ಅಗಲಿದ ನಗುವಿನ ಒಡೆಯ ರಾಜು ಶ್ರೀವಾತ್ಸವ್ಗೆ ಗಣ್ಯರ ಸಂತಾಪ
ಭಾರತೀಯ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾತ್ಸವ್ ಇಂದು(ಸಪ್ಟೆಂಬರ್ 21) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ದೆಹಲಿಯ ಏಮ್ಸ್ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ನಾಯಕ ನಟ, ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ರಾಜು ಶ್ರೀವಾತ್ಸವ್ ಬಾಲಿವುಡ್ನ ಅನೇಕ ನಟ ದಿಗ್ಗಜರ ಜೊತೆ ನಟಿಸಿದ್ದಾರೆ. 'ಮೈನೆ ಪ್ಯಾರ್ ಕಿಯಾ', 'ಬಾಜಿಗರ್', 'ಬಾಂಬೆ ಟು ಗೋವಾ' ಸೇರಿದಂತೆ ಬಾಲಿವುಡ್ನ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಹಾಸ್ಯ ಪ್ರಜ್ಞೆ ಹಾಗೂ ಸರಳ ವ್ಯಕ್ತಿತ್ವದಿಂದಾಗಿ ರಾಜು ಶ್ರೀವಾತ್ಸವ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ರಾಜು ಶ್ರೀವಾತ್ಸವ್ ಅವರು ಇತ್ತೀಚಿಗೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದರು. ಭಾರತೀಯ ಜನತಾ ಪಾರ್ಟಿಯ ಸದಸ್ಯನಾಗಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದರು. ಅದ್ಭುತ ಹಾಸ್ಯ ನಟ ಹಾಗೂ ಪಕ್ಷದ ನಿಷ್ಟಾವಂತ ಸದಸ್ಯನ ಅಗಲಿಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರಾಜು ಶ್ರೀವಾತ್ಸವ್ ನಮ್ಮ ಬದುಕನ್ನು ನಗು ಹಾಗೂ ಸಕರಾತ್ಮಕ ಆಲೋಚನೆಗಳಿಂದ ಬೆಳಗಿಸಿದರು. ಇಷ್ಟು ಬೇಗ ಅವರು ನಮ್ಮನ್ನಗಲಿದ್ದಾರೆ. ಆದರೆ ಅಪಾರ ಜನರ ಮನಸ್ಸಿನಲ್ಲಿ ಅಮರರಾಗಿದ್ದಾರೆ. ಅವರ ಸೇವೆಗಾಗಿ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟಿ ರವಿನಾ ಟಂಡನ್ ರಾಜು ಶ್ರೀವಾತ್ಸವ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರು ಎಂದಿದೂ ನಗುವಿನ ಒಡೆಯ ಎಂದಿದ್ದಾರೆ.
ಇದು ದುಃಖದ ಸುದ್ದಿಯಾಗಿದ್ದು, ನಾವೆಲ್ಲರೂ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದೆವು. ಆದರೆ, ದುರದೃಷ್ಟವಶಾತ್ ಅವರು ನಮ್ಮನ್ನಗಲಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನನ್ನು ದೇವರು ನೀಡಲಿ ಎಂದು ಸಂತಾಪ ಸೂಚಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ರಾಜು ಶ್ರೀವಾತ್ಸವ್ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ರಾಜು ಜೀ ನೀವು ಬಹುಬೇಗ ನಮ್ಮನ್ನಗಲಿದ್ದೀರಿ, ದಶಕಗಳಿಂದ ನಮ್ಮನ್ನು ನಗಿಸಿರುವುದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಅಭಿಮಾನಿಗಳಿಗೂ ಹಾಗೂ ನಿಮ್ಮ ಕುಟುಂಬಸ್ಥರಿಗೂ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ರಾಜು ಶ್ರೀವಾತ್ಸವ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಜು ಶ್ರೀವಾತ್ಸವ್ ಅವರ ಫೋಟೋವನ್ನು ತಮ್ಮ ಟ್ಟಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವೀರೇಂದ್ರ ಸೆಹ್ವಾಗ್, ಶುದ್ಧ ಹಾಸ್ಯ ಮತ್ತು ತೀಕ್ಷ್ಣವಾದ ಅವಲೋಕನದಿಂದ ಜನರನ್ನು ನಗಿಸಿದ ಅಪ್ಪಟ ಹಾಸ್ಯಗಾರ. ನಿಮ್ಮ ಅಭಿಮಾನಿಗಳಿಗೂ ಹಾಗೂ ಕುಟುಂಬಸ್ಥರಿಗೂ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್ ನಟ ರಿತೇಶ್ ದೇಶಮುಖ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಾಜು ಶ್ರೀವಾತ್ಸವ್ ಅವರ ಬಗ್ಗೆ ಬರೆದುಕೊಂಡಿದ್ದಾರೆ. ವೇದಿಕೆಯ ಮೇಲೂ, ವೇದಿಕೆಯಾಚೆಗೂ ನೀವು ನಗುವಿನ ರಾಜ. ನಮ್ಮನ್ನು ನಗಿಸಿರುವುದಕ್ಕಾಗಿ ಧನ್ಯವಾದಗಳು. ನಿಮ್ಮ ಅಭಿಮಾನಿಗಳಿಗೂ ಹಾಗೂ ಕುಟುಂಬಸ್ಥರಿಗೂ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
'ಕಾಶ್ಮೀರಿ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರ, ರಾಜು ಶ್ರೀವಾತ್ಸವ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ನನ್ನ ಸಹೋದರ, ಸ್ನೇಹಿತ ಮತ್ತು ದೇಶದ ಸಂತೋಷದ ಅಲೆ, ರಾಜು ಶ್ರೀವಾಸ್ತವ ನಮ್ಮನ್ನಗಲಿದ್ದಾರೆ. ಈ ವಿಚಾರ ತಿಳಿದು ನಾನು ತೀವ್ರ ದುಃಖಿತನಾಗಿದ್ದೇನೆ. ಅವರಂತಹ ಕಲಾವಿದರು ಅಪರೂಪ. ಅವರಂತಹ ಕಲಾವಿದರನ್ನು ಭಾರತ ಕಂಡಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಗೃಹ ಸಚಿವ ಅಮಿತ್ ಶಾ,ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಸಿಎಂ ಯೋಗಿ ಆಧಿತ್ಯನಾಥ್ ಬಾಲಿವುಡ್ ನಟ ಸೋನು ಸೂದ್ ಸೇರಿದಂತೆ ಅನೇಕ ಗಣ್ಯರು ರಾಜು ಶ್ರೀವಾತ್ಸವ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.


Click it and Unblock the Notifications











