಂಸ್ಕಾರ, ಏನ್ ಕಥೆ, ಎಂದಿದ್ದಾರೆ. ತಮ್ಮ ಈ ನಡೆಯಿಂದ ಐಶ್ವರ್ಯ ರೈ ಮತ್ತೊಮ್ಮೆ ಕೋಟ್ಯಂತರ ಜನರ ಹೃದಯ ಗೆದ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಐಶ್ವರ್ಯ ರೈ ಅವರ ಈ ನಡೆಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ನೀವು ತೋರಿಸಿದ್ದು ನಿಜಕ್ಕೂ ಸಂಸ್ಕಾರನಾ..? ಅಥವಾ ಇದರ ಹಿಂದೆ ರಾಜಕೀಯ ಇದೆಯಾ..? ಎಂದು ಐಶ್ವರ್ಯ ಅವರನ್ನು ಕೇಳುತ್ತಿದ್ದಾರೆ. ಮೋದಿ ಕಾಲು ಮುಟ್ಟಿದ್ದಕ್ಕೆ ಐಶ್ವರ್ಯ ರೈ ಅವರ ಕಾಲೆಳೆಯುತ್ತಿದ್ದಾರೆ.


Click it and Unblock the Notifications











