The Kashmir Files: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿರ್ದೇಶಕನ ವಿರುದ್ಧ ದೂರು
'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೊಡ್ಡ ಹಲ್-ಚಲ್ ಎಬ್ಬಿಸಿದೆ. 'ಅಂಡರ್ ಗಾಡ್' ಆಗಿ ಬಿಡುಗಡೆ ಆದ ಈ ಸಿನಿಮಾ ಈಗ ಅಕ್ಷಯ್ ಕುಮಾರ್ ಅಂಥಹಾ ಸ್ಟಾರ್ ನಟರ ಸಿನಿಮಾಗಳಿಗೆ ಠಕ್ಕರ್ ಕೊಟ್ಟು ಇತ್ತೀಚಿನ ವರ್ಷದ ಬಾಲಿವುಡ್ನ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ.
ಮೋದಿ ಸೇರಿದಂತೆ ಬಿಜೆಪಿಯವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಬಹುವಾಗಿ ಹೊಗಳಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದಕ್ಕೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಬಹುವಾಗಿ ಹೊಗಳಿದ್ದಾರೆ. ಇಂಥಹಾ ಸಿನಿಮಾ ನಿರ್ದೇಶನ ಮಾಡಿರುವುದು ಬಹಳ ಧೈರ್ಯದ, ಸಾಹಸ ಕಾರ್ಯ, ಹುದುಗಿಸಲಾಗಿದ್ದ ಇತಿಹಾಸವನ್ನು ವಿವೇಕ್ ಅಗ್ನಿಹೋತ್ರಿ ಹೊರಗೆ ತಂದಿದ್ದಾರೆ ಎಂದೆಲ್ಲಾ ಹೊಗಳಲಾಗಿದೆ.
ಆದರೆ ಇಂದು ಇದೇ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಯಶಸ್ಸಿನ ಬಳಿಕ ಹಲವು ಸಂದರ್ಶನಗಳನ್ನು ವಿವೇಕ್ ನೀಡುತ್ತಿದ್ದು, ಇಂಥಹುದ್ದೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಭೂಪಾಲ್ ನಗರದವರ ಬಗ್ಗೆ ಅನುಚಿತವಾಗಿ ಮಾತನಾಡಿದ್ದಾರೆ. ಇದೇ ಕಾರಣಕ್ಕೆ ವಿವೇಕ್ ಅಗ್ನಿಹೋತ್ರಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂಬೈನ ವರ್ಸೋವಾದಲ್ಲಿನ ಪಿಆರ್ ಮ್ಯಾನೇಜರ್ ರೋಹಿತ್ ಪಾಂಡೆ ಎಂಬುವರು ವಿವೇಕ್ ಅಗ್ನಿಹೋತ್ರಿ ವಿರುದ್ಧ ದೂರು ದಾಖಲಿಸಿದ್ದಾರೆ. ರೋಹಿತ್ ಪಾಂಡೆ ಮೂಲತಃ ಮಧ್ಯ ಪ್ರದೇಶದ ಭೊಪಾಲ್ನವರಾಗಿದ್ದಾರೆ. ತಮ್ಮ ಊರಿನ ಜನಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಾರಣ ಅವರು ಈ ದೂರು ನೀಡಿದ್ದಾರೆ.
''ಭೋಪಾಲ್ನ ಜನರನ್ನು ಸಾಮಾನ್ಯವಾಗಿ ಎಲ್ಲರೂ ಸಲಿಂಗ ಕಾಮಿಗಳು ಎಂದುಕೊಳ್ಳುತ್ತಾರೆ. ಅದಕ್ಕೆ ಕಾರಣ ಅವರ ನವಾಬಿ ಆಸೆಗಳು'' ಎಂದಿದ್ದರು ವಿವೇಕ್ ಅಗ್ನಿಹೋತ್ರಿ. ಇವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
''ನಾನು ಭೂಪಾಲದವನು, ಆದರೆ ನಾನು ಭೂಪಾಲದವನು ಎಂದು ಹೇಳಿಕೊಳ್ಳುವುದೇ ಬಿಟ್ಟಿದ್ದೇನೆ. 'ಭೂಪಾಲಿ' ಜನ ಎಂದರೆ ಅವರು ಬೇರೆಯದೇ ರೀತಿಯ ಜನ ಎಂಬುದು ಜನಜನಿತವಾಗಿದೆ. 'ಭೂಪಾಲಿ' ಎಂದರೆ ಸಲಿಂಗಕಾಮಿ ಎಂದು ಜನ ಅರ್ಥ ಮಾಡಿಕೊಳ್ಳುತ್ತಾರೆ, ಅವನಿಗೆ ನವಾಬಿ ರೀತಿಯ ಚಿತ್ರ-ವಿಚಿತ್ರ ಲೈಂಗಿಕ ವಾಂಚೆಗಳಿವೆ ಎಂದುಕೊಳ್ಳುತ್ತಾರೆ'' ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದರು.
ವಿವೇಕ್ ವಿರುದ್ಧ ಆರೋಪಗಳು ಬರುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ನಟಿ ತನುಶ್ರೀ ದತ್ತ, ನಿರ್ದೇಶಕ ವಿವೇಕ್ ವಿರುದ್ಧ ಆರೋಪ ಮಾಡಿದ್ದರು. ಸಿನಿಮಾ ಒಂದರಲ್ಲಿ ನಟಿಸುವಾಗ ಬಟ್ಟೆ ಬಿಚ್ಚು ಮಾದಕವಾಗಿ ಎಕ್ಸ್ಪ್ರೆಶನ್ ನೀಡುವಂತೆ ವಿವೇಕ್ ನನಗೆ ಹೇಳಿದ್ದರು ಎಂದು ತನುಶ್ರೀ ದತ್ತ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. 1990 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ವಿರುದ್ಧ ನಡೆದ ದೌರ್ಜನ್ಯದ ಕತೆಯನ್ನು ಈ ಸಿನಿಮಾ ಹೊಂದಿದೆ. ಈ ಸಿನಿಮಾ ನಿಜವಾದ ಇತಿಹಾಸವನ್ನು ತೋರುತ್ತಿದೆ ಎಂದು ಕೆಲವರು ವಾದ ಮಾಡಿದರೆ, ಈ ಸಿನಿಮಾ ಪ್ರೊಪಾಗಾಂಡಾ ಸಿನಿಮಾ, ರಾಜಕೀಯ ಲಾಭಕ್ಕಾಗಿ ಮಾಡಲಾಗಿರುವ ಸಿನಿಮಾ, ಮತ್ತೊಂದು ಸಮುದಾಯದ ಮೇಲೆ ದ್ವೇಷ ಹುಟ್ಟಿಸಲು ತಯಾರಿಸಲಾದ ಸಿನಿಮಾ ಎಂಬ ಆರೋಪ ಮಾಡಲಾಗಿದೆ.


Click it and Unblock the Notifications











