Narendra Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿರುದ್ಧ ಷಡ್ಯಂತ್ರ: ಮೋದಿ
''ಮರೆಮಾಚಲಾಗಿದ್ದ ಇತಿಹಾಸವನ್ನು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತತ್ವದ ಆಧಾರದಲ್ಲಿ ಹೊರಗೆ ಹಾಕಿದೆ. ಆದರೆ ಕೆಲವರು ಆ ಸಿನಿಮಾದ ವಿರುದ್ಧ ಷಡ್ಯಂತ್ರ ಮಾಡುವ ಸತತ ಪ್ರಯತ್ನದಲ್ಲಿ ನಿರತರಾಗಿದ್ದಾರೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ''ನಮ್ಮ ದೇಶದಲ್ಲಿ ಸತ್ಯವನ್ನು ಬಲವಂತವಾಗಿ ಬಚ್ಚಿಡುವ ಪ್ರಯತ್ನಗಳು ಮೊದಲಿನಿಂದಲೂ ಆಗುತ್ತಲೇ ಇವೆ. ತುರ್ತು ಪರಿಸ್ಥಿತಿ ಎಂಥಹಾ ಮುಖ್ಯವಾದ ಘಟನೆ, ಆದರೆ ಆ ಬಗ್ಗೆ ಯಾರೂ ಸಿನಿಮಾ ಮಾಡಲಿಲ್ಲ. ದೇಶದ ವಿಭಜನೆಯ ಬಗ್ಗೆಯೂ ಸಿನಿಮಾ ಮಾಡಲಾಗಲಿಲ್ಲ, ಕಾರಣ, ಸತ್ಯವನ್ನು ಅದುಮಿಡುವ ಯತ್ನ. ಇತಿಹಾಸವನ್ನು ಸರಿಯಾದ ದೃಷ್ಟಿಕೋನದಲ್ಲಿ ಸಮಾಜದ ಎದುರು ಇಡುವುದು ಸಿನಿಮಾ ಜಗತ್ತಿನ ಕರ್ತವ್ಯಗಳಲ್ಲಿ ಒಂದು. ಸಾಹಿತ್ಯ, ಕವಿತೆ, ಕಾದಂಬರಿಗಳು ಈ ಕಾರ್ಯ ಮಾಡುತ್ತಾ ಬಂದಿವೆ'' ಎಂದರು ಮೋದಿ.
''ವಿಶ್ವದ ಜನ ನೆಲ್ಸನ್ ಮಂಡೇಲ ಬಗ್ಗೆ ಮಾತನಾಡುತ್ತಾರೆ ಆದರೆ ಗಾಂಧಿ ಬಗ್ಗೆ ಹೆಚ್ಚು ಮಂದಿ ಮಾತನಾಡುವುದಿಲ್ಲ. ಸ್ವಾತಂತ್ರ್ಯದ ಸಂದರ್ಭದಲ್ಲಿ ಗಾಂಧಿ ಬಗ್ಗೆ ಸಿನಿಮಾ ಮಾಡಿ ವಿಶ್ವದ ಮುಂದೆ ಇಟ್ಟಿದ್ದರೆ ಇಂದು ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ವಿಶ್ವವೇ ಇಂದು ಗಾಂಧಿ ಕುರಿತಾಗಿ ಮಾತನಾಡುತ್ತಿತ್ತು. ಮೊದಲ ಬಾರಿಗೆ ಗಾಂಧಿ ಬಗ್ಗೆ ಸಿನಿಮಾ ಮಾಡಿದ್ದು ಒಬ್ಬ ವಿದೇಶಿಗ ಆತನಿಗೆ ಆಸ್ಕರ್ ಪ್ರಶಸ್ತಿ ದೊರಕಿತು ಆ ಬಳಿಕ ಗಾಂಧಿ ಬಗ್ಗೆ ವಿಶ್ವಕ್ಕೆ ಪರಿಚಯವಾಯ್ತು'' ಎಂದು ಬೇಸರ ವ್ಯಕ್ತಪಡಿಸಿದರು ಮೋದಿ.

''ಅಭಿವ್ಯಕ್ತಿ ಸ್ವಾತಂತ್ರ್ಯದ ಬಾವುಟ ಹಿಡಿದವರಿಂದಲೇ ವಿರೋಧ''
''ಯಾರು ಅಭಿವ್ಯಕ್ತಿ ಸ್ವಾತಂತ್ರ್ಯದ ಬಾವುಟ ಹಿಡಿದು ಓಡಾಡುತ್ತಿದ್ದರೊ ಅವರೇ ಕಳೆದ ಐದಾರು ದಿವಸಗಳಿಂದ ಆವೇಶದಿಂದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ನಿಲ್ಲಿಸಲು ಯತ್ನಿಸುತ್ತಿದ್ದಾರೆ. ಸತ್ಯ ಹಾಗೂ ಕಲೆಯ ಆಧಾರದಲ್ಲಿ ಸಿನಿಮಾವನ್ನು ವಿಮರ್ಶೆ ಮಾಡುವುದು ಬಿಟ್ಟು ಸಿನಿಮಾದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ'' ಎಂದರು.

ಸತ್ಯವನ್ನು ಒಪ್ಪಲು ಸಿದ್ಧರಿಲ್ಲ: ಮೋದಿ
''ಅವರಿಗೆ ಯಾವುದು ಸತ್ಯ ಎನಿಸಿದೆಯೊ ಅದನ್ನು ಅವರು ಜನರ ಮುಂದಿಡುವ ಯತ್ನ ಮಾಡಿದ್ದಾರೆ. ಆದರೆ ಆ ಸತ್ಯವನ್ನು ಒಪ್ಪಲು ಸಿದ್ಧರಿಲ್ಲದವರು, ಸತ್ಯವನ್ನು ಸ್ವೀಕಾರ ಮಾಡಲು ಸಿದ್ಧರಿಲ್ಲದವರು ಸಿನಿಮಾದ ವಿರುದ್ಧ ಷಡ್ಯಂತ್ರ ಮಾಡುವ ಸತತ ಯತ್ನವನ್ನು ಕಳೆದ ಐದಾರು ದಿನಗಳಿಂದಲೂ ಮಾಡುತ್ತಲೇ ಇದ್ದಾರೆ'' ಎಂದು ಮೋದಿ ಗುಡುಗಿದ್ದಾರೆ.

''ಇಷ್ಟವಾಗದವರು ತಮಗೆ ಸತ್ಯ ಎನಿಸಿದ್ದನ್ನು ಸಿನಿಮಾ ಮಾಡಲಿ''
''ನಾನು ಹೇಳುತ್ತಿರುವುದು ಸಿನಿಮಾದ ವಿಷಯವಲ್ಲ, ಯಾವುದು ಸತ್ಯವಾಗಿದೆಯೋ ಅದನ್ನು ಸರಿಯಾದ ರೂಪದಲ್ಲಿ ದೇಶದ ಎದುರು ತರುವುದು ದೇಶಕ್ಕೆ ಮಾಡುವ ಉಪಕಾರ. ಸಿನಿಮಾದಲ್ಲಿ ಹಲವು ಮಜಲುಗಳು ಇರುತ್ತವೆ, ಕೆಲವರಿಗೆ ಇದು ಸರಿ ಎನಿಸಿದರೆ ಕೆಲವರಿಗೆ ಸರಿ ಎನಿಸಿದೇ ಇರಬಹುದು. ಯಾರಿಗೆ ಇದು ಸರಿ ಎನಿಸುವುದಿಲ್ಲವೊ ಅವರು ತಮಗೆ ಸತ್ಯ ಎನಿಸಿದ್ದನ್ನು ಸಿನಿಮಾ ಮಾಡುತ್ತಾರೆ, ಅವರನ್ನು ತಡೆಯುವವರು ಯಾರಿದ್ದಾರೆ'' ಎಂದಿದ್ದಾರೆ ಮೋದಿ.

ಸತ್ಯದ ಪರ ಜನ ನಿಲ್ಲುತ್ತಾರೆಂಬ ವಿಶ್ವಾಸವಿದೆ: ಮೋದಿ
''ಆದರೆ ಅವರಿಗೆ ಭಯವಾಗಿಬಿಟ್ಟಿದೆ. ಯಾವ ಸತ್ಯವನ್ನು ಅವರು ಇಷ್ಟು ವರ್ಷ ಹುದುಗಿಸಿ ಇಟ್ಟಿದ್ದರೊ ಅದನ್ನು ಹೊರಗೆ ತರಲಾಗಿದೆ, ಬಹಳ ಕಷ್ಟಪಟ್ಟು ಈ ಸತ್ಯವನ್ನು ಹೊರಗೆ ತರಲಾಗಿದೆ. ಹಾಗಾಗಿಯೇ ಅದನ್ನು ತುಳಿಯಲು ದೊಡ್ಡ ಮಟ್ಟದ ಪ್ರಯತ್ನಗಳು ನಡೆಯುತ್ತಿವೆ. ಇಂಥಹಾ ಸಮಯದಲ್ಲಿ ಸತ್ಯಕ್ಕಾಗಿ ಬದುಕುತ್ತಿರುವ ಜನರು ಸತ್ಯದ ಪರವಾಗಿಯೇ ನಿಲ್ಲಬೇಕಾಗುತ್ತದೆ. ಸತ್ಯದ ಪರವಾಗಿಯೇ ನಮ್ಮ ನಿಲ್ಲುತ್ತಾರೆಂಬ ವಿಶ್ವಾಸ ನನಗೆ ಇದೆ'' ಎಂದರು ಮೋದಿ.


Click it and Unblock the Notifications











