ಸಾವಿರಾರು ಕೋಟಿ ವಂಚನೆಯ ಕತೆ ಹೇಳಲು ಬರುತ್ತಿದ್ದಾರೆ ಅಜಯ್ ದೇವಗನ್
ಬಾಲಿವುಡ್ನಲ್ಲೀಗ ಬಯೋಪಿಕ್ಗಳ ಕಾಲ ನಡೆಯುತ್ತಿದೆ. ಇದರ ಜೊತೆಗೆ ನಿಜವಾದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವ ಅಭ್ಯಾಸವೂ ಹೆಚ್ಚಾಗಿದೆ. ಇಂಥ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಸಹ ಆಗುತ್ತಿವೆ.
ಈ ಹಿಂದೆ 'ರೇಡ್' ಹೆಸರಿನ ಸಿನಿಮಾ ಮಾಡಿದ್ದ ಅಜಯ್ ದೇವಗನ್ ಈಗ ಅದೇ ಮಾದರಿಯ ಮತ್ತೊಂದು ಸಿನಿಮಾದೊಂದಿಗೆ ಮರಳುತ್ತಿದ್ದಾರೆ. ದೇಶವನ್ನೇ ಬೆಚ್ಚಿಬೀಳಿಸಿರುವ ತೆರಿಗೆ ವಂಚನೆ ಪ್ರಕರಣದ ಕತೆಯನ್ನು ತೆರೆಗೆ ತರಲಾಗುತ್ತಿದೆ.
ಕೆಲವು ದಿನಗಳ ಹಿಂದಷ್ಟೆ ಉತ್ತರ ಪ್ರದೇಶ ರಾಜ್ಯದ ಕಾನ್ಪುರದ ಸುಗಂಧ ದ್ರವ್ಯ ಉದ್ಯಮಿ ಪಿಯೂಷ್ ಜೈನ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ 250 ಕೋಟಿ ನಗದು ಹಣ ವಶಪಡಿಸಿಕೊಂಡಿದ್ದರು. ನಗದು ಮಾತ್ರವೇ ಅಲ್ಲದೆ 25 ಕೆಜಿ ಚಿನ್ನ, 250 ಕೆಜಿ ಬೆಳ್ಳಿ ಹಾಗೂ ಬ್ಯಾರಲ್ಗಟ್ಟಲೆ ಶ್ರೀಗಂಧದ ಎಣ್ಣೆಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

ಪಿಯೂಷ್ ಜೈನ್ ಹೆಸರಲ್ಲಿ 40 ಕ್ಕೂ ಹೆಚ್ಚು ಸಂಸ್ಥೆಗಳಿದ್ದವು. ಅವುಗಳಲ್ಲಿ ಕೆಲವು ಬೇನಾಮಿ. ಅರಬ್ ದೇಶಗಳಲ್ಲಿಯೂ ಪಿಯೂಷ್ ಕಂಪೆನಿಗಳನ್ನು ಹೊಂದಿದ್ದು, ಹಣವನ್ನು ಅಕ್ರಮವಾಗಿ ಕಂಪೆನಿಗಳಿಗೆ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ.
ರೇಡ್ ಬಳಿಕ ಮಾತನಾಡಿದ ಸಿಬಿಐಸಿ (ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸ್ ಆಂಡ್ ಕಸ್ಟಮ್ಸ್) ಮುಖ್ಯಸ್ಥ ವಿವೇಕ್ ಜೋಹರಿ, ನಮ್ಮ ಇಲಾಖೆಯ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ರೇಡ್ ಮಾಡಿಲ್ಲ ಎಂದಿದ್ದರು. ಸುಮಾರು 40 ಗಂಟೆಗಳ ಕಾಲ ರೇಡ್ ಜಾರಿಯಲ್ಲಿತ್ತು. ಪಿಯೂಷ್ ಜೈನ್ ಇದೀಗ ಜೈಲಿನಲ್ಲಿದ್ದಾರೆ. ಪಿಯೂಷ್ ಜೈನ್ ಸಾವಿರಾರು ಕೋಟಿ ರುಪಾಯಿ ಹಣ, ಆಸ್ತಿ ಹೊಂದಿದ್ದದು, ನೂರಾರು ಕೋಟಿ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪಿಯೂಷ್ ಜೈನ್ ಕತೆಯನ್ನು ಇದೀಗ ಸಿನಿಮಾ ಮಾಡುವುದಾಗಿ ನಿರ್ದೇಶಕ ಮಂಗತ್ ಪಾಠಕ್ ಘೋಷಿಸಿದ್ದಾರೆ. ಕಾಶಿಯಲ್ಲಿ ನಡೆಯುತ್ತಿರುವ 'ಕಾಶಿ ಸಿನಿಮೋತ್ಸವ'ದಲ್ಲಿ ಭಾಗವಹಿಸಿದ್ದ ಮಂಗತ್ ಪಾಠಕ್ ಅಲ್ಲಿಯೇ ಕಾರ್ಯಕ್ರಮದಲ್ಲಿ ಈ ವಿಷಯ ಘೋಷಿಸಿದ್ದಾರೆ. ಸಿನಿಮಾಕ್ಕೆ 'ರೇಡ್ 2' ಎಂದು ಹೆಸರಿಡಲಾಗುವುದೆಂದು ಸಹ ಹೇಳಿದ್ದಾರೆ.
ಮಂಗತ್ ಪಾಠಕ್ ಅವರು ಈ ಮೊದಲು 'ರೇಡ್' ಸಿನಿಮಾ ನಿರ್ದೇಶನ ಮಾಡಿದ್ದರು. ಅಜಯ್ ದೇವಗನ್ ನಟಿಸಿದ್ದ ಈ ಸಿನಿಮಾ ಸಹ ತೆರಿಗೆ ಕಳ್ಳರ ಮೇಲೆ ನಡೆಯುವ ತೆರಿಗೆ ದಾಳಿಯ ಬಗೆಗಿನ ಕತೆ ಹೊಂದಿತ್ತು.
ಅಜಯ್ ದೇವಗನ್ ನಟನೆಯ ಮೂರು ಸಿನಿಮಾಗಳು ಇದೀಗ ಬಿಡುಗಡೆಗೆ ತಯಾರಾಗಿವೆ. 'ಆರ್ಆರ್ಆರ್', 'ಗಂಗೂಬಾಯಿ ಕಾತ್ಯಾವಾಡಿ' ಹಾಗೂ ಫುಟ್ಬಾಲ್ ಕೋಚ್ ಜೀವನ ಆಧರಿಸಿದ 'ಮೈದಾನ್' ಸಿನಿಮಾಗಳು ಬಿಡುಗಡೆ ಆಗಲಿವೆ. ಇದರ ಜೊತೆಗೆ ಅಮಿತಾಬ್ ಬಚ್ಚನ್ ಜೊತೆಗೆ 'ಮೇ ಡೇ' ಹೆಸರಿನ ಸಿನಿಮಾದಲ್ಲಿ ಅಜಯ್ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅಜಯ್ ದೇವಗನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದೆ ಜೊತೆಗೆ 'ಖೈದಿ' ಹಾಗೂ 'ಚಾಣಕ್ಯ', 'ಗೋಬರ್' ಸಿನಿಮಾಗಳಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ.


Click it and Unblock the Notifications











