'ರಾಮಾಯಣ' ಮೊದಲ ದಿನವೇ ರಾವಣನ ಯುದ್ಧ ಶುರು; ಯಶ್ ಎದುರು ಅಬ್ಬರಿಸುತ್ತಿರೋದ್ಯಾರು?
ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಮೂಡಿ ಬರುತ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ರಾವಣನ ಪಾತ್ರದಲ್ಲಿ ಯಶ್ ಅಬ್ಬರಿಸುತ್ತಿದ್ದಾರೆ. ಇತ್ತೀಚಿಗೆ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ರಾಕಿಂಗ್ ಸ್ಟಾರ್ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.
ಮುಂಬೈನಲ್ಲಿ ಭರ್ಜರಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಸಾಕಷ್ಟು ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಎರಡು ಭಾಗಗಳಾಗಿ ಸಿನಿಮಾ ತೆರೆಗೆ ಬರಲಿದೆ. ಆದಷ್ಟು ಬೇಗ ಮೊದಲ ಭಾಗದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರು ಮಾಡಲು ಚಿತ್ರತಂಡ ಮುಂದಾಗಿದೆ.

ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಸ್ವತಃ ಯಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್ ಹಾಗೂ ಸೀತೆಯಾಗಿ ಸಾಯಿಪಲ್ಲವಿ ನಟಿಸುತ್ತಿದ್ದಾರೆ. ಇವರಿಬ್ಬರು ನಟಿಸಿರುವ ಸನ್ನಿವೇಶ ಚಿತ್ರೀಕರಣ ಬಹುತೇಕು ಮುಕ್ತಾಯವಾಗಿದೆ. ಶೀಘ್ರದಲ್ಲೇ ರಣ್ಬೀರ್ 'ರಾಮಾಯಣ' 2ನೇ ಭಾಗದ ಚಿತ್ರೀಕರಣ ಆರಂಭಿಸುತ್ತಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
'ರಾಮಾಯಣ' ಮೊದಲ ಭಾಗದಲ್ಲಿ ರಾವಣನ ಸನ್ನಿವೇಶಗಳು ಕಡಿಮೆ ಇರಲಿದೆ. ಸೀತಾಪಹರಣದವರೆಗೆ ಮಾತ್ರ ಕಥೆ ಹೇಳಲಾಗ್ತಿದೆ. ಹಾಗಾಗಿ ಅದಕ್ಕೂ ಮುನ್ನ ಶಿವನಿಂದ ರಾವಣ ವರ ಪಡೆದಿದ್ದು ಸೇರಿದಂತೆ ಒಂದಷ್ಟು ಸನ್ನಿವೇಶಗಳು ಈ ಚಿತ್ರದಲ್ಲಿ ಇರಲಿದೆ. ಆ ದೃಶ್ಯಗಳನ್ನು ಈಗ ಸೆರೆಹಿಡಿಯಲಾಗುತ್ತಿದೆ. ಇಂದ್ರದೇವನ ಜೊತೆ ರಾವಣ ಯುದ್ಧ ಮಾಡುವ ಸನ್ನಿವೇಶವೂ ಚಿತ್ರದಲ್ಲಿದೆ ಎನ್ನಲಾಗ್ತಿದೆ. ಇದೇ ದೃಶ್ಯವನ್ನು ಮುಂಬೈನಲ್ಲಿ ಈಗ ಚಿತ್ರೀಕರಿಸುತ್ತಿದ್ದಾರೆ ಎಂದು ಪಿಂಕ್ವಿಲ್ಲಾ ವೆಬ್ಸೈಟ್ ವರದಿ ಮಾಡಿದೆ.

ರಾವಣ ಯಶ್ ಎದುರು ಇಂದ್ರದೇವನ ಪಾತ್ರದಲ್ಲಿ ಕುನಾಲ್ ಕಪೂರ್ ನಟಿಸುತ್ತಿದ್ದಾರೆ. ಇಬ್ಬರೂ ಇದೀಗ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಸಾಕಷ್ಟು ರಿಹರ್ಸಲ್ ನಡೆಸಿ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ ಎನ್ನಲಾಗ್ತಿದೆ. ರಾವಣ ಸ್ವರ್ಗದ ಮೇಲೆ ದಾಳಿ ನಡೆಸಿ ಇಂದ್ರನೊಂದಿಗೆ ಯುದ್ಧಕ್ಕೆ ನಿಲ್ಲುತ್ತಾನೆ. ಇದೇ ಸನ್ನಿವೇಶ ಚಿತ್ರೀಕರಣದಲ್ಲಿ ಯಶ್- ಕುನಾಲ್ ಮುಖಾಮುಖಿ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಡೈರೆಕ್ಟರ್ ಜೆಜೆ ಪೆರ್ರಿ ಕೆಲಸ ಮಾಡಿದ್ದರು. ಇದೀಗ 'ರಾಮಾಯಣ' ತಂಡ ಸೇರಿಕೊಂಡಿದ್ದಾರೆ ಎಂದು ಗುಲ್ಲಾಗಿದೆ.
ಎರಡು ವರ್ಷಗಳ ಹಿಂದೆ ಪ್ರಭಾಸ್ ನಟಿಸಿದ್ದ 'ಆದಿಪುರುಷ್' ಸಿನಿಮಾ ತೆರೆಗೆ ಬಂದಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಟೀಕೆಗೆ ಗುರಿ ಆಗುವಂತಾಗಿತ್ತು. ಹಾಗಾಗಿ ಅಂತಹ ತಪ್ಪುಗಳು ನಡೆಯದಂತೆ ಬಹಳ ಮುತುವರ್ಜಿ ವಹಿಸಿ ಈ ಬಾರಿ 'ರಾಮಾಯಣ' ಸಿನಿಮಾ ಮಾಡಲಾಗ್ತಿದೆ. ಅಂದಾಜು 600 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ನಿಮಿತ್ ಮಲ್ಹೋತ್ರಾ ಅವರ DNEG ವಿಶ್ಯುವಲ್ ಎಫೆಕ್ಟ್ಸ್, ಆನಿಮೇಷನ್ ಸ್ಟುಡಿಯೋದಲ್ಲಿ ಚಿತ್ರದ ಗ್ರಾಫಿಕ್ಸ್ ಕೆಲಸಗಳು ಶುರುವಾಗಿದೆ.
ಬಾಲಿವುಡ್ ಹಾಗೂ ದಕ್ಷಿಣದ ಕಲಾವಿದರು ಸೇರಿ ಈ ಬಾರಿ 'ರಾಮಾಯಣ' ದೃಶ್ಯ ಕಾವ್ಯ ತೆರೆಗೆ ತರುತ್ತಿದ್ದಾರೆ. ಲಕ್ಷ್ಮಣನಾಗಿ ರವಿ ದುಬೇ, ದಶರಥನಾಗಿ ಅರುಣ್ ಗೋವಿಲ್, ಹನುಮಂತನಾಗಿ ಸನ್ನಿ ಡಿಯೋಲ್, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ 'ರಾಮಾಯಣ' ಪಾರ್ಟ್-1 ಬಿಡುಗಡೆ ಆಗಲಿದೆ. 2027ರ ದೀಪಾವಳಿಗೆ ಪಾರ್ಟ್-2 ತೆರೆಗೆ ಬರಲಿದೆ.
2ನೇ ಭಾಗದಲ್ಲಿ ರಾವಣನ ಆರ್ಭಟದ ಸನ್ನಿವೇಶಗಳು ಹೆಚ್ಚಾಗಿ ಇರಲಿದೆ. ರಾಮ-ರಾವಣರ ಯುದ್ಧವನ್ನು ಬಹಳ ರೋಚಕವಾಗಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಆದರೆ ಮೊದಲ ಭಾಗದಲ್ಲಿ ರಣ್ಬೀರ್ ಕಪೂರ್ ಹಾಗೂ ಯಶ್ ಒಟ್ಟಿಗೆ ತೆರೆ ಹಂಚಿಕೊಳ್ಳುವುದಿಲ್ಲ ಎನ್ನಲಾಗ್ತಿದೆ. ಯಶ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ನವೆಂಬರ್ ವೇಳೆಗೆ 'ರಾಮಾಯಣ'-1 ಸಿನಿಮಾ ಕೂಡ ಬರಲಿದ್ದು ಅಭಿಮಾನಿಗಳಿಗೆ ಡಬಲ್ ಧಮಾಕ ಎನ್ನಬಹುದು.


Click it and Unblock the Notifications











