"ನನ್ನ ಮಕ್ಕಳು ಜಿಹಾದಿಗಳಾಗಲ್ಲ.. ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಎಲ್ರೂ ಲವ್ ಜಿಹಾದ್ ಮಾಡಲ್ಲ"
ನಟ, ನಟಿಯರಿಗೆ ಸೋಶಿಯಲ್ ಮೀಡಿಯಾ ಟ್ರೋಲಿಂಗ್ ಮಾರಕವಾಗಿ ಪರಿಣಮಿಸುತ್ತಿದೆ. ನಿಂತ್ರು ಕುಂತ್ರು ಸೆಲೆಬ್ರೆಟಿಗಳ ಬಗ್ಗೆ ಮಾತನಾಡುವವರ ಸಂಖ್ಯೆ ಜಾಸ್ತಿ ಆಗ್ತಿದೆ. ನಟಿಯರಂತೂ ಇದರಿಂದ ಕೊಂಚ ಹೆಚ್ಚೇ ನೋವು ಅನುಭವಿಸುವಂತಾಗಿದೆ. ಇದೀಗ ನಟಿ ಪ್ರಿಯಾಮಣಿ ಟ್ರೋಲ್ಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಪ್ರೀತಿಸಿ ಮದುವೆ ಆಗಿದ್ದು ತಪ್ಪಾ? ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ ಎಂದಿದ್ದಾರೆ.
2017ರಲ್ಲಿ ಉದ್ಯಮಿ ಮುಸ್ತಾಫಾ ರಾಜಾ ಜೊತೆ ಪ್ರಿಯಾಮಣಿ ಪ್ರೀತಿಸಿ ಮದುವೆ ಆಗಿದ್ದರು. ಬೆಂಗಳೂರಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ದಂಪತಿ ಡಿವೋರ್ಸ್ಗೆ ಮುಂದಾಗಿದ್ದಾರೆ ಎನ್ನುವ ವದಂತಿ ಕೂಡ ಹರಡಿತ್ತು. ನಂತರ ಅದೆಲ್ಲಾ ಸುಳ್ಳು ಎನ್ನುವುದು ಸಾಬೀತಾಗಿತ್ತು. ಸದ್ಯ ತಮಿಳಿನ 'ಕ್ವಾಂಟೇಷನ್ ಗ್ಯಾಂಗ್', ಕನ್ನಡದ 'ಕೈಮರ', ಬಾಲಿವುಡ್ 'ಮೈದಾನ್' ಹಾಗೂ 'ಜವಾನ್' ಸಿನಿಮಾಗಳಲ್ಲಿ ಪ್ರಿಯಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಗ್ಲಾಮರ್ ರೋಲ್ಗಳಿಂದ ದೂರಾಗಿ ನಟನೆಗೆ ಮಹತ್ವ ಇರುವ ಪಾತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ.

ಸದ್ಯ ಗುಲ್ಟೆ ಡಾಟ್ ಕಾಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರಿಯಾಮಣಿ ಮಾತನಾಡಿದ್ದಾರೆ. ತಮ್ಮ ಸಿನಿಮಾಗಳ ವಿಚಾರದ ಜೊತೆಗೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ನಟನೆಯ ಚೆನ್ನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದು ಹೇಗೆ? ಎನ್ನುವುದನ್ನು ವಿವರಿಸಿದ್ದಾರೆ. ಅಪ್ಪು ಜೊತೆ 'ರಾಮ್' ಚಿತ್ರದಲ್ಲಿ 'ಹೊಸ ಗಾನಬಜಾನಾ' ಹಾಡಿಗೆ ಹೆಜ್ಜೆ ಹಾಕಿದ್ದು ನೋಡಿ ಆ ಅವಕಾಶ ಸಿಕ್ಕಿತ್ತು ಎಂದಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮದುವೆ ಆದಾಗ ಹೆಚ್ಚು ಟ್ರೋಲ್
"ಟ್ರೋಲ್ಗಳ ಬಗ್ಗೆ ಹೆಚ್ಚು ತೆಲೆಕೆಡಿಸಿಕೊಳ್ಳುವುದಿಲ್ಲ. ನಾವು ಅದಕ್ಕೆ ಹೆಚ್ಚು ಗಮನ ಕೊಟ್ಟು ಪ್ರತಿಕ್ರಿಯಿಸಿದರೆ ಮತ್ತಷ್ಟು ಹೆಚ್ಚಾಗುತ್ತದೆ. ಬಾಡಿ ಶೇಮಿಂಗ್ ಕೂಡ ಮಾಡಲಾಗುತ್ತಿದೆ. ಈ ಹಂತದಲ್ಲಿ ನಾನು ಸಣ್ಣ ಆಗಿದ್ದು ನೋಡಿ ಕೆಲವರು ಕಾಮೆಂಟ್ ಮಾಡ್ತಾರೆ. ಬರೀ ಬಾಡಿ ಶೇಮಿಂಗ್ ಅಲ್ಲ, ನಾನು ಮದುವೆ ಆದಾಗ ಬಹಳ ಟ್ರೋಲ್ ಮಾಡಿದ್ದರು. ಸಾಕಷ್ಟು ಜನ ನೀನು ಯಾಕೆ ನಿನ್ನ ಧರ್ಮ ಬಿಟ್ಟು ಬೇರೆ ಧರ್ಮದವರನ್ನು ಮದುವೆ ಆಗ್ತಿದ್ದೀಯಾ. ನಿನ್ನ ಮಕ್ಕಳು ಜಿಹಾದಿಗಳಾಗಿ ಹುಟ್ತಾರೆ, ಇದು ಲವ್ ಜಿಹಾದ್ ಅಂತೆಲ್ಲಾ ಅಂದರು"

ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ
"ನೀವೆಲ್ಲಾ ಅತಿಯಾಗಿ ಯೋಚಿಸುತ್ತಿದ್ದೀರಾ, ಪ್ರೀತಿಸಿದವರನ್ನು ಮದುವೆ ಆದ್ರೆ ತಪ್ಪಾ? ನನ್ನನ್ನು ನೋಡಿ ದೇವತೆ ಹಾಗೆ, ಹೀಗೆ ಎನ್ನುತ್ತಾರೆ, ಆದರೆ ನಾನು ಪ್ರೀತಿಸಿದವರನ್ನು ಮದುವೆಯಾದರೆ ಮಾತ್ರ ಹೀಗೆ ಯಾಕೆ ಹೇಳ್ತೀರಾ. ಮುಸ್ತಾಫಾ ರಾಜಾ ಬೇರೆ ಧರ್ಮದವರಾದರೆ ಏನು? ಇದರಲ್ಲಿ ತಪ್ಪೇನಿದೆ? ನಾನು ಹೇಳುವುದು ಏನು ಅಂದರೆ ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ, ಎಲ್ಲರೂ ಲವ್ ಜಿಹಾದ್ ಮಾಡ್ತಾರೆ ಅಂತಲ್ಲ. ಸ್ವಲ್ಪ ಪ್ರಜ್ಞಾವಂತರಾಗಿ ಯೋಚಿಸಿ"
ಹಿಂದೂ-ಮುಸ್ಲಿಂ ಭಾಯಿ ಭಾಯಿ ಅನ್ನೋದ್ಯಾಕೆ?
"ಭಾರತ ಜಾತ್ಯಾತೀತ ದೇಶ. ಹಿಂದೂ, ಮುಸ್ಲಿಂ, ಸಿಖ್ಖರು ಎಲ್ಲರೂ ಭಾಯಿ ಭಾಯಿ ಅಂತ ಯಾಕೆ ಹೇಳ್ತೀರಾ? ಅದನ್ನು ಹೇಳುವುದನ್ನು ನಿಲ್ಲಿಸಿ. ಕೆಲವರು ಹೀಗೆ ಹೇಳ್ತಾರೆ, ಮತ್ತೆ ಕೆಲವರು ನೀನು ಹಿಂದೂ, ನೀನು ಮುಸ್ಲಿಂ ಅಂತ ಹೇಳ್ತಾರೆ ಯಾಕೆ? ನಿನಗೆ ಖುಷಿಯಾಗಿಲ್ಲ ಅಂದ್ರೆ ಬಿಡು, ನೀನು ಒಪ್ಪಿಕೊಳ್ಳಬೇಕು ಎಂದು ನಾನು ಹೇಳಿಲ್ಲ. ಇದು ನನ್ನ ಜೀವನ. ನನಗೆ ಯಾರು ಬೇಕೋ ಅವರೊಟ್ಟಿಗೆ ನನ್ನ ಮುಂದಿನ ಜೀವನ ಕಳೆಯುತ್ತೇನೆ? ಹೀಗೆ ಮದುವೆಯಾದ ಸಮಯದಲ್ಲಿ ನಾನು ಸಾಕಷ್ಟು ಟ್ರೋಲ್ಸ್ ಎದುರಿಸಿದೆ" ಎಂದು ಪ್ರಿಯಾಮಣಿ ವಿವರಿಸಿದ್ದಾರೆ.
ಸಣ್ಣ ಆಗಿದ್ದಕ್ಕೂ ಟ್ರೋಲ್ ಮಾಡಿದ್ದರು
"ಕೋವಿಡ್ ನಂತರ ನಾನು ತೂಕ ಇಳಿಸಿಕೊಂಡು ಈ ರೀತಿ ಸಣ್ಣಗಾಗಿ ಈ ರೀತಿ ಇದ್ದೀನಿ. ಇದಕ್ಕೂ ಕೆಲವರು ಅಯ್ಯೋ ಯಾಕೆ ಸಣ್ಣ ಆಗಿದ್ದೀರಾ? ತುಂಬಾ ಸಣ್ಣ ಇದ್ದೀರಾ, ಕೆಲವರು ಚೆನ್ನಾಗಿದ್ದೀರಾ ಎನ್ನುತ್ತಾರೆ. ಎಲ್ಲರೂ ನೆಗೆಟಿವ್ ಹೇಳ್ತಾರೆ ಅಂತಲ್ಲ. ಕೆಲವರು ಆ ರೀತಿ ಹೇಳುತ್ತಾರೆ. ಕೆಲವರು ಇನ್ಸ್ಟಾಗ್ರಾಂನಲ್ಲಿ ನೇರವಾಗಿ ಕಾಮೆಂಟ್ ಮಾಡ್ತಾರೆ. ಕೆಲವರು ಕೆಟ್ಟಾಗಿ ಕಾಮೆಂಟ್ ಮಾಡ್ತಾರೆ. ಅವ್ರು ಏನು ಹೇಳುತ್ತಾರೆ ಅನ್ನೋದನ್ನು ಹೇಳೋದಕ್ಕೆ ಸಾಧ್ಯವಿಲ್ಲ, ಅಷ್ಟು ಕೆಟ್ಟದಾಗಿ ಇರುತ್ತದೆ. ಕೆಲವರನ್ನು ಬ್ಲಾಕ್ ಮಾಡ್ತೀನಿ. ಕೆಲವೊಂದಕ್ಕೆ ಪ್ರತಿಕ್ರಿಯಿಸುವುದಿಲ್ಲ"
ಹಿಂದಿನ ತಲೆಮಾರಿನವರು ಬದಲಾಗಿಲ್ಲ
"ನಾನು ದಪ್ಪ ಇದ್ದಾಗಲೂ ಇದೇ ರೀತಿ ಕಾಮೆಂಟ್ ಮಾಡುತ್ತಿದ್ದರು. ತುಂಬಾ ದಪ್ಪ ಇದ್ದೀರಾ ಅಂತ. ಅಯ್ಯೋ ದಪ್ಪಗಾಗೋದು, ಸಣ್ಣಗಾಗೋದು ತಪ್ಪಾ? ನಿಮಗೆ ಇಷ್ಟವಾದರೆ ಚೆನ್ನಾಗಿದ್ದೀರಾ? ಸುಂದರವಾಗಿ ಕಾಣಿಸುತ್ತಿದ್ದೀರಾ ಅಂತ ಹೇಳಿ ಅದರಿಂದ ಅವರಿಗೆ ಖುಷಿಯಾಗುತ್ತದೆ. ಕೆಲವರು ನೋಡಿದ ತಕ್ಷಣ ನೀನು ಆ ತರ ಕಾಣಿಸ್ತಿದ್ದೀಯಾ? ಈ ತರ ಕಾಣಿಸ್ತಿದ್ದಾಯಾ ಅಂತಾರೆ. ಈ ತಲೆಮಾರಿನವರು ಓಕೆ, ಹಿಂದಿನ ತಲೆಮಾರಿನವರು ಈ ತರ ಹೆಚ್ಚು ಮಾತನಾಡುತ್ತಾರೆ, ಅಂತಹವರನ್ನು ಬದಲಿಸಲು ಸಾಧ್ಯವಿಲ್ಲ" ಎಂದಿದ್ದಾರೆ.


Click it and Unblock the Notifications











