CCL 2026 : ಹ್ಯಾಟ್ರಿಕ್, ಸೂಪರ್ ಓವರ್ - ರಣರೋಚಕ ಪಂದ್ಯದಲ್ಲಿ ಬೆಂಗಾಲ್ ಅಬ್ಬರಕ್ಕೆ ಬೆಚ್ಚಿ ಬಿದ್ದ ಚೆನ್ನೈ
2011ರಲ್ಲಿ ''ಸಿಸಿಎಲ್'' ಆರಂಭವಾಯ್ತು. ಅಲ್ಲಿಂದ ಇಲ್ಲಿಯವರೆಗೆ ''ಸಿಸಿಎಲ್'' ನಡೆದುಕೊಂಡು ಬಂದಿದೆ. ಈ 15 ವರ್ಷಗಳಲ್ಲಿ ಹಲವು ತಂಡಗಳು ಚಾಂಪಿಯನ್ ಆಗಿವೆ. ಆ ಪೈಕಿ ಮೊದಲ ''ಕರ್ನಾಟಕ ಬುಲ್ಡೋಜರ್ಸ್'' 2 ಬಾರಿ ಗೆದ್ದರೆ, ತೆಲುಗು ವಾರಿಯರ್ಸ್ 4 ಮತ್ತು ಚೆನ್ನೈ ಕಿಂಗ್ಸ್ 2 ಸೀಸನ್ನಲ್ಲಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಇನ್ನು ಕಳೆದ ವರ್ಷ ''ಪಂಜಾಬ್ ದಿ ಶೇರ್'' ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ದೊಡ್ಡ ದೊಡ್ಡ ತಂಡಗಳನ್ನು ಹಿಂದಿಕ್ಕಿ ಇತಿಹಾಸ ನಿರ್ಮಾಣ ಮಾಡಿದೆ. ಯಾಕೆಂದರೆ ಚೆನ್ನೈ ವಿರುದ್ಧ ಪಂಜಾಬ್ ಗೆಲ್ಲಲ್ಲ ಎಂದೇ ಹಲವರು ಅಂದುಕೊಂಡಿದ್ದರು. ಆದರೆ ಅಂದುಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು. ಈ ಬಾರಿ ಕೂಡ ಇಂತಹದ್ದೇ ರಣರೋಚಕ ವಾತಾವರಣ ನಿರ್ಮಾಣವಾಗಿದೆ. ಇದಕ್ಕೆ ಇಂದು (ಜನವರಿ 18 ) ನಡೆದ ಪಂದ್ಯವೇ ಸಾಕ್ಷಿ.

ಹೌದು, ಇಂದು ಕಳೆದ ಬಾರಿಯ ರನ್ನರ್ ಅಪ್ ಚೆನ್ನೈ ಕಿಂಗ್ಸ್ ಮತ್ತು 2024ರಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದ್ದ ಬೆಂಗಾಲ್ ಟೈಗರ್ಸ್ ನಡುವೆ ಪಂದ್ಯ ಇತ್ತು. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭ ಮಾಡಿದ ಬೆಂಗಾಲ್ ತಂಡಕ್ಕೆ ಚೆನ್ನೈ ಆರಂಭದಲ್ಲಿಯೇ ಮೂರು ವರದಾನಗಳನ್ನು ನೀಡಿತು. ಪಂದ್ಯದ ನಾಲ್ಕನೇ ಓವರ್ನ ನಾಲ್ಕು ಬಾಲ್ಗಳಲ್ಲಿ ಮೂರು ಕ್ಯಾಚ್ನ್ನು ಕೈಚೆಲ್ಲಿತು.
ಇದರ ಪರಿಣಾಮ ಮೊದಲ ನಾಲ್ಕು ಓವರ್ಗಳಲ್ಲಿ ಕೇವಲ 18 ರನ್ ಗಳಿಸಿದ್ದ ಬೆಂಗಾಲ್ ಆ ನಂತರದ ಎರಡು ಓವರ್ಗಳಲ್ಲಿ 32ರನ್ಗಳನ್ನು ಕಲೆ ಹಾಕಿತು. 12 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 111ರನ್ಗಳನ್ನು ಗಳಿಸಿತ್ತು. ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 185ರನ್ಗಳನ್ನು ಬೆಂಗಾಲ್ ಕಲೆ ಹಾಕಿತು.
ಬೆಂಗಾಲ್ ನೀಡಿದ ಈ ಬೃಹತ್ ಮೊತ್ತದ ಬೆನ್ನತ್ತಿದ ಚೆನ್ನೈ ತಂಡಕ್ಕೆ ವಿಕ್ರಾಂತ್ ಮತ್ತು ಶರಣ್ ಅತ್ಯುತ್ತಮ ಆರಂಭವನ್ನು ನೀಡಿದರು. ನಾಲ್ಕು ಓವರ್ಗಳಲ್ಲಿ ಈ ಜೋಡಿ 59ರನ್ಗಳನ್ನು ಗಳಿಸಿತು. ಆ ನಂತರ ಪೃಥ್ವಿ ಅಬ್ಬರಿಸಿದರು. ಕೇವಲ 29 ಬಾಲ್ಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಾಯದಿಂದ ಅರ್ಧಶತಕ ಸಿಡಿಸಿದರು. ಈ ಮೂಲಕ ಬೆಂಗಾಲ್ನ ಬಣದಲ್ಲಿ ದಿಗಿಲು ಹುಟ್ಟಿಸಿದ್ದರು.

ಆದರೆ ಚೆನ್ನೈ ಸುಲಭವಾಗಿ ಗೆಲ್ಲಬಹುದಾಗಿದ್ದ ಈ ಪಂದ್ಯ 16ನೇ ಓವರ್ನಲ್ಲಿ ಮಹತ್ತರ ತಿರುವು ಪಡೆಯಿತು. 59 ರನ್ ಗಳಿಸಿದ್ದ ಪೃಥ್ವಿ ಅವರನ್ನು ರಾಹುಲ್ ತಮ್ಮ ಬಲೆಗೆ ಕೆಡವಿದರು. ಆ ನಂತರ ಸತತ ವಿಕೆಟ್ ಕಳೆದುಕೊಂಡು 7 ವಿಕೆಟ್ ನಷ್ಟಕ್ಕೆ 185 ರನ್ಗಳಿಸಿದ್ದ ಚೆನ್ನೈಗೆ ರಾಹುಲ್ ಮತ್ತೊಮ್ಮೆ ಆಘಾತ ನೀಡಿದರು. ಗೆಲ್ಲಲು ಒಂದು ರನ್ ಬೇಕಿದ್ದಾಗ ಹ್ಯಾಟ್ರಿಕ್ ವಿಕೆಟ್ ಪಡೆದು ಪಂದ್ಯ ಟೈ ಆಗುವಂತೆ ಮಾಡಿದರು.
ಆ ನಂತರ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಒಂದು ಓವರ್ನಲ್ಲಿ ಕೇವಲ 7 ರನ್ಗಳನ್ನು ಮಾತ್ರ ಗಳಿಸಿತು. ಈ ಗುರಿಯನ್ನು ಕೇವಲ ಮೂರು ಬಾಲ್ನಲ್ಲಿ ಬೆಂಗಾಲ್ ತಂಡ ತಲುಪಿತು. ಈ ಮೂಲಕ ಸತತ ಎರಡನೇ ಮ್ಯಾಚ್ನ್ನು ಬೆಂಗಾಲ್ ಗೆದ್ದಿತು. ಮುಂದಿನ ಪಂದ್ಯಗಳು ಮುಂದಿನ ವಾರಾಂತ್ಯಕ್ಕೆ ಮತ್ತೆ ನಡೆಯಲಿವೆ. ಜನವರಿ 23ರಂದು ಬೆಂಗಾಲ್ ಟೈಗರ್ಸ್ ತಂಡಕ್ಕೆ ಕೇರಳ ಸ್ಟ್ರೈಕರ್ಸ್ ಸವಾಲು ಹಾಕಲಿದೆ. ಅಂದೇ ಸಂಜೆ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ನಡುವೆ ನಡೆಯಲಿದೆ. ಇವೆರಡು ಪಂದ್ಯಗಳಿಗೆ ಮಧುರೈ ಸಾಕ್ಷಿಯಾಗಲಿದೆ. ಇನ್ನು ಸತತ 2 ಪಂದ್ಯಗಳನ್ನು ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ಸೋತಿದ್ದು ಬಹುತೇಕ ಟೂರ್ನಿಯಿಂದ ಹೊರ ಬಿದ್ದಿದೆ.


Click it and Unblock the Notifications











