'ಆದಿಪುರುಷ್' 6 ದಿನಗಳ ಕಲೆಕ್ಷನ್ ಘೋಷಿಸಿದ ಚಿತ್ರತಂಡ: ಸಿನಿಮಾ ಗೆಲ್ತಾ? ಸೋಲ್ತಾ?
ಓಂ ರಾವುತ್ ನಿರ್ದೇಶನದ 'ಆದಿಪುರುಷ್' ಸಿನಿಮಾ ಭಾರೀ ವಿರೋಧದ ನಡುವೆಯೂ ಥಿಯೇಟರ್ಗಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕಮ್ಮಿ ಆಗ್ತಿದೆ. ಯಾವುದೇ ಸಿನಿಮಾ ಆದರೂ ಕಲೆಕ್ಷನ್ ನಿಧಾನವಾಗಿ ಇಳಿಯುತ್ತದೆ. ಆದರೆ ರಾಮಾಯಣ ಕಾವ್ಯ ಆಧರಿಸಿದ್ದ ಈ ಸಿನಿಮಾ ಕ್ರೇಜ್ಗೆ ತಕ್ಕಂತೆ ಕಲೆಕ್ಷನ್ ಮಾಡ್ತಿಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.
'ಆದಿಪುರುಷ್' ಚಿತ್ರದ ಬಗ್ಗೆ ಕೇಳಿಬರುತ್ತಿರುವ ಟೀಕೆಗಳ ಬಗ್ಗೆ ಚಿತ್ರತಂಡ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ. ಆದರೆ ಚಿತ್ರದ ಸಂಭಾಷಣೆಕಾರ ಮನೋಜ್ ಮಾತ್ರ ಮತ್ತಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ. ಇನ್ನು ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ದಾಖಲಾಗಿತ್ತು. ಆದರೆ ಕೋರ್ಟ್ ತುರ್ತಾಗಿ ಅರ್ಜಿ ವಿಚಾರಣೆ ನಡೆಸುವ ಅವಶ್ಯಕತೆ ಇಲ್ಲ ಎಂದು ಹೇಳಿ ಚಿತ್ರತಂಡಕ್ಕೆ ಕೊಂಚ ರಿಲೀಫ್ ನೀಡಿದೆ. ಆದರೂ ಕೂಡ ಪ್ರೇಕ್ಷಕರು ಸಿನಿಮಾ ನೋಡಲು ಹಿಂದೇಟು ಹಾಕುತ್ತಿದ್ದಾರೆ.

ಹತ್ತು ಹಲವು ಕಾರಣಗಳಿಗೆ 'ಆದಿಪುರುಷ್' ಸಿನಿಮಾ ವಿವಾದ ಸೃಷ್ಟಿಸಿದೆ. ರಾಮ, ರಾವಣ, ಆಂಜನೇಯನ ಪಾತ್ರಗಳನ್ನು ತೋರಿಸಿರುವ ರೀತಿ, ಕೆಲ ಸಂಭಾಷಣೆ, ಪುಷ್ಪಕ ವಿಮಾನದ ಉಲ್ಲೇಖ ಇಲ್ಲದಿರುವುದು, ರಾಮಾಯಣ ಕಾವ್ಯದ ಕಾವ್ಯಗಳನ್ನು ಇಷ್ಟಬಂದಂತೆ ತೋರಿಸಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ. ರಾಮಾಯಣದಲ್ಲಿ ಹಾಲಿವುಡ್ ಸಿನಿಮಾ ಪಾತ್ರಗಳನ್ನು ತೋರಿಸಿದಂತೆ ಕೆಲವೆಡೆ ಭಾಸವಾಗುತ್ತದೆ.
6 ದಿನಕ್ಕೆ 419 ಕೋಟಿ ರೂ. ಕಲೆಕ್ಷನ್
ಚಿತ್ರತಂಡವೇ 'ಆದಿಪುರುಷ್' ಸಿನಿಮಾ ಕಲೆಕ್ಷನ್ ಬಗ್ಗೆ ಮಾಹಿತಿ ನೀಡುತ್ತಾ ಬರ್ತಿದೆ. ಇದೀಗ ಸಿನಿಮಾ 6 ದಿನಕ್ಕೆ 419 ಕೋಟಿ ರೂ. ವರ್ಲ್ಡ್ವೈಡ್ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಗಳಿಕೆ ಕಂಡಿರುವುದಾಗಿ ಘೋಷಿಸಿದ್ದಾರೆ. ಮೊದಲ ದಿನ 140 ಕೋಟಿ ರೂ. 2 ದಿನಕ್ಕೆ 240 ಕೋಟಿ ರೂ. 3 ದಿನಕ್ಕೆ 34 ಕೋಟಿ ರೂ. ಗಳಿಕೆ ಕಂಡಿರುವುದಾಗಿ ಹೇಳಲಾಗಿತ್ತು. ಆದರೆ ಸೋಮವಾರ ಕಲೆಕ್ಷನ್ ಡ್ರಾಪ್ ಆಗಿತ್ತು. 4ನೇ ದಿನ 35 ಕೋಟಿ ರೂ. 5ನೇ ದಿನ 20 ಕೋಟಿ ರೂ. ಇದೀಗ 6ನೇ ಸಿನಿಮಾ ಕೇವಲ 15 ಕೋಟಿ ರೂ. ಮಾತ್ರ ಬಾಚಿದೆ. ಕೆಲವರು ಈ ಕಲೆಕ್ಷನ್ ರಿಪೋರ್ಟ್ ಫೇಕ್ ಎನ್ನುತ್ತಿದ್ದಾರೆ.
'ಆದಿಪುರುಷ್' ಟಿಕೆಟ್ ದರ ಇಳಿಕೆ
ನೆಗೆಟಿವ್ ಟಾಕ್ ಹೆಚ್ಚಾಗಿ 'ಆದಿಪುರುಷ್' ಸಿನಿಮಾ ಕಲೆಕ್ಷನ್ ಕಮ್ಮಿ ಆಗುತ್ತಿದ್ದಂತೆ ಟಿಕೆಟ್ ದರ ಇಳಿಸಲಾಗಿದೆ. ಜೂನ್ 22 ಮತ್ತು 23ರಂದು 150 ರೂ.ಗೆ ಪ್ರೇಕ್ಷಕರು ತ್ರಿಡಿಯಲ್ಲಿ ಸಿನಿಮಾ ನೋಡಬಹುದು ಎಂದು ಚಿತ್ರತಂಡ ಹೇಳಿದೆ. ಈ ಹಿಂದೆ 'ಬ್ರಹ್ಮಾಸ್ತ್ರ' ಹಾಗೂ 'ಪಠಾಣ್' ಸಿನಿಮಾಗಳ ಟಿಕೆಟ್ ದರ ಕೂಡ ಇದೇ ರೀತಿ ಇಳಿಸಲಾಗಿತ್ತು. ಯಶಸ್ವಿಯಾಗಿ ಒಂದು ವಾರ ಪೂರೈಸಲು ತಿಣುಕಾಡುವಂತಾಗಿದೆ. ಅದೇ ಕಾರಣಕ್ಕೆ ಟಿಕೆಟ್ ದರ ಇಳಿಸಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ನಡೀತಿದೆ.
ಶೀಘ್ರದಲ್ಲೇ ಸಿನಿಮಾ ಓಟಿಟಿಗೆ
'ಆದಿಪುರುಷ್' ಸಿನಿಮಾ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರವನ್ನು ಓಟಿಟಿಯಲ್ಲಿ ರಿಲೀಸ್ ಮಾಡೋದಕ್ಕೂ ಅವಕಾಶ ಕೊಡಬರದು ಎನ್ನುವ ಆಗ್ರಹ ಶುರುವಾಗಿದೆ. ಇದೆಲ್ಲದರ ನಡುವೆ ಸಿನಿಮಾ ಆದಷ್ಟು ಬೇಗ ಓಟಿಟಿಗೆ ಬರುತ್ತದೆ ಅನ್ನುವ ಮಾತುಗುಳು ಕೇಳಿಬರ್ತಿದೆ. ಸಿನಿಮಾ ಥಿಯೇಟರ್ಗಳಲ್ಲಿ ಅಷ್ಟಾಗಿ ಸದ್ದು ಮಾಡುತ್ತಿಲ್ಲ. ಕೊನೆ ಪಕ್ಷ ಹೈಪ್ ಇರುವಾಗಲೇ ಡಿಜಿಟಲ್ ಸ್ಟ್ರೀಮಿಂಗ್ ಮಾಡಬೇಕು ಎಂದು ಚಿತ್ರತಂಡ ನಿರ್ದೇರಿಸಿದ ಎನ್ನಲಾಗ್ತಿದೆ.

ತೆಲುಗು ನಟ ಸುಮನ್ ಅಸಮಾಧಾನ
ತೆಲುಗು ನಟ ಸುಮನ್ ಮಾತನಾಡಿ ಇದು "ರಾಮಾಯಣ ರೀತಿ ಕಾಣುತ್ತಿಲ್ಲ. ಹಾಲಿವುಡ್ ಗ್ಲಾಡಿಯೇಟರ್ ಸಿನಿಮಾದಂತೆ ಭಾಸವಾಗುತ್ತಿದೆ. ಎಮೋಷನ್ಸ್ ಮಿಸ್ ಆಗಿರುವುದಕ್ಕೆ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತಿಲ್ಲ. ನಮಗೆ ಗೊತ್ತಿರುವ ರಾಮಾಯಣ ಪಾತ್ರಗಳನ್ನು ತಪ್ಪಾಗಿ ತೋರಿಸಲಾಗಿದೆ. ರಾಮ, ಲಕ್ಷ್ಮಣ, ಹನುಮಂತ, ರಾವಣ ಪಾತ್ರಗಳ ಕಾಸ್ಟ್ಯೂಮ್ ಸರಿಯಿಲ್ಲ. ನಿರ್ದೇಶನ ಪ್ರಯೋಗ ಮಾಡಲು ಹೋಗಿದ್ದು ತಪ್ಪು. ಇದರಲ್ಲಿ ಪ್ರಭಾಸ್ ತಪ್ಪಿಲ್ಲ, ನಿರ್ದೇಶಕರು ಹೇಳಿದ್ದನ್ನು ಅವರು ಮಾಡಿದ್ದಾರೆ" ಎಂದಿದ್ದಾರೆ.


Click it and Unblock the Notifications











