ಮೋದಿ ಸಿನಿಮಾನೇ ಗೆಲ್ಲಿಸಲಾಗಲಿಲ್ಲ, 'ಪಠಾಣ್' ಬಾಯ್ಕಾಟ್ ಮಾಡಲು ಹೊರಟಿದ್ರು: ಪ್ರಕಾಶ್ ರೈ ವ್ಯಂಗ್ಯ
ಬಾಯ್ಕಾಟ್ ಟ್ರೆಂಡ್ ಅನ್ನು ಸೋಲಿಸಿ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಭಾರಿ ಗೆಲುವು ಸಾಧಿಸಿದೆ. ಇದು ಕೇವಲ ಸಿನಿಮಾದ ಯಶಸ್ಸಲ್ಲ, ಬಾಯ್ಕಾಟ್ ಗ್ಯಾಂಗ್ನ ವಿರುದ್ಧ ಜಯ ಎಂದು ಬಾಲಿವುಡ್ಡಿಗರು ಸಂಭ್ರಮಿಸುತ್ತಿದ್ದಾರೆ.
ನಟ ಪ್ರಕಾಶ್ ರೈ ಸಹ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, 'ಪಠಾಣ್' ಹಾಗೂ ಪ್ರಧಾನಿ ಮೋದಿ ಕುರಿತಾದ ಸಿನಿಮಾವನ್ನು ಉದಾಹರಣೆಯಾಗಿ ತೆಗೆದುಕೊಂಡು ಬಾಯ್ಕಾಟ್ ಗ್ಯಾಂಗ್ ಅನ್ನು ವ್ಯಂಗ್ಯ ಮಾಡಿದ್ದಾರೆ.
ಕೇರಳದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಪ್ರಕಾಶ್ ರೈ, ''ಪಠಾಣ್' ಸಿನಿಮಾ 700 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆ ಸಿನಿಮಾವನ್ನು ಈ ಬಾಯ್ಕಾಟ್ ಗ್ಯಾಂಗ್ನವರು ಬಾಯ್ಕಾಟ್ ಮಾಡಲು ಹೊರಟಿದ್ದರು. ಅವರಿಗೆ ಅವರ ಮೋದಿಯ ಸಿನಿಮಾವನ್ನು 30 ಕೋಟಿಯ ಸಿನಿಮಾವನ್ನಾಗಿ ಗೆಲ್ಲಿಸಲು ಸಹ ಸಾಧ್ಯವಾಗಲಿಲ್ಲ'' ಎಂದು ವ್ಯಂಗ್ಯ ಮಾಡಿದ ಪ್ರಕಾಶ್ ರೈ, ''ಅವರು ಬೊಗಳುತ್ತಾರಷ್ಟೆ ಕಚ್ಚುವುದಿಲ್ಲ'' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಬಗ್ಗೆಯೂ ಮಾತನಾಡಿರುವ ಪ್ರಕಾಶ್ ರೈ ''ಕಾಶ್ಮೀರ್ ಫೈಲ್ಸ್ ಒಂದು ನಾನ್ಸೆನ್ಸ್ ಸಿನಿಮಾ. ಅಂತರಾಷ್ಟ್ರೀಯ ಮಟ್ಟದ ವಿಮರ್ಶಕರು, ಜ್ಯೂರಿಗಳು ಆ ಸಿನಿಮಾವನ್ನು ತೆಗಳಿದರು. ಆ ಸಿನಿಮಾದ ನಿರ್ದೇಶಕ 'ನಮ್ಮ ಸಿನಿಮಾಕ್ಕೆ ಯಾಕೆ ಆಸ್ಕರ್ ಬರಲಿಲ್ಲ' ಎಂದು ಕೇಳುತ್ತಿದ್ದಾನೆ'' ಎಂದಿರುವ ಪ್ರಕಾಶ್ ರೈ, ''ಪ್ರೊಪಾಗಾಂಡ ಸಿನಿಮಾಗಳನ್ನು ಮಾಡಲೆಂದೇ ಅವರು 2000 ಕೋಟಿ ಹಣ ವಿನಿಯೋಗ ಮಾಡುತ್ತಿದ್ದಾರೆ. ಆದರೆ ಪ್ರತಿಬಾರಿ ಜನರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ'' ಎಂದಿದ್ದಾರೆ ಪ್ರಕಾಶ್ ರೈ.
ಸ್ವತಃ ಪ್ರಕಾಶ್ ರೈ ನಟಿಸಿದ್ದ 'ಕೆಜಿಎಫ್ 2' ಸಿನಿಮಾವನ್ನು ಬಾಯ್ಕಾಟ್ ಮಾಡಲು ಕರೆ ನೀಡಲಾಗಿತ್ತು, ಆದರೆ ಆ ಸಿನಿಮಾ ಸಹ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಗಳಿಸಿತು.
'ಪಠಾಣ್' ಸಿನಿಮಾ ವಿರುದ್ಧವೂ ಬಾಯ್ಕಾಟ್ ಟ್ರೆಂಡ್ ಮಾಡಲಾಯ್ತು, ಕೆಲವು ಕಡೆಗಳಲ್ಲಿ ಹಿಂದೂ ಪರಿಷತ್ ಹಾಗೂ ಭಜರಂಗದಳ ಸದಸ್ಯರು ಪ್ರತಿಭಟನೆ ನಡೆಸಿದರು, ಮಲ್ಟಿಪ್ಲೆಕ್ಸ್ಗಳಿಗೆ ನುಗ್ಗಿ ದಾಂಧಲೆ ಸಹ ನಡೆಸಿದರು ಅದೆಲ್ಲದರ ನಡುವೆಯೂ 'ಪಠಾಣ್' ಸಿನಿಮಾ ಭಾರಿ ಯಶಸ್ಸು ಗಳಿಸಿತು. ವಿಶ್ವದಾದ್ಯಂತ ಕೇವಲ 12 ದಿನಕ್ಕೆ 900 ಕೋಟಿ ಹಣ ಗಳಿಸಿದೆ 'ಪಠಾಣ್'


Click it and Unblock the Notifications











