Boney Kapoor: "ಶ್ರೀದೇವಿಯದ್ದು ಸಹಜ ಸಾವಲ್ಲ".. ಪತ್ನಿ ಹಠಾತ್ ನಿಧನಕ್ಕೆ ಕಾರಣ ತಿಳಿಸಿದ ಬೋನಿ ಕಪೂರ್
5 ವರ್ಷಗಳ ಹಿಂದೆ ಅತಿಲೋಕ ಸುಂದರಿ ಶ್ರೀದೇವಿ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟರು. ದೂರದ ದುಬೈನಲ್ಲಿ ಬಾಲಿವುಡ್ ಬೆಡಗಿ ಕೊನೆಯುಸಿರೆಳೆದಿದ್ದರು. ಆಕೆ ಆಕಸ್ಮಿಕವಾಗಿ ಬಾತ್ ಟಬ್ಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈನ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಿಳಿಸಿತ್ತು.
ನೂರಾರು ಸಿನಿಮಾಗಳಲ್ಲಿ ತಮ್ಮ ಸೌಂದರ್ಯ ಹಾಗೂ ಅದ್ಭುತ ಅಭಿನಯದಿಂದ ಮೋಡಿ ಮಾಡಿದ್ದ ಶ್ರೀದೇವಿ ದಿಢೀರ್ ನಿಧನ ಅಭಿಮಾನಿಗಳಿಗೆ ಶಾಕ್ ತಂದಿತ್ತು. ದುಬೈನ ಎಮಿರೇಟ್ಸ್ ಟವರ್ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ನಟಿ ಶ್ರೀದೇವಿ ಬಾತ್ರೂಮ್ಗೆ ತೆರಳಿದಾಗ ಹೃದಯ ಸ್ತಂಭನವಾಗಿದ್ದು, ಬಾತ್ಟಬ್ಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ದುಬೈನ ಜನರಲ್ ಡಿಪಾರ್ಟ್ಮೆಂಟ್ ಆಫ್ ಫೋರೆನ್ಸಿಕ್ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥೀವ ಶರೀರವನ್ನು ಮುಂಬೈಗೆ ತಂದು ಅಂತ್ಯಕ್ರಿಯೆ ನಡೆಸಲಾಗಿತ್ತು.

2028 ಫೆಬ್ರವರಿಯಲ್ಲಿ ಶ್ರೀದೇವಿ ಒಂದು ಮದುವೆಯಲ್ಲಿ ಭಾಗಿ ಆಗಲು ದುಬೈಗೆ ಹೋಗಿದ್ದರು. ಪತ್ನಿ ಶ್ರೀದೇವಿಗೆ ಸರ್ಪ್ರೈಸ್ ನೀಡಲು ಬಳಿಕ ಬೋನಿ ಕಪೂರ್ ಭಾರತದಿಂದ ದುಬೈಗೆ ತೆರಳಿದ್ದರು. ಇಬ್ಬರು ಹೊರಗೆ ಊಟಕ್ಕೆ ಹೋಗಲು ತಯಾರಾಗುತ್ತಿದ್ದರು. ಸ್ಥಳೀಯ ಕಾಲಮಾನ ಸಂಜೆ 5.30ರ ಸುಮಾರಿಗೆ, ತಯಾರಾಗಿ ಬರುತ್ತೇನೆಂದು ಶ್ರೀದೇವಿ ಬಾತ್ ರೂಮಿಗೆ ತೆರಳಿದ್ದಾರೆ. ಎಷ್ಟೆ ಹೊತ್ತು ಆದರೂ ಆಕೆ ಹೊರಗೆ ಬರದಿದ್ದಾಗ ಅನುಮಾನಗೊಂಡ ಬೋನಿ, ಬಲವಂತವಾಗಿ ಬಾಗಿಲು ತೆರೆದಾಗ ನಿಶ್ಚಲರಾಗಿ ನೀರು ತುಂಬಿದ್ದ ಬಾತ್ ಟಬ್ನಲ್ಲಿ ಬಿದ್ದಿದ್ದರು. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಆಕೆಯ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಆಕೆಯದ್ದು ಸಹಜ ಸಾವಲ್ಲ, ಅನುಮಾನಾಸ್ಪದವಾಗಿ ನಿಧನರಾಗಿದ್ದಾರೆ ಎಂದು ಕೆಲವರು ಪತಿ ಬೋನಿ ಕಪೂರ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲಿನ ಪೊಲೀಸರು ಕೂಡ ಬೋನಿ ಕಪೂರ್ ಮೇಲೆ ಅನುಮಾನಗೊಂಡು ಭಾರೀ ವಿಚಾರಣೆ ನಡೆಸಿದ್ದರು. ಇದೀಗ 5 ವರ್ಷಗಳ ಬಳಿಕ ಸಂದರ್ಶನವೊಂದರಲ್ಲಿ ಬೋನಿ ಕಪೂರ್ ಪತ್ನಿ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ.
"ನಾನು ಈ ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ. ಏಕೆಂದರೆ ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾವು ನಾವು ವಿಚಾರಣೆ ನಡೆಸಬೇಕಾಯಿತು ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಇಲ್ಲಿ ಯಾವುದೇ ಮೋಸದಾಟ ಇರಲಿಲ್ಲ. ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ತರಹದ ವಿಚಾರಣೆ ಎದುರಿಸಿದೆ. ಕೊನೆಗೆ ಬಂದ ವರದಿಯಲ್ಲಿ ಶ್ರೀದೇವಿ ಸಾವು ಆಕಸ್ಮಿಕ ಎಂದು ಸ್ಪಷ್ಟವಾಯಿತು.

"ತೆರೆಮೇಲೆ ಅಂದವಾಗಿ ಕಾಣಿಸಬೇಕು ಎಂದು ಶ್ರೀದೇವಿ ಸ್ಟ್ರಿಕ್ಟ್ ಡಯೆಟ್ ಅನುಸರಿಸುತ್ತಿದ್ದಳು. ನಮ್ಮ ಮದುವೆ ಬಳಿಕ ನನಗೆ ಈ ವಿಷಯ ತಿಳಿಯಿತು. ಉಪ್ಪು ಇಲ್ಲದೇ ಸಪ್ಪೆ ಊಟ ಮಾಡುತ್ತಿದ್ದಳು. ಇದರಿಂದ ಸಾಕಷ್ಟು ಬಾರಿ ನಿತ್ರಾಣಗೊಂಡು ಬೀಳುತ್ತಿದ್ದಳು. ಲೋ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಜಾಗ್ರತೆಯಿಂದ ಇರಲು ಸಾಕಷ್ಟು ಬಾರಿ ಸೂಚಿಸಿದ್ದರು. ಆದರೆ ಆಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಶ್ರೀದೇವಿಯದ್ದು ಸಹಜ ಸಾವಲ್ಲ. ಆಕಸ್ಮಿಕ ಸಾವು" ಎಂದಿದ್ದಾರೆ.
"ನಿಜಕ್ಕೂ ಇದು ದುರದೃಷ್ಟಕರ. ಆಕೆಯ ನಿಧನ ಬಳಿಕ ನಟ ನಾಗಾರ್ಜುನ ಸಾಂತ್ವನ ಹೇಳಲು ಮನೆಗೆ ಬಂದಿದ್ದರು. ತಮ್ಮ ಸಿನಿಮಾವೊಂದರ ಚಿತ್ರೀಕರಣದ ವೇಳೆಯೂ ಇದೇ ರೀತಿ ಶ್ರೀದೇವಿ ಡಯೆಟ್ ಮಾಡಿ ಬಾತ್ರೂಮ್ನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು ಎಂದು ಅವರು ಹೇಳಿದ್ದರು" ಎಂದು ಬೋನಿ ಕಪೂರ್ ಹೇಳಿದ್ದಾರೆ.
"ನಾನು ವೈದ್ಯರಿಗೆ ಹೇಳಿ ಕೊಂಚ ಉಪ್ಪು ತಿನ್ನುವಂತೆ ಶಿಫಾರಸ್ಸು ಮಾಡುವಂತೆ ಮಾಡಿದ್ದೆ. ಊಟದ ಸಮಯದಲ್ಲಿ ನಾನು ಕೂಡ ಉಪ್ಪು ಬೆರಸಿ ಕೊಡುತ್ತಿದ್ದೆ. ಆದರೆ ಆಕೆ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದು ಈ ಮಟ್ಟಿಗೆ ಹೋಗಬಾರದು ಎಂದು ತಾವು ಭಾವಿಸಿದ್ದಾಗಿ" ಬೋನಿ ಕಪೂರ್ ವಿವರಿಸಿದ್ದಾರೆ.


Click it and Unblock the Notifications











