ಯಾರೀ ಹೇಳಿದ್ದು ಪ್ರಭಾಸ್-ಕರಣ್ ಜೋಹರ್ ಮಧ್ಯೆ ಕಿತ್ತಾಟ ಆಗಿದೆ ಅಂತ.?
'ಬಾಹುಬಲಿ' ಬ್ಲಾಕ್ ಬಸ್ಟರ್ ಆದ್ಮೇಲೆ, ಪ್ರಭಾಸ್ ಬೇಡಿಕೆ ದುಪ್ಪಟ್ಟಾಗಿದೆ. ಪ್ರಭಾಸ್ ಗೆ ಬರೀ ಟಾಲಿವುಡ್ ನಲ್ಲಿ ಮಾತ್ರ ಅಲ್ಲ, ಬಾಲಿವುಡ್ ಕೂಡ ರತ್ನಗಂಬಳಿ ಹಾಸಿತ್ತು. ಬಿ ಟೌನ್ ನ ಖ್ಯಾತ ಫಿಲ್ಮ್ ಮೇಕರ್ ಕರಣ್ ಜೋಹರ್ ಕೂಡ ಪ್ರಭಾಸ್ ಕಾಲ್ ಶೀಟ್ ಕೇಳಿದ್ದರು ಎಂಬ ಗುಲ್ಲು ಎಲ್ಲೆಡೆ ಹಬ್ಬಿತ್ತು.
ಆದ್ರೆ, ಪ್ರಭಾಸ್ 'ಸಾಹೋ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಕರಣ್ ಜೋಹರ್ ಆಫರ್ ನ ಪ್ರಭಾಸ್ ಒಪ್ಪಿಕೊಳ್ಳದಿರಲು, ಅವರಿಬ್ಬರ ನಡುವಿನ ಕಿತ್ತಾಟ ಕಾರಣ ಎಂಬ ಗುಸುಗುಸು ಕೇಳಿ ಬಂತು. ಹಾಗಾದರೆ, ಕರಣ್ ಜೋಹರ್ ಹಾಗೂ ಪ್ರಭಾಸ್ ನಡುವೆ ಗಲಾಟೆ ಆಗಿತ್ತಾ.? ಇಬ್ಬರ ನಡುವೆ ಮನಸ್ತಾಪ ಮೂಡಲು ಕಾರಣವೇನು.? ಎಂಬ ಪ್ರಶ್ನೆ ಸಿನಿ ಪ್ರಿಯರನ್ನು ಕಾಡುತ್ತಲೇ ಇತ್ತು.

ಸದ್ಯ ಇದೇ ವಿಚಾರವಾಗಿ ನಟ ಪ್ರಭಾಸ್ ಬಾಯ್ಬಿಟ್ಟಿದ್ದಾರೆ. ''ನನ್ನ ಹಾಗೂ ಕರಣ್ ಜೋಹರ್ ನಡುವೆ ಯಾವುದೇ ವಿಚಾರಕ್ಕೂ ಮನಸ್ತಾಪ ಇಲ್ಲ. ಈ ಸುದ್ದಿ ಕರಣ್ ಕಿವಿಗೂ ಬಿದ್ದಿದೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ ಎಂದು ಅವರೇ ನನಗೆ ಕಿವಿಮಾತು ಹೇಳಿದರು. ನಮ್ಮಿಬ್ಬರ ನಡುವೆ ಅಂಥದ್ದೇನೂ ಆಗಿಲ್ಲ'' ಎಂದು ಪ್ರಭಾಸ್ ಸ್ಪಷ್ಟ ಪಡಿಸಿದ್ದಾರೆ.
''ನನಗೆ ಕರಣ್ ಜೋಹರ್ ನಿರ್ದೇಶನದ ಚಿತ್ರಗಳು ಇಷ್ಟ. 'ಕುಚ್ ಕುಚ್ ಹೋತಾ ಹೇ' ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದು'' ಎಂದು ಇದೇ ವೇಳೆ ಪ್ರಭಾಸ್ ಹೇಳಿದ್ದಾರೆ.
ಸದ್ಯ 'ಸಾಹೋ' ಚಿತ್ರದ ಚಿತ್ರೀಕರಣ ಅಬು ದಾಬಿಯಲ್ಲಿ ನಡೆಯುತ್ತಿದೆ. ಶೂಟಿಂಗ್ ನಲ್ಲಿ ಪ್ರಭಾಸ್ ತೊಡಗಿದ್ದಾರೆ.


Click it and Unblock the Notifications











